ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊರೋನಾ ಕಾರ್ಮಿಕರಿಗೆ ಕಾಡದಿರಲಿ..

ಮಲಿಕಜಾನ ಶೇಖ / ಅಕ್ಕಲಕೋಟ

ಪ್ರತಿ ವರ್ಷ ಮೇ 1 ಬಂದಾಗ ಕಾರ್ಮಿಕರ ದಿನ ನೆನಪಾಗುವದು ಸಹಜ. ಅಂದು ಬಹುತೇಕ ರಾಷ್ಟ್ರಗಳು ಕಾರ್ಮಿಕರಿಗೆ ರಜೆ ಕೊಟ್ಟಿರುತ್ತವೆ. ಪಾಪ ಕಾರ್ಮಿಕರು ಕೂಡ ಈ ದಿನ ಸಭೆ, ಆಂದೋಲಕ್ಕೆ ಹೋಗಿ ಕೈಯಲ್ಲಿ ಕೆಂಪು ಧ್ವಜ ಹಿಡಿದು “ಬೇಕೆ ಬೇಕು,. ನ್ಯಾಯ ಬೇಕು”, “ನಮ್ಮನ್ನು ಗುಲಾಮರಂತೆ ಕಾಣಬೇಡಿ” ಎಂದು ಕೂಗಿ ಮನೆಗೆ ಬರುವರು. ಆಗ ನೋಡು ನೋಡುವಷ್ಟರಲ್ಲಿ, “ಶ್ರಮಿಕನ ಬೆವರಿನ ಹನಿ ದೇಶ ಕಟ್ಟುತ್ತದೆ.. ಅವನ ಮೇಲೆ ಅನ್ಯಾಯ, ಅತ್ಯಾಚಾರ ಆಗಬಾರದು, ಅವನು ತೆಲೆ ಎತ್ತಿ ಬದುಕಬೇಕು..” ಎಂಬ ಟ್ರೆಂಡ್ ಪ್ರಾರಂಭ ಆಗುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಹೊರೆಗಟ್ಟಲೆ ಸಂದೇಶಗಳು, ಸುದ್ದಿ ವಾಹಿನಿಗಳ ಆಂಕರ ಕೂಡ ಅಂದು ‘ಶ್ರಮಿಕರನ್ನು, ಹಾಗೆ ಹೀಗೆ’ ಎಂದು ಹೇಳುತ್ತಾನೆ. ಪತ್ರಿಕೆಗಳು ಸಹ ಒಂದೆರಡು ಲೇಖನಗಳು ಬರೆದಿರುತ್ತವೆ. ಮರುದಿನ ಎಲ್ಲರು ಗಪಚುಪ್ ಹಾಗಾದರೆ ಮುಂದೆ…

1 ಮೇ 1886ಕ್ಕೆ ಇಂದಿನ ಬಲಾಢ್ಯ ರಾಷ್ಟ್ರ ಅಮೇರಿಕಾದಿಂದ ಆರಂಭಗೊಂಡ ಕಾರ್ಮಿಕರ ಹೋರಾಟ 1 ಮೇ 1923 ರಂದು ಭಾರತಕ್ಕೆ ತಲುಪಿತು. ಅದರಂತೆ ಅದು ವಿಶ್ವವನ್ನು ವ್ಯಾಪಿಸಿತು. ಕಾರ್ಲಮಾರ್ಕ್ಸ್, ಲೆನಿನ್‍ರಂತಹ ನಾಯಕರಿಂದ ಹಿಡಿದು ಇಂದಿನ ಕಮ್ಯೂನಿಸ್ಟ್ ಕಾಮ್ರೇಡ್ ಮತ್ತು ಸುಧಾರಣಾವಾದಿಗಳು ಕಾರ್ಮಿಕರ ಹಕ್ಕುಗಳ ಕುರಿತು ಹೋರಾಟ ಮಾಡುತ್ತಲೆ ಬಂದರು. ದೇಶದ ಅಧಿಕಾರ ಕಾರ್ಮಿಕರ ಕೈಯಲ್ಲಿರಬೇಕು ಎಂದು ಹೇಳಿದರು. ಅದರಂತೆ ಇಂದು ಹಲವು ದೇಶಗಳ ನಾಯಕರು ಅವರ ಹೆಸರಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಇವೆಲ್ಲವುಗಳ ಮಧ್ಯ ನಾವು ಈ ದಿನವನ್ನು ಆಚರಿಸುವಾಗ,..  ಶುಭಾಶಯ ಕೊಡುವಾಗ,.. ಶ್ರಮಿಕ ವರ್ಗಕ್ಕೆ ನಿಜಕ್ಕೂ ನ್ಯಾಯ ಸಿಕ್ಕಿದೆಯಾ..? ಅಥವಾ ಅವರು ಸಮಾಜದಲ್ಲಿ ತೆಲೆ ಎತ್ತಿ ಬದುಕುತ್ತಿದ್ದಾರಾ..? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ, ಬಹುತೇಕ ಕಾರ ಹುಣ್ಣೆಮೆಗೆ ಎತ್ತನ್ನು ಶೃಂಗರಿಸಿ, ಪೂಜೆ ಮಾಡಿ ಉಳಿದ ದಿನ ಚಾಬೂಕಿನ ಏಟು ಕೊಡುವಂತೆ ಭಾಸವಾಗುತ್ತದೆ.

ಮೊದಲು 12-14 ಗಂಟೆ ಕಾಲ ಶ್ರೀಮಂತರು ಕಡಿಮೆ ದುಡಿಮೆ ಕೊಟ್ಟು ದುಡಿಸಿಕೊಳ್ಳುತಿದ್ದರು. ಹೋರಾಟದಿಂದ ಕಾಲಾವಧಿ 8 ಗಂಟೆಗೆ ಬಂದು ದುಡಿಮೆಯು ನಿಶ್ಚಿತವಾಯಿತು. ಇದು ಕಾರ್ಮಿಕರಿಗೆ ಸ್ವಲ್ಪ ಆತ್ಮಸ್ಥೈರ್ಯ ಕೊಟ್ಟಿತು. ಇಂದಿಗೂ ಕೂಡ ಹಲವಾರು ಕಾಯ್ದೆಗಳನ್ನು ಮಾಡಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಪ್ರಾರಂಭವಿದೆ. ಆದರೆ ಅವುಗಳ ಅನುಷ್ಠಾನ ಎಷ್ಟರಮಟ್ಟಿಗೆ ಯಶಸ್ಸು ಕಂಡಿದೆ, ಎಂಬುದು ಕೂಡ ಬಹಳ ಸೂಕ್ಷ್ಮ ಪ್ರಶ್ನೆ. ಆತನಿಗೆ ಸಮಾಜದಲ್ಲಿ ಸ್ಥಿರವಾಗಿ, ಸ್ಥೈರ್ಯದಿಂದ ಬದುಕು ಸಾಗಿಸಲು ಸನ್ಮಾನದ ಬದುಕನ್ನು ಕಲ್ಪಿಸಲೆ ಇಲ್ಲ. ಅರ್ಥವ್ಯವಸ್ಥೆಯ ಪ್ರಮುಖ ಮೂಳೆಯಾದ ಆತನನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಿಸಿಕೊಂಡು ಶ್ರೀಮಂತರ ಕೈ ಗುಲಾಮನಾಗಲು ಬಿಟ್ಟುಕೊಟ್ಟಿದ್ದೇವೆ.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿದೆ, ಅದಕ್ಕಾಗಿ ನಿಮ್ಮ ಪರಿಸರದಲ್ಲಿ ಬಾಲಕಾರ್ಮಿಕರು ಕಾಣಿಸಿದರೆ ಅವರನ್ನು ಶಾಲೆಗೆ ಸೇರಿಸಿ ಎಂದು ಸರಕಾರ ಹೇಳುತ್ತದೆ. ಆದರೆ ಅದು ಇಂದಿಗೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. ಕಾರಣ ಶ್ರಮಿಕ ವರ್ಗದ ಆರ್ಥಿಕ ಬಿಕ್ಕಟ್ಟನ್ನು ಸರಕಾರ ಬಗೆ ಹರಿಸುವ ಕಾರ್ಯ ಮಾಡುತ್ತಿಲ್ಲ. ಇಂದಿಗೂ ಶ್ರೀಮಂತರು ಲಿಂಗ ತಾರತ್ಯಮ್ಯದ ಕೂಲಿಯನ್ನೆ ಕೊಡುತ್ತಾರೆ. ಬದಲಾಗುತ್ತಿರುವ ಜಾಗತಿಕರಣದಲ್ಲಿ ಈತನ ಶ್ರಮ ಮತ್ತು ಕೌಶಲ್ಯಕ್ಕೆ ಬೆಲೆ ಸಿಗದಂತಾಗಿದೆ. ಆತ ತುಟ್ಟಿ ಮಾರುಕಟ್ಟೆಯ ಜಗತ್ತಿನಲ್ಲಿ ಬದಕಲು ಇಂದಿಗೂ ದೊಡ್ಡ ಹೋರಾಟ ಮಾಡುತ್ತಲೆ ಇದ್ದಾನೆ.

ಅದರಲ್ಲಿ ಇಂದಿನ ಕೊರೋನಾ ಸೊಂಕಿನ ತಾಂಡವದಲ್ಲಿ ಶ್ರಮಿಕ ವರ್ಗದ ಭಯಾನಕ ಪರಿಸ್ಥಿತಿ ಜಗತ್ತಿನ ಮುಂದೆ ಬರುತ್ತಿದೆ. ಕೊರೋನಾ ಹುಟ್ಟು ಚೀನಾದ ವುಹಾನ್ ಪ್ರಾಂತ. ಅಲ್ಲಿಯೆ ಅತೀ ಹೆಚ್ಚು ಕಾರ್ಮಿಕರು ವಾಸವಾಗಿದ್ದರು. ಕಮ್ಯೂನಿಸ್ಟ್ ವಿಚಾರ ಸರಣಿ ಈ ದೇಶ, ಕಾರ್ಮಿಕರ ಅಪಾರ ಸಾವು ಕಣ್ಣಿನಿಂದ ನೋಡುತಿತ್ತು. ಆದರೆ ಅವರಿಗಾಗಿ ಬೇಗ ಯಾವ ಉಪಾಯೋಜನೆ ಮಾಡಲೆ ಇಲ್ಲ. ಅದೆ ಶ್ರೀಮಂತರಿರುವ ಬೀಜಿಂಗ್ ಮತ್ತು ಶಾಂಘಾಯಿ ಪಟ್ಟಣಗಳನ್ನು ಸೀಲ್‍ಡೌನ್ ಮಾಡಿತ್ತು. ಅದರಂತೆ ಅದು ಇಂದು ಜಗತ್ತಿನಾದ್ಯಂತ  ದೊಡ್ಡ ಮಾರಿಯಾಗಿ ಹಬ್ಬಿಕೊಂಡಿದೆ. ನಾವು ಒಂದು ವೇಳೆ ಸೂಕ್ಷ್ಮವಾಗಿ ನೋಡಿದರೆ, ಎಲ್ಲಕ್ಕಿಂತ ಹೆಚ್ಚು ಪ್ರಭಾವಕ್ಕೆ ಒಳಗಾದವರು ಕಾರ್ಮಿಕರು ಎಂಬುದು ಗೊತ್ತಾಗುತ್ತದೆ.

ದಿನಗೂಲಿ ಮೇಲೆ ಬದುಕುವ ಈ ಜನರಿಗೆ ಲಾಕಡೌನ್ ದೊಡ್ಡ ಹೊಡೆತವನ್ನೆ ನೀಡಿದೆ. ಅದರಲ್ಲಿ ಈ ವರ್ಗ ಅತಿಯಾಗಿ ಪಟ್ಟಣಗಳಿಗೆ ವಲಸೆ ಹೋಗಿ ಶ್ರಮ ಮಾಡುತ್ತದೆ. ಪಟ್ಟಣಗಳಲ್ಲಿ ಕೊರೋನಾ ಸೊಂಕಿನ ಹೆಚ್ಚಿನ ಪ್ರಭಾವ  ಇವರ ಬದುಕು ತಲ್ಲಣ ಮಾಡಿಬಿಟ್ಟಿದೆ. ಸರಕಾರ ಇವರಿಗಾಗಿ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳುತ್ತದೆ, ಆದರೆ ಅವರ ಭವಿಷ್ಯದ ಕುರಿತು ಯಾವ ಒಳ್ಳೆಯ ಶಾಶ್ವತ ಪರಿಹಾರ ಕಾಣಿಸುತ್ತಿಲ್ಲ. ನಿಮ್ಮ ಕಾರ್ಮಿಕರಿಗೆ ಬೀದಿಪಾಲು ಮಾಡಬೇಡಿ ಒಂದೆರಡು ತಿಂಗಳು ಅವರ ಕಾಳಜಿ ತೆಗೆದುಕೊಳ್ಳಿ ಎಂದು ಕರೆ ಕೊಟ್ಟರು, ಯಾವ ಶ್ರೀಮಂತನು ಇವರ ಬೆನ್ನು ನಿಲ್ಲಲಿಲ್ಲ. ಹೀಗಾಗಿ ಈ ಜನ ಇಂದು ತಮ್ಮ ಚೀಲ ಹೆಗಲಿಗೆ ಹಾಕಿ ಹಳ್ಳಿಗಳಿಗೆ ಮರಳುತ್ತಿದ್ದಾರೆ. ಒಂದು ವೇಳೆ ಮರಳಿದ ಶ್ರಮಿಕ ವರ್ಗ ಹಳ್ಳಿಯಲ್ಲಿಯೆ ಉಳಿದು ಬಿಟ್ಟರೆ ದೊಡ್ಡ ದೊಡ್ಡ ವ್ಯವಸಾಯಗಳು ನಷ್ಟವಾಗಿ ದೇಶದ ಅರ್ಥ ವ್ಯವಸ್ಥೆಗೆ ಕುತ್ತು ಬರುತ್ತದೆ. ಹಳ್ಳಿಯಲ್ಲಿಯೂ ಕೆಲಸ ಸಿಗದೆ ಹೋದರೆ ದೇಶ ದೊಡ್ಡ ಸಂಕಟವನ್ನೆ ಎದುರಿಸಬೇಕಾಗುತ್ತದೆ.

ವಿಶ್ವ ಖಾಧ್ಯ ಸಂಘವು ಈ ವರ್ಷ ಜಗತ್ತಿನಾದ್ಯಂತ ಸುಮಾರು 40 ರಿಂದ 45 ಕೋಟಿ ಜನರು ಹಸಿವಿನಿಂದ ಬಳಲುತ್ತಾರೆ ಎಂದು ಹೇಳಿದೆ. ಹೆಚ್ಚು ಕಡಿಮೆ ಇದೆಲ್ಲಾ ಶ್ರಮಿಕ ವರ್ಗವೆ. ಅದಕ್ಕಾಗಿ ಇಂದು ಜಗತ್ತಿನ ಎಲ್ಲ ದೇಶಗಳು ಇವರಿಗಾಗಿ ಬೇಗ ದೊಡ್ಡ ಕಾರ್ಯ ನಿಯೋಜನೆ ಮಾಡಿಕೊಳ್ಳಬೇಕಿದೆ.

ಜಗತ್ತಿನ ಅರ್ಥವ್ಯವಸ್ಥೆ ಕೊರೋನಾದಿಂದ ನಡುಗುತ್ತಿದೆ ಆದರೆ ನಮ್ಮ ಭಾರತದ ಅರ್ಥವ್ಯವಸ್ಥೆ ಮೇಲೆ ಜಗತ್ತಿನ ಭರವಸೆ ಇದೆ. ಏಕೆಂದರೆ ಇಲ್ಲಿ ಯುವಕ ಮತ್ತು ಶ್ರಮಿಕರ ವರ್ಗ ತುಂಬ ದೊಡ್ಡದು ಮತ್ತು ಅಷ್ಟೆ ಕ್ರಿಯಾಶೀಲವು ಕೂಡ. ಅದಕ್ಕಾಗಿ ನಾವು ಭಾರತಿಯರು ಶ್ರಮಿಕರ ಬದುಕಿಗೆ ಸ್ಥೈರ್ಯ ಕೊಡುವ ಕಾರ್ಯ ಮಾಡಬೇಕಿದೆ. ಅವರ ಶ್ರಮ ಇಲ್ಲದೆ ದೇಶದ ಪ್ರಗತಿ ಅಸಾಧ್ಯ ಎಂಬುದನ್ನು ಅರಿತುಕೊಂಡು, ಈ ವರ್ಗವನ್ನು ಕೊರೋನಾ ಮಹಾಮಾರಿ ಪ್ರಭಾವದಿಂದ ರಕ್ಷಿಸಿ ಪುನಃಶ್ ಚೇತನ ತುಂಬಬೇಕಿದೆ. ಇದುವೆ ನಾವು ಈ ವರ್ಷ ಕಾರ್ಮಿಕ ದಿನಕ್ಕೆ ಕೊಡುವ ದೊಡ್ಡ ಕಾಣಿಕೆ.

‍ಲೇಖಕರು avadhi

1 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading