
ರೇಶ್ಮಾ ಗುಳೇದಗುಡ್ಡಾಕರ್
ಬಿಸಿಯುಸಿರ ಮೊರೆತ
ಎದೆಯಂಗಳ ತುಂಬಿ
ಹರಿದ ದೃಗಜಲವು
ಮಳೆಹನಿಯನ್ನು ನಾಚಿಸಿದವು …
ಕಾಣದ ನದಿಗೆ ಸೇರುತಿಹವು
ಮಾತು ಭರ್ಜಿಗಿಂತಲೂ ಹರಿತವಾಗಿ
ಭಾವನೆಗಳ ಛಿದ್ರಗೂಳಿಸಿ
ಯಾವ ಹತಾರಕ್ಕೊ ಕಡಿಮೆ ಇಲ್ಲ ಎಂದವು
ಹೆಣ್ಣೆಂಬ ಕಾರಣಕ್ಕೆ …!!!
ಕಾಯಬೇಕಾಗಿದ್ದು ಎದ್ದು
ದ್ವಂಸ ಮಾಡಿತು ಸದ್ದಿಲ್ಲದೆ ತಾನು
ಬಣ್ಣದ ತೆರೆ ಎಳೆದು ನೇಪಥ್ಯಕ್ಕೆ ಸರಿಯಿತು ……

ಹಸಿದ ಒಡಲಿಗಿಂತ ದೇಹದ
ಹಸಿವು ಅಬ್ಬರಿಸುತ್ತಿದೆ
ತಾಯಿ ನೀಡಿದ ಎದೆಹಾಲನ್ನು ಮರೆತು
ಅಟ್ಟಹಾಸವ ಮೇರೆಯುತಿದೆ
ಬಯಕೆಯು ಬೇಲಿಯಾಗಿ
ಹೃದಯವ ಹಿಂಡಿ ಬರಸೆಳೆದು
ಕಗ್ಗತ್ತಲಿಗೆ ನೂಕುತಿದೆ
ಹೆಣಗಳಾಗಿ ಮೆರವಣಿಗೆ ಹೊರಟ
ಕನಸುಗಳು ತಣ್ಣಗೆ ಸೇರುತಿಹವು
ನಿರಶೆಯ ವನಧಿಯ ,
ಅಸಹನೆಯ ಅಲೆಗೆ
ಸವೆದು ಸವೆದು ಲೀನವಾಯಿತು
ಒಡಲು ಸ್ತಬ್ದವಾಯಿತು.
ದಿನಾಚರಣೆಗಳು ಆಧುನಿಕತೆಯ
ಭಾಗವಾಗಿ ಪ್ರತಿಮೆ ಮಾಡಿದವು
ಹೆಣ್ಣು ಕುಲವನ್ನು, ಆದರೆ
ನಿತ್ಯದ ಬಾಳು ತಪವಿಲ್ಲ
ಪಡೆದ ಗೋಳು ಹಿಂಸೆಯ ಆವುಗೆಯ
ಕಿಚ್ಚಿಗೆ ಉರುವಲಾಗಿ ದಹಿಸುತ್ತಿಹವು






0 Comments