ಇಂದು ನೇತ್ರ ರಾಜು ಅವರು ಇನ್ನಿಲ್ಲವಾಗಿದ್ದಾರೆ.
ಅವರು ತೆಗೆದ ಮೈಸೂರು ದಸರೆ ಫೋಟೋ ಇದು.
ಈ ಛಾಯಾಚಿತ್ರ ಸಾಕಷ್ಟು ವೈರಲ್ ಆಗಿತ್ತು
ನೇತ್ರ ರಾಜು ಅವರ ನೆನಪಿಗೆ ಬರೆದ ಈ ಕವಿತೆ ನಿಮ್ಮ ಮುಂದೆ-

ನಾ ದಿವಾಕರ
ಅಮ್ಮಾ
ಸ್ವರ್ಗ ಎಂದರೆ ಅದೇನಾ
ಅದೋ ಅಲ್ಲಿ ಕಾಣುತ್ತಿದೆಯಲ್ಲಾ :
ಇಲ್ಲ ಕಂದ
ಅದು ನಮ್ಮದೇ ಲೋಕ
ನಮ್ಮದಲ್ಲದ್ದಷ್ಟೇ ;
ಅದೋ ನೋಡು ಆ ಪ್ರಜ್ವಲ
ಬೆಳಕಿನ ಕಿರಣಗಳು
ನನ್ನ ನೆರೆತ ಕೂದಲನು ಸೀಳಿ
ನಡೆಯುತ್ತಿವೆ !
ನೀ ಅಲ್ಲಿಗೆ ಹೋಗಿದ್ದೀಯೇನಮ್ಮಾ ?
ಹೇಗೆ ಹೋಗಲಿ ಮಗುವೇ
ಅದೊಂದು ಭ್ರಮೆ ;
ನೋಡಲ್ಲಿ ಹಿಂಬದಿಯ
ಚಂದ್ರನನ್ನೂ ಮರೆಮಾಚಿದ
ಬೆಳಕು ಕೋರೈಸುವುದಿಲ್ಲವೇ ?
ನಿನ್ನ ಚಡ್ಡಿಯಿಂದ
ಹನಿಯುತ್ತಿದೆಯಲ್ಲ
ಅದೇ ಬೆವರಿನ ತುಣುಕುಗಳು
ಆ ಸೌಧದ ಇಟ್ಟಿಗೆಗಳಲ್ಲಿವೆ !
ಅಜ್ಜ ನೋಡಿದ್ದನೇನಮ್ಮಾ ?
ನಿನ್ನಜ್ಜಂದಿರು ನೋಡದ್ದೇನಿದೆ ಕಂದ
ನಾವು ನಿಂತ ದಿಬ್ಬದಡಿ
ಎಷ್ಟೋ ಕದಡಿದ ಜೀವಗಳು
ಮಣ್ಣಾಗಿಹೋಗಿವೆ ;
ನಿನ್ನಜ್ಜನಜ್ಜನಜ್ಜನೊಬ್ಬ
ಹೀಗೆಯೇ ಹೊತ್ತಿದ್ದ
ಕಲ್ಲು ಮಣ್ಣು ಸುಣ್ಣ ಗಾರೆ
ಮೆತ್ತಿದ ನೆನಪು ಮಾಸುವುದಲ್ಲವೇ
ಆದರೂ ನೋಡಲ್ಲಿ
ಶಿಖರದ ಬೆಳಕಿನಲಿ
ಅವನ ನೆರಳು ಅಲೆದಾಡುವಂತಿದೆ !
ನಾವೇಕಮ್ಮಾ ಇಷ್ಟು ದೂರ ?
ನಿನ್ನ ಹೆಜ್ಜೆ ಗುರುತುಗಳನೊಮ್ಮೆ
ನೋಡು ಕಂದ
ಎಂದಾದರೂ ಮೆಟ್ಟಿರುವೆಯಾ
ದೊರೆಯ ಮೆಟ್ಟುಗಳನು
ನಿನ್ನ ಹೆಜ್ಜೆಗಳನಳಿಸುತ್ತಲೇ
ಎತ್ತರಕೇರಿದ್ದಾರೆ
ದಿಬ್ಬವನಲಂಕರಿಸಿದ್ದಾರೆ ;
ಎತ್ತಣ ಈ ದಿಬ್ಬ
ಎತ್ತ ಆ ದಿಬ್ಬಣ
ಅದು ದರ್ಬಾರು ಕಣಾ
ಇದು ದೂರ ಮಾರು !
ನಾನೇ ಹೋಗುತ್ತೇನಮ್ಮಾ !
ನಡೆ ಕಂದ ನಿನ್ನ
ಹೆಜ್ಜೆಗಳಲ್ಲಿದೆ ಬೆವರಿನ
ಸೊಗಡು
ಅವರ ಗೆಜ್ಜೆಯಲ್ಲಡಗಿದೆ
ನೆತ್ತರಿನ ತೇರು ;
ನೀ ಎತ್ತ ಹೋಗುವೆ
ಇತ್ತಲಿದ್ದರೂ ನೀನೇ
ಈ ಭುವಿಯ ದೊರೆ ಅವನಲ್ಲ
ಬೆವರೆಮ್ಮದು ನೆತ್ತರೆಮ್ಮದು
ಹಮ್ಮುಬಿಮ್ಮುಗಳೆಮ್ಮದಲ್ಲ
ಇದು ಮನುಜ ಲೋಕ ಕಣಾ
ಮನುಜ ಲೋಕ !






0 Comments