ಕಿರಣ ವಲ್ಲೇಪುರೆ
ಕನ್ನಡದ ಹಿರಿಯ ಲೇಖಕರು ಹಾಗೂ ಕಲಾವಿದರು ಆದ ಶ್ರೀ ಶಂಭುಲಿ೦ಗ ವಾಲ್ದೊಡ್ಡಿ ಸರ್ ಅವರು ಬರೆದ ‘ಹೊಸ ದಿಗಂತದ ಹಾಯಿಕುಗಳು’ ಎಂಬ ಕೃತಿಯು ಸಹೃದಯರಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತದೆ. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಜಪಾನಿ ಮೂಲಕ ಕನ್ನಡಕ್ಕೆ ಪರಿಚಯವಾದ ‘ಹಾಯಿಕು’ ಕನ್ನಡದ ಪ್ರಮುಖ ಕಾವ್ಯ ಪ್ರಕಾರವಾಗಿ ಬೆಳೆದು ಬರುತ್ತಿದೆ.
ಕನ್ನಡದ ತ್ರಿಪದಿಯಂತೆಯೆ ಹಾಯಿಕು ಮೂರು ಸಾಲಿನ ಪದ್ಯವಾಗಿದ್ದು; ಗಾತ್ರದಲ್ಲಿ ಚಿಕ್ಕದಾಗಿದ್ದು ಹಿರಿದಾದ ಅರ್ಥವನ್ನು ಹೊಂದಿರುತ್ತದೆ. ಈ ಹಾಯಿಕುಗಳ ಮೂಲಕ ಕವಿ ತನ್ನ ಮನೋಭಿವ್ಯಕ್ತಿಯನ್ನು ಹೋರಹಾಕಿದ್ದಾರೆ. ಮತಾಂದತೆ, ದ್ವೇಷತೆ ಹೆಚ್ಚಾಗಿರುವ ಇಂದಿನ ಸಮಾಜದಲ್ಲಿ ಸಾಮರಸ್ಯದ ಬದುಕು ಬೇಕಾಗಿದೆ. ಸಾಮರಸ್ಯದ ಬದುಕು ಸ್ವಾರಸ್ಯವೂ ಆಗಿರುತ್ತದೆ. ಈ ಹಿನ್ನಲೆಯಲ್ಲಿ ಕೂಡಿ ಬಾಳುವ ಮನಸ್ಥಿತಿಯನ್ನು ಹುಟ್ಟು ಹಾಕುವ ಈ ಕೃತಿ ತುಂಬಾ ಮಹತ್ವವನ್ನು ಪಡೆಯುತ್ತದೆ.
ಸಮಾಜದಲ್ಲಿ ಜಾತಿ, ಲಿಂಗ, ವರ್ಣದ ಹೆಸರಲ್ಲಿ ತಾರತಮ್ಯ ನಡೆಯುತ್ತದೆ. ಈ ರೀತಿಯ ತಾರತಮ್ಯ ಸಮಾಜವನ್ನು ಒಡೆಯುತ್ತದೆ. ಆ ಮೂಲಕ ಸಮಾಜವನ್ನು ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಆ ಕಾರಣದಿಂದ ನಾವು ನಮ್ಮಲ್ಲಿನ ಪರಸ್ಪರ ಭೇದ-ಭಾವವನ್ನು ತೊಡೆದು ಹಾಕಿ ಒಂದಾಗಿ ಬಾಳಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕವಿ,
‘ಭೇದ ಮಾಡದೆ
ಸರ್ವಜನ ಒಂದೆ೦ದು
ಒಪ್ಪಿಕೊ ಕಂದ’
ಎಂದು ತನ್ನ ಹಾಯಿಕು ಮೂಲಕ ಜನರಲ್ಲಿ ಸಾಮರಸ್ಯ ಭಾವನೆಯನ್ನು ಮೂಡಿಸುವ ಪ್ರಯತ್ನ ಮಾಡುತ್ತಾರೆ.
ದೇಶದಲ್ಲಿ ಧರ್ಮ, ಭಾಷೆ ಮತ್ತು ಪ್ರದೇಶದ ಹಿನ್ನಲೆಯಲ್ಲಿ ಶ್ರೇಷ್ಟತೆ ಮತ್ತು ಕನಿಷ್ಟತೆಯ ಭೇದ-ಭಾವ ಹುಟ್ಟಿಕೊಂಡು ಆತಂಕದ ಸ್ಥಿತಿ ಉಂಟಾಗಿದ್ದು; ಇದು ದೇಶದ ಅಭಿವೃದ್ಧಿಗೂ ಮಾರಕವಾಗಿದೆ. ಈ ಭೇದ-ಭಾವದಿಂದ ನಾವು ಹೊರಬಂದು ನಮ್ಮ ಭಾಷೆ, ನಮ್ಮ ಧರ್ಮ ಮತ್ತು ನಮ್ಮ ಪ್ರದೇಶವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮ, ಅನ್ಯ ಭಾಷೆ ಮತ್ತು ಅನ್ಯ ಪ್ರದೇಶವನ್ನು ಗೌರವಿಸಬೇಕು. ಈ ಹಿನ್ನಲೆಯಲ್ಲ ಕವಿ,
‘ದೇಶವು ಒಂದು
ನಾವು ನಮ್ಮವರೆಂದು
ಸಾಗುವ ಮುಂದೆ’
ಎಂದು ತನ್ನ ಹಾಯಿಕು ಮೂಲಕ ಬಸವಾದಿಶರಣರಂತೆ ಎಲ್ಲರನ್ನೂ ನಮ್ಮವರೆಂದು ತಿಳಿದು ಮುಂದೆ ಸಾಗಬೇಕು ಎಂದು ಕವಿ ಹೇಳುತ್ತಾರೆ.
ಇಂದಿನ ಕಾಲದ ಜನರ ಪರಸ್ಪರ ಸಂಬ೦ಧಗಳು ಪ್ರೀತಿ, ಸ್ನೆಹದ ಬದಲಾಗಿ ಲಾಭದ ಮೇಲೆ ನಿಂತಿರುತ್ತವೆ. ಇವು ತಾತ್ಕಾಲಿಕ ಸಂಬ೦ಧಗಳಾಗಿರುತ್ತವೆ. ಆದರೆ ಮನುಷ್ಯನಿಗೆ ಬೇಕಾಗಿರುವದು ಶಾಶ್ವತ ಸಂಬ೦ಧ; ಅದು ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸದಲ್ಲಿರುತ್ತದೆ. ಈ ಹಿನ್ನಲೇಯಲ್ಲಿ ಕವಿ,
‘ಪ್ರೀತಿಯ ನೀತಿ
ಕೂಡಿ ಬಾಳುವ ಬುತ್ತಿ
ಜೀವನ ರೀತಿ’
ಎಂದು ತನ್ನ ಹಾಯಿಕು ಮೂಲಕ ಮನುಷ್ಯರಿಗೆ ಪರಸ್ಪರ ಪ್ರೀತಿಸುವ ಮತ್ತು ಕೂಡಿ ಬಾಳುವ ಗುಣವಿರಬೇಕು; ಈ ರೀತಿಯ ಜೀವನ ಆತನದಾಗಿದ್ದಾಗಿರಬೇಕು ಎಂದು ಕವಿ ಹೇಳುತ್ತಾರೆ. ಮುಂದುವರೆದು ತಮ್ಮ ಒಂದು ಹಾಯಿಕುನಲ್ಲಿ,
‘ಸಾಮರಸ್ಯದ
ಗಂಧದಿ ಮಿಂದು ಬಂದ
ದೇಶ ನಮ್ಮದು’
ಎಂದು ಕವಿ ಹೇಳುತ್ತಾರೆ. ನಮ್ಮ ದೇಶ ಪ್ರಾಚೀನ ಕಾಲದಿಂದಲೂ ವೈವಿದ್ಯತೆಯಲ್ಲಿ ಏಕತೆಯೂ, ಏಕತೆಯಲ್ಲಿ ವೈವಿದ್ಯತೆಯನ್ನು ಪ್ರತಿನಿಧಿಸುವ ದೇಶ. ಇಲ್ಲಿನ ಜನ ತಮ್ಮ ಸಾಮರಸ್ಯದ ಬದುಕಿನಿಂದ ದೇಶವನ್ನು ಕಟ್ಟಿಕೊಂಡು ಬಂದಿದ್ದಾರೆ. ಇಂದು ನಾವು ಆ ರೀತಿಯ ಸಾಮರಸ್ಯದ ಬದುಕನ್ನು ನಡೆಸಬೇಕು ಎಂಬುದು ಕವಿಯ ಆಶಯವಾಗಿದೆ.
ಮನುಷ್ಯರು ಸಾಮಾನ್ಯವಾಗಿ ಕೆಲವು ವಿಷಯದಲ್ಲಿ ಪರಸ್ಪರ ಭಿನ್ನನಾಗಿರುತ್ತಾರೆ. ಈ ಭಿನ್ನತೆ ಅವರಲ್ಲಿ ಭೇದ-ಭಾವ ಹುಟ್ಟಾಕುತ್ತದೆ. ಇದು ಶೋಷಣೆಗೂ ಕಾರಣವಾಗುತ್ತದೆ. ಆದರೆ ನಾವು ಆರೋಗ್ಯಕರವಾಗಿ ಬಾಳಬೇಕಾದರೆ ನಮ್ಮಲ್ಲಿನ ಭೇದ-ಭಾವ ತೋರೆದು ಕೂಡಿ ಬಾಳಬೇಕು. ಈ ಹಿನ್ನಲೆಯಲ್ಲಿ ಕವಿ,
‘ಲೋಕವೆ ಜೀವ
ಬೇಡವೊ ಭೇದ ಭಾವ
ಕೂಡಿ ಬಾಳುವ’
ಎಂದು ನಾವು ಪರಸ್ಪರ ಭೇದ-ಭಾವ ಮಾಡದೆ ಕೂಡಿ ಬಾಳಬೇಕು ಎಂದು ಕವಿ ಕರೆ ಕೊಡುತ್ತಾರೆ. ಮುಂದುವರೆದು ತಮ್ಮ ಇನ್ನೊಂದು ಹಾಯಿಕುನಲ್ಲಿ,
‘ಕೂಡಿ ಬಾಳುವ
ಜೀವ ಜಾಲದ ಭಾವ
ಎಷ್ಟು ವೈಭವ’
ಎಂದು ಕೂಡಿ ಬಾಳುವ ನೀತಿ ಸ್ವಾರಸ್ಯವೂ, ವೈಭವಯುತವೂ ಆಗಿರುತ್ತದೆ ಎಂದು ಕವಿ ಹೇಳುತ್ತಾರೆ.
ಹೀಗೆ ಇಲ್ಲಿನ ಹಾಯಿಕುಗಳು ಓದುಗರಲ್ಲಿ ಸಾಮರಸ್ಯದ ಭಾವನೆಯನ್ನು ಮೂಡಿಸುತ್ತವೆ. ಉಳಿದಂತೆ ಇಲ್ಲಿನ ಹಾಯಿಕುಗಳಲ್ಲಿ ಸಮಕಾಲೀನ ಬದುಕಿನ ತಲ್ಲಣಗಳ ಚಿತ್ರಣವೂ ಇದೆ. ಸಮಾಜವನ್ನು ಒಡೆಯುವ ಕೆಟ್ಟ ಶಕ್ತಿಗಳಿಂದ ದೂರವಿದ್ದು, ಬುದ್ಧ-ಬಸವ-ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಸಾಮರಸ್ಯದ ಬದುಕನ್ನು ನಡೆಸಬೇಕು ಎಂಬುದು ಇಲ್ಲಿನ ಹಾಯಿಕುಗಳ ಆಶಯವಾಗಿದೆ.
ಲೇಖಕರು ಜಪಾನಿನ ಅಕ್ಷರ ವೃತ್ತದ ಹಾಯಿಕುಗಳಿಗೆ ಕನ್ನಡದ ಛಂದಶಾಸ್ತ್ರದ ಮಾತ್ರಾ ವೃತ್ತ ಮತ್ತು ಗಣಗಳ ಛಂದಸ್ಸನ್ನು ಅಳವಡಿಸಿಕೊಂಡು ಹಾಯಿಕುಗಳನ್ನು ರಚಿಸಿದ್ದು ಕೃತಿಯ ವಿಶೇಷವಾಗಿದೆ.
0 ಪ್ರತಿಕ್ರಿಯೆಗಳು