ರಾಜೀವ ನಾರಾಯಣ ನಾಯಕ
ಮತ್ತೆ ತುದಿಯಲ್ಲಿ ಕೈಬೀಸಿ ಕರೆದಳು ಕಾಳಿ
ಕಣಿವೆಯಲ್ಲಿದ್ದೆ ನಾನು, ಕರೆದೊಯ್ಯಿತು ಮಾಯದ ಗಾಳಿ
ತಿಳಿದಿತ್ತು ನನಗೆ ಅದು ಗಿರಿಕಂದರಗಳ ಕಾಲಾತೀತ ದಾರಿ.
ಪಾಪ ಸವರಿದಷ್ಟೂ ನಿಗುರುವ ಕನಸಿಗೆ
ನಿರಸನದ ನೆನಪೆಲ್ಲಿರುತ್ತೆ ಹೇಳಿ!
ನೀಲಿ ನಾಲಿಗೆ ತುದಿಗೆ ಕರ್ಪೂರ ಧಗಧಗ
ಗಂಧ ತೇದು ದೀಪ ಹಚ್ಚಿ ವರವ ಕೋರಿದೆ
ಭಾವ ಮಣೆಯಲಿ ಹೃದಯ ತುರಿದು
ಚೂರು ಕೊಯ್ದಿಟ್ಟೆ ನೈವೇದ್ಯಕ್ಕೆ
ಮಂಡಿಯೂರಿದೆ ಆತ್ಮಸಂಗಾತಕ್ಕೆ!
ಹೃದಯ ನೆಕ್ಕಿ ಬಿಸುಟಳು ಅತ್ತ “ತಪ್ತ ಆತ್ಮ”!
ಶಾಪದ ಉರಿಗೆ ಭಸ್ಮ ಪ್ರೇಮ
ನಾಮವೆಳೆದು ಕೂಗಿದಳು “ನೆಕ್ಸಟ್”
ಮರಳು ದಾರಿಯಲ್ಲೀಗ ಬರೀ ತಿರುವುಗಳೇ!
ಕಿಲಾಡಿ ಬುದ್ಧ ಮುಗುಳ್ನಗುತ್ತಿದ್ದ ಮತ್ತೆ.





0 Comments