ಆನಂದ ಋಗ್ವೇದಿ
ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ
ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ ಎಳೆಯ ಬಾಲೆ, ಎಪ್ಪತ್ತರ ವಯೋ ವೃದ್ಧೆಯೂ ಈ ವಿಕೃತಿಗೆ ಬಲಿಯಾಗುತ್ತಿರುವ ಬಗ್ಗೆ ಏನು ಹೇಳಬಲ್ಲರು?
ಈ ಜಿಜ್ಞಾಸೆಯಿಂದ ಅತ್ಯಾಚಾರ ಎಂಬ ವಿಕೃತಿ ಕುರಿತು ಮನೋವೈಜ್ಞಾನಿಕ ವಿಶ್ಲೇಷಣೆಯನ್ನು ೧೯೭೪ ರಲ್ಲಿ ಬರೆದ (ನಲವತ್ನಾಲ್ಕು ವರ್ಷಗಳ ಹಿಂದೆ!) ತಮ್ಮ ಕಿರು ಕಾದಂಬರಿ ‘ಮನ ಮಂದಿರ’ದಲ್ಲಿ ತಂದವರು ನನ್ನ ತಾಯಿ ಹಿರಿಯ ಲೇಖಕಿ ಜಿ ಎಸ್ ಸುಶೀಲಾದೇವಿ ಆರ್ ರಾವ್
ಶಾಲಾ ವಾರ್ಷಿಕೋತ್ಸವದ ಮುಸ್ಸಂಜೆ ಅತ್ಯಾಚಾರಕ್ಕೆ ಈಡಾಗುವ ಬಾಲಕಿ ಉಮಾ ಕಥಾ ನಾಯಕಿ, ಜೊತೆಗೇ ಬೆಳೆದ ಗೆಳೆಯ ಆನಂದ ಎಲ್ಲಾ ಗೊತ್ತಿದ್ದೂ ಪ್ರೀತಿಸಿ ಮದುವೆ ಆಗುವ, ನಂತರದಲ್ಲಿ ಬೊಕ್ಕ ತಲೆಯವರನ್ನು ಕಂಡ ಕೂಡಲೇ ಮೂರ್ಛೆ ಬೀಳುವ ಹೆಂಡತಿಯನ್ನು ಕಾಳಜಿಯಿಂದ ಚಿಕಿತ್ಸೆಗೆ ಕರೆ ತಂದಾಗ ಹಿಪ್ನಾಟಿಸಂ ಮೂಲಕ ಕಾರಣ ಬೆದಕುವ ಡಾಕ್ಟರ್. .
ಯಾರಲ್ಲೂ ಹೇಳಲಾಗದ ತಮ್ಮ ಗುಹ್ಯ ರೋಗ ನಿವಾರಣೆಗೆ ಋತುಮತಿಯಾಗದ ಬಾಲೆ ಅಥವಾ ಋತು ನಿಂತ ವೃದ್ಧೆಯ ಭೋಗಿಸಿದರೆ ರೋಗ ವಾಸಿಯಾಗುವುದೆಂಬ ಮೌಢ್ಯಕ್ಕೆ ಬಲಿಯಾಗಿ ನಡೆಯುವ ಈ ಅಬಾಲವೃದ್ಧ ಅತ್ಯಾಚಾರ ಸಾಧ್ಯತೆಗಳ ಬಗ್ಗೆ ಮನೋವೈಜ್ಞಾನಿಕ ಬೆಳಕು ಚೆಲ್ಲುವ ಕಾದಂಬರಿ ನಿಜಕ್ಕೂ ಅನನ್ಯ.
ಸದ್ಯ ದೇಶವನ್ನು ಕಾಡುತ್ತಿರುವ ಈ ಅತ್ಯಾಚಾರ ವಿದ್ಯಮಾನಗಳ ನಿಯಂತ್ರಣ ಮತ್ತು ನಿವಾರಣೆ ಬಗ್ಗೆ ಈ ಬೆಳಕು ದಾರಿ ತೋರಬಲ್ಲುದು!
ನಾನು ಹುಟ್ಟುವ ಮುನ್ನ ಈ ಬಗ್ಗೆ ಚಿಂತಿಸಿದ್ದ ನನ್ನ ಅಮ್ಮನ ಬಗ್ಗೆ ನನಗೆ ವಿಸ್ಮಯ ಅಭಿಮಾನ.
ಆ ಕಥಾ ನಾಯಕನ ಹೆಸರು: ಆನಂದ! ಇದನ್ನೆ ನನಗೆ ನಾಮಕರಣ ಮಾಡಿದ ಬಗ್ಗೆ ಹೆಮ್ಮೆ ಧನ್ಯತೆ.
0 ಪ್ರತಿಕ್ರಿಯೆಗಳು