ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಹಿರಿಯ ಜೀವ ಗದ್ಗದಿತರಾಗಿ ಅತ್ತೇಬಿಟ್ಟರು..

 

 

 

 

 

ಮಂಸೋರೆ

 

 

 

ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಆ ಹಿರಿಯ ಜೀವ ಗದ್ಗದಿತರಾಗಿ ಬಂದು ಎದುರಿಗೆ ನಿಂತಾಗ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ಸುಮ್ಮನೆ ನಿಂತು ಬಿಟ್ಟೆ.

ಆ ಹಿರಿಯ ಜೀವಕ್ಕೆ ಏನನಿಸಿತೋ ತಬ್ಬಿಕೊಂಡು ಜೋರಾಗಿ ಅತ್ತೇಬಿಟ್ಟರು.

ಆ ಘಟನೆಗೆ ಹೇಗೆ ಪ್ರತಿಕ್ರಿಯೆ ನೀಡಬೇಕೋ ಎಂದು ಗೊಂದಲದಲ್ಲಿ ಮೆದುಳು ಒದ್ದಾಡುತ್ತಿದ್ದರೆ. ಮನಸ್ಸು ಅದಾಗಲೆ ತುಂಬಿ, ಕಣ್ಣಿನ ಮೂಲಕ ಹೊರಬರಲು ತವಕಿಸುತ್ತಿತ್ತು.

ನಮ್ಮ ‘ಹರಿವು’ ಸಿನೆಮಾ ಆ ಹಿರಿಯ ಜೀವದ ಮನಸ್ಸಿಗೆ ಆ ಪರಿ ತಾಕಿತ್ತು. ಇದನ್ನು ಹೇಗೆ ಅರ್ಥೈಸಬೇಕೋ ನನಗಂತೂ ತಿಳಿಯುತ್ತಿಲ್ಲ. ಆ ಸಿನೆಮಾ ಮಾಡುವಾಗ ಇದು ನೋಡುಗರ ಮೇಲೆ ಈ ಪರಿ ಪರಿಣಾಮ ಬೀರಬಹುದು ಎಂಬ ಸಣ್ಣ ಸುಳಿವೂ ಮೊದಲಿಗೆ ನನಗಿರಲಿಲ್ಲ.

ಆ ಸಿನೆಮಾ ಮಾಡುವಾಗ ಯಾವ ಪ್ರೇಕ್ಷಕರಿಗಾಗಿ ಈ ಸಿನೆಮಾ ಮಾಡುತ್ತಿದ್ದೇನೆ ಎಂದು ಯೋಚಿಸಿಯೂ ಇರಲಿಲ್ಲ. ಮೊದಲ ಓದಿಗೆ ನನ್ನನ್ನು ತುಂಬಾ ಕಾಡಿದ, ಸರಾಸರಿ ಒಂದು ವರ್ಷಗಳ ಕಾಲ ಮನದಲ್ಲೇ ಮಡುಗಟ್ಟಿದ್ದ ಆಶಾ ಬೆನಕಪ್ಪರ ಅಂಕಣವನ್ನು ಸಿನೆಮಾ ರೂಪದಲ್ಲಿ ದೃಶ್ಯೀಕರಿಸಬೇಕೆನ್ನುವ ಏಕಮಾತ್ರ ಉದ್ದೇಶವೊಂದೇ ಇದ್ದದ್ದು.

ಅದನ್ನು ಚಿತ್ರಕತೆಗೆ ಒಗ್ಗಿಸುವಾಗ ನನ್ನ ಜೀವನದ ಅನುಭವಗಳಲ್ಲಿ ಕೆಲವನ್ನು ಹೆಕ್ಕಿ ಮೂಲ ಕತೆಗೆ ಪೂರಕವಾಗಿ ಜೋಡಿಸಿದೆ.

ಆದರೆ ಇದು ಈ ಮಟ್ಟಿಗೆ ನೋಡುಗರನ್ನು ಆರ್ದ್ರಗೊಳಿಸುತ್ತದೆ ಎಂದು ಅರಿವಿಗೆ ಬಂದದ್ದು ಮೊದಲ ಪ್ರದರ್ಶನದಲ್ಲಿ ನಿರ್ದೇಶಕರಾದ ಶಶಾಂಕ್ ರವರು ವೇದಿಕೆಯ ಮೇಲೆ ಮಾತನಾಡುತ್ತಾ ಭಾವುಕರಾದ ಸನ್ನಿವೇಶವನ್ನು ನೋಡಿದಾಗ.

ಆಗಲೂ ಒಂದು ಸಣ್ಣ ಅನುಮಾನವಿತ್ತು. ಸಾಮಾನ್ಯ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಎಂದು. ಮುಂದೆ ಪ್ರತೀ ಪ್ರದರ್ಶನದಲ್ಲೂ ಪ್ರೇಕ್ಷಕರೊಂದಿಗೆ ಮುಖಾಮುಖಿಯಾದಾಗ ಏನೋ ಸಾರ್ಥಕ ಭಾವ.

ಅದೇ ಸಮಯದಲ್ಲಿ ಆ ಮನಸುಗಳು ಸಿನೆಮಾದೊಂದಿಗೆ ತಮ್ಮನ್ನು ಬೆಸೆದುಕೊಂಡು ಆರ್ದ್ರವಾಗಿ ತಮ್ಮೊಡಲ ನೋವನ್ನು ನನ್ನೊಂದಿಗೆ ಹಂಚಿಕೊಂಡಾಗ ನಿಜಕ್ಕೂ ಅಧೀರನಾಗುತ್ತೇನೆ. ಅವರುಗಳ ಜೀವನದ ಅನುಭವದ ಮುಂದೆ ನಾನು ತುಂಬಾ ಚಿಕ್ಕವನು. ಹಾಗಾಗಿ ಅವರಿಗೆ ಏನು ಹೇಳುವುದೋ ತಿಳಿಯುವುದಿಲ್ಲ. ಮೌನವೊಂದೇ ನನ್ನ ಪ್ರತಿಕ್ರಿಯೆ. ಪ್ರತೀ ಪ್ರದರ್ಶನದ ನಂತರ ನನ್ನ ಮನಸ್ಸಲ್ಲಿ ಬೀಸುವ ಭಾವದ ಅಲೆಗಳು ಶಾಂತವಾಗಲು ಸಾಕಷ್ಟು ದಿನಗಳೇ ಬೇಕಾಗುತ್ತದೆ.

ಈ ಹಿಂದಿನ ಪ್ರದರ್ಶನದಲ್ಲೂ ಇಂತಹ ಹಲವು ಘಟನೆಗಳಿವೆ, ಆದರೆ ಅವೆಲ್ಲೂ ದಾಖಲಾಗಿಲ್ಲ. ಈ ಬಾರಿ ದಾಖಲಾಯಿತು. ಅದನ್ನು ಜನರೊಂದಿಗೆ ಹಂಚಿಕೊಂಡ ಮೇಲೆ ಅಲ್ಲಿ ಪ್ರತಿಕ್ರಿಯೆ ನೀಡುತ್ತಿರುವ ಪ್ರತಿಯೊಬ್ಬರ ಮಾತಲ್ಲು ನಮ್ಮ ಕೃತಿಯ ಬಗ್ಗೆ ಸಾರ್ಥಕತೆಯ ನುಡಿಗಳಿವೆ. ಇಷ್ಟು ಮನಸ್ಸುಗಳನ್ನು ಬೆಸೆಯಲು ಒಂದು ಸಿನೆಮಾ ಕಾರಣವಾಗಿದೆ ಎಂದರೆ ಒಬ್ಬ ನಿರ್ದೇಶಕನಿಗೆ ಇನ್ನೇನು ಬೇಕು. ಆ ಸಾರ್ಥಕತೆಯ ಮುಂದೆ ಪ್ರಶಸ್ತಿಗಳೆಲ್ಲವೂ ಗೌಣ ಎನಿಸಿಬಿಡುತ್ತದೆ.

‍ಲೇಖಕರು Avadhi GK

24 January, 2018

1 Comment

  1. Basavanneppa .Kambar

    nijakku kathe aagali cinema aagali kadabeku heege kawidare navu madida shrama sarthaka vagodu thank you mansore sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading