ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲ್ಜಾರ್ ನೆನಪಿನಲ್ಲಿ ಒಂದು ಕವನ

ಗಾಡ್ ಆಫ್ ಲಿರಿಕ್ಷ್

– ಲಕ್ಷ್ಮೀಕಾಂತ ಇಟ್ನಾಳ

ಏನು ಹೇಳಲಿ ಗೆಳೆಯಾ,
ಯಾರನ್ನು ದೂರದಿಂದಲೂ ಸರಿ, ಕಣ್ದುಂಬಿಕೊಳ್ಳಲು,
ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ,
ಸಾಹಿತ್ಯದ ಆ ಗಂಗೋತ್ರಿಯೊಂದಿಗೆ
ದಿನವೊಂದು ‘ಎದುರು- ಬದುರು’ ಮಾತುಕತೆಯಾಯಿತಲ್ಲ,
ಮಾತಾಯಿತು, ಚಹ ಮತ್ತೆ ಸಿಹಿ ತಿನಿಸುಗಳ ಕೊಡುಕೊಳ್ಳುವಿಕೆ,
ಒಂದೊಂದು ‘ಲಬ್ಜ್’ ಹೀಗೊಂದು ‘ಮಿಶ್ರ್’
ಹಾಡುಗಳ ಪೂರ್ವಾಶ್ರಮಗಳ ಝರಿಗಳೂ ಹರಿದವಲ್ಲಾ
ಚಂದ್ರನ ‘ಕಾಪಿ ರೈಟ್’ ಹೊಂದಿದ ಆ ಕಿನ್ನರನೊಡನೆ,
ನಮ್ಮೆಲ್ಲರ ಒಲವಿನ ಚಂದಿರನ ಬಗಲಲ್ಲೆ
ಮುತ್ತಿನಂಥ ಮಾತಾದವಲ್ಲಾ!
ಚಂದ್ರನಂದು ದಕ್ಷಿಣೋತ್ತರವಾಗಿ ಒಡಮೂಡಿದ್ದನಲ್ಲಾ!
ನನ್ನ ಅನುವಾದಗಳನ್ನು ಅದೆಷ್ಟು ಜತನವಾಗಿ,
ಪ್ರೀತಿಯಿಂದ ಕೈಯಲ್ಲಿ ನೇವರಿಸಿ, ಕವನಗಳ ಬೆರಳುಗಳ ಹಿಡಿದು,
ಒಲವಿನ ಮಾತುಗಳ ಮಳೆ ಸುರಿಸಿದರಲ್ಲಾ, ಮೈದಡವಿದರಲ್ಲಾ,
ವರುಷಗಳಿಂದ ಪ್ರೀತಿ ಅಕ್ಕರೆಯಲ್ಲಿ ಅಕ್ಷರಗಳ ಹೂಗಳಿಂದ ಅಲಂಕರಿಸಿದ್ದೆ,
ಗುರುವಿನ ಮುಂದೆ ಸಾಲದಾದವೆಲ್ಲಾ!
ಸಾಹಿತ್ಯದ ಮೇರು ಪರ್ವತ, ಇವರಲ್ಲವೇ ನಮ್ಮ ಚಂದಿರ,
ಅದರಿವರು ‘ಪ್ಲೂಟೋ’ ಕೂಡ ಹೌದಲ್ಲವೇ?
‘ಪು-ನೀ’ ಅನ್ನುತ್ತಿದ್ದರಲ್ಲ, ಮೊದಲು,
ಮತ್ತೊಮ್ಮೆ ‘ಗುಲ್ಜಾರ ದೀನ್ವಿ’ ಅಂದರಲ್ಲವೇ?
ಮತ್ತೀಗ ನಮ್ಮೆಲ್ಲರ ‘ಗುಲ್ಜಾರ ‘ ಅಲ್ಲವೆ!

ಇವೆಲ್ಲ ಹೆಸರುಗಳನ್ನು ಹೊತ್ತು ಒಂದೊಮ್ಮೆ ಎದ್ದು ನಿಂತರೆ,
ಅದು ಹೇಗೆ ಕಾಣುತ್ತಾರವರು! ಅಬ್ಬಾ
ನೊರೆಯ ಬಿಳುಪಿನ, ಶುಭ್ರ ಹೊಳಪಿನ, ಕಾಂಚನಜುಂಗಾ
ಹಾಂ . ಅದೇ ‘ಚೋಮೋ ಲುಂಗ್ಮಾ’
ನಿಂತ ಹಾಗೆ, ಆಕಾಶದೆತ್ತರ….. ಲಿರಿಕ್ಷ್ಗನಳ ರಾಜನಾಗಿ!
ಮತ್ತೇನು ಹೇಳಲಿ?ಸಾಕಿ,
ಒಮ್ಮೆ ಬಿಗಿದಪ್ಪಿ, ಮತ್ತೊಮ್ಮೆ ಬೆನ್ನುತಟ್ಟಿ ಮರೆಯಾದರವರು,
ಇಂತಹ ಕನಸೊಂದು ಬೀಳುವುದು
ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ,
 
ಹಾಗೊಮ್ಮೆ ಧಿಗ್ಗನೆ ಕನಸಿಂದ ಎಚ್ಚರಾಗಲು,
ನೋಡಲು ಅಲ್ಲೇನೂ ಇಲ್ಲವಲ್ಲಾ
ತಲೆತುಂಬ ಮಧುರ ಸುಗಂಧ,
ಶಬ್ದಗಳ ಕಣ್ಣುಗಳಲ್ಲಿ ಪರಿಮಳ ಬೀರುತ್ತಿವೆ,
ಕಾಲನ್ನು ನೆಲದ ಮೇಲೆ ಇಡಲು ಹೊರಟವನಿಗೆ
ಕಂಡದ್ದೇನು?
ಅರೆ, ಕಾಲ ಬುಡದಲ್ಲಿ ಸ್ವರ್ಗವಿದೆಯಲ್ಲಾ!
ಆದರೆ ಸುತ್ತ ಯಾರ ಸುಳಿವೂ ಇಲ್ಲವಲ್ಲಾ
ಯಾರೋ ಬಂದು ಹೋದ ಹಾಗೆ ಅನಿಸುತ್ತಿದೆಯಲ್ಲಾ
ಗುಲ್ಜಾರರ ಪುಸ್ತಕದಲ್ಲಿ ಇದೇನಿದು , ನನ್ನ ಹೆಸರು!
ಹಸ್ತಾಕ್ಷರ ಅವರದು ಒಡಮೂಡಿದೆಯಲ್ಲಾ!
ಏನಿದು ನನಸೋ! ಇಲ್ಲಾ ಬದುಕಿನ ಕನಸೋ?!!
 

‍ಲೇಖಕರು G

6 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading