ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾಟಲಾಗದ ಗೋಡೆ..

ಸದಾಶಿವ್ ಸೊರಟೂರು

ಸೊಸೈಟಿಯಲ್ಲಿ ಕೊಂಡ ತಂದ
ಒಂದು ರೂಪಾಯಿ ಬೆಲೆಯ
ದಪ್ಪನಕ್ಕಿಗೆ
ಅದೆಷ್ಟು ಅರಿಶಿನ ಬೆರೆಸುತ್ತಿದ್ದಳು
ಅವ್ವ
ಅದರಲ್ಲಿ ಕಡ್ಲೆಬೀಜ ಎಣ್ಣೆ ಈರುಳ್ಳಿಯ
ತುಣುಕಗಳನ್ನು ಹುಡುಕಲು
ನಾವೇನು ಗಾರೆ ನೆಲದ ಮನೆಯವರೇ?

ತೊಳೆಯಲು ಹಾಕಿದ ಬಟ್ಟೆಯಂತೆ
ಬದುಕು ನಮ್ಮನ್ನು
ಹಿಂಡುತ್ತಲೇ ಇತ್ತು
ಹಿಂಡಿದ ಜೋರಿಗೆ ಉದುರುತ್ತಿದ್ದದ್ದು
ಅಪ್ಪನ ಬೆವರು ಅವ್ವನ ಕಣ್ಣೀರು

ಯುಗಾದಿಗೆ ಹೊಲಿಸುತ್ತಿದ್ದದ್ದು
ನೀಲಿ ಬಣ್ಣದ ಪಾಲಿಸ್ಟರ್ ಅಂಗಿ
ಉಳಿದರೆ ಅದೇ ಬಟ್ಟೆಯಲ್ಲೊಂದು ಚಡ್ಡಿ
ಮೂರೇ ತಿಂಗಳಿಗೆ ಸವಕಲು
ಹರಿದ ಜಾಗಕ್ಕೆ ಹೋಲಿಗೆ ಜೋಡಿಸುತ್ತಿದ್ದ
ಅವ್ವನ‌ ಕಣ್ಣಿನಲ್ಲಿ ಸೂಜಿ ಮೊನೆಯ ನೋವು

ಮನೆಯ ಮಾಡಿನಲ್ಲಿ ಸದಾ
ಮೂರಾಲ್ಕು ಹೆಂಚುಗಳು ಒಡೆದಿರುತ್ತಿದ್ದವು
ನಾನು ಸದಾ ಕಾದಿರುತ್ತಿದ್ದೆ
ಗಾಳಿ ಮಳೆ ಬಿಸಿಲಿನೊಂದಿಗೆ
ಎಂದಾದರೂ ನುಗ್ಗಿ ಬರುವ ಪರಾಗಗಳಿಗೆ

ಅಂಗಿಯ ಕಿಸೆಯಲ್ಲಿ ಅದೆಂತಹ
ತೂತು
ಕಟ್ಟಿದ ಕನಸುಗಳೆಲ್ಲಾ ಒಂದೂ
ಉಳಿಯದೆ ಉದುರಿ ಹೋಗಿದ್ದವು!

ಅಪ್ಪ-ಅವ್ವ ಸದಾ ನಳನಳಿಸುತ್ತಾರೆ
ಯಾರ್ಯರೊ ತೊಡಿಸಿ ಹೋದ 
ಅವಮಾನದ ಬಟ್ಟೆಯಿಂದ,
ನೋಡಿ ಅದೆಷ್ಟು ಗಟ್ಟಿ
ಇಂದಿಗೂ ಅದಕ್ಕೊಂದು ಸವಕಲು
ಬಂದಿಲ್ಲ..

ಗೋಡೆ ಹತ್ತಿ ನೆಗೆಯಬೇಕು
ಇಲ್ಲವೇ
ಬುಡದಲ್ಲೇ ಕೂತು ಕೊರೆಯಬೇಕು
ಉಂಡ ಅರಿಶಿನ ಬಣ್ಣದ ಅನ್ನ
ತೋಳು ಸೇರುವುದೇ ಇಲ್ಲ
ಹತ್ತಲು, ಕೊರೆಯಲು ಕಸುವು
ಸಾಲುವುದಿಲ್ಲ
ಮುಷ್ಠಿ ಜೀವ ಉಳಿಸಲು ಅವ್ವ ಮಾತ್ರ
ಬೇರೆ ದಾರಿ ಕಾಣದೆ
ದಪ್ಪ ಅಕ್ಕಿಗೆ ಅರಿಶಿನ ಬಣ್ಣ
ಬೆರೆಸುತ್ತಲೇ ಇದ್ದಾಳೆ… 

‍ಲೇಖಕರು

18 December, 2019

5 Comments

  1. Basavanagowda hebbalagere

    ಬಡವರ ಸ್ಥಿತಿ ಕವನದಲ್ಲಿ ಉತ್ತಮವಾಗಿ ಅನಾವರಣಗೊಂಡಿದೆ

  2. T S SHRAVANA KUMARI

    ಕಲಮಲ ಹುಟ್ಟಿಸಿದ ಕವಿತೆ

  3. thinkpuzzlical

    ಕವನವಂತೂ ಇಷ್ಟವಾಯಿತಣ್ಣಾ.!

    ಆದರೆ, ಮೊದಲ ಪ್ಯಾರಾದ ಅರ್ಥ ಸಿಗುತ್ತಿಲ್ಲವಣ್ಣಾ.!

  4. thinkpuzzlical

    ಕವನವಂತೂ ಇಷ್ಟವಾಯಿತಣ್ಣಾ.!

    ಆದರೆ,

    ಮೊದಲನೇ ಪ್ಯಾರಾದ ಅರ್ಥ, ಸಿಗುತ್ತಿಲ್ಲವಣ್ಣಾ!

  5. SmithaAmrithraj.

    Kavite ishtavaayitu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading