ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಎಂದಿಗೂ ಆಪ್ತನೆನಿಸುತ್ತಾನೆ..

ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ

ಮೆಚ್ಚುಗೆ ಪಡೆದ ಕವಿತೆ 

krishna-devangamatha

ಕೃಷ್ಣ ದೇವಾಂಗಮಠ

ಒಂದು ಕಾಲಮಾನಕ್ಕೆ
ಬಹಳ ದೊಡ್ಡವನಂತೆ
ಸಿಡುಕು ಮುಖದವನಂತೆ
ಶಿಸ್ತಿನ ಸಿಪಾಯಿಯಂತೆ
ಕೋಲು ಹಿಡಿದು ಬಾಸುಂಡೆ ಮೂಡಿಸುತ್ತಿದ್ದ
ಅಮ್ಮನಿಗಿಂತ ಒಂದು ಕೈ ಜಾಸ್ತಿ ಪ್ರೀತಿ ಅನ್ನಗಳೆರಡನ್ನೂ ಮಿಶ್ರಿಸಿ ಉಣಬಡಿಸುತ್ತಿದ್ದ
ಚಂದ್ರನ ನೆವವಿಲ್ಲದ  ಗುಮ್ಮನಿಲ್ಲದ
ಕಟು ಸತ್ಯಗಳ ಬದುಕನ್ನ ಮೈಗೂಡಿಸುತ್ತಿದ್ದ

heಭುಜದ ಮೇಲೆ ಹೊತ್ತು ತಿರುಗಿ
ತಿರಿದುಂಬುವರ ಕಾಣಿಸುತ್ತಿದ್ದ
ನಿರ್ಗತಿಕರ ನಿರಾಶ್ರಿತರ ವೃದ್ಧರ
ಹಸಿವ ಮನಗಾಣಿಸುತ್ತಿದ್ದ
ಅಮಲಿನ ಸಿರಿವಂತರ ಶೋಕಿ ತೋರಿಸುತ್ತಿದ್ದ
ಬಡವರ ಹೊಟ್ಟೆ ಹೊಡೆದು ಜಗಮಗಿಸುವವರ ದವಲತ್ತಿನ ಅರಿವಾಗಿಸುತ್ತಿದ್ದ
ಒಟ್ಟಾಗಿ ಭೂತಭವಿಷ್ಯತ್ತುಗಳ ಗೊಡ್ಡು ಬಿಟ್ಟು
ವರ್ತಮಾನದ ಜಂಗಮನಂತೆ ಕಣ್ಣಿಗೆ ತೋರುತ್ತಿದ್ದ

ನನ್ನ ಜೋಗಿಯಾಗಿಸಿ ಪುಸ್ತಕಗಳ ಜೋಳಿಗೆಗಿಳಿಸಿ ಪ್ರಪಂಚದ ಎಲ್ಲರ
ತವಕ ತಲ್ಲಣ ನೋವು ರಾಗದ್ವೇಷಗಳ
ತಲೆಗೆ ತುಂಬಿ ಜೀರ್ಣಿಸಿಬಿಟ್ಟ
ಮರದ ಬೇರುಗಳಂತೆ ನನ್ನೆದೆ ಭೂಮಿಯಲ್ಲಿ
ಆಳವಾಗಿಳಿದು ಲವಣಗಳ ಹೀರಿ ನನ್ನ ಬಿಳಿಲುಗಳಾಗಿಸಿ ಬಿಸಿಲಲ್ಲಿ ಬೆಂದವರ
ನೆರಳಿಗೆ ಕೊಂಡುತಂದು ಮತ್ತೆ ಚಿಗುರೆಲೆಯಾಗಿ ಹಸಿರಾಗುತ್ತಾನೆ

ಥಟ್ ಅಂತ ಕ್ಷಣಾರ್ಧದಲ್ಲಿ ಒಳಹೊರಗುಗಳ ಬೆಕ್ಕಸಬೆರಗಾಗುವಂತೆ ಎಲ್ಲದರಾಚೆ
ಬಿಚ್ಚಿಟ್ಟು ಸುಮ್ಮನೆ ಮೂಲೆಗುಂಪಾಗಿ ಗಳಗಳ ಕಣ್ಣೀರು ಸುರಿಸುತ್ತಾನೆ
ದಿಟ್ಟಿಸಿ ನೋಡಿದರೆ ಕರಾಳತೆ ಹಾಸುಹೊಕ್ಕಾಗಿರುವ  ನಮ್ಮದೇ ಛಾಪು
ರಕ್ತಸಿಕ್ತ ಅಧ್ಯಾಯಗಳ ಪುಸ್ತಕ ಮುಚ್ಚಿ ನೆತ್ತರು ಮಣ್ಣಿಗೆ ಸೋಕದಂತೆ ಆವಿಯಾಗಿಸುತ್ತಾನೆ
ಅಹಿಂಸೆಯ ಸಾರುತ್ತಲೆ ಬುದ್ಧನಾಗುತ್ತಾನೆ

ಆತ ಯಾವುದನ್ನೂ ಅಲ್ಲಗಳೆಯುವುದಿಲ್ಲ
ಸ್ವ ಸಿದ್ಧಾಂತಗಳಿಗೆ ಬದ್ಧನಾದರೂ
ಅದರ ಹೊರೆ ಜಗಕ್ಕೆ ಕಿಂಚಿತ್ತು ಇಲ್ಲ
ಸ್ವಯಂ ಪ್ರಕಾಶಿತ ಬೆಳಕಿನ ಸೆಲೆಯಾಗಿಸಲಿಚ್ಚಿಸುತ್ತಾನೆ
ರೆಪ್ಪೆಯಂತೆ ಕಾವಲು ನಿಂತು
ಕಣ್ಣಾಗಿಸುತ್ತಾನೆ
ತನ್ಮುಖೇನವೇ ಎಲ್ಲೆ ಇಲ್ಲದ ಎಲ್ಲವನ್ನೂ ದಾಟಿಸುತ್ತಾ
ನನ್ನಲ್ಲೊಂದಾಗಿ ತನ್ಮಯನಾಗುತ್ತಾನೆ ಮತ್ತು ಎಂದಿಗೂ ಆಪ್ತವಾಗುತ್ತಾನೆ

‍ಲೇಖಕರು Admin

18 December, 2016

2 Comments

  1. Sangeeta Kalmane

    ಅಭಿನಂದನೆಗಳು ಕೃಷ್ಣ

    • Anonymous

      ಧನ್ಯವಾದಗಳು ಸಂಗೀತಾ ಮೆಡಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading