ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇರೋನ್ ಶರ್ಮಿಳಾಗೆ..

ರಾಜೇಂದ್ರ ಪ್ರಸಾದ್ 

ಸೋತೆಯೇನ ಅಕ್ಕಯ್ಯ
ಸೋತವರ ನಡುವೆ ನಿಂತು ಸೊಲ್ಲೆತ್ತಿ
ಸೋತೆಯೇನ ಅಕ್ಕಯ್ಯ
ಸದ್ದಿನ ನಡುವೆ ನಿಶ್ಯಬ್ದವಾಗಿ ನಿಂತಿ
ಸೋತೆಯೇನ ಅಕ್ಕಯ್ಯ
ಬೆಂಕಿಯ ಒಳಗೆ ಬೆಳಕಾಗಿ ನಕ್ಕಿ

ಹದಿನಾರು ವರುಷಗಳ ಹಸಿವು
ಇವತ್ತಾದರೂ ಕಾರೀತೇ ಕೋಪ
ಇನ್ನಾದರೂ ಕಕ್ಕೀತೇ ನೋವ?
ಮತ್ತೆ ಬೆಳಕಂತೆ ನಗುವ ನೋಟ
ಬೀರದಿರು ನಮ್ಮತ್ತ ಅಸಲು ಸೋತವರತ್ತ

ಸೋತ ಸಂಕಟ ಬರಿಯ ನಿನ್ನದೇನ
ನೊಂದ ನೋವು ಬರಿಯ ನಿನ್ನದೇನ
ಒಳಗೆ ಕೊಳೆಯಾಗಿ ಹುಳುವಾಗಿ
ಹೊರಗೆ ರೋಗವಾಗಿ ನರಕವಾಗಿ
ಸಾಯುತ್ತಿರುವ ಈ ಸಾವು ನಮ್ಮದೇನ

ಸೆರಗು ಎಳೆದವರಿಗೆ ಸೆರೆಯಾಗುವರೆಗೆ
ಜೀವ ಹಿಂಡಿದವರು ಹಿಪ್ಪೆಯಾಗುವರೆಗೆ
ಹಸಿದಂತೆ ಮಾತನಾಡು ಬಿಡಬೇಡ
ಇನ್ನು ಬಿಡದೇ ಮಾತನಾಡು ..
ಇಲ್ಲೀಗ ಸದ್ದಿಗೆ ಬೆಲೆ .. ಭಾರಿ ಬೆಲೆ.

ನಿನ್ನ ದನಿಯ ಜೊತೆಗೆ ಕೇಳದ ಅದೆಷ್ಟೋ ದನಿಗಳಿವೆ
ನಿನ್ನ ಸೋಲಿನ ಜೊತೆಗೂ ಕೈ ಹಿಡಿವ ಸಾಕಷ್ಟು ಮನಸುಗಳಿವೆ

ಉಪವಾಸವು ಕೊನೆಗೊಂಡ ಜೇನ ರುಚಿ ಇದೇನ
ಸೋತೆಯೇನ ಅಕ್ಕಯ್ಯ ಸೊಲ್ಲಿನ ಸೂಲು ಉಳಿಸಿಕೊಂಡೂ.. ~

‍ಲೇಖಕರು avadhi

12 March, 2017

1 Comment

  1. RAGHAVENDRA RAO H S

    ಬಹಳ ಪ್ರಸ್ತುತವಾದ ಆರ್ದ್ರವಾದ ಕವಿತೆ. ಶರ್ಮಿಳಾ ಅವರ ಸೋಲು ಸಮುದಾಯಗಳ ಒಳಿತಿನ ಬಗ್ಗೆ ದುಡಿಯುವವರನ್ನು ತಲ್ಲಣಿಸುತ್ತದೆ. ಮನುಷ್ಯನ ಮೂಲಭೂತ ಸ್ವಭಾವದ ಬಗ್ಗೆ ಅನುಮಾನಗಳನ್ನು ಮೂಡಿಸುತ್ತದೆ. ಕಾಫ್ಕಾ ಇಂದ ಷೇಕ್ಸ್ ಪಿಯರ್ ವರೆಗಿನ ಲೇಖಕರ ಒಳನೋಟಗಳನ್ನು ನೆನಪಿಗೆ ತರುತ್ತದೆ. ಮನುಷ್ಯ ಮತ್ತು ಸಮಾಜಗಳ ಸ್ವರೂಪವನ್ನು ಕುರಿತ ಗಂಭೀರ ಚಿಂತನೆಗೆ ಹಚ್ಚುತ್ತದೆ. ಇದು ಪ್ರಜಾಪ್ರಭುತ್ವದ ಅಣಕ.
    ಎಚ್.ಎಸ್.ಆರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading