ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನರೇಶ ಮಯ್ಯ ಹೊಸ ಕವಿತೆ- ದೂರಿದ್ದೂರೀ… ದುಕ್ಕಲಮ್ಮಾ…

ನರೇಶ ಮಯ್ಯ

**

ಪ್ರೀತಿಸಬೇಕು

ಹೇಗೆಂದರೆ

ಸಂಪೂರ್ಣ

ನಂಬಿ ನೆಚ್ಚಬಿಡಬೇಕಷ್ಟೇ ಅಲ್ಲ

ಧಾರೆಯೆರೆದುಬಿಡಬೇಕು,

ಎರಕ ಹೊಯ್ಯಬೇಕು

ನಮ್ಮದೇ ರಕ್ತಮಾಂಸದ

ನಮ್ಮದೇ ಪ್ರತಿರೂಪಕ್ಕೆ

ಒಡಲೊಳಗಣ

ಅಕ್ಕರೆಯ

ಹಾರೈಕೆಯ

ಸಾಂತ್ವನದ

ಬಸಿದುಸಿರನ್ನ

ನಿಚ್ಛಳ ಕಾಣಬೇಕದರಲ್ಲಿ;

ಅಂತಃಕರಣದಪ್ಪುಗೆಯ

ಸ್ವಾಭಿಮಾನದ

ನಿಷ್ಠೆಯ

ವಂಶಪ್ರಜ್ಞೆಯ ದಿಟ್ಟ ಸ್ಥೈರ್ಯವನ್ನ

ಜನ್ಮಕ್ಕೊಂದೇ ಬಾಲ್ಯದವಸ್ಥೆಯಲ್ಲ

ಎಲ್ಲ

ಕಳೆದು

ಕಳಕೊಂಡಮೇಲೆ

ಎರೆದು

ಎರಕಹೊಯ್ದಮೇಲೆ

ಮತ್ತೆ

ಮರಳಬೇಕೆಂದೆನಿಸುತ್ತದೆ;

ಪುಟ್ಟ ಕಂದಮ್ಮನ

ಮುಗ್ಧ ನಗುವಿನೊಳಕ್ಕೆ

ಮತ್ತೆ ಬೇಕೆನಿಸುತ್ತದೆ

ಆಗ

ಅಕ್ಕರೆಯ ಒಡಲು;

ಅಪ್ಪಿಕೊಳ್ಳಲು

ಹಾಲುಣಲು

ಜೋಗುಳವ ನಂಬಿ

ನೆಮ್ಮದಿಯ ನಿದ್ದೆಹಾಡಲು

ಬೇಕು ನಾಲ್ಕಾಧಾರಸ್ಥಂಭ

ಉಡಲು

ಉಣ್ಣಲು

ನಗಲು

ವಂಶೋದ್ಧಾರಗೈಯಲು

ಇನ್ನೂ ಬದುಕಬೇಕು

ಏಕೆ

ಪ್ರೀತಿ ಸಹನೆ ಕಾಯ್ದುಕೊಳ್ಳಬೇಕು

ಏಕೆ

ಭೂತಾಯಿಯ ಹಾಗೆ

ನೆಂಜಿಕೊಳ್ಳಬೇಕಲ್ಲವೇ

ಮದುವೆ ಮೊಮ್ಮಕ್ಕಳ

ಸಡಗರವನ್ನ

ನಮ್ಮದೇ ಆಧಾರಸ್ಥಂಬಗಳ

ನಗುಮೊಗದ ಸಗ್ಗವನ್ನ

‘ನಮ್ಮ ನಿಮ್ಮೆಲ್ಲರ ಪ್ರೀತಿ ಹುಡಿಗೊಳ್ಳಬಾರದಲ್ಲವೇ’

ಕಾಯಬೇಕು

ಅದಕಾಗಿ ಜತನದಿಂದ

ಕರುಳಬಳ್ಳಿಯ ಕಣಜವನ್ನ

ಬದುಕು ಹಣ್ಣಾಗುವುದು ಹೀಗೆ

ತಾಯಿ

ಭೂತಾಯಿಗೆಷ್ಟೆಲ್ಲ ಬಗೆಯುತ್ತೇವೆ

ಬೊಂಬು-ಬಾಂಬು

ತಾಯಿ ಸುಡಲೊಲ್ಲಳೇಕೆ

ನುಂಗಿ ನಕ್ಕಬಿಡುತ್ತಾಳೆ

ಬದುಕಬಿಡುತ್ತಾಳೆ ಎಲ್ಲರನ್ನ

ಎಲ್ಲವನ್ನ

ಬೆಳಕ ಕೊಡುತ್ತಾಳೆ

ನಾಳೆಯ ಬಾಳ್ವಗೆ

‘ಗಂಧವತೀ ಪ್ರಥಿವಿ’

ಒದೆಯಬಾರದೂ ಮಗು,

ಬಗೆಯಬೇಕು ಒಳಿತನ್ನ

ಎಂದರುಹುತ್ತಾಳೆ

ಸಾಕು ಸಾಕಿನ್ನು

ಯಾರದ್ದೋ

ಅಸಹ್ಯದ

‘ತೀಟೆ-ತೆವಲ ಕೈಂಕರ್ಯ’

ಬಿಡುವಿಲ್ಲದ ಕೆಲಸ ಬಹಳವಿದೆ

ವಂಶೋದ್ಧಾರದ ನಸುಗನಸ ಹಕ್ಕಿಗೆ

ಎತ್ತರದ್ದೇ ಹೆಣೆಯಬೇಕಿದೆ ಗೂಡು

ಅದಕಾಗಿ ಬೇಕು

ಕ್ಷಮಯಾಧರಿತ್ರಿಯ

ಒಂದಂಶ

ಒಡಲೊಳಗೆ

ಅದಕಾಗಿ ಬದುಕಬೇಕು

ನುಂಗಿಕೊಳ್ಳಬೇಕು

ಕ್ಷಮಿಸಬೇಕು

ಹಾರೈಸಬೇಕು

ತಾಯಿ

ಪೃಥಿವಿಯ ಹಾಗೆ….

       

‍ಲೇಖಕರು avadhi

27 December, 2023

1 Comment

  1. ಎಂ.ಜವರಾಜ್

    ಕವಿತೆ ಒಳದನಿ ಮಾರ್ಮಿಕವಾಗಿದೆ. ಒಡಲ
    ಒಳ ಬೇಗೆಯ ಬಗೆ ಚಿತ್ರವತ್ತಾಗಿದೆ.

    ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading