ಪ್ರವೇಣಿ ಸ್ಪೂರ್ತಿ
ಅಪ್ಪಟ ಕಾಡ ಕಣಿವೆಯ ಜಾಲಾರದ ಘಮದಸಿರಿಯನರಸಿ ಹೊರಟ ತುಮಕೂರಿನ ಜಾಲಾರಿಗಳು ನಾವು
ಶಿವರಾತ್ರಿಯ ಸಮಯದಲ್ಲಿ ಅರಳಿ ಘಮಿಸುವ ಜಾಲಾರದ ಸೊಬಗು ಬಲು ಚಂದ
ಕಳೆದ ವರ್ಷದಂತೆ ಈ ಬಾರಿಯೂ ದೇವರಾಯನ ದುರ್ಗದ ಜಾಲಾರದ ಜಾಡ ಹಿಡಿದು ತುಮಕೂರಿನ ಸಹೃದಯ ಹಿರಿಕಿರಿ ಜಾಲಾರಿಗಳು ಜೊತೆಯಾಗಿಯೇ ಹೊರಟೆವು
ಜಾಲಾರ ತಲುಪಿದಾಗ ತಕ್ಷಣ ನೋವಾಯಿತು. ಯಾವುದೋ ಜಾತ್ರೆಗಾಗಿ ದೊಡ್ಡದೊಡ್ಡ ರೆಂಬೆಗಳನ್ನೆಲ್ಲಾ ಮುರಿದು ಎಸೆದು ಹೋಗಿದ್ದರು. ಸರಿ ಅದನ್ನೆಲ್ಲಾ ದಾಟಿಕೊಂಡು ಬೆಟ್ಟವೇರಿ ಕೊನೆಗೂ ಜಾಲಾರದ ಘಮಲನ್ನು ಚೆಲುವನ್ನು ನೆನಪಿನ ಬುತ್ತಿಗೆ ಕಟ್ಟಿಕೊಂಡೆವು. ಬಗೆ ಬಗೆಯ ಜಾಲಾರದ ಹೂವಿನ ಸಣ್ಣ ಕವಿಗೋಷ್ಟಿಯೂ ನಡೆಯಿತು.
ನನಗೆ ನೆನಪಿದ್ದದು ಅವರಿವರ ಬಾಯಲ್ಲಿ ಜಾಲಾರದ ಬಗೆಗಿನ ಕಥೆ ಕೇಳಿದ್ದು ಓದಿದ್ದು ಅಷ್ಟೇ… ಕಳೆದ ವರ್ಷದಿಂದ ಜಾಲಾರ ನೋಡುವ ಸೌಭಾಗ್ಯ ದೊರೆತದ್ದು ತುಮಕೂರು ಲೇಖಕಿಯರ ಸಂಘದ ಮಲ್ಲಿಕಾ ಮೇಡಂ ರವರಿಂದ ಅವರಿಗೂ ಈ ಕಾಡ ಹಾದಿಗೆ ಜೊತೆಯಾದ ಒಡನಾಡಿಗಳಿಗೂ ನಾನು ಚಿರರುಣಿ
ಈ ಜಾಲಾರದ ಮರಗಳು ಅಳಿವಿನ ಅಂಚಿನಲ್ಲಿವೆ ಇವುಗಳ ರಕ್ಷಣೆ ಜರೂರಿದೆ ಆಸಕ್ತರು ಇದನ್ನು ಪರಿಗಣಿಸಬೇಕು
ಈ ಬಾರಿ ನಾವು ರೆಂಬೆಕೊಂಬೆಗಳನ್ನು ಮುರಿದಿಲ್ಲ ನೋಡಿಯೇ ಹೆಚ್ಚು ಆನಂದಪಟ್ಪೆವು ಆದರೆ ಮುಡಿಗೇರಿಸುವಷ್ಟನ್ನು ಮಾತ್ರ ಕಿತ್ತೆವು

ಜಾಲಾರದ ತೋಪಿನಲ್ಲಿ ನನ್ನದೊಂದು ಜಾಲಾರ ಕವನ
ಕಾಡು ಕಣಿವೆಯ ಹಸಿರ ಸಿರಿಯಲಿ
ಬಿರಿದು ಘಮಿಸುವ ನಾನು ಜಾಲಗಿರಿ ಹೂ
ಬಾನೆತ್ತರಕೆ ಚಾಚಿದ
ರೆಂಬೆ ಕೊಂಬೆಗಳಲ್ಲಿ
ನಳನಳಿಸುವ ನಾನು
ಜಾಲಗಿರಿಯ ಹೂ
ಮೆಲುಗಾಳಿಗೆ ತೆಲಿ
ಕಾನನವೆಲ್ಲಾಘಮಿಸುತ್ತೇನೆ
ಕಣಿವೆಯ ಹಾದಿ ತುಂಬೆಲ್ಲಾ
ಹಾಸಿಕೊಳ್ಳುತ್ತೇನೆ
ನನ್ನ ಅರಸಿ ಬರುವರ ತಣಿಸಲು
ಕರಿಗಿರಿ ಸಿರಿಯ ತೇರಿನ ತುಂಬಾ
ನನ್ನದೇ ಕಾರುಬಾರು
ತೇರಿಗೆಬರುವ ಸಖಿಯರ
ತುರುಬಿನ ಚೆಲುವು ನಾನು
ನಾನೇ ನಾನೇ ನಾನೇ
ಅಪ್ಪಟ ಕಾಡಕಣಿವೆಯ
ಜಾಲಗಿರಿಯ ಹೂ (ಜಾಲಾರದ ಹೂ)
ಕವಿಗೋಷ್ಠಿಯ ನಂತರ ಎಲ್ಲರೂ ತಂದ ಹಣ್ಣು ಕಡಲೇಪುರಿ ತಂಬಿಟ್ಟು ತಿಂದು ಬೆಟ್ಟದ ಕರಿಗಿರಿಸಿರಿಯನ್ನೂ ನೋಡಿ ರಾತ್ರಿ ಊಟದೊತ್ತಿಗೆ ಮನೆ ತಲುಪಿದೆವು..












0 Comments