ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿ ರಂ ನಿಮ್ಮ ಚಿತ್ರ

ಅಕ್ಷತಾ.ಕೆ

ಚಿತ್ತಜ್ಞಾನಿಗಳ ಸಭೆಯಲ್ಲಿ

ಆಸನವು ಇವರಿಗಾಗಿ ಸಜ್ಜಾಗುವ ಹೊತ್ತಲ್ಲಿ

ಕಿರಂ ಅದೇ ಸಭಾಂಗಣದ

ಪಕ್ಕದ ಗಲ್ಲಿಯ ಪುಟ್ಟ ಹೊಟೇಲಿನಲ್ಲಿ

ಶಿಷ್ಯರಿಗೆ ಒತ್ತಾಯ ಮಾಡುತ್ತಾ

ದೋಸೆ ತಿನ್ನಿಸುತಿದ್ದರು

.

ದೋಸೆಯ ಜೊತೆ ಕ್ರಿಕೆಟ್,

ರಾಜಕೀಯ, ಬಂಡಾಯ ಎಲ್ಲವನ್ನು ನೂತು

ಕೆಲವೊಮ್ಮೆ ಜೋತು,

ಹಲವೊಮ್ಮೆ ಸೋತು,

ಕೊನೆಗೊಮ್ಮೆ ಕಾವ್ಯಕ್ಕೇ ಆತು

ಮರೆಯದೇ ಮಾಣಿಯ

ಜೇಬಿಗೆ ಹಸಿರು ನೋಟು ತುರುಕಿ

ಧನ್ಯತೆಯ ನಗೆ ಪಡೆದು

ವೇದಿಕೆಗೆ ನಡೆದು ಬಂದರೆ ನಿಗದಿತ ಅವಧಿಗೆ

ಐದ್ಹತ್ತು ನಿಮಿಷ ಉಳಿದಿರುತಿತ್ತು.

.

ಮನೆಯಲ್ಲಿ ಮಗಳೊಬ್ಬಳೇ

ಎಂಬ ಕಾಳಜಿಯಿಂದ

ಅಕ್ಕ-ಅಲ್ಲಮರನ್ನು ಪಸರಿಸಿದ ಘಳಿಗೆಯಲಿ

ಈ ಅವಧೂತ ಅರ್ಧ ಉಳಿದ ಮಧುಬಟ್ಟಲಿಗೂ

ಇನ್ನಷ್ಟು ಹೊತ್ತಿರಿ

ಎಂದು ಒತ್ತಾಯಿಸುವ ಗೆಳೆಯರಿಗೂ

ಮತ್ತೆ ಸಿಗುವ ಆಶ್ವಾಸನೆ ನೀಡಿ

ಸಿಕ್ಕ ಬಸ್ಸನ್ನೇರಿ ಅರೆ ರಾತ್ರಿಯಲ್ಲಾದರೂ

ಮನೆ ಮುಟ್ಟುವುದು ಇತ್ತೀಚಿನ ವಿದ್ಯಮಾನ

ಎಂದು ಹಿರಿಯ ಗೆಳೆಯರು ಹೇಳುತಿದ್ದರು

.

ಗಾಂಧಿಬಜಾರಿನ ಬೀದಿಯಲ್ಲಿ

ಇದೋ ಇದೀಗ ಬಂದೆ

ಎನ್ನುತ್ತಾ ಕಿ.ರಂ ಅಂತರ್ಧಾನರಾದರು

ಅವರು ಕೊಡಿಸಿದ ಹುರಿಗಾಳು

ಬಾಯಲ್ಲಿ ಮೆಲುಕಾಡುತಿತ್ತು

ಪಸರಿಸಿದ ಪಂಪನ ಕಾವ್ಯ

ಮನದಲ್ಲಿ ಹೊಯ್ದಾಡುತಿತ್ತು

.

ಇಲ್ಲೆಲ್ಲೋ ಸುರೆಯ ವಾಸನೆ ಅಡರಿ

ಗುರುಗಳು ಹುಡುಕಿಹೋಗಿರಬೇಕೆಂದು

ಒಬ್ಬಿಬ್ಬರು ನಕ್ಕಾಡಿದರು

ನಮ್ಮ ನಗು ಅಡಗುವ ಮೊದಲೇ

ಪ್ರತ್ಯಕ್ಷರಾದ ಈ ಗುರು

ಉಬ್ಬಿದ ಜೇಬು ತುಂಬಿಕೊಂಡ ಕೈಗಳಿಂದ

ಮಗೆಮಗೆದು ಹಂಚತೊಡಗಿದರು

.

ಶಿಷ್ಯೆಯೊಬ್ಬಳು ಯಾವಾಗಲೋ ಬಯಸಿದ್ದಳಂತೆ

ಕೆಂಡಸಂಪಿಗೆ ದಂಡೆ ಅವಳೇ

ಮರೆತ ಹೊತ್ತಲ್ಲಿ ಇವರು

ನೆನಪಿಸಿಕೊಂಡು ಅದನ್ನೂ ಹೊತ್ತುತಂದಿದ್ದರು

ಹಂಚಿದ ಧನ್ಯತೆಯನ್ನು ಅರೆಕ್ಷಣವೂ ಭರಿಸದೆ

ಕೂಡಲೇ ಕನ್ನಡ ಕಾವ್ಯದಲ್ಲಿ ಕೆಂಡಸಂಪಿಗೆಯ

ಕಂಪು ಮತ್ತು ಕಂಪನ ಕುರಿತು

ಪಾಠ ಸುರುಮಾಡಿ ಭೌತಿಕದ

ದಾಹ ತಣಿಸುವ

ಕಾವ್ಯಪ್ರೀತಿಯ ಒರತೆ ಮೊಗೆಯತೊಡಗಿದರು

.

ಹಳ್ಳಿ ಮೂಲೆಯ ಹೆಮ್ಮಕ್ಕಳ

ಜೊತೆಗೂ ಗಂಟೆಗಟ್ಟಲೆ

ಹರಟಬಲ್ಲವನಾಗಿದ್ದ

ಅಕ್ಕ ಮಹಾದೇವಿಯ ಜೊತೆ

ವಾಕ್ ಹೋಗಿ `ಗಂಡಸಿನ ಅಹಂ,

ಅವನ ಭಾಷೆ, ನಿನ್ನೊಳಗೂ ನೀಗಿಲ್ಲ’

ಎಂದು ಬಯ್ಯಿಸಿಕೊಂಡು ಬಂದು

ಅದನ್ನೂ ಸಾರಿಕೊಳ್ಳುತಿದ್ದ ಈ ಗುರು

ಗುರುವಿಗೆ ಗುರುವಾಗಿದ್ದ

ಶಿಷ್ಯರಿಗೆ ಸಖನಾಗಿದ್ದ

ಮೂರು ತಲೆಮಾರು ಕಂಡಿದ್ದ

ಮೂರು ತಲೆಮಾರಿಗೂ

ಒಂದೆ ರೀತಿಯಲೀ ಕಾಣಿಸಿದ್ದ

.

ಕಿರಂ ಮೊನ್ನೆ ಬೇಂದ್ರೆ ಕವಿತೆ

ಓದುತ್ತಾ ಕಣ್ಮರೆಯಾದ ಹೊತ್ತಲ್ಲಿ

ಅವರ ಲೋಕವೇ ಶೋಕದಲ್ಲಿರುವಾಗ

ತನ್ನೊಳಗಿಳಿದ ಕಿ.ರಂ ಚಿತ್ರಕ್ಕೆ

ಜೀವ-ಭಾವ ಮೊಳೆತು

ಮಗುವಾಗಿ ತನ್ನೊಡಲಲ್ಲಿ

ಹುಟ್ಟಿಬರಲೆಂದು ಕನಸುವಷ್ಟು

ಕೆಂಡ ಸಂಪಿಗೆ

ಪಡೆದ ಈ ಹೆಣ್ಣಿಗೆ

ಚೈತನ್ಯ ಉಳಿದಿದೆಯೆಂದರೆ

ಅದು ಅವಳ ತಪ್ಪೆ?

ಗುರು ಕಾಣಿಸಿದ ಒಳಲೋಕದ

ಕಸುವಿನ ಭಿತ್ತಿಯ ನೇರ ಅಭಿವ್ಯಕ್ತಿಯೇ?

‍ಲೇಖಕರು avadhi

13 February, 2011

7 Comments

  1. usha

    ಕೀರಂ ಜಗತ್ತನ್ನೇ ಬಿಚ್ಚಿಟ್ಟ ಸುಂದರ ಕವಿತೆ! ಚೆನ್ನಾಗಿದೆ.

  2. ಅಶೋಕ ಶೆಟ್ಟ್ಟರ್

    ತುಂಬ ಚೆನ್ನಾಗಿದೆ ಅಕ್ಷತಾ..

  3. ravi kulkarni

    good poem. aadare koneya eradu saalu bekiralillaveno.

  4. lalitha

    allri,
    ondu mooru varshada hindina maatu ….. maduve ootakke kulitidvi
    tamboola hididu bandvrige raju alias kiram
    ” Jotege ondu hidi hasi mensikai hunasehannu uppu kotbidii … chutney madkondu tintini …….” endaga aduvaregu gambhiryateya paramavadhiyannu suchisuvantidda beegaru ella maretu naguvina alegallali mulugidaru .

  5. ಅಹಲ್ಯಾ ಬಲ್ಲಾಳ

    ಆಹಾ , ಕೀರಂ ಅವರೇ ಕಣ್ಮುಂದೆ ಬಂದಂತೆ ಆಯ್ತು .

  6. shobhavenkatesh

    keerum bagge chennagi muudi bandide nimma kavana

  7. shivakumar

    ಕೀ-ರಮ್ ನಿಜ ಬದುಕಿನಲಿ ನಡೆದಾಡುತ್ತ ಕವಿತ್ವದ ಕಂಪು ಪಸರಿಸಿದ ಜೀವವೆನಿಸುತ್ತದೆ; ಕಾಣದೆ, ಅವರ ಮಾತು ಕೇಳದೆ ಇದ್ದ ಬೇಸರವನ್ನು ಕವಿತೆ ನೀಡಿತು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading