ಸಂಭ್ರಮದ ಕಾಲ್ಗೆಜ್ಜೆ ಕಳಚಿ ಹೋಗಿದೆ
ಟಿ ಎಸ್ ಗೊರವರ
ತೂರುವ ರಾಶಿಯಂತೆ ಸುರಿಯುತಿದೆ
ಅಂಗಳದಲ್ಲಿ ಬೆಳುದಿಂಗಳು
ಸೆರಗು ಬೀಸುತಿದೆ ತಂಗಾಳಿ
ಬಾಳೆಯ ನರಳಿಕೆ, ಊಳಿಡುವ ನರಿ
ಎಲೆಗೆ ಉದುರುವ ಸಂಕಟ
ಹಬ್ಬವಿಲ್ಲ ಉಮ್ಮಳಿಕೆಗೆ
ಸುಟ್ಟು ತಿನ್ನಲು ಹದಗೊಂಡಿದೆ
ಕಣದ ರಾಶಿಯಲ್ಲಿ ಎತ್ತಿದ ಪುಟ್ಟಿ ಶೇಂಗಾ
ನಂಜಿಕೊಳ್ಳಲು ಬೆಲ್ಲ, ಸುಟ್ಟ ಹಸಿ ಮೆಣಸಿನಕಾಯಿ
ಇಲ್ಲ, ರುಚಿಯಾಗುತ್ತಿಲ್ಲ
ಗಂಟಲೊಳಗಿನ ಬಿಕ್ಕು ಹಾಗೇ ಇದೆ
ಆಕಳಿಗೆ ಚೊಚ್ಚಲು ಹೆರಿಗೆ
ಕರುವಿನ ಕಣ್ಣೊಳಗೆ ನಕ್ಷತ್ರ ಹೊಳಪು
ಅಡುಗೆ ಮನೆಯಲ್ಲಿ ಗಿಣ್ಣದ ತಯಾರಿ
ಉಂಡರೆ ಸಪ್ಪ ಸೆದೆ
ನಾಲಿಗೆಯೊಳಗೆ ರುಚಿಯ ಗುರುತಿಲ್ಲ
ಕುಣಿತ ಹಾಕಿದ್ದ ಸಂಭ್ರಮದ ಕಾಲ್ಗೆಜ್ಜೆ ಕಳಚಿ ಹೋಗಿದೆ
ಮತ್ತೆ ಗೆಜ್ಜೆ ಕಟ್ಟುವುದೇ ? ಕುಣಿತ ಹಾಕುವುದೇ ?
uttama kavite..
SUPERB…
uttamavada kavite
ತೂರುವ ರಾಶಿಯಂತೆ ಸುರಿಯುತಿದೆ
ಅಂಗಳದಲ್ಲಿ ಬೆಳುದಿಂಗಳು
ಸೆರಗು ಬೀಸುತಿದೆ ತಂಗಾಳಿ
– ಈ ಸಾಲುಗಳು ತುಂಬಾ ಇಷ್ಟವಾದವು ಗೊರವರ್
ಅವಧಿಯ ಈ ವರ್ಷದ ಬೆಸ್ಟ್ ಕವಿತೆ!
ಈ ವರ್ಷದ ಉತ್ತಮ ಕವಿತೆ ಎಂಬ ಮಾತು ಬಸ್ಸಿಗೆ ಓಡುತ್ತಿದ್ದ ವಸರದಲ್ಲಿಯೂ ಕವಿತೆಯನ್ನು ಓದಲು ಒತ್ತಾಯಿಸಿತು. ಉತ್ತಮ ರೂಪಕಗಳ ಮೂಲಕ ಸಂಭ್ರಮ ಕಳೆದು ಹೋದದ್ದರ ಬಗ್ಗೆ ಅಭಿವ್ಯಕ್ತಿಸಿದ್ದೀರಿ.ಕಳೆದು ಹೋದ ಸಂಭ್ರಮ ಯಾವುದು ಎಂಬ ಬಗ್ಗೆ ಯೋಚಿಸ ಹಚ್ಚಿದ್ದೀರಿ.ಸ್ವಾತಂತ್ರ್ಯ ದಿನಾಚರಣೆಯ ಬೆನ್ನಲ್ಲಿ ಬಂದ ಕವನ ಇದು ಎಂದು ಒಂದು ಅರ್ಥ ಮೂಡುತ್ತಿದೆ.