ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿ ಕೆ ಮೀನಾಕ್ಷಿ ಹೊಸ ಕವಿತೆ – ಮುಳ್ಳು ನಾಟಿದ ಮನಸು…

ಮುಳ್ಳು ನಾಟಿದ ಮನಸು

ಎಳೆಬಾಳೆಯಂತಹ ಕೈಗಳಿಗೆ
ನಾಲ್ಕು ಹರಳು ಮತ್ತೆಂಟು ಚಿನ್ನದ ಬಳೆ
ಗಾಜು ಗೀರಿದ ಗಾಯ ನನ್ನೊಳಗೆ ಉರಿಯ ಸೆಲೆ
ಕೊರಳಿಗೆ ಪೇರಿಸಿಕೊಂಡಿದ್ದಾಳೆ ಚಿನ್ನವ ಎಳೆಗಳ ಮೇಲೆಳೆ
ಬಿಟ್ಟರೆ ಅದರಲ್ಲೇ ನೇಣು ಹಾಕಿಕೊಳ್ಳುತಾಳೆ
ನನ್ನುಸಿರು ಸತ್ತಿದೆ ಒಳಗೇ…..
ಬೆರಳುಗಳನು ತಬ್ಬಿಕುಳಿತಿವೆ ಬಗೆಬಗೆಯ ಉಂಗುರಗಳು
ಕುದಿಯುತ್ತದೆ ಒಲೆಯ ಮೇಲಿನ ಅನ್ನದಂತೆ ಮನ
ಕಿಚ್ಚು ಹೊತ್ತಿಕೊಳುತ್ತದೆ ಒಡಲೊಳಗೆ
ಅಲ್ಲಾ…..
ಅಪ್ಪ ಸತ್ತಮೇಲೂ ಚಿನ್ನದ ವ್ಯಾಮೋಹವೇಕಿಷ್ಟು
ಕೊಡಬಾರದೇ ನನಗೂ ಒಂದಿಷ್ಟು
ಪೆಟ್ಟಿಗೆಯಲೂ ಇಟ್ಟಿರಬಹುದು ಸಾಕಷ್ಟು
ಈಗಿನಿಂದಲೇ ಪೀಡಿಸುವೆ ಬರಲಿ ಬಂದಷ್ಟು

ಇರಲೊ೦ದು ಗೂಡೆಂದು ಪೊಗದಸ್ತಾದ ಬೀಡು
ಅಣ್ಣನಿಗೆ, ಮದುವೆಯಲಿ
ನನ್ನವರಿಗೆ ದಕ್ಕಿದ್ದೆಷ್ಟೋ ಅಷ್ಟೆ ನಮ್ಮ ಪಾಲಿಗೆ
ಮತ್ತೆ ಆಗೀಗೆಂದು ಬಂದಾಗ ಹೋದಾಗ
ಕೊಟ್ಟಿರುವಳು ಇಲ್ಲವೆನಲಾರೆ
ಇವಳು ಸತ್ತಾಗ ಅಣ್ಣನೇ ದೋಚಿಬಿಟ್ಟರೆ?

ಮೊಮ್ಮಗನಿಗೆ ಇನ್ನಷ್ಟು ಕೊಡಲಿ
ನನಗೆ ಈಸಲದ ಗೌರಿಗೆ ಅವಲಕ್ಕಿ ಸರ ನೀಡಲಿ
ಅಣ್ಣನ ಬ್ರೇಸ್ ಲೆಟ್ಟು ಇವರಿಗಿರಲಿ
ಅಮ್ಮನ ಕಂಚಿ ಸೀರೆಗಳನೆಲ್ಲ ನನ್ನತ್ತ ಸರಿಸಲಿ

ಅಮ್ಮ ಸತ್ತಾಯಿತು…..
ವಿಲ್ಲು ಎನು ಮಾಡಿದ್ದಾಳೋ…..
ಅದರಲ್ಲೂ ಮೋಸವೋ ಹೇಗೋ….
ಹಲ್ಲು ಕಡಿವಷ್ಟು ಕೋಪ ಅಮ್ಮನ ಮೇಲೆ
ನೋಡನೋಡುತ್ತಿದ್ದಂತೆ ಅಣ್ಣ ಹತ್ತಿರ ಬಂದು
ಗ೦ಟೊ೦ದ ಕೈಗಿಟ್ಟ ಜೊತೆಗೊಂದು ಪತ್ರ ಕೊಟ್ಟ
ಬಿಡಿಸಿದರೆ ಅಮ್ಮನ ಒಡವೆಗಳ ರಾಶಿ
ಪತ್ರದಲಿ ಮನೆ ನನ್ನೆಸರಿಗೆ!
ಜೊತೆಗೊಂದು ಪತ್ರ ನನಗೆಂದೇ..ಖುಶಿಯೇನೇ?
ತಬ್ಬಿಬ್ಬುಗೊ೦ಡದ್ದೀಗ ನಾನು!
ಅಣ್ಣಾ…..ನಿನಗೆ…..?
ಮಾವನ ಮನೆಯಲಿ ಒಂದು ಮನೆ ನನಗಿದೆ
ಸುಖವಾಗಿರಮ್ಮ ನಿನಗಿತ್ತು ನನ್ನ ಭಾರವೂ ಕಳೆದಿದೆ
ಅರಳುವುದಿಲ್ಲ ಮುಳ್ಳು ನಾಟಿದ ಮನಸು ಗಾಯವೆ ಸದಾ!

‍ಲೇಖಕರು Admin

12 May, 2022

1 Comment

  1. prathibha nandakumar

    ಚೆನ್ನಾಗಿದೆ. ಒಳ್ಳೆ ಕಥೆ ಮಾಡಬಹುದು ಇದನ್ನು. ಚಿತ್ರ ಕೂಡಾ ಮಾಡಬಹುದು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading