ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊತ್ತಿದ್ದರೆ ಉತ್ತರ ಸಿಗಲೇ ಬೇಕಿತ್ತು..

ರಚನಮೀನಾ

ಕೇಳದ ಕೂಗು

ಸಾಸರ್ ನಲ್ಲಿ ಕಪ್ ಇಡುವ ಮುನ್ನಕೇಳಿದ್ದು,
ನಿರ್ಭಾವದ ಚಪ್ಪರಿಸುವ ಸದ್ದಷ್ಟೆ..
ತುಂಬು ಕಣ್ಗಳಲಿ ಚೂರು ಹೊಳಪು
ತುಟಿಯಂಚನು ಮುದ್ದಿಸುವ ನಗು
ಇಷ್ಟೇ ನಿರೀಕ್ಷೆಗಾಗಿ ಮನಸ್ಸು ,
ಅಡುಗೆಮನೆಯಿಂದಲೇ ಇಣುಕುತ್ತಿತ್ತು.
ಸೆರಗಿನಿಂದ ಮುಖ ಒರೆಸಿ,
ಒಳಕ್ಕೂ ಹೊರಕ್ಕೂ ತಿರುಗುತ್ತಿತ್ತು…

ಪೇಪರ್ ನಲ್ಲಿ  ಮುಖ ತೂರಿಸಿದವ,
ಅದೇನು ಹೊಸದನ್ನು ಹುಡುಕುತ್ತಿದ್ದನೋ…..?
ಇಷ್ಟಪಟ್ಟ ರೀತಿಗೆ
ಕಷ್ಟಪಟ್ಟು ದೃಷ್ಟಿ ಹರವಿದ್ದ..!
ಅವಳ ನಂಬಿಕೆಯ ಜೊತೆಜೊತೆಗೆ
ಸುತ್ತಲ ಪರಿಸರವನ್ನೂ ಯಾಮಾರಿಸಿದ್ದ..

ಮಡಿಲಿನ ಒಡಲು ಅಮ್ಮನ ನೆನೆದರೆ,
ಕಾಲ್ಗೆಜ್ಜೆಯ ತಾಳಕೆ ಒಲವೇ ಒಲಿದಿತ್ತು. ಆದರೆ,
ಗತಕಾಲದಿಂದಲೂ ತಾನು ಹೊತ್ತಿದ್ದ
ಗಂಡಸೆಂಬ ಹೊರೆಯನ್ನಳಿಸಲಾಗದೇ ಹೋದ…
ನಾಗರಿಕತೆಯ ಮುಸುಕಿನಡಿಯಲ್ಲಿ ಅವಿತು,
ಪ್ರೇಮದ ಲೆಕ್ಕದಲ್ಲಿ ಬರೀ ಬಿದಿರು ಬೊಂಬೆಯಾದ…
ಬದುಕಿನ ನೆಣಮುರಿದ ಪರಕೀಯನಾದ….
ಗೊತ್ತಿದ್ದೇ ಸಭ್ಯಸ್ಥ ಅನಾಗರಿಕನಾದ….
ಹೋದರೇನಿತ್ತು.? ಕಾಡದೇ ಈ ಒಡಲು…
ಉತ್ತರಗಳಿಲ್ಲದ ಅಂಕುಶಕ್ಕೆ ಪ್ರಶ್ನೆಗಳೇಕೇಕಿತ್ತ…

 

ಗಂಡಸೇ,
ಸೀರೆಯ ಗಂಟೊಳಗಿನ ಗುಟ್ಟಷ್ಟೆಯೇ…?
ನೆರಿಗೆ ಬಿಚ್ಚಿ, ಮೊಳವುದ್ದದ ಸೀರೆ ಎಳೆದು
ಲಂಗದ ಲಾಡಿಯಲ್ಲಿ ಸ್ವಾರ್ಥಹುಡಕುವುದಷ್ಟೇನಾ…?
ನಿನ್ನ ಕೆಲಸ?,
ಜಗತ್ತಿನ ಕಾಮಕ್ಕೆ, ಮೈ ಕೊಟ್ಟು ಕೊಡವುತ್ತಲೇ ಇರಬೇಕಾ..?
ಸ್ತ್ರೀತನದ ಪ್ರೇಮದ ನೋವಿಗೆ ನೀ ಗುಲಾಮನಾಗಲಾರೆಯಾ..?
ಹೆಣ್ತನದ ಶಾಪದ ಹುಣ್ಣಿಗೆ ನೀ ಮುಲಾಮು ಹಚ್ಚಲಾರೆಯಾ…?
ಗೊತ್ತಿದ್ದರೆ ಉತ್ತರ ಸಿಗಲೇ ಬೇಕಿತ್ತು..
ಸಿಗಲಾರದೆಂದೂ ಅನುಮಾನವೇ ಇಲ್ಲ…
ಮಾನಿನಿಯ ಹೆಸರಿಗಂಟಿರೋ
ಪುರುಷ ಜಾತಿಯ ಲೇಬಲ್ ಕೀಳೋವರೆಗೂ…
ಭಗಿನಿಯೆನಿಸಿದ ಅಬಲೆಯೆಂದೂ ಸಬಲೆ ಎನಿಸಳು…
ಇದೇ ಕಾಲತಿತಸತ್ಯ, ಮನುವಾದಿಯ ಮಿಥ್ಯ..

‍ಲೇಖಕರು Avadhi Admin

2 April, 2019

1 Comment

  1. Dakshayani Nagaraj

    ಅರ್ಥಪೂರ್ಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading