ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅತ್ಯಾಚಾರ' – ಒಂದು ವಿಶ್ಲೇಷಣೆ

– ಎಂ. ಬಸವಣ್ಣ

ಡಿಸೆಂಬರ್ 16, 2012 ರಂದು ರಾತ್ರಿ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಲೈಂಗಿಕ ಅತ್ಯಾಚಾರ ಭಾರತದ ಇತಿಹಾಸದಲ್ಲಿ ಒಂದು ದುರ್ಭರ ಘಟನೆ. ಅಂದು, 23 ವರ್ಷದ ಮೆಡಿಕಲ್ ಕಾಲೇಜ್ ಫಿಜಿಯೊತೆರಪಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಆರು ಜನ ದುರುಳರು ಚಲಿಸುತ್ತಿರುವ ಬಸ್ಸಿನಲ್ಲಿ ಅತ್ಯಾಚಾರವೆಸಗಿದರು, ಬರೆಯಬಾರದಷ್ಟು ಅಸಹ್ಯವಾಗಿ ಅವಳನ್ನು ಗಾಯಗೊಳಿಸಿದರು, ಸಹಾಯಕ್ಕೆ ಬಂದ ಅವಳ ಮಿತ್ರನನ್ನು ಗಾಯಗೊಳಿಸಿದರು. ನಂತರ ಯುವತಿ ಮತ್ತು ಅವಳ ಮಿತ್ರನನ್ನು ನಗ್ನಗೋಳಿಸಿ ರಸ್ತೆಯಲ್ಲಿ ಎಸೆದು ಪರಾರಿಯಾದರು. ಯುವತಿಯ ಮಿತ್ರನ ಹೇಳಿಕೆಯ ಪ್ರಕಾರ, ಅಲ್ಲಿದ್ದ ಯಾರೂ ಅವರಿಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಸುಮಾರು ಎರಡು ಗಂಟೆಗಳ ನಂತರ ಪೋಲೀಸರು ಬಂದರು, ಬಂದವರು ಈ ಕೇಸ್ ಯಾರ ವ್ಯಾಪ್ತಿಗೆ ಸೇರುತ್ತದೆಂಬುದನ್ನು ತೀರ್ಮಾನಿಸಲು ಕಾಲ ತೆಗೆದುಕೊಂಡರೇ ಹೊರತು ನೊಂದವರಿಗೆ ಸಹಾಯ ಮಾಡಲು ಮುಂದಾಗಲಿಲ್ಲ. ಅವಳ ಮಿತ್ರನ ಹೇಳಿಕೆಗಳು ಮತ್ತು ಮಾಧ್ಯಮಗಳು ಘಟನೆಗೆ ಕೊಟ್ಟ ಪ್ರಾಮುಖ್ಯತೆ, ದೆಹಲಿಯ ನಾಗರಿಕರ ಮನಸಿನಮೇಲೆ ಬಹಳ ಪರಿಣಾಮ ಬೀರಿತು. ಜನರು, ಪ್ರಮುಖವಾಗಿ ಯುವಜನರು, ಬೀದಿಗಿಳಿದು ಪ್ರತಿಭಟಿಸಿದರು. ಪ್ರತಿಭಟನೆ ದೇಶದ ಉದ್ದಗಲಕ್ಕೂ ಹರಡಿತು. ಇರುಕಲಿಗೆ ಸಿಕ್ಕಿದ ದೇಶದ ಆಡಳಿತ ಕಾರ್ಯೋನ್ಮುಖವಾಗಬೇಕಾಯಿತು. ನಿಧಾನವಾಗಿ ವಿಚಾರಣೆ ಆರಂಭವಾಗಿದೆ. ಅದು ಎಲ್ಲಿಗೆ ಹೋಗುವುದೋ ತಿಳಿಯದು. ಇದೆಲ್ಲ ನಡೆಯುತ್ತಿರುವಾಗಲೇ ಆ ಯುವತಿಯನ್ನು ವಿಶೇಷ ಚಿಕಿತ್ಸೆಗೆಂದು ಸಿಂಗಪುರಕ್ಕೆ ಕಳಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಅವಳು ಮರಣಹೊಂದಿದಳು. ಇಂಥ ಘಟನೆ ಇದೇ ಮೊದಲನೆಯದೇನಲ್ಲ. ಇಂಥವು ಹಲವಾರು ಜರುಗಿವೆ. ಏನು ಕಾರಣವೋ ಅವೆಲ್ಲಕ್ಕೂ ಜನ ಈ ಮಟ್ಟದಲ್ಲಿ ಪ್ರತಿಭಟಿಸಿರಲಿಲ್ಲ. ಅದೃಷ್ಟವಶಾತ್ ಡಿಸೆಂಬರ್ ಘಟನೆ ನಿಧಾನವಾಗಿಯಾದರೂ ಜನರ ಕಣ್ಣು ತೆರಸಿತು. ಆಡಳಿತಗಾರರನ್ನು ಎಚ್ಚರಿಸಿತು.

ಇಂಥ ಘಟನೆಗಳು ಅಪರೂಪವೇನಲ್ಲ. ಇಂದಿನದು ದೇಶದ ರಾಜಧಾನಿ ದೆಹಲಿಯಲ್ಲಿ ನಡೆದುದರಿಂದ ದೊಡ್ಡ ಸುದ್ದಿಯಾಯ್ತು. ಜಗತ್ತಿನಾದ್ಯಂತ ಇಷ್ಟೆ ಅಥವಾ ಇದಕ್ಕಿಂತ ದಾರುಣ ಹಿಂಸಾಚಾರಕ್ಕೆ ಸ್ತ್ರೀಯರು ಪ್ರತಿ ನಿಮಿಷವೂ ಒಳಗಾಗುತ್ತಿದ್ದಾರೆ. ದೆಹಲಿಯಲ್ಲಿ ಕಳೆದ ವರ್ಷ ಮೊದಲ 11 ತಿಂಗಳಲ್ಲಿ ಸ್ತ್ರೀಯರ ಮೇಲೆ 635 ಅತ್ಯಾಚಾರದ ಪ್ರಕರಣಗಳು ನಡೆದಿರುವಂತೆ ವರದಿಯಾಗಿದೆ. ಆದರೆ ಅಪರಾಧಿಗಳ ಪೈಕಿ ಒಬ್ಬನಿಗೆ ಮಾತ್ರ ಶಿಕ್ಷೆಯಾಗಿದೆಯಂತೆ. ಹಿಂದೆ ಬೆಂಗಳೂರಿನಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಅವಳನ್ನು ಕರೆದೊಯ್ಯುತ್ತಿದ್ದ ಟ್ಯಾಕ್ಸಿ ಡ್ರೈವರ್ ರೇಪ್ ಮಾಡಿ ಕೊಂದ ವಿಷಯವನ್ನು ಜನರು ಮರೆತಿರಲಿಕ್ಕಿಲ್ಲ. ಅದೇ ಬೆಂಗಳೂರಿನಲ್ಲಿ ಲಾ ಯೂನಿವರ್ಸಿಟಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದ ವಿಷಯ ನಮ್ಮ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ. ಕೆಲವು ವರ್ಷಗಳ ಹಿಂದೆ, ಪುಣೆಯಲ್ಲಿ ಒಬ್ಬಳು ಮಹಿಳೆಯನ್ನು ರೇಪ್ ಮಾಡಿ ಕೊಲೆ ಮಾಡಿದ ಪ್ರಕರಣ ಇನ್ನೂ ನಮ್ಮನಿಮ್ಮ ಮನಸ್ಸಿನಿಂದ ಮರೆಯಾಗಿರಲಿಕ್ಕಿಲ್ಲ. ಇತ್ತಿಚೆಗಂತೂ ಪ್ರತಿದಿನ ಒಂದಲ್ಲ ಒಂದು ಕಡೆ ಇಂಥ ಘಟನೆಗಳು ನಡೆಯುತ್ತಿರುವುದನ್ನು ಮಾಧ್ಯಮಗಳು ಪ್ರಕಟಿಸುತ್ತಲೇ ಇವೆ ಭಾರತದಲ್ಲಿ ಸ್ತ್ರೀಯರ ನಿಷಿದ್ಧ ವ್ಯಾಪಾರ-ವ್ಯವಹಾರ ನಡೆಯುವಷ್ಟು ಇನ್ನೆಲ್ಲೂ ಇಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸ್ತ್ರೀಯರ ಮೇಲಿನ ದುರಾಕ್ರಮಣ ಅನಾದಿ ಕಾಲದಿಂದಲೂ ಅವ್ಯಾಹತವಾಗಿ ನಡೆದು ಬಂದಿದೆ, ನಮ್ಮ ಪುರಾಣಗಳಲ್ಲಿ ಕೂಡ ಬಹಳಷ್ಟು ಹೃದಯವಿದ್ರಾವಕ ವಿಚಾರಗಳು ಉಲ್ಲೇಖವಾಗಿವೆ. ಶೂರ್ಪಣಕಿಯನ್ನು ವಿರೂಪಗೊಳಿಸಿದ್ದು ರಾಮಾಯಣ ಮಹಾಕಾವ್ಯದ ಕೇಂದ್ರ ವಸ್ತು (ರಾಕ್ಷಸಿಯಾದರೇನು ಅವಳೂ ಒಂದು ಹೆಣ್ಣು ತಾನೆ? ರಾಕ್ಷಸರಿಗೂ ದೇವತೆಗಳಿಗೂ ತಂದೆ ಒಬ್ಬನೆ (ಕಶ್ಯಪ); ತಾಯಿಯರು (ದಿತಿ ಮತ್ತು ಅದಿತಿ) ಮಾತ್ರ ಬೇರೆ ಬೇರೆ ಅಷ್ಟೆ). ಅನಂತರ ರಾವಣನಿಂದ ಸೀತೆಯ ಅಪಹರಣ ಮತ್ತು ಇಂದ್ರ ಅಹಲ್ಯೆಯನ್ನು ಮೋಸಗೊಳಿಸಿ ಅತ್ಯಾಚಾರವೆಸಗಿದ್ದು ಎಲ್ಲರಿಗೂ ತಿಳಿದ ವಿಷಯ. ಅಷ್ಟೇ ಅಲ್ಲ. ಶಿಲೆಯಾಗಿದ್ದ ಅಹಲ್ಯೆಯ ಶಾಪವಿಮೋಚನೆ ಮಾಡಿದ ಕರುಣಾಳು ಶ್ರೀರಾಮ ಗರ್ಭವತಿ ಪತ್ನಿ ಸೀತೆಯನ್ನು ಕಾಡಿಗಟ್ಟಿದ ಘಟನೆಯನ್ನು ಮರೆಯಲಾದೀತೆ? ಧರ್ಮರಾಜ ಹೆಂಡತಿಯನ್ನು ಜೂಜಿನಲ್ಲಿ ಪಣವಾಗಿ ಒಡ್ಡಿದ್ದು, ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪರಣ ಮಾಡಲು ಯತ್ನಿಸಿದ್ದು, ಮತ್ತು ಕೀಚಕ ದ್ರೌಪದಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದ್ದು ಮುಂತಾದ ಘಟನೆಗಳು ಮಾಹಾಭಾರತದಲ್ಲಿ ನಿರೂಪಿತವಾಗಿವೆ. ಪುರುಷಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣಿನ್ನು ತನ್ನ ಭೋಗ ವಸ್ತುವೆಂದು ತಿಳಿದು ಅವಳ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಲೇ ಬಂದಿದ್ದಾನೆ. ಗಂಡಿನ ನೀತಿಗೆಟ್ಟ ನಡೆಯನ್ನು ಸಮಾಜ ಸತತವಾಗಿ ಕ್ಷಮಿಸುತ್ತಲೇ ಬಂದಿದೆ (ಇಲ್ಲಿ ನನ್ನ ಮಿತ್ರ ಹೆಚ್. ಎಮ್. ಮರುಳಸಿದ್ದಯ್ಯನವರು 60 ವರ್ಷಗಳ ಹಿಂದೆ ರಚಿಸಿದ್ದ ಒಂದು ಕವನದ ಮೊದಲ ಸಾಲು ನೆನಪಿಗೆ ಬರುತ್ತದೆ: ಗಂಡಸಿನ ನೀತಿ ಆರಡಿಯ ರೀತಿ; ಅವಗಿಲ್ಲ ನೀತಿ ನಿಯಮ).

ಭಾರತದ ಪುರಾಣಗಳಷ್ಟೇ ಅಲ್ಲ, ವಿಶ್ವದ ಯಾವುದೇ ಪುರಾಣವನ್ನು ನೋಡಿ, ಇದೇ ಕತೆ. ಹೆಲನ್ಳನ್ನು ಪಾರಿಸ್ ಹಾರಿಸಿಕೊಂಡು ಹೋದದ್ದು, ಯೂಲಿಸಿಸ್ನ ಪತ್ನಿ ಪೆನಲೊಪೆಗೆ ಜನ ಕಿರುಕುಳ ಕೊಟ್ಟದ್ದು, ಗ್ರೀಕ್ ಪುರಾಣ ಇಲಿಯಡ್ ಮತ್ತು ಒಡೆಸ್ಸಿಯಲ್ಲಿದೆ. ಇಂಥ ಘಟನೆಗಳು ಎಲ್ಲಾ ದೇಶಗಳ ಪುರಾಣಗಳಲ್ಲೂ ದಾಖಲಾಗಿದೆ. ಪುರಾಣದಲ್ಲಿ ಹೇಳಿರುವುದು ಕತೆ, ನಿಜವಲ್ಲ ಎಂದು ನೀವು ಭಾವಿಸಬಹುದು. ಆದರೆ, ಅಂಥ ಘಟನೆಗಳು ಸಮಾಜದಲ್ಲಿ ನಡೆಯಬಹುದೆಂಬ ಕಲ್ಪನೆ ಬರೆದವನ ಮನಸ್ಸಿನಲ್ಲಿತ್ತು ಎಂಬುದನ್ನು ನೀವು ಒಪ್ಪಲೇ ಬೇಕು.

ಅತ್ಯಾಚಾರವೆಂದರೇನು?

ಇಂಥದೇ ಲೈಂಗಿಕ ಅತ್ಯಾಚಾರವೆಂದು ನಿಖರವಾಗಿ ಹೇಳುವುದು ಕಷ್ಟ. ಅದು ದೇಶ, ಕಾಲ, ಸಂಸ್ಕೃತಿ, ಮತ್ತು ಸಾಮಾಜಿಕ ಕಾಯಿದೆಗಳು, ಮುಂತಾದುವನ್ನು ಅವಲಂಬಿಸಿರುತ್ತದೆ. ಆದರೂ ಸಾಮಾನ್ಯವಾಗಿ, ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು (ಹೆಚ್ಚಾಗಿ ಸ್ತ್ರೀಯರನ್ನು) ಹೆದರಿಸಿ, ಬೆದರಿಸಿ, ಹಿಂಸಿಸಿ, ಬಲಾತ್ಕಾರವಾಗಿ, ಅವಳ ಇಷ್ಟಕ್ಕೆ ವಿರೋಧವಾಗಿ, ನಡೆಸುವ ಲೈಂಗಿಕ ಆಕ್ರಮಣವನ್ನು ಅತ್ಯಾಚಾರವೆಂದು ಕರೆಯಲಾಗಿದೆ. ಅದು ಸಂಭೋಗವೇ ಆಗಿರಬೇಕೆಂಬುದೇನಿಲ್ಲ. ಹೆಣ್ಣಿನ ವಿಚಾರವಾಗಿ ಅಸಭ್ಯವಾಗಿ ವರ್ತಿಸುವುದು, ಅವಳನ್ನು ಕೆಣಕುವುದು, ಪೀಡಿಸುವುದು, ಚುಡಾಯಿಸುವುದು, ಅನವಶ್ಯಕವಾಗಿ ಅವಳ ಮೇಲೆ ಕೈಯ್ಯಾಡಿಸುವುದು (groping) ಅಥವಾ ಮುಟ್ಟುವುದು (touching), ಇವೆಲ್ಲಾ ಅತ್ಯಾಚಾರದ ಪರಿಧಿಯೊಳಗೆ ಬರುತ್ತವೆ. ಒಪ್ಪಿಗೆ ಕೊಡಲಾರದ ವಯಸ್ಸಿನ ಹುಡುಗಯರೊಡನೆ (18 ವರ್ಷದೊಳಗಿನವರು) ದೌರ್ಜನ್ಯ ನಡೆದರೆ, ಅದನ್ನು ಶಾಸನಬದ್ಧ ಅತ್ಯಾಚಾರ (statutory rape) ಎಂದು ಕರೆಯಲಾಗುತ್ತದೆ. ಒಂದುವೇಳೆ 18 ವರ್ಷ ವಯಸ್ಸಿನೊಳಗಿನವರು ಲೈಂಗಿಕ ಕ್ರಿಯೆಗೆ ಒಪ್ಪಿಗೆ ಕೊಟ್ಟರೂ, ಅದು ಅತ್ಯಾಚಾರವೆಂದೇ ಪರಿಗಣಿಸಲಾಗುತ್ತದೆ. ಅತ್ಯಾಚಾರ ಹೆಚ್ಚಾಗಿ ಗಂಡಸರು ಹೆಂಗಸರ ಮೇಲೆ ನಡೆಸುವ ಅಪರಾಧವಾದರೂ. ಜೈಲಿನಲ್ಲಿ ಗಂಡಸರು ಗಂಡಸರ ಮೇಲೆ ಅತ್ಯಾಚಾರ ನಡೆಸುವುದು ಕಂಡು ಬಂದಿದೆ.

ಲೈಂಗಿಕ ಬಲಾತ್ಕಾರ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಪ್ರಾಣಿಗಳಲ್ಲೂ ಜರಗುತ್ತಿರುತ್ತದೆ. ವಿಕಾಸವಾದದ ಪ್ರಕಾರ, ಲೈಂಗಿಕ ಕ್ರಿಯೆಯ ಪ್ರಮುಖ ಉದ್ದೇಶ ಸಂತಾನೋತ್ಪತ್ತಿ. ಜೀವೋತ್ಪತ್ತಿ ಪ್ರಾಕೃತಿಕ ನಿಯಮ. ಅದು ನಡೆಯಲೇಬೇಕು. ಸಾಮಾಜಿಕ ಕಟ್ಟುಪಾಡುಗಳು ನಿರ್ಮಾಣವಾಗುವವರೆಗೆ ಮಾನವರಲ್ಲೂ ಲೈಂಗಿಕ ಕ್ರಿಯೆ ಅನಿಯಂತ್ರಿತವಾಗಿ, ಅವ್ಯಾಹತವಾಗಿ ನಡೆಯುತ್ತಿತ್ತು. ಯುದ್ಧಕಾಲದಲ್ಲಿ, ಸೋತ ದೇಶದ ಸ್ತ್ರೀಯರ ಮೇಲೆ ಗೆದ್ದ ದೇಶದ ಸೈನಿಕರು ಅತ್ಯಾಚಾರ ಮಾಡುವುದು ಸರ್ವೆಸಾಧಾರಣ. ಹಾಗೆ ಮಾಡುವುದನ್ನು ಅಪರಾಧವೆಂದು ಪರಿಗಣಿಸದಿರುವುದೇ ಅದು ನಡೆಯುವುದಕ್ಕೆ ಮುಖ್ಯ ಕಾರಣ. ಕೆಲವು ಸಂದರ್ಭಗಳಲ್ಲಿ ಅಂಥ ಕ್ರಿಯೆಗಳನ್ನು ಶತ್ರು ದೇಶದವರ ಮೇಲಿನ ತಿರಾಸ್ಕಾರದ ಮತ್ತು ದ್ವೇಷದ ಅಭಿವ್ಯ್ಯಕ್ತಿಯೆಂದು ಪರಿಗಣಿಸಿ ಪ್ರೋತ್ಸಾಹಿಸಲಾಗುತ್ತದೆ.

ಅತ್ಯಾಚಾರದ ವ್ಯಾಪ್ತಿ

ಅತ್ಯಾಚಾರ ಎಲ್ಲೆಲ್ಲಿ ಎಷ್ಟೆಷ್ಟು ನಡೆಯುತ್ತದೆ ಎಂದು ಹೇಳುವುದು ಕಷ್ಟ. ಸಾಮಾನ್ಯವಾಗಿ, ಇಂಥ ಘಟನೆ ತೆರೆಯ ಮರೆಯಲ್ಲಿ, ಏಕಾಂತದಲ್ಲಿ, ಕತ್ತಲೆಯಲ್ಲಿ ನಡೆಯುತ್ತದೆ; ನಡೆದುದ್ದನ್ನು ಹೇಳಿಕೊಳ್ಳುವುದು ಅವಮಾನಕರವೆಂದು ಪರಿಗಣಿಸಲಾಗುವುದರಿಂದ ಅದು ಬೆಳಕಿಗೆ ಬರುವುದಿಲ್ಲ. ಸುಮಾರು ಶೇಕಡ 15 ರಿಂದ 20 ಪ್ರಕರಣಗಳು ಪ್ರಕಟಗೊಳ್ಳುತ್ತವೆ. ಬೆಳಕಿಗೆ ಬಂದ ಪ್ರಕರಣಗಳನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಂಡರೂ, ಇತ್ತೀಚಿನ ದಿನಗಳಲ್ಲಿ ಈ ಅಪರಾಧದ ಸಂಖ್ಯೆ ಏರುತ್ತಲೇ ಇರುವಂತೆ ಕಂಡುಬರುತ್ತದೆ. ಈ ಏರಿಕೆ ಯಾವ ಮಟ್ಟಕ್ಕೆ ಬಂದಿದೆ ಎನ್ನುವುದು ಪ್ರಕಟವಾಗಿರುವ ಕೆಲವು ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಒಂದು ಮೂಲದ ಪ್ರಕಾರ (National Crime Record Bureau), 2010 ರಲ್ಲಿ 2,13,585 ಮಂದಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೆದಿದೆ. 22,172 ಲೈಂಗಿಕ ಆಕ್ರಮಣ (rape) ಮತ್ತು 40,613 ಅಸಭ್ಯ ವರ್ತನೆ (molestation) ದಾಖಲಾಗಿದೆ, 2,97,795 ಅಪಹರಣ ಪ್ರಕರಣಗಳು (kidnap and abduction) ನಡೆದಿವೆ. ಕುಟುಂಬದಲ್ಲಿ ಗಂಡಂದಿರಿಂದ 94,041 ಕ್ರೌರ್ಯವೇ (domestic violence) ಮೊದಲಾದ ಪ್ರಕರಣಗಳು ಜರುಗಿವೆಯೆಂದು ದಾಖಲಾಗಿದೆ. 2011ರ ಅಂಕಿ ಅಂಶಗಳ ಪ್ರಕಾರ, ಪ್ರತಿ 54 ನಿಮಿಷಗಳಿಗೊಂದು ರೇಪ್. 51 ನಿಮಿಷಗಳಿಗೊಮ್ಮೆ ಲೈಂಗಿಕ ಕಿರುಕುಳ (sexual harassment) 26 ನಿಮಿಷಗಳಿಗೊಮ್ಮೆ ಹೆಂಗಸರನ್ನು ಚುಡಾಯಿಸುವುದು (eve trasing), 192 ನಿಮಿಷಗಳಿಗೊಂದು ವರದಕ್ಷಿಣೆ ಕೊಲೆ (dowry death) ನಡೆದಿದೆ. ಇಂದು ಒಂದು ಅಂದಾಜಿನ ಪ್ರಕಾರ ಪ್ರತಿ 30 ನಿಮಿಷಗಳಿಗೊಂದು ರೇಪ್ ನಡೆಯುತ್ತಿದೆಯಂತೆ. 1971 ರೊಡನೆ ಹೋಲಿಸಿದರೆ ಇಂದು ರೇಪ್ ಪ್ರಕರಣಗಳಲ್ಲಿ ಶೇಕಡ 700 ರಷ್ಟು ಹೆಚ್ಚಳ ಕಂಡು ಬಂದಿದೆ. ವೇಶ್ಯಾವಾಟಿಕೆಗಳಲ್ಲಿ ಗುಲಾಮರಂತೆ ಬದುಕುತ್ತಾ, ತಮ್ಮಿಚ್ಚೆಗೆ ವಿರೋಧವಾಗಿ ಲೈಂಗಿಕ ಆಕ್ರಮಣಕ್ಕೆ ದಿನನಿತ್ಯ ಒಳಗಾಗುವ ಹೆಂಗಳೆಯರ ಸಂಖ್ಯೆ ಇಲ್ಲಿ ಸೇರಿಲ್ಲ. ಚೀನಾದಲ್ಲಿ ವೇಶ್ಯೆಯರು ಹೆಚ್ಚಾಗಿದ್ದಾರೆ; ಆದರೆ ಅವರಿಗೆ ಯಾರೊಡನೆ ಕೂಡಬೇಕೆನ್ನುವ ಆಯ್ಕೆಯ ಸ್ವಾತಂತ್ರ್ಯ ಇದೆಯಂತೆ. ಧರ್ಮನಿಷ್ಠರೆಂದು ಹೇಳಿಕೊಳ್ಳುವ ಭಾರತೀಯರಲ್ಲಿ, ತಂದೆ ಮಗಳು ಮತ್ತು ಸೋದರ ಸೋದರಿಯರ ನಡುವೆ ನಡೆಯುವ ನಿಷಿದ್ಧ ಸಂಭೋಗಗಳ (incest) ಸಂಖ್ಯೆ ದಿನ ದಿನಕ್ಕೆ ಹೆಚ್ಚುತ್ತಿರುವುದು ದುರಾದೃಷ್ಟಕರ.

ಈ ವಿಷಯದಲ್ಲಿ ಕರ್ನಾಟಕವೇನೂ ಹಿಂದುಳಿದಿಲ್ಲ. ಇಲ್ಲಿ 2008 ರಿಂದ 2012 ರ ವರೆಗೆ 2798 ಅತ್ಯಾಚಾರ ಪ್ರಕರಣಗಳು ನಡೆದಿವೆ. ಇವೆಲ್ಲಾ ಪೋಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದರಲ್ಲಿ ಶಿಕ್ಷೆಗೆ ಗುರಿಯಾದವರು ಕೇವಲ 123 ಮಂದಿ ಮಾತ್ರ. ಅಂದರೆ 2675 ಆರೋಪಿಗಳು ಆರಾಮವಾಗಿ ಬದುಕುತ್ತಿದ್ದಾರೆ. ಅತ್ಯಾಚಾರಕ್ಕೊಳಗಾದ ಹೆಣ್ಣುಮಕ್ಕಳು ಜೀವನವಿಡೀ ಕೊರಗುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ ಎಷ್ಟು ಪ್ರಕರಣಗಳು ನಡೆದಿವೆ, ಎಷ್ಟು ಮಂದಿಗೆ ಶಿಕ್ಷೆಯಾಗಿದೆ ಎಂಬುದಕ್ಕೆ ನಿಖರ ಮಾಹಿತಿ ಲಭ್ಯವಿಲ್ಲ. ದೆಹಲಿಯಲ್ಲಿ ನಡೆದ ಒಂದು ಘಟನೆ ಜನರ ಕಣ್ಣು ತೆರೆಸಿದೆ. ಇಲ್ಲಿ ನಡೆದಿರುವ 2796 ಪ್ರಕರಣಗಳನ್ನು ಯಾರೂ ಗಮನಿಸದಂತಿಲ್ಲ. ಕುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗಿರುವ ನಾಯಕರು, ಮತ್ತು ಭ್ರಷ್ಟ ಅದಿಕಾರಿಗಳಿಗೆ ಇತ್ತ ಕಣ್ಣುಹರಿಸಲು ಸಮಯವಾದರೂ ಎಲ್ಲಿದೆ? ಅತ್ಯಾಚಾರಕ್ಕೊಳಗಾದವರು ಕೆಳವರ್ಗದ ಬಡಜನರೆಂದ ಮೇಲೆ ಅವರನ್ನು ಕೇಳುವವರು ತಾನೆ ಯಾರು? ಜಿಲ್ಲಾವಾರು ಪ್ರಕರಣಗಳು ಕೆಳಗೆ ಕಂಡಂತಿವೆ; ಆವರಣದಲ್ಲಿರುವುದು ಶಿಕ್ಷೆಗೊಳಗಾದವರ ಸಂಖ್ಯೆ.

ಬೆಂಗಳೂರು ನಗರ 371 (14); ಬೆಂಗಳೂರು ಗ್ರಾಮಾಂತರ 104 (4) ಬೆಳಗಾವಿ 193 (12); ಗುಲ್ಬರ್ಗ 139 (7); ಮಂಡ್ಯ 130 (1); ಮೈಸೂರು 124 (9); ಚಿತ್ರದುರ್ಗ 123; ತುಮಕೂರು 120 (3); ರಾಯಚೂರು 119 (4); ಹಾಸನ 110 (6); ಶಿವಮೊಗ್ಗ 83 (12); ಕೊಡಗು 82 (6); ರಾಮನಗರ 78 (2); ಬಿಜಾಪುರ 76; ಕೋಲಾರ 71 (3); ದಾವಣಗೆರೆ 70 (6); ಚಿಕ್ಕಮಗಳೂರು 70 (5); ಮೈಸೂರು ನಗರ 67; ಬಳ್ಳಾರಿ 58 (2); ಚಿಕ್ಕಬಳ್ಳಾಪುರ 55; ಮಂಗಳೂರು ನಗರ 54 (6); ಬೀದರ್ 52 (2); ಕೊಪ್ಪಳ 50; ಉತ್ತರ ಕನ್ನಡ 48 (5); ಬಾಗಲಕೋಟೆ 45 (1); ಚಾಮರಾಜನಗರ 44 (1); ಹಾವೇರಿ 41 (1); ಯಾದಗಿರಿ 40; ಉಡುಪಿ 38 (1); ಕೆಜಿಎಫ್ 35; ದಕ್ಷಿಣ ಕನ್ನಡ 32 (6); ಗದಗ 31 (1); ಹುಬ್ಬಳ್ಳಿ-ದಾರವಾಡ 23 (3); ದಾರವಾದ 18; ರೈಲ್ವೆ 4.

ಹೆದರಬೇಡಿ, ಇದು ಭಾರತಕ್ಕಷ್ಟೇ ಸಂಬಂಧಿಸಿದ ವಿಷಯವಲ್ಲ. ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ಸುಮಾರು ಪ್ರತಿ ಐದರಲ್ಲೊಬ್ಬಳು (20%) ಸ್ತ್ರೀ ಅವಳ ಜೀವಿತ ಕಾಲದಲ್ಲಿ ಒಂದು ಸಾರಿಯಾದರೂ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂದು ವರದಿಯಾಗಿದೆ (Center for Disease Control and Prevention). ವಿಶ್ವಸಂಸ್ಥೆ ನೀಡಿರುವ ಅಂಕಿಅಂಶಗಳ ಪ್ರಕಾರ, ವಿಶ್ವದಲ್ಲಿ ಮೂವರಲ್ಲೊಬ್ಬಳು ಮಹಿಳೆ ತನ್ನ ಜೀವಿತಾವಧಿಯಲ್ಲಿ ಲೈಂಗಿಕ ಆಕ್ರಮಣಕ್ಕೆ ಒಳಗಾಗುತ್ತಾಳೆ. ಅತ್ಯಾಚಾರಕ್ಕೆ ಒಳಗಾದವರಲ್ಲಿ ಸುಮಾರು ಶೇಕಡ 80ರಷ್ಟು ಮಂದಿ 25 ವರ್ಷವಯಸ್ಸಿನೊಳಗಿನವರು. ಅತ್ಯಾಚಾರವೆಸಗಿದವರು ಪರಿಚಯಸ್ಥರು, ಆತ್ಮೀಯರು, ಸ್ನೇಹಿತರು ಅಥವಾ ಕುಟುಂಬದವರು. ಅಲಾಸ್ಕ, ಒರೆಗಾನ್ ಮತ್ತು ನೆವೇದ ಸಂಸ್ಥಾನಗಳಲ್ಲಿ ಅತಿ ಹೆಚ್ಚಿನ ರೇಪ್ ಪ್ರಕರಣಗಳು ನಡೆದಿರುವಂತೆ ವರಧಿಯಾಗಿದೆ. ಇಂಗ್ಲೆಂಡ್ನಲ್ಲಿ 2012ರಲ್ಲಿ 3,000 ರೇಪ್, ಮತ್ತು 6,000 ಲೈಂಗಿಕ ಹಿಂಸಾಚಾರದ ಪ್ರಕರಣಗಳು ನಡೆದಿರುವುದಾಗಿ ಹೇಳಲಾಗಿದೆ; ವರದಿಯಾಗದ ಘಟನೆಗಳು ಇನ್ನೆಷ್ಟೊ! ಯೂರೋಪ್ ರಾಜ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಕೆಲ ದಿನಗಳ ಹಿಂದೆ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಲೇಖನ ಡೆಕ್ಕನ್ ಹೆರಾಲ್ಡ್ನಲ್ಲಿ (18-1-2013) ಪುನರ್ಮುದ್ರಿತವಾಗಿತ್ತು. ಅದರಲ್ಲಿ ಹೇಳಿರುವ ಕೆಲವು ವಿಚಾರಗಳು ಗಮನಾರ್ಹ: 1. ಒಹಾಯೊ ಸ್ಟೇಟ್ನಲ್ಲಿ ಪ್ರಜ್ಞಾಶೂನ್ಯವಾಗಿ ಬಿದ್ದಿದ್ದ 16 ವರ್ಷದ ಯುವತಿಯ ಮೇಲೆ ಹೈಸ್ಕೂಲ್ ವಿದ್ಯಾರ್ಥಿಗಳು ನಿರಂತರವಾಗಿ ರೇಪ್ ಮಾಡಿದರು. 2. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಲ್ಲಿ ಶೇಕಡ 30 ರಿಂದ 60 ಮಂದಿ ಸ್ತ್ರೀಯರು ಲೈಂಗಿಕವಾಗಿ ಹಿಂಸೆಗೊಳಗಾಗಿದ್ದಾರೆ. 3. ದಕ್ಷಿಣ ಆಫ್ರಿಕದಲ್ಲಿ ಶೇಕಡ 37 ಮಂದಿ ಗಂಡಸರು ತಾವು ರೇಪ್ ಮಾಡಿದುದಾಗಿ ಒಪ್ಪಿಕೊಂಡಿದ್ದಾರೆ. 4. ಅಮೆರಿಕಾದಲ್ಲಿನ ಪಾರ್ಲಿಮೆಂಟ್ 1994ರಲ್ಲಿ ಅಂಗೀಕರಿಸಿದ್ದ (ಈಗ ಅವಧಿ ಮುಗಿದಿರುವ) ಸ್ತ್ರೀಯರ ಮೇಲಿನ ಹಿಂಸಾಚಾರ ವಿರೋಧಿ ಶಾಸನವನ್ನು ನವೀಕರಿಸಲಿಲ್ಲ. 5. ಹೆಂಗಳೆಯರ ಅಕ್ರಮ ವ್ಯಾಪಾರ ಅಮೆರಿಕಾದಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಮೇಲೆ ಹೇಳಿದ ಲೇಖನವನ್ನು ಬರೆದ ನಿಖೊಲಾಸ್ ಕ್ರಿಸ್ಟೋಫ್ (Nicholas Kristof) ಅವರಿಗೆ ಪಾಕಿಸ್ಥಾನದ ಸ್ತ್ರೀರೋಗ ತಜ್ಞ ಡಾಕ್ಟರ್ ಶೇರ್ಷಾ ಸೈಯದ್ (Shershah Syed) ಹೇಳಿರುವ ಒಂದು ಮಾತು ಇನ್ನೂ ಗಮನಾರ್ಹ. ಅದು ಹೀಗಿದೆ: ಅತ್ಯಾಚಾರಕ್ಕೊಳಗಾಗಿ ನನ್ನ ಬಳಿಗೆ ಚಿಕಿತ್ಸೆಗೆ ಬರುವ ಸ್ತ್ರೀಯರಿಗೆ ನಾನು ಪೋಲೀಸರ ಬಳಿಗೆ ಹೋಗಲು ಹೇಳುವುದಿಲ್ಲ; ಯಾಕೆಂದರೆ ಅಲ್ಲಿಗೆ ಹೋದಾಗ ಅವರು ಮತ್ತೆ ಅತ್ಯಾಚಾರಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಭಾರತದಲ್ಲಿ 1970ರ ದಶಕದಲ್ಲಿ, 16 ವರ್ಷದ ಆದಿವಾಸಿ ಬಾಲಕಿ ಮತ್ತು 25 ವರ್ಷದ ಮುಸ್ಲಿಂ ಮಹಿಳೆ, ಈ ಇಬ್ಬರ ಮೇಲೆ ಪ್ರತ್ಯೇಕ ಪ್ರಕರಣಗಳಲ್ಲಿ ಪೋಲಿಸರೇ ಅತ್ಯಾಚಾರವೆಸಗಿರುವುದು ಪ್ರಕಟಗೊಂಡಿದೆ. ಈ ಪ್ರಕರಣಗಳು ಇಲ್ಲಿ ಮಹಿಳಾ ಚಳುವಳಿಗೆ ಕಾರಣವಾಯಿತೆಂದು ಹೇಳಲಾಗಿದೆ. ಇದರಿಂಆಗಿ 1983ರಲ್ಲಿ ಅತ್ಯಾಚಾರ ಕಾನೂನಿಗೆ ತಿದ್ದುಪಡಿ ತರಲಾಯ್ತು. 1989ರಲ್ಲಿ ಅತ್ಯಾಚಾರವೆಸಗಿದ್ದ ಮೂವರು ಪೋಲೀಸರಿಗೆ ಕಾರಾಗೃಹ ಶಿಕ್ಷೆ ವಿಧಿಸಲಾಯ್ತು. (ಆ ಹೆಣ್ಣು ಮೊದಲೇಲೈಂಗಿಕ ಸಂಪರ್ಕ ಹೊಂದಿದ್ದಲೆಂಬ ಕಾರಣಕ್ಕೆ ಶಿಕ್ಷೆಯನ್ನು 10 ರಿಂದ್ 5ಕ್ಕೆ ಇಳಿಸಲಾಯ್ತು).

ಪತ್ರಿಕೆಗಳಲ್ಲಿ ಇನ್ನೊಂದು ಸುದ್ದಿ ಬಂದಿತ್ತು. ಜರ್ಮನಿಯ ಹೆಸರಾಂತ ಸಿನಿಮ ತಾರೆ ಕ್ಲಾಸ್ ಕಿನ್ಸ್ಕಿ (Klaus Kinski) ಎಂಬುವವನು ತನ್ನ ಮಗಳು ಪೋಲ ಕಿನ್ಸ್ಕಿಯ ಮೇಲೆ, ಅವಳು 5 ವರ್ಷದವಳಾಗಿದ್ದನಿಂದ 19 ವರ್ಷಗಳವರೆಗೆ, ನಿರಂತರವಾಗಿ ಲೈಂಗಿಕ ಅತ್ಯಾಚಾರ ನಡೆಸಿದ್ದನಂತೆ. ಕ್ಲಾಸ್ 1991 ರಲ್ಲಿ ಮರಣಹೊಂದಿದ ಮೇಲೆ, ಜನರು ಅವನನ್ನು ಒಬ್ಬ ಮಹಾನ್ ಕಲಾವಿದ ಹಾಗು ಜೀನಿಯಸ್ ಎಂದು ಹೊಗಳುತ್ತಿರುವುದನ್ನು ಸಹಿಸಲಾರದೆ, ಪೋಲ ಅವನು ನಡೆಸಿದ್ದ ದೌರ್ಜನ್ಯವನ್ನು ಹೊರಗೆಡವಿದ್ದಾಳೆ. ಪೋಲ ಅವನ ಮೊದಲ ಹೆಂಡತಿಯ ಮಗಳು; ಈಗ ಅವಳಿಗೆ 60 ವರ್ಷ ವಯಸ್ಸು. ಅವಳ ಮಾತಿನಲ್ಲೇ ಹೇಳುವುದಾದರೆ: ಅವನಿಗೆ ಏನು ಬೇಕಿತ್ತೊ ಅದನ್ನು ಅವನು ತೆಗೆದುಕೊಂಡ (He just took what he wanted); ಎಂಥ ಮನ ಕರಗುವ ಮಾತು.

ಇತ್ತೀಚೆಗೆ ಪ್ರಕಟವಾದ ಇನ್ನೊಂದು ಸುದ್ದಿ ಮೈ ನಡಗಿಸಿತು. ದಕ್ಷಿಣ ಆಫ್ರಿಕದಲ್ಲಿ ಸ್ತ್ರೀಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಅವಳ ಹೊಕ್ಕಳಿನಿಂದ ಗುಪ್ತಾಂಗದವರೆಗೆ ಚಾಕುವಿನಿಂದ ಸೀಳಿ, ರಸ್ತೆ ಬದಿಯಲ್ಲಿ ಎಸೆಯಲಾಗಿತ್ತಂತೆ. ಇತ್ತೀಚೆಗೆ ಬೆಳಕಿಗೆ ಬಂದ ಇನ್ನೊಂದು ವರದಿಯ ಪ್ರಕಾರ, ಸುಮಾರು 50 ಮಂದಿ ಯೆಮಾನಿ ಮಹಿಳೆಯರು ಅವರ ಗಂಡಂದಿರ ಕೊಲೆ ಮಾಡಿದುದಕ್ಕಾಗಿ ಸೆರೆ ಹಿಡಿಯಲ್ಪಟ್ಟಿದ್ದಾರೆ. ಕೊಲೆ ಮಾಡಲು ಅವರು ಕೊಟ್ಟ ಕಾರಣಗಳು ಅವರು ಅನುಭವಿಸಿದ್ದ ಕೌಟುಂಬಿಕ ಹಿಂಸಾಚಾರ, ಸಾಮಾಜಿಕ ಅಸಮಾನತೆ, ಹಾಗು ಮಾನಸಿಕ ರೋಷ.

ಅದೇಕೆ ಹೀಗೆ ? ಗಂಡಸರೆಲ್ಲಾ ವಿಕೃತ ಕಾಮಿಗಳೆ ? ಕ್ರೂರಿಗಳೆ ? ಸ್ತ್ರೀಯರ ಮೇಲಿನ ಅತ್ಯಾಚಾರ ಇತ್ತೀಚೆಗೆ ಹೆಚ್ಚುತ್ತಿದೆಯೆ ? ಹಾಗಿದ್ದರೆ ಅದಕ್ಕೆ ಕಾರಣಗಳೇನು ? ಅದನ್ನು ತಡೆಯುವುದು ಸಾಧ್ಯವೆ ? ಇಂಥ ಪ್ರಶ್ನೆಗಳಿಗೆ ನಿಖರವಾಗಿ ಉತ್ತರ ಹೇಳುವುದು ಇಂದಿನವರೆಗೂ ಸಾಧ್ಯವಾಗಿಲ್ಲ.

ಅತ್ಯಾಚಾರಕ್ಕೆ ಕಾರಣಗಳು

ಸುದ್ದಿಮಾಧ್ಯಮಗಳು ಮತ್ತು ಜನಸಾಮಾನ್ಯರು ಅತ್ಯಾಚಾರಕ್ಕೆ ಕೊಡುವ ಕಾರಣಗಳು ಇವು:

ಗಂಡಸಿನ ಶಕ್ತಿ ಪ್ರದರ್ಶನ

ಗಂಡಸಿನ ಮೇಲ್ಮೆಯ (ಸುಪೀರಿಯಾರಿಟಿ) ಅಭಿವ್ಯಕ್ತಿ

ಹೆಣ್ಣಿನ ಬಗ್ಗೆ ಗಂಡಸಿಗಿರುವ ಕೀಳು ಮನೋಭಾವ

ಹೆಣ್ಣಿನ ತೇಜೋವಧೆ (ಮಾನಭಂಗ) ಮಾಡಬೇಕೆಂಬ ಆಂತರಿಕ ಬಯಕೆ

ಹೆಣ್ಣನು ವಸ್ತುವಾಗಿ ಪರಿಗಣಿಸಿ ಅವಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂಬ ಧೋರಣೆ

ಸಮಾಜದಲ್ಲಿ ಇನ್ನೂ ಅಲ್ಲಲ್ಲಿ ಅಸ್ಥಿತ್ವದಲ್ಲಿರುವ ಊಳಿಗಮಾನ್ಯ ಪದ್ಧತಿ (feudalism)

ಮಾಧ್ಯಮಗಳು ಹೆಣ್ಣನ್ನು ನಿರೂಪಿಸುವ ರೀತಿ

ಮೈ ಪ್ರದರ್ಶನ ಮಾಡುವ ಉಡುಗೆ ತೊಡುಗೆಗಳು

ಮೇಲೆ ಹೇಳಿರುವವೆಲ್ಲ ಅತ್ಯಾಚಾರಕ್ಕೆ ಕಾರಣಗಳಿರಬಹುದು. ಆದರೆ, ಅವು ಎಷ್ಟರ ಮಟ್ಟಿಗೆ ಕಾರಣಗಳೆಂದು ಹೇಳುವುದಕ್ಕೆ ಸಾಕಾದಷ್ಟು ವಸ್ತುನಿಷ್ಠ ಪುರಾವೆಗಳಿಲ್ಲ. ಅವು ಜನಸಾಮಾನ್ಯರ ಮಾತುಗಳು, ಅಭಿಪ್ರಾಯಗಳು. ಅವು ನಿಜವೋ ಸುಳ್ಳೋ ಖಚಿತವಾಗಿ ಹೇಳಲಾಗುವುದಿಲ್ಲ.

ಲೈಂಗಿಕ ಅತ್ಯಾಚಾರ ಗುರುತರವಾದ ಅಪರಾದ ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಪುರುಷರ ಅತಿಯಾದ, ಅನಿಯಂತ್ರಿತ ಕಾಮುಕತನವೇ ಆದಕ್ಕೆ ಪ್ರಮುಖ ಕಾರಣವೆಂಬುದು ಪುರುಷಪ್ರಧಾನ ಸಮಾಜದಲ್ಲಿನ ಜನಸಾಮಾನ್ಯರ ಅಭಿಪ್ರಾಯ ಆದರೆ, ಬಹಳಷ್ಟು ಸ್ತ್ರೀವಾದಿಗಳು (feminists) ಈ ಮಾತನ್ನು ಒಪ್ಪುವುದಿಲ್ಲ. ಅವರ ಪ್ರಕಾರ, ಅತ್ಯಾಚಾರ ಶೀಲ ಅಥವಾ ಪಾವಿತ್ರ್ಯಹರಣ ಎನ್ನುವುದು ಮಹಿಳೆಯ ದೇಹದ ಮೇಲಣ ಅತಿಕ್ರಮಣ, ಅಧಿಕಾರ ಸ್ಥಾಪಿಸುವ ಪ್ರಯತ್ನ. ಗಂಡು ಅತ್ಯಾಚಾರಕ್ಕೆ ತೊಡಗಲು ಪ್ರಮುಖ ಕಾರಣ, ಅವನಿಗೆ ಸ್ತ್ರೀಯರ ಮೇಲೆ ಆಳ್ವಿಕೆ ನಡೆಸಬೇಕೆನ್ನುವ ಆಂತರಿಕ ಬಯಕೆ; ಸ್ತ್ರೀಯರನ್ನು ಹಿಂಸಿಸಿ ತಾನೆಷ್ಟು ಬಲಶಾಲಿ ಎಂಬುದನ್ನು ತೋರಿಸಬೇಕೆನ್ನುವ ತೀವ್ರ ಆಕಾಂಕ್ಷೆ; ಅವರ ತೇಜೋವಧೆ (ಮಾನಭಂಗ) ಮಾಡಿ, ಅವಮಾನಿಸುವ ಪ್ರಬಲ ಅಪೇಕ್ಷೆ. ಅಂದರೆ, ಅತ್ಯಾಚಾರಕ್ಕೆ ಪ್ರೇರಣೆ ಗಂಡಸಿನ ಕಾಮಾತುರತೆಯಲ್ಲ; ಅವನಲ್ಲಿ ಆಳವಾಗಿ ಬೇರುಬಿಟ್ಟಿರುವ ಮೇಲರಿಮೆ ಮತ್ತು ಹಿಂಸಾಚಾರ ಪ್ರವೃತ್ತಿ. ಇರಬಹುದೋ ಏನೊ; ಹೆಣ್ಣು ಬಹಳವಾಗಿ ಹೆದರುವ ಘಟನೆಗಳಲ್ಲಿ ಲೈಂಗಿಕ ಆಕ್ರಮಣ ಪ್ರಮುಖವಾದುದು, ಅವಳು ಭಯಪಡುವುದು ಅತ್ಯಾಚಾರದ ಹಿಂದಿರುವ ಹಿಂಸೆಗೆ. ಅತ್ಯಾಚಾರ ನಡೆಯುವುದು ತನ್ನನ್ನು ಹಿಂಸಿಸುವುದಕ್ಕಾಗಿಯೇ ಹೊರತು ಲೈಂಗಿಕ ಸುಖಕ್ಕಾಗಿಯಲ್ಲ ಎಂಬುದು ಅವಳ ಅಭಿಪ್ರಾಯ

ಅಂದಮಾತ್ರಕ್ಕೆ ಅತ್ಯಾಚಾರದ ಹಿಂದಿರುವ ಕಾಮುಕ ಭಾವನೆಗಳ ಪ್ರಭಾವವನ್ನು ಸಂಪೂರ್ಣವಾಗಿ ಅಲ್ಲಗಳೆಯಲಾಗುವುದಿಲ್ಲ. ಹಾಗೆ ಹೇಳುವುದಕ್ಕೆ ಅನೇಕ ಕಾರಣಗಳಿವೆ. ಉದಾಹರಣೆಗೆ, ಲೈಂಗಿಕ ಆಕ್ರಮಣ ಎಲ್ಲಾ ವಯಸ್ಸಿನ ಹೆಂಗಸರ ಮೇಲೆ ನಡೆಯುತ್ತದಾದರೂ, ಅದು ಹೆಚ್ಚಿಗೆ ಜರಗುವುದು ಆರೋಗ್ಯವಂತರಾಗಿ, ನೋಡಲು ಆಕರ್ಷಕವಾಗಿರುವ, 12 ರಿಂದ 24 ವರ್ಷ ವಯಸ್ಸಿನ ಯುವತಿಯರ ಮೇಲೆ; ರೇಪ್ ಮಾಡಿರುವರ ಹೇಳಿಕೆಯ ಪ್ರಕಾರ ಲೈಂಗಿಕ ಬಯಕೆಯೇ ಅವರ ವರ್ತನೆಗೆ ಪ್ರಮುಖ ಕಾರಣ. ಅತ್ಯಾಚಾರಿಗಳಲ್ಲಿ ವಿಕೃತ ಕಾಮಿಗಳಿರುವುದು ಕಂಡುಬಂದಿದೆ. ಆದುದರಿಂದ, ಅತ್ಯಾಚಾರದ ಘಟನೆಗಳಲ್ಲಿ ಕಾಮದ ಪ್ರಭಾವವನ್ನು ಕಡೆಗಣಿಸಲಾಗುವುದಿಲ್ಲ. ಗಂಡಸಿನ ಆಂತರಿಕ (ಲೈಂಗಿಕ) ದೌರ್ಭಲ್ಯವೂ (inadequacy) ಅತ್ಯಾಚಾರಕ್ಕೆ ಪ್ರೇರೇಪಿಸುವುದೆಂಬ ಮಾತೂ ಅಲ್ಲಲ್ಲಿ ಕೇಳಿಬರುತ್ತಿದೆ.

ಇತ್ತೀಚೆಗೆ ಅತ್ಯಾಚಾರಿಗಳ ಮೇಲೆ ನಡೆಸಿರುವ ಸಂಶೋಧನೆಗಳಲ್ಲಿ ದುರಾಕ್ರಮಣ (aggression) ಮತ್ತು ಲೈಂಗಿಕತೆ (sexuality) ಇವೆರಡೂ ಅತ್ಯಾಚಾರಕ್ಕೆ ಪ್ರೇರಣೆ ಎಂಬುದು ತಿಳಿದುಬಂದಿದೆ. ಕೆಲವು ವೇಳೆ ಆಕ್ರಮಣ ಹೆಚ್ಚಾಗಿರಬಹುದು, ಮತ್ತೆ ಕೆಲವು ವೇಳೆ ಲೈಂಗಿಕ ಅಪೇಕ್ಶೆ. ಒಟ್ಟಿನಲ್ಲಿ ಎರಡು ಒಂದರೊಡನೊಂದು ಮೇಳೈಸಿರುತ್ತವೆ. ಸಂಭೋಗ ಕ್ರಿಯೆಯಲ್ಲಿ ಕೊಂಚಮಟ್ಟಿನ ಹಿಂಸಾಚಾರ ಅನಿವಾರ್ಯ ಎನ್ನುವ ಅಭಿಪ್ರಾಯವೂ ಇದೆ. ಸ್ಸಾಧಾರಾಣ (normal) ಲೈಂಗಿಕ ಕ್ರಿಯೆಯ ಕಾಲದಲ್ಲಿ ನಡೆದಷ್ಟು ಹಿಂಸಾಚಾರ ಬೇರೆ ಸಂದರ್ಭಗಳಲ್ಲಿ ನಡೆದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ. ಇಲ್ಲಿ ಕೊಂಚ ಉತ್ಪ್ರೇಕ್ಷೆ ಇದ್ದರೂ ಅದು ಸಂಪೂರ್ಣ ಸುಳ್ಳಲ್ಲ.

ಅತ್ಯಾಚಾರದ ಬಗೆಗಳು

ಅತ್ಯಾಚಾರಗಳು ಇದ್ದಕ್ಕಿದ್ದಹಾಗೆ ನಡೆದುಬಿಡುವುದಿಲ್ಲ; ಸಾಮಾನ್ಯವಾಗಿ ಅವು ಪೂರ್ವ ನಿಯೋಜಿತವಾಗಿರುತ್ತವೆ. ಶೇಕಡ 80 ರಷ್ಟು ಪ್ರಕರಣಗಳು ನೆರೆಹೊರೆಯವರ ಮೇಲೆ ಜರುಗುತ್ತವೆ. ಘಟನೆಗಳು ಪುನರಾವರ್ತಿತಗೊಳ್ಳುವ ಸಾಧ್ಯತೆಗಳು ಹೆಚ್ಚು. ಒಬ್ಬರೇ ಇರುವ ಮನೆಗಳಲ್ಲಿ, ಕಾಡು, ಹೊಲ, ಗದ್ದೆಗಳಂತಹ ನಿರ್ಜನ ಪ್ರದೇಶಗಳಲ್ಲಿ ಈ ಘಟನೆಗಳು ಜರಗುತ್ತವೆ. ಮೂರರಲ್ಲೊಂದು ಪ್ರಕರಣಗಳಲ್ಲಿ ಒಬ್ಬನಿಗಿಂತ ಹೆಚ್ಚು ಮಂದಿ ಈ ಕೃತ್ಯದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ.

ಇಬ್ಬರು ಸಂಶೋಧಕರು (Prentky & Knight, 1991) ಅತ್ಯಾಚಾರಗಳನ್ನು ಪವರ್ ರೇಪ್ (power rape), ಆಂಗರ್ ರೇಪ್ (anger rape). ಸ್ಯಾಡಿಸ್ಟಿಕ್ ರೇಪ್ (sadistic rape) ಎಂದು ಮೂರು ವಿಧವಾಗಿ ವಿಂಗಡಿಸಿದ್ದಾರೆ:. ಮೊದಲದರಲ್ಲಿ ತೊಡಗುವ ವ್ಯಕ್ತಿಗೆ ತನ್ನ ಶಕ್ತಿಯ ಮೇಲೆ ತನಗೆ ವಿಶ್ವಾಸವಿರುವುದಿಲ್ಲ. ಅವನಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ಉಳಿಸಿಕೊಳ್ಳುವುದು ತಿಳಿಯದು. ತನ್ನ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಇತರರಿಗೆ ನೋವು ಉಂಟು ಮಾಡಿ, ಹಿಂಸಿಸಿ ತೃಪ್ತಿಪಟ್ಟಿಕೊಳ್ಳುತ್ತಾನೆ. ಎರಡನೆಯದರಲ್ಲಿ ವ್ಯಕ್ತಿ ಇಡೀ ಸ್ತ್ರೀ ಸಮೂಹವನ್ನು ದ್ವೇಷಿಸುತ್ತಾ, ಅವರ ಮೇಲೆ ಹಗೆ ತೀರಿಸಿಕೊಳ್ಳಲು ಅವರಿಗೆ ನೋವುಂಟು ಮಾಡುತ್ತಾನೆ. ಅವನ ಕ್ರಿಯೆಯಲ್ಲಿ ಲೈಂಗಿಕ ಸುಖದ ಅಂಶ ಕಡಮೆ. ಮೂರನೆಯದರಲ್ಲಿ ಲೈಂಗಿಕತೆ ಮತ್ತು ಹಿಂಸೆ ಎರಡೂ ಮಿಳಿತಗೊಂಡಿರುವಂತೆ ತೋರಿದರೂ ಅಲ್ಲಿ ಹೆಣ್ಣನ್ನು ನೋಯಿಸುವುದೇ ಪ್ರಮುಖ ಉದ್ದೇಶ.

ಪಾಶ್ಚಿಮಾತ್ಯ ದೇಶಗಳಲ್ಲಿ ಡೇಟ್ ರೇಪ್ (date rape) ಎಂಬ ಪ್ರಕರಣ ಬಹಳವಾಗಿ ನಡೆಯುತ್ತಿರುತ್ತದೆ. ಕಾಲೇಜು ವಯಸ್ಸಿನ ಯುವಕ ಯುವತಿಯರು (ಅವರು ಸ್ನೇಹಿತರಿರಬಹುದು, ಸ್ನೇಹವನ್ನು ನಿರೀಕ್ಷಿಸುವವರಿರಬಹುದು, ಅಥವಾ ಪ್ರಣಯಿಗಳಾಗಿರಬಹುದು) ಹೊರಗೆ ಹೋಗಿ ಕಾಲ ಕಳೆಯುವುದನ್ನು ಡೇಟಿಂಗ್ (dating) ಎಂದು ಕರೆಯುತ್ತಾರೆ. ಡೇಟಿಂಗ್ ಪಾಶ್ಚಿಮಾತ್ಯ ದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ಜರುಗುವ ಸಾಮಾಜಿಕ ಕ್ರಿಯೆ. ಡೇಟಿಂಗ್ ಮಾಡುವಾಗ ಅತ್ಯಾಚಾರ ಆಗಾಗ್ಗೆ ನಡೆಯುವುದು ಸಾಮಾನ್ಯ. ಅಲ್ಲಿ ನಡೆಯುವ ಕ್ರಿಯೆಯನ್ನು ರೇಪ್ ಎಂದು ನಿರ್ಧರಿಸುವುದು ತುಂಬ ಕಷ್ಟದ ಕೆಲಸ. ಸುಮಾರು ಶೇಕಡ 16 ರಿಂದ 20 ಮಂದಿ ಕಾಲೇಜ್ ಯುವತಿಯರು ಡೇಟ್ ರೇಪ್ ಗೊಳಗಾಗಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ.

ಮಕ್ಕಳ ಮೇಲಿನ ಲೈಂಗಿಕ ಅತ್ಯಾಚಾರ ಒಂದು ಘೋರ ಅಪರಾದ, ಅದರಲ್ಲಿ ತೊಡಗುವವರಲ್ಲಿ ಮಾನಸಿಕ ಅಸ್ವಸ್ಥರೂ ಇದ್ದೂ, ಅಂಥವರನ್ನು ಪೀಡೊಫೈಲ್ (pedophile) ಎಂದು ಕರೆಯಲಾಗಿದೆ. ಪೀಡೊಫೈಲ್ ಅಲ್ಲದವರೇ ಹೆಚ್ಚು ಈ ಕೃತ್ಯದಲ್ಲಿ ತೊಡಗುತ್ತಾರೆ. ಮಕ್ಕಳ ಮೇಲೆ ನಡೆಯುವ ಅತ್ಯಾಚಾರಕ್ಕೆ ಮುಖ್ಯ ಕಾರಣ ಅವರು ಸುಲಭವಾಗಿ ದೊರಕುವುದೇ ಆಗಿರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರತಿ ವರ್ಷ 1,00,000 ದಿಂದ 5,00,000 ಮಕ್ಕಳು ಲೈಂಗಿಕ ದುರುಪಯೋಗಕ್ಕೆ ಒಳಗಾಗುತ್ತಾರೆ ಎಂದು ತಿಳಿದುಬಂದಿದೆ. ಮಲಮಕ್ಕಳು, ಅನಾಥಾಲಯದ ಮಕ್ಕಳು, ದತ್ತುಮಕ್ಕಳು, ಇಂಥವರ ಮೇಲೆ ಅತ್ಯಾಚಾರ ಹೆಚ್ಚಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ತಮಗಾದ ಕೃತ್ಯವನ್ನು ಮಕ್ಕಳು ಯಾರಿಗೂ ಹೇಳುವುದಿಲ್ಲ; ಹೇಳಲು ಭಯ, ನಾಚಿಕೆ. ಎಷ್ಟೋ ವೇಳೆ ಕುಟುಂಬದವರೇ ಇಂಥ ಹೇಯ ಕೃತ್ಯಗಳಲ್ಲಿ ತೊಡಗುವುದರಿಂದ ವಿಷಯ ಗುಟ್ಟಾಗಿಯೇ ಉಳಿದುಬಿಡುತ್ತದೆ. ಇತ್ತೀಚೆಗೆ ಅಪ್ರಾಪ್ತ ವಯಸ್ಸಿನವರ ಮೇಲಿನ ಆಕ್ರಮಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದರಿಂದ, ಅವುಗಳನ್ನು ಕುರಿತು ಅಧ್ಯಯನ ಮಾಡುವುದು ಸುಲಭವಾಗುತ್ತಿದೆ. ಮುಂಬಯಿಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಒಂದೇ ಕುಟುಂಬದ ಮೂವರು ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಅವರನ್ನು ಕೊಂದು, ಬಾವಿಗೆ ಎಸೆದು ಹೋಗಿರುವ ವಿಷಯವನ್ನು ನೀವು ಮರೆತಿರಲಿಕ್ಕಿಲ್ಲ.

ಅತ್ಯಾಚಾರದ ಪರಿಣಾಮ

ಅತ್ಯಾಚಾರಕ್ಕೊಳಗಾದವರ ಜೀವನ ದುರ್ಭರವಾಗುತ್ತದೆ. ಅವರಿಗೆ ಭವಿಷ್ಯತ್ತು ಕರಾಳವಾಗಿ ಕಂಡುಬರುತ್ತದೆ. ಅವರಲ್ಲಿ ಕೆಲವರು ಗರ್ಭಧರಿಸಬಹುದು, ಲೈಂಗಿಕ ರೋಗಗಳಿಗೆ ತುತ್ತಾಗಬಹುದು. ಸಮಾಜ ಅವರನ್ನು ಕೀಳಾಗಿ ಕಂಡು, ಅವರಿಗೆ ವಿವಾಹವಾಗುವ ಸಾಧ್ಯತೆಗಳು ಕಡಮೆಯಾಗಬಹುದು. ವಿವಾಹವಾದವರು ಕೂಡ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಿಂಜರಿಯಬಹುದು. ಅತ್ಯಾಚಾರಕ್ಕೊಳಗಾದವರಿಗೆ ಅವರ ಶರೀರದ ಮೇಲೆ ನಡೆದ ಹಲ್ಲೆಗಿಂತ ಮನಸ್ಸಿನ ಮೇಲೆ ಆಗುವ ಆಘಾತ ದೊಡ್ಡದು. ಅವರಲ್ಲಿ ಕೆಲವರು ಮನೋರೋಗಿಗಳಾಗಬಹುದು. ಅತ್ಯಾಚಾರವನ್ನು ಸಾಮಾನ್ಯವಾಗಿ ಯುವಕರ ಅಪರಾಧವೆಂದು ಪರಿಗಣಿಸಲಾಗಿದೆ. ಅಮೆರಿಕದ ಪೋಲೀಸರ ಪ್ರಕಾರ ಅತ್ಯಾಚಾರಕ್ಕಾಗಿ ಅರೆಸ್ಟ್ ಆದವರ ಪೈಕಿ ಶೇಕಡ 60 ರಷ್ಟು ಮಂದಿ 25 ವರ್ಷ ವಯಸ್ಸಿನೊಳಗಿನವರು. ಶೇಕಡ 30 ರಿಂದ 50 ಮಂದಿ ವಿವಾಹಿತರು. ಹೆಚ್ಚಿನವರು ಸಮಾಜದ ಕೆಳಸ್ತರಕ್ಕೆ ಸೇರಿದವರು, ಈ ಮುಂಚೆ ಇಂಥದೇ ಅಪರಾಧ ಮಾಡಿರುವವರು. ತಾವೇ ಲೈಂಗಿಕ ಆಕ್ರಮಣಕ್ಕೆ ಒಳಗಾಗಿದ್ದವರು. ಅವರ ಬಾಲ್ಯ ತೃಪ್ತಿಕರವಾಗಿದ್ದಂತೆ ಕಂಡುಬರುವುದಿಲ್ಲ. ಹಲವರು ಕುಡುಕರು. ಇದರಲ್ಲಿ ತೊಡಗುವವರಲ್ಲಿ ಹೆಚ್ಚಿಗೆ ಕೋಪಿಷ್ಟರಿರುವುದು ಕಂಡುಬಂದಿದೆ. ತಮ್ಮ ಉದ್ವೇಗಗಳ ಮೇಲೆ ಇವರಿಗೆ ಹತೋಟಿ ಇರುವುದಿಲ್ಲ. ತಮ್ಮ ವರ್ತನೆಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಾರರು. ಬಹಳ ಬೇಗ ಲೈಂಗಿಕ ಉದ್ರೇಕಕ್ಕೆ ಒಳಗಾಗುವವರು. ಆತ್ಮೀಯ ಸಂಬಂಧಗಳನ್ನು ಬೆಳೆಸುವುದು ಇವರಿಗೆ ಕಷ್ಟ. ಸ್ತ್ರೀಯರ ಮನಸ್ಸನ್ನು, ಅವರ ಅನಿಸಿಕೆಗಳನ್ನು ಅರಿಯುವ ಮನೋಭಾವ ಇವರದಲ್ಲ. ಇವರಲ್ಲಿ ಕೆಲವರಿಗೆ ಇತರರನ್ನು ಹಿಂಸಿಸಿ ಸುಖಪಡುವ ಪ್ರವೃತ್ತಿ ಇರುವುದು ಕಂಡುಬಂದಿದೆ.

ಲೈಂಗಿಕತೆಯ ಜೈವಿಕ ಹಿನ್ನೆಲೆ

ವಿಕಾಸವಾದಿಗಳ ಪ್ರಕಾರ ವಿಶ್ವದ ಸಕಲ ಜೀವರಾಶಿಗಳೂ ಪ್ರದರ್ಶಿಸುವ ಲೈಂಗಿಕ ಕ್ರಿಯೆಗೆ ಪ್ರಮುಖ ಪ್ರೇರಣೆ ಜೈವಿಕ (biological) ಮೂಲದ್ದು; ಲೈಂಗಿಕ ಬಯಕೆ ಮತ್ತು ಅದರ ಅಭಿವ್ಯಕ್ತಿ ಎಲ್ಲಾ ಜೀವಿಗಳಲ್ಲೂ ಅಸ್ಥಿತ್ವದಲ್ಲಿರುವ ಒಂದು ಪ್ರಬಲ ಮನೋದೈಹಿಕ ಪ್ರವೃತ್ತಿ (psychophysical tendency). ಇದನ್ನು ಕೊಂಚ ವಿವರವಾಗಿ ಹೇಳಬೇಕಾಗಿದೆ.   ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಲ್ಲೂ ಕಂಡುಬರುವ ಮೂಲ ಪ್ರವೃತ್ತಿಗಳು ಎರಡು: ಮೊದಲನೆಯದು ಸ್ವಯಂ-ರಕ್ಷಣೆ (self-preservation); ಎರಡನೆಯದು ಸಂತತಿ-ರಕ್ಷಣೆ (race preservation). ಅಂದರೆ, ಪ್ರತಿ ಜೀವಿಯಲ್ಲೂ ತಾನು ಬದುಕಬೇಕು ಮತ್ತು ತನ್ನ ಸಂತತಿ ಬೆಳೆಯಬೇಕು, ವಂಶಾಭಿವೃದ್ಧಿಯಾಗಬೇಕು ಎನ್ನುವ ಉತ್ಕಟ ಬಯಕೆಗಳು ಅನಾದಿ ಕಾಲದಿಂದಲೂ ಶಾಶ್ವತವಾಗಿ ಉಳಿದುಬಂದು ಇಂದು ಕೂಡ ಕ್ರಿಯಾಶೀಲವಾಗಿರುತ್ತವೆ. ಈ ಪ್ರವೃತ್ತಿಗಳು ಮಾನವೇತರ ಪ್ರಾಣಿಗಳ ಹಂತದಲ್ಲಿ ಅನಿಯಂತ್ರಿತವಾಗಿ, ಅನಿರ್ಬಂಧಿತವಾಗಿ ಜರಗುತ್ತಿರುತ್ತವೆ. ಮಾನವನ ಹಂತದಲ್ಲಿ ಈ ಕ್ರಿಯೆಗಳು ಸಾಮಾಜಿಕ ನೀತಿನಿಯಮಗಳಿಗನುಸಾರವಾಗಿ ನಡೆಯಬೇಕು. ಸ್ವಯಂರಕ್ಷಣೆ, ಸ್ವಂತ ದುಡಿಮೆ ಮತ್ತು ಗಳಿಕೆಯಿಂದ ನಡೆಯಬೇಕು; ಸಂತತಿರಕ್ಷಣೆ, ವೈವಾಹಿಕ ಚೌಕಟ್ಟಿನೊಳಗೆ, ನಿಯಂತ್ರಿತ ಮೈಥುನ ಕ್ರಿಯೆಯ ಮೂಲಕ ನಡೆಯಬೇಕು.

ಇವೆರಡು ಕ್ರಿಯೆಗಳು ನಿಯಮಬದ್ಧವಾಗಿ ನಡೆದರೆ ಯಾವ ಸಮಸ್ಯೆಗಳೂ ಏಳುವುದಿಲ್ಲ. ಪ್ರತಿಯೊಬ್ಬ ವ್ಯಕ್ರಿಯೂ ದುಡಿದು, ಸಂಪಾದಿಸಿ, ಉಂಡು ಬದುಕಬೇಕಾದುದು ಸ್ವಯಂರಕ್ಷಣೆಯ ನ್ಯಾಯಸಮ್ಮತವಾದ ಹಾದಿ. ವೈವಾಹಿಕ ಚೌಕಟ್ಟಿನಲ್ಲಿ ಸಂತಾನ ಪಡೆದು ವಂಶಾಭಿವೃದ್ಧಿ ಮಾಡುವುದು ನೀತಿಯುತವಾದ ವಿಧಾನ. ಈ ಎರಡು ಕ್ರಿಯೆಗಳು ನಿಯಮಾನುಸಾರವಾಗಿ ನಡೆಯುವಂತೆ ನೋಡಿಕೊಳ್ಳುವುದು ಸಮಾಜದ ಕರ್ತವ್ಯ; ಸಮಾಜ ನಿರ್ಮಾಣವಾಗಿರುವುದು ಅದಕ್ಕಾಗಿಯೇ. ಸಮಾಜದ ನೀತಿನಿಯಮಗಳು ಸಡಿಲವಾದರೆ, ಸ್ವರಕ್ಷಣೆ ಅಡ್ಡ ದಾರಿ ಹಿಡಿಯುತ್ತದೆ; ದುಡಿಯದೆ ಗಳಿಸುವ, ಇತರರನ್ನು ಶೋಷಣೆ ಮಾಡಿ ಬದುಕುವ, ಅನೈತಿಕ ಹಾದಿ ಹಿಡಿಯುತ್ತದೆ. ಇದು ಬ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಅನಿಯಮಿತ ಲೈಂಗಿಕ ಪ್ರವೃತ್ತಿ, ಹಾದರ ಮತ್ತು ಅತ್ಯಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಇಂದು ಸಮಾಜವನ್ನು ಕಲುಷಿತಗೊಳಿಸುತ್ತಿರುವ ಪ್ರಮುಖ ಅಪರಾಧಗಳು ಎರಡು: ಅತ್ಯಾಚಾರ ಮತ್ತು ಭ್ರಷ್ಟಾಚಾರ. ಯಾವುದೇ ಕಾರಣಗಳಿಂದ ಸಮಾಜದ ನಿಯಂತ್ರಣ ಸಡಿಲವಾದಾಗ ಇವೆರಡೂ ಮೇಲುಗೈ ಸಾಧಿಸಲು ಕಾದಿರುತ್ತವೆ. ಇವೆರಡು ಪ್ರಬಲ ಬಯಕೆಗಳು; ಇವನ್ನು ನಿಯಂತ್ರಿಸಲು ಸಮಾಜದಲ್ಲಿ ಕಠಿಣ ಶಾಸನಗಳೇ ಬೇಕು.

ವಿಕಾಸವಾದದ (theory of evolution) ಪ್ರಕಾರ, ಸ್ವಯಂರಕ್ಷಣೆ ಮತ್ತು ಸಂತತಿರಕ್ಷಣೆ ಎಲ್ಲಾ ಜೀವಿಗಳಲ್ಲೂ ಸದಾ ಎಚ್ಚರವಾಗಿರುವ ಪ್ರಮುಖ ವರ್ತನಾಪ್ರಕಾರಗಳು. ಅವೆರಡೂ ನಿರಂತರವಾಗಿ ನಡೆಯಲೇ ಬೇಕು; ಇಲ್ಲದಿದ್ದರೆ ವಿಶ್ವದಲ್ಲಿ ಜೀವರಾಶಿ ನಾಶವಾಗುತ್ತದೆ. ಆದುದರಿಂದ ಈ ಪ್ರವೃತ್ತಿಗಳು ಸರಾಗವಾಗಿ ಜರುಗಲು ಬೇಕಾದ ಕೌಶಲ್ಯಗಳನ್ನು ಎಲ್ಲಾ ಪ್ರ್ರಾಣಿಗಳು ಆಯ್ದುಕೊಂಡು, ಬೆಳೆಸಿಕೊಂಡು, ಉಳಿಸಿಕೊಂಡಿವೆ (principle of natural selection). ಮನುಷ್ಯರನ್ನು ಬಿಟ್ಟರೆ ಉಳಿದ ಎಲ್ಲಾ ಪ್ರಾಣಗಳಲ್ಲೂ ಸ್ವಯಂರಕ್ಷಣೆ ಮತ್ತು ಸಂತತಿರಕ್ಷಣೆ ಕ್ರಿಯೆಗಳು ಅನಿಯಂತ್ರಿತವಾಗಿ, ಅಡೆತಡೆಗಳಿಲ್ಲದೆ ನಡೆಯುತ್ತವೆ. ಮನುಷ್ಯರ ಹಂತದಲ್ಲಿ ಈ ವರ್ತನೆಗಳು ಸಾಮಾಜಿಕ ನಿಯಮಗಳಿಗೆ ಒಳಪಟ್ಟಿರುತ್ತವೆ. ಸಮಾಜವಿಲ್ಲದಿದ್ದರೆ ಮನುಷ್ಯರೂ ಪ್ರಾಣಿಗಳಂತೆ ಬದುಕುತ್ತಿದ್ದರು. ಹಾಗೆ ನೋಡಿದರೆ, ವಿಕಾಸದ ಹಾದಿಯಲ್ಲಿ ಲೈಂಗಿಕ ಸ್ವೇಚ್ಛಾಚಾರವನ್ನು ನಿಯಂತ್ರಿಸುವುದಕ್ಕಾಗಿಯೇ ಸಮಾಜ ನಿರ್ಮಾಣವಾಯಿತೆಂಬ ವಾದವೂ ಇದೆ. ಸಾಮಾಜಿಕ ನೀತಿ ನಿಯಮಗಳು ಅಸ್ಥಿತ್ವಕ್ಕೆ ಬಂದ ಮಾತ್ರಕ್ಕೆ ಆಂತರಿಕ ಬಯಕೆಗಳು ನಾಶವಾಗುವುದಿಲ್ಲ; ಅವು ತಡೆಹಿಡಿಯಲ್ಪಟ್ಟಿದ್ದ್ದು ಹೊರಬರಲು ಅವಕಾಶಕ್ಕಾಗಿ ಕಾಯುತ್ತಿರುತ್ತವೆ.

ಸಾಮಾಜಿಕ ನಿಯಮಗಳು ಸಡಿಲವಾದಾಗ, ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದಾಗ, ಸಮಾಜದಲ್ಲಿ ಅನುಕರಣೀಯ ಮಾದರಿಗಳು ವಿರಳವಾದಾಗ, ಮಾನವರ ವರ್ರನೆಗೆ ಕಡಿವಾಣವಿಲ್ಲವಾಗಿ, ಸ್ವಯಂರಕ್ಷಣೆ ಮತ್ತು ಸಂತತಿ ರಕ್ಷಣೆಯಂಥ ಪ್ರವೃತ್ತಿಗಳು ಅನಿಯತವಾಗಿ ಪ್ರದರ್ಶನಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅವೆರಡರ ವಿಕೃತ ಪ್ರದರ್ಶನವೇ ಭ್ರಷ್ಟಾಚಾರ ಮತ್ತು ಅತ್ಯಾಚಾರ. ಮಾನವ ಮೂಲತಃ ಸುಖಾಪೇಕ್ಷಿ; ಲೈಂಗಿಕತೆ ಸುಖಪ್ರದಾಯಕ ಕ್ರಿಯೆಗಳಲ್ಲಿ ಪ್ರಮುಖವಾದುದು. ಅವಕಾಶಗಳು ಸುಲಭವಾಗಿ ಒದಗಿಬಂದಾಗ ಮಾನವನ ಪಾಶವೀಪ್ರವೃತ್ತಿಗಳು ಅಭಿವ್ಯಕ್ತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಬಲಿಷ್ಠವಾದ ಪ್ರವೃತ್ತಿಗಳನ್ನು ತಡೆ ಹಿಡಿಯಲು ಬಲಿಷ್ಠ ನಿಯಮಗಳೇ ಬೇಕು. ಇಲ್ಲದಿದ್ದರೆ ಸ್ವರಕ್ಷಣೆಗಾಗಿ ಇತರರ ಮೇಲೆ ಆಕ್ರಮಣ ಮಾಡುವ, ಕಿತ್ತು ತಿನ್ನುವ, ಶೋಷಣೆ ಮಾಡುವ, ಕಳ್ಳತನ ಮಾಡುವ ಪ್ರವೃತ್ತಿಗಳು ಬೆಳೆದು ಬರುತ್ತವೆ; ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ. ಅನಿಯಂತ್ರಿತ ಲೈಂಗಿಕ ಬಯಕೆ ಅತ್ಯಾಚಾರಕ್ಕೆ ಎಡೆಮಾಡಿಕೊಡಬಹುದು.

ಅತ್ಯಾಚಾರಕ್ಕೆ ಶಿಕ್ಷೆ

ಅತ್ಯಾಚಾರ ಗುರುತರವಾದ, ಅಮಾನವೀಯ ಅಪರಾಧ, ಅದಕ್ಕೆ ತಕ್ಕ ಶಿಕ್ಷೆಯಾಗಲೇಬೇಕು ಎಂಬುದು ಸಾರ್ವಜನಿಕ ಅಭಿಪ್ರಾಯ. ಮೇಲೆ ತಿಳಿಸಿದಂತೆ ದೆಹಲಿಯಲ್ಲಿ ಕಳೆದ ವರ್ಷ 635 ಅತ್ಯಾಚಾರಗಳು ನಡೆದಿವೆ. ಆದರೆ ಶಿಕ್ಷೆಯಾದದ್ದು ಒಬ್ಬರಿಗೆ ಮಾತ್ರ. ಒಂದು ರೀತಿಯಲ್ಲಿ ಇದು ಅತ್ಯಾಚಾರಕ್ಕೆ ಸಮಾಜ ಕೊಡುತ್ತಿರುವ ಪ್ರೋತ್ಸಾಹದಂತೆ ಕಂಡುಬಂದರೆ ಆಶ್ಚರ್ಯವಿಲ್ಲ. ಶಿಕ್ಷೆ ಮುಗಿದು ಹೊರಬಂದಾಗ ಅತ್ಯಾಚಾರದಂತಹ ಕೃತ್ಯಗಳು ಮರುಕಳಿಸುವ ಸಾಧ್ಯತೆ ಹೆಚ್ಚಾಗುವುದೆನ್ನುವ ಅಭಿಪ್ರಾಯವೂ ಇದೆ.   ಇತ್ತೀಚೆಗೆ ಅತ್ಯಾಚಾರವೆಸಗಿದ ಕೆಲವು ಅಪ್ರಾಪ್ತ ಯುವಕರನ್ನು ಬಾಲಾಪರಾಧಿಗಳೆಂದು ಪರಿಗಣಿಸಿ ಅವರನ್ನು ಶಿಕ್ಷೆಗೊಳಪಡಿಸುವುದಿಲ್ಲ ಅಥವಾ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಕಡಮೆ ಮಾಡಲಾಗುತ್ತಿದೆ. ಕೇವಲ ವಯಸ್ಸನ್ನು ಆಧಾರವಾಗಿಟ್ಟುಕೊಂಡು ಅಪರಾಧವನ್ನು ಕ್ಷಮಿಸುವುದು ಸರಿಯೇ ಎಂಬುದು ಆಲೋಚಿಸಬೇಕಾದ ವಿಷಯ. ವಯಸ್ಸು ಚಿಕ್ಕದಾದರೂ ವ್ಯಕ್ತಿ ಮಾನಸಿಕವಾಗಿ, ಲೈಂಗಿಕವಾಗಿ ಬೆಳೆದಿರಬಹುದು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಶಾಸನಗಳಿಗೆ ತಿದ್ದುಪಡಿ ಮಾಡಬೇಕೆ ಎಂಬುದು ತೀರ್ಮಾನವಾಗಬೇಕು.   ಅತ್ಯಾಚಾರಕ್ಕೆ ಮರಣದಂಡನೆ ಅಥವಾ ಜೀವಾವಧಿ ಸೆರೆವಾಸ ಸರಿಯಾದ ಶಿಕ್ಷೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಮತ್ತೆ ಕೆಲವರು ಶಿಕ್ಷೆಯ ರೂಪವೇ ಬದಲಾಗಬೇಕೆನ್ನುತ್ತಾರೆ. ಅವರ ಪ್ರಕಾರ ಮರಣದಂಡನೆಗೆ ಒಳಗಾದವರು, ಜೈಲಿಗೆ ಹೋದವರು ಕಣ್ಮರೆಯಾಗುತ್ತಾರೆ; ಜನ ಅವರನ್ನು ಬೇಗ ಮರೆತುಬಿಡುತ್ತಾರೆ; ಹಾಗಾಗಬಾರದು.

ಅಂಥ ದುಷ್ಕರ್ಮಿಗಳು ಸಮಾಜದಲ್ಲಿಯೇ ಇದ್ದು ಅವಹೇಳನಕ್ಕೆ ಗುರಿಯಾಗಬೇಕು. ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು; ಸಮಾಜ ಅವರಿಗೆ ಬಹಿಷ್ಕಾರ ಹಾಕಬೇಕು; ಅವರಿಗೆ ಪೌರತ್ವವನ್ನು ನಿರಾಕರಿಸಬೇಕು, ಯಾವುದೇ ನಾಗರಿಕ ಸವಲತ್ತುಗಳಿಗೆ ಅವರು ಅನರ್ಹರೆಂದು ಘೋಷಿಸಬೇಕು. ಸಮಾಜದಲ್ಲಿ ಅವರಿಗೆ ಯಾವುದೇ ಉದ್ಯೋಗ ಕೊಡಬಾರದು. ಯಾರಾದರು ಅಂಥವರಿಗೆ ಸಹಾಯ ಮಾಡಿದರೆ ಅವರಿಗೆ ಶಿಕ್ಷೆಯಾಗಬೇಕು. ಅವರ ಮೇಲೆ ನಾನೊಬ್ಬ ಅತ್ಯಾಚಾರಿ ಎಂಬ ಅಣೆಪಟ್ಟಿ ಹಾಕುವುದು ಸಾಧ್ಯವಿದ್ದರೆ, ಹಾಗೂ ಮಾಡಬಹುದು. ಒಟ್ಟಿನಲ್ಲಿ ಜನ ಅವರನ್ನು ನೋಡಿ ಅಸಹ್ಯಪಡಬೇಕು, ನಗಬೇಕು. ಜನಕ್ಕೆ ಅವರು ದುಷ್ಕೃತ್ಯದ, ದುರ್ಮಾರ್ಗದ, ಅಪಾಯದ ಸಂಕೇತಗಳಂತೆ ಕಾಣಬೇಕು. ಇಂಥ ಶಿಕ್ಷೆ ಅತ್ಯಾಚಾರ ವರ್ತನೆಯನ್ನು ತಡೆಹಿಡಿಯುತ್ತದೆ ಎಂಬುದು ಕೆಲವರ ಅಭಿಪ್ರಾಯ. ಇನ್ನೂ ಕೆಲವರು ಅತ್ಯಾಚಾರವೆಸಗಿದವರನ್ನು ಶಸ್ತ್ರಚಿಕಿತ್ಸೆ ಅಥವಾ ರಸಾಯನಿಕಗಳನ್ನು ಉಪಯೋಗಿಸಿಕೊಂಡು ನಿರ್ವೀರ್ಯಗೊಳಿಸಬೇಕೆಂದು ಸೂಚಿಸಿದ್ದಾರೆ. ಇಂಥವು ಅಮಾನವೀಯ ಕ್ರಿಯೆಗಳು, ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬುದು ಎನ್ನುವ ವಾದವೂಇದೆ. ಆದರೆ ಅತ್ಯಾಚಾರ ಇನ್ನೂ ಹೆಚ್ಚಿನ ಅಮಾನವೀಯ ಕ್ರಿಯೆ. ಅದನ್ನು ಮಾಡುವವರು ತಮ್ಮ ಹೇಯ ಕೃತ್ಯಗಳ ಮೂಲಕ ನಾಗರಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರಲ್ಲವೆ? ಎಂದು ಕೇಳುವವರೂ ಇದ್ದಾರೆ.   ಕೆಲವೆಡೆ ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಅತ್ಯಾಚಾರವೆಸಗಿದ ಗಂಡಿನೊಂದಿಗೆ ಬಲವಂತವಾಗಿಯಾದರೂ ಮದುವೆ ಮಾಡುವ ಪ್ರಯತ್ನಗಳು ನಡೆಯುತ್ತವೆ. ಇದಕಿಂತ ದೊಡ್ಡ ಅನ್ಯಾಯ ಇನ್ನೊಂದಿಲ್ಲ. ಕ್ರೌರ್ಯಕ್ಕೊಳಗಾಗಿ ತತ್ತರಿಸಿ ಹೋಗಿರುವ ಹೆಣ್ಣು ಅವನೊಟ್ಟಿಗೆ ಅನ್ಯೋನ್ಯವಾಗಿ ಬಾಳುತ್ತಾಳೆಂಬುದನ್ನು ಊಹಿಸುವುದಾದರೂ ಹೇಗೆ? ಇದಕ್ಕೆ ಕಾರಣ ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಶೀಲ ಕಳೆದುಕೊಂಡವಳು, ಅಪವಿತ್ರಳು, ಕಳಂಕಿತೆ, ಪತಿತೆ, ಎಂದು ಹಣೆಪಟ್ಟೆ ಇಟ್ಟು, ಅವಳನ್ನು ವಿವಾಹ ಯೋಗ್ಯಳಲ್ಲ ಎಂದು ಸಮಾಜ ಪರಿಗಣಿಸುವುದು.

ಇದರಲ್ಲಿ ಅವಳ ತಪ್ಪಾದರೂ ಏನು? ಅತ್ಯಾಚಾರ ಮಾಡಿದ ಗಂಡು ವಿವಾಹಯೋಗ್ಯನಾಗುವುದಾದರೆ, ಅದಕ್ಕೊಳಗಾದ ಹೆಣ್ಣೇಕೆ ವಿವಾಹಯೋಗ್ಯಳಲ್ಲ? ಅವಳಿಗೆ ಯೋಗ್ಯ ವರನನ್ನು ಹುಡುಕಿ ಮದುವೆ ಮಾಡುವ ಮಾನಸಿಕ ವೈಶಾಲ್ಯತೆ ನಮ್ಮ ಸಮಾಜದ ಜನರಲ್ಲಿ ಬೆಳೆಯಬೇಕು. ಅದಕ್ಕೆ ಒಪ್ಪುವ ಗಂಡಸರು ಹೆಚ್ಚಾಗಬೇಕು. ಹಾಗಾಗಬೇಕಾದರೆ, ಲೈಂಗಿಕತೆಯನ್ನು ಕುರಿತಾದ ನಮ್ಮ ಮನೋಭಾವದಲ್ಲಿ ಬದಲಾವಣೆಯಾಗಬೇಕು   ಅತ್ಯಾಚಾರವನ್ನು ಕಾನೂನು ಮತ್ತು ಕಠಿಣ ಶಿಕ್ಷೆಗಳಿಂದಲೇ ತೊಡೆದುಹಾಕುವುದು ಸಾಧ್ಯವಿಲ್ಲ. ಅದಕ್ಕಾಗಿ ಜನರ ಮನೋಭಾವದಲ್ಲಿ ಪರಿವರ್ತನೆಯಾಗಬೇಕು. ಜನರ ಮನಸ್ಸಿನಲ್ಲಿ ಸ್ತ್ರೀಯರ ಬಗ್ಗೆ ಗೌರವ ಹುಟ್ಟಬೇಕು. ಅದಕ್ಕೆ ಸಹಾಯವಾಗುವಂಥ ನೈತಿಕ ಶಿಕ್ಷಣವನ್ನು ನಮ್ಮ ಮಕ್ಕಳಿಗೆ ಕೊಡಬೇಕು. ಹೆಣ್ಣನ್ನು ಕುರಿತು ಜನರಾಡುವ ಭಾಷೆ ಬದಲಾಗಬೇಕು; ಅದು ಸುಸಂಸ್ಕೃತವಾಗಿರಬೇಕು. ಹೆಣ್ಣು ಜಗನ್ಮಾತೆ, ಆದಿಶಕ್ತಿ, ದೇವತೆ, ಪೂಜ್ಯಳು, ಮಾತೃದೇವೋಭವ, ಎನ್ನುವ ಮಾತುಗಳು ನಮ್ಮ ಪುರಾಣ, ಇತಿಹಾಸಗಳಲ್ಲಿದ್ದರಷ್ಟೇ ಸಾಲದು. ಅವನ್ನು ಆಚರಣೆಗೆ ತರಬೇಕು. ನಾವಾಡುವ ಮಾತನ್ನು ಮಾತೃಭಾಷೆ ಎನ್ನುತ್ತೇವೆ; ನಾವು ವಾಸಿಸುವ ನೆಲವನ್ನು ಮಾತೃಭೂಮಿ ಎನ್ನುತ್ತೇವೆ. ಮಾತೃದ್ರೋಹ, ಮಾತೃಗಮನ ಪರಿಹಾರವಿಲ್ಲದ ಪಾಪಗಳು ಎಂದು ನಂಬುವವರು ನಾವು. ಹೆಣ್ಣು ಎಲ್ಲಿ ಪೂಜ್ಯಳೋ ಅಲ್ಲಿ ದೇವರು ವಾಸಿಸುತ್ತಾನೆ ಎಂದು ನಮ್ಮ ದರ್ಶನಗಳು ಹೇಳುತ್ತಿವೆ. ಅಂದಮೇಲೆ ನಾವು ಸ್ತ್ರೀಯರನ್ನು ಗೌರವಿಸದಿರುವುದು ಹೇಗೆ ಸಾಧ್ಯ? ಇನ್ನೊಂದು ಮಾತು; ಹೆಣ್ಣನ್ನು ಸಮಾಜ ಪೂಜ್ಯಳೆಂದು ಭಾವಿಸಿ ಗೌರವಿಸಬೇಕು, ಆ ಗೌರವವನ್ನು ಉಳಿಸಿಕೊಳ್ಳಲು ಅವಳೂ ಪ್ರಯತ್ನಿಸುತ್ತಿರಬೇಕು.   ಕಾಯ್ದೆಗಳಿಂದ ಅಥವಾ ಶಿಕ್ಷೆ ವಿಧಿಸುವುದರಿಂದಲೇ ಅತ್ಯಾಚಾರವನ್ನು ತಡೆಗಟ್ಟುವುದು ಸಾಧ್ಯವಿಲ್ಲ ಎನ್ನುವುದಕ್ಕೆ ಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ನಡೆದ ಒಂದು ಘಟನೆಯನ್ನು ಈ ಕೆಳಗೆ ಕೊಟ್ಟಿದೆ.

ಮೆಗಾನ್ ಲಾ (Megan’s Law)

ಅಮೇರಿಕದ ನ್ಯು ಜರ್ಸಿ ಸ್ಟೇಟ್ನ ಹ್ಯಾಮಿಲ್ಟನ್ ನಗರದಲ್ಲಿ ಜುಲೈ 29, 1994 ರಂದು, ಏಳು ವರ್ಷ ವಯಸ್ಸಿನ ಮೆಗಾನ್ ಕಾಂಕ (Megan Kanka) ಎಂಬ ಬಾಲಕಿಯ ಮೇಲೆ 33 ವರ್ಷ ವಯಸ್ಸಿನ ಜೆಸ್ಸಿ ಟಿಮ್ಮೆಂಡೆಕ್ವಾಸ್ (Jesse Timmendequas) ಎಂಬುವವನು ಅತ್ಯಾಚಾರ ಮಾಡಿದನು. ಮೆಗಾನ್ ತನ್ನ ಸ್ನೇಹಿತೆಯ ಮನೆಯಿಂದ ತನ್ನ ಮನೆಗೆ ಹಿಂತಿರುಗುತ್ತಿದ್ದಾಗ, ಅವಳ ನೆರೆಯಲ್ಲಿ ವಾಸವಾಗಿದ್ದ ಜೆಸ್ಸಿ, ಅವಳನ್ನು ತನ್ನ ಮನೆಯಲ್ಲಿರುವ ನಾಯಿ ಮರಿಯನ್ನು ನೋಡಲು ಕರೆಯುತ್ತಾನೆ. ಹಾಗೆ ಬಂದ ಅವಳನ್ನು ಮಹಡಿ ಮೇಲಿನ ತನ್ನ ರೂಮಿಗೆ ಕರೆದೊಯ್ದು, ಅಲ್ಲಿ ಅವಳಿಗೆ ಉಸಿರುಗಟ್ಟಿಸಿ, ಜ್ಞಾನ ತಪ್ಪಿಸಿ, ರೇಪ್ ಮಾಡಿ, ಅನಂತರ ಕೊಂದು, ಅವಳ ಶರೀರವನ್ನು ಮೂಟೆಕಟ್ಟಿ ಒಂದೆಡೆ ಎಸೆದು ಬರುತ್ತಾನೆ. ಒಂದು ವರ್ಷದಿಂದ ಅಲ್ಲಿ ವಾಸಿಸುತ್ತಿದ್ದ ಜೆಸ್ಸಿ ಮಕ್ಕಳಮೇಲೆ ಅತ್ಯಾಚಾರ ಮಾಡಿ ಎರಡು ಸಾರಿ ಸೆರೆವಾಸ ಅನುಭವಿಸಿದವನೆಂದು ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ. ಕೊನೆಗೆ ಸರ್ಕಾರ ಅವನನ್ನು ಪತ್ತೆಹಚ್ಚಿ, ಅವನ ಅಪರಾಧ ದೃಡಪಟ್ಟು, ನ್ಯಾಯಾಲಯ ಅವನನ್ನು ಮರಣದಂಡನೆಗೆ ಒಳಪಅಡಿಸಿತು. ಈ ಸುದ್ದಿ ಜನರನ್ನು ಕೆರಳಿಸಿತು. ಎಚ್ಚೆತ್ತ ಸರ್ಕಾರ ಇಂಥ ಘಟನೆಗಳು ಮರುಕಳಿಸದಿರಲು ಮೆಗಾನ್ ಲಾ ವನ್ನು ಜಾರಿಗೆ ತಂದಿತು.

ಆ ಕಾಯ್ದೆಯನ್ವಯ, ಇಂಥ ಅಪರಾಧಿಗಳು, ಸೆರೆಯಿಂದ ಹೊರಬಂದಾಗ ಅದನ್ನು ಜನರಿಗೆ ತಿಳಿಸಬೇಕು; ಅಪರಾಧಿಗಳು ಪೋಲೀಸ್ ಸ್ಟೇಷನ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಯ್ತು. ಇಂತದೇ ಕಾನೂನು ಬೇರೆ ಸ್ಟೇಟ್ಗಳಲ್ಲೂ ಜಾರಿಗೆ ತರಲಾಯ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕೂಗು ಕೂಡ ಕೇಳಿಬಂತು. ಮೆಗಾನ್ ಲಾ ಜಾರಿಗೆ ಬಂದಮೇಲೆ ಕೆಲವು ಅಹಿತಕರ ಘಟನೆಗಳು ನಡೆದವು ಕೂಡ. ಕೆಲವೆಡೆ ಜೈಲಿನಿಂದ ಹೊರಬಂದ ಅಪರಾಧಿಗಳನ್ನು ಜನರೇ ಕೊಂದು, ಅವರ ಮನೆಗೆ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಉದಾಹರಣೆಗೆ, ಜಾನ್ ಬೆಸೆರ್ರ ಎಂಬ ಅಪರಾಧಿ ಹೊಸ ಜೀವನ ಆರಂಭಿಸಲು ಊರು ಬಿಟ್ಟು ನ್ಯೂ ಯಾರ್ಕ್ ನಗರಕ್ಕೆ ಬಂದನು. ಆದರೆ ನೆರೆಹೊರೆಯವರು ಅವನನ್ನು ಅಲ್ಲಿ ವಾಸಿಸಲು ಬಿಡಲಿಲ್ಲ. ಅವನ ಮನೆ ಮುಂದೆ ಅತ್ಯಾಚಾರಿಗಳಿದ್ದಾರೆ, ಎಚ್ಚರಿಕೆ ಎಂಬ ಬೋರ್ಡ್ ಬರೆದಿಟ್ಟರು. ಇನ್ನೂ ಮುಖ್ಯವಾದ ವಿಷಯವೆಂದರೆ, ಮೆಗಾನ್ ಕಾಯ್ದೆ ಜಾರಿಗೆ ಬಂದಕಡೆಗಳಲ್ಲಿ ಅತ್ಯಾಚಾರಗಳ ಸಂಖ್ಯೆ ಕಡಮೆಯಾದಂತೆ ಕಂಡುಬರಲಿಲ್ಲ.

ಸ್ತ್ರೀಯರ ಸಬಲೀಕರಣ

ಅತ್ಯಾಚಾರವನ್ನು ತಡೆಯುವಲ್ಲಿ ಸ್ತ್ರೀಯರ ಪಾತ್ರವೂ ಇದೆ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲೆವೆಂಬ ಮಾನಸಿಕ ಸ್ಥೈರ್ಯ ಬೆಳಸಿಕೊಳ್ಳಬೇಕು; ರಕ್ಷಿಸಿಕೊಳ್ಳುವ ವಿಧಾನಗಳನ್ನು ಕಲಿಯಬೇಕು. ಶಾಲಾ ಕಾಲೇಜುಗಳಲ್ಲಿ ಸ್ತ್ರೀಯರಿಗೆ ದೈಹಿಕ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ಏರ್ಪಾಡಾಗಬೇಕು. ಹೊರಗಡೆ ಕೂಡ ಸ್ವರಕ್ಷಣ ತಂತ್ರಗಳನ್ನು ಕಲಿಸುವ ಸಂಸ್ಥೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ಸ್ಥಾಪಿಸಬೇಕು. ಸ್ತ್ರೀಯರು ಶಾರೀರಿಕವಾಗಿ ಪುರುಷರಷ್ಟು ಶಕ್ತಿವಂತರಿಲ್ಲದಿರಬಹುದು. ಅಂದ ಮಾತ್ರಕ್ಕೆ ಅವರು ಶಕ್ತಿಹೀನರೆಂದು ಭಾವಿಸಬಾರದು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳಲು ಬೇಕಾಗುವಷ್ಟು ಶಾರೀರಿಕ ಶಕ್ತಿ ಇದೆ. ಅದು ಅವರಿಗೆ ಮನದಟ್ಟಾಗಬೇಕು. ತಮ್ಮಲ್ಲಿರುವ ಶಕ್ತಿಯನ್ನು ಉಪಯೋಗಿಸುವ ವಿಧಾನಗಳನ್ನು ಅವರು ಕಲಿಯಬೇಕು.   ಆಧುನಿಕ ಸಮಾಜ ಆರ್ಥಿಕ ಮೌಲ್ಯಗಳ ಮೇಲೆ ನಿಂತಿದೆ. ಇಲ್ಲಿ ದುಡ್ಡಿಗೆ ಬೆಲೆ ಹೆಚ್ಚು; ದುಡ್ಡಿದ್ದವನೇ ದೊಡ್ಡಪ್ಪ. ಬಹಳ ಕಾಲದಿಂದಲೂ ಹೆಣ್ಣು ಆರ್ಥಿಕವಾಗಿ ಪರಾವಲಂಬಿಯಾಗಿ ಉಳಿದು ಬಂದಿದ್ದಾಳೆ; ಸಮಾಜದಲ್ಲಿ ಎರಡನೆ ದರ್ಜೆಯ ಪ್ರಜೆಯೆನಿಸಿಕೊಂಡಿದ್ದಾಳೆ. ಕೆಲವೆಡೆ ಹೆಣ್ಣಾಗಿ ಹುಟ್ಟುವುದೇ ಒಂದು ಅನಾನುಕೂಲವಾಗಿ (disadvantage) ಪರಿಣಮಿಸಿದೆ. ಅವಳ ದೈನಂದಿನ ಎಲ್ಲ ಅವಶ್ಯಕತೆಗಳ ಪೂರೈಕೆ ಗಂಡಿನಿಂದಲೇ ಆಗಬೇಕು. ಇಂಥ ಪರಿಸ್ಥಿತಿಯಲ್ಲಿ ಸ್ತ್ರೀಸ್ವಾತಂತ್ರ್ಯ, ಸಮಾನತೆ, ಎಂಬ ಮಾತುಗಳಿಗೆ ಅರ್ಥವೇ ಇರುವುದಿಲ್ಲ. ಹೆಣ್ಣಿಗೆ ಮೊದಲು ಬೇಕಾಗಿರುವುದು ಆರ್ಥಿಕ ಸ್ವಾತಂತ್ರ್ಯ. ಆರ್ಥಿಕ ಸ್ವಾಯತ್ತತೆ ದೊರಕಬೇಕಾದರೆ ಅವಳಿಗೆ ಉನ್ನತ ಶಿಕ್ಶಣ ದೊರಕಬೇಕು. ಸಮಾಜದ ಎಲ್ಲಾ ಹಂತಗಳಲ್ಲಿ ಅವಳು ಉದ್ಯೋಗ ನಿರ್ವಹಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಬೇಕು. ದುಡಿದು ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲೆನೆಂಬ ಮನಃಸ್ಥಿತಿ ಅವಳದಾಗಬೇಕು.

ಸಾರ್ವಜನಿಕ ಸಂಸ್ಥೆಗಳಲ್ಲಿ, ಕೈಗಾರಿಕೆ, ಕಲೆ, ವಿಜ್ಞಾನ, ಸೈನ್ಯ, ಪೋಲೀಸ್, ಮೊದಲಾದ ಸಮಾಜದ ಎಲ್ಲಾ ಪ್ರಕಾರಗಳಲ್ಲಿ ಗಂಡಿನ ಸಮಕ್ಕೆ ನಿಂತು ಹೆಣ್ಣು ದುಡಿಯುವಂತಾಗಬೇಕು. ಒಬ್ಬ ಉತ್ತಮ ವರನನ್ನು ಹುಡುಕಿ ವಿವಾಹವಾಗುವುದೇ ಜೀವನದ ಪರಮ ಗುರಿ ಎಂಬ ಮನೋಭಾವದಿಂದ ಸ್ತ್ರೀಯರು ಹೊರಬರಬೇಕು. ವಿವಾಹವಿಲ್ಲದೆಯೂ ಬದುಕಬಲ್ಲೆನೆಂಬ ನಂಬಿಕೆ ಅವಳಲ್ಲಿ ಬೆಳೆಯಬೇಕು. ಅನುರೂಪನಾದ ವರನನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಹೆಣ್ಣಿಗೂ ಇರಬೇಕು. ಹೆಣ್ಣು ಮದುವೆಯಾಗಿ ಗಂಡನ ಮನೆಗೆ ಹೋಗುವಂತೆಯೇ ಗಂಡು ಕೂಡ ಹೆಂಡತಿಯ ಮನೆಗೆ ಬಂದು ನೆಲೆಸುವ ಸಂಪ್ರದಾಯ ಬೆಳೆದು ಬರಬೇಕು. ನಮ್ಮ ಹೆಣ್ಣುಮಕ್ಕಾಳು ವಿವಾಹಕ್ಕೆ ಮೊದಲು ತಮ್ಮ ಹೆಸರಿನೊಂದಿಗೆ ತಂದೆಯ ಹೆಸರನ್ನು, ವಿವಾಹಾನಂತರ ಗಂಡನ ಹೆಸರನ್ನು ಸೇರಿಸಿಕೊಳ್ಳುವ ಅಬ್ಯಾಸವನ್ನು ಬಿಡಬೇಕು. ಕೆಲವೆಡೆ ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣಿಗೆ ಹೊಸ ಹೆಸನ್ನಿಡುವ ಸಂಪ್ರದಾಯವಿದೆ; ಅದು ಹೋಗಬೇಕು. ಹೆಣ್ಣು ತನ್ನ ಹೆಸರನ್ನು ಅದಿರುವಂತೆ ಗೌರವಿಸಬೇಕು. ಮಗಳಿಗೊಂದು ವರನನ್ನು ಹುಡುಕಿ ಮದುವೆ ಮಾಡಿ ಕನ್ಯಾಸೆರೆ ಬಿಡಿಸುವುದೇ ತಮ್ಮ ಜೀವನದ ಪರಮೋದ್ದೇಶವೆಂದು ಹೆಣ್ಣನ್ನು ಹೆತ್ತವರು ತಿಳಿಯಬಾರದು. ಅವಳಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಬಲ್ಲೆ, ಯಾರ ಹಂಗೂ ಇಲ್ಲದೆ ಜೀವಿಸಬಲ್ಲೆ ಎನ್ನುವ ಧೋರಣೆ ಬೆಳೆಯುವುದಕ್ಕೆ ತಕ್ಕ ಪರಿಸರವನ್ನು ನಿರ್ಮಿಸಬೇಕು. ಅದು ನಿಜವಾದ ಹೆಣ್ಣಿನ ಸಬಲೀಕರಣ. ಅದು ನಿಜವಾದ ಸ್ವಾತಂತ್ರ್ಯ. ಇತ್ತೇಚೆಗೆ ನಡೆದಿರುವ ಕೆಲವು ಅಧ್ಯಯನಗಳ ಪ್ರಕಾರ, ಹೆಣ್ಣು ಸಬಲೀಕರಣಗೊಂಡ ದೇಶಗಳಲ್ಲಿ ಅತ್ಯಾಚಾರದ ಪ್ರಕರಣಗಳು ಇಳಿಮುಖವಾಗಿರುವುದು ಕಂಡುಬಂದಿದೆ.

ಕೊನೆಯ ಮಾತು

ಮನೋವಿಜ್ಞಾನಿಗಳ ಪ್ರಕಾರ ಮನುಷ್ಯರ ವ್ಯಕ್ತಿತ್ವವನ್ನು ಪ್ರಮುಖವಾಗಿ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆಗಳು ನಿರ್ಧರಿಸುತ್ತವೆ. ದೈಹಿಕ ಬಯಕೆಗಳು, ಮಾನಸಿಕ ಅಭೀಪ್ಸೆಗಳು ಸಾಮಾಜಿಕ ಚೌಕಟ್ಟಿನೊಳಗೆ ಪೂರೈಕೆಯಾಗಬೇಕು. ಇದಕ್ಕಾಗಿ, ಸಮಾಜ ಗಂಡಿಗೆ ಮತ್ತು ಹೆಣ್ಣಿಗೆ ಕೆಲವು ವಿಶಿಷ್ಟ ಪಾತ್ರಗಳನ್ನು ನಿರ್ವಹಿಸುವಂತೆ ಆಣತಿ ಮಾಡಿರುತ್ತದೆ. ಈ ಪಾತ್ರಗಳಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಪಾತ್ರಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ. ಅದಕ್ಕನುಗುಣವಾಗಿ ಹೆಣ್ಣುಗಂಡುಗಳಲ್ಲಿ ಬದಲಾವಣೆಯಾಗಬೇಕು. ಗಂಡು ದುಡಿಯಲು ಹೊರಗೆ ಹೋದರೆ ಹೆಣ್ಣು ಮನೆಗೆಲಸದಲ್ಲಿ ತೊಡಗುವುದರಲ್ಲಿ, ಅಡುಗೆ ಮಾಡಿ, ಮಕ್ಕಳನ್ನು ಸಾಕಿಸಲಹುದರಲ್ಲಿ ತಪ್ಪೇನು ಇಲ್ಲ. ಹಾಗೆಯೇ ಹೆಣ್ಣು ಹೊರಗೆ ದುಡಿಯುತ್ತಿದ್ದರೆ ಗಂಡು ಮನೆಗೆಲಸ ಮಾಡಬೇಕು. ಅನವಶ್ಯಕವಾಗಿ ಸ್ತ್ರೀಯರು ಒಂಟಿಯಾಗಿ ಹೊರಗೆ ಹೋಗಬಾರದು. ಹೋಗಲೇಬೇಕಾದಾಗ ವಿಪತ್ತನ್ನು ಎದುರಿಸಲು ಸಿದ್ಧವಿರಬೇಕು. ಸಮಾಜ ಹೆಣ್ಣುಗಂಡುಗಳು ಎಲ್ಲೆಲ್ಲಿ ಹೇಗೆ ವರ್ತಿಸಬೇಕು, ಎಂಥ ಉಡುಪು ಧರಿಸಬೇಕು, ಯಾರೊಡನೆ ಹೇಗೆ ಸಂವಹನ ನಡೆಸಬೇಕು ಎಂಬುದನ್ನು ನಿರ್ಧರಿಸಿರುತ್ತದೆ. ಅದರಲ್ಲಿ ತಪ್ಪು ಸರಿಗಳನ್ನು ಹುಡುಕಬಾರದು. ಸಮಾಜ ನಮ್ಮದೇ ನಿರ್ಮಾಣ. ಅದರ ನೀತಿನಿಯಮಗಳನ್ನು ರೂಪಿಸಿರುವವರು ನಾವೇ. ನಾವು ಅವನ್ನು ಪಾಲಿಸಬೇಕು; ಇಲ್ಲದಿದ್ದರೆ ತೊಂದರೆಯಾಗುತ್ತದೆ. ಮಕ್ಕಳು ಯೂನಿಫಾರ್ಮ್ ಹಾಕಬೇಕೆಂದು ಶಾಲಾಕಾಲೇಜುಗಳು ನಿರ್ಣಯಿಸಿರುತ್ತವೆ. ಹಾಗೇ ಸಮಾಜ ಸ್ತ್ರೀಯರು ಮೈ ಪ್ರದರ್ಶನ ಮಾಡುವ ಉಡುಗೆಗಳನ್ನು ಧರಿಸಬಾರದು ಎಂದು ಹೇಳಿರಬಹುದು. ಅದಕ್ಕೆ ಕಾರಣವಿದೆ. ಗಂಡಿಗೆ ಹೆಚ್ಚಿಗೆ ಲೈಂಗಿಕ ಪ್ರಚೋದನೆಯಾಗುವುದು ನೋಟದಿಂದ (ಹೆಣ್ಣಿಗೆ ಮಾತಿನಿಂದ) ಎಂದು ವಿಜ್ಞಾನ ಹೇಳಿದೆ. ಅನಗತ್ಯವಾಗಿ ಅಂಥದಕ್ಕೆ ಅವಕಾಶವನ್ನೇಕೆ ಕೊಡಬೇಕು. ನಾವೇ ನಿರ್ಮಿಸಿದ ಸಾಮಾಜಿಕ ನಿಯಮಗಳನ್ನು ಪಾಲಿಸುವುದರಿಂದ ನಮ್ಮ ಸ್ವಾತಂತ್ರ್ಯಕ್ಕೆ ಧಕ್ಕೆ ಏನೂ ಆಗುವುದಿಲ್ಲ.   ಇಷ್ಟೆಲ್ಲಾ ಹೇಳಿಯಾದ ಮೇಲೂ ಒಂದು ವಿಷಯವನ್ನು ನಾವು ಮರೆಯಬಾರದು. ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ ಅತ್ಯಾಚಾರ ಮಾಡುವವರ ಸಂಖ್ಯೆ ಬಹಳ ಕಡಮೆ; ಸುಮಾರು ಶೇಕಡ ಎರಡರಿಂದ ಐದು.

ಇಂದು ಕೂಡ ಹೆಣ್ಣನ್ನು ಗೌರವದಿಂದಲೇ ನೋಡುವ ಗಂಡಸರು ಮೆಜಾರಿಟಿಯಲ್ಲಿದ್ದಾರೆ. ಬಹಳಷ್ಟು ಕುಟುಂಬಗಳಲ್ಲಿ ಹೆಣ್ಣೇ ಯಜಮಾನಿ. ಅವಳದೇ ಮೇಲುಗೈ, ಅವಳದೇ ಕೊನೆಯ ಮಾತು. ಗಂಡ ಮಕ್ಕಳು ಅವಳ ಮಾತಿನಂತೆಯೇ ನಡೆಯುತ್ತಾರೆ. ನನಗನ್ನಿಸುವಂತೆ ಸಮಾಜದಲ್ಲಿ ಲೈಂಗಿಕ ದುಷ್ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವುದು ನಿಜವಿಲ್ಲದಿರಬಹುದು. ಇಂದು ಅವು ಹೆಚ್ಚಾಗುತ್ತಿರುವಂತೆ ಕಾಣುವುದಕ್ಕೆ ಕಾರಣ ಅವನ್ನು ನಾವು ಹೆಚ್ಚಾಗಿ ಗಮನಿಸುತ್ತಿರುವುದು. ಮೊದಲು ನಮ್ಮಲ್ಲಿ ಸುದ್ದಿಮಾಧ್ಯಮಗಳು ಇಂದಿರುವಷ್ಟು ಇರಲಿಲ್ಲ. ಆದುದರಿಂದ ಅವು ನಡೆಯುವುದು ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಇಂದು ಮಾಧ್ಯಮಗಳು ಇಂಥ ಸುದ್ದಿಗಳನ್ನು ಬಹು ಪ್ರಮುಖವಾಗಿ (ಕೆಲವು ವೇಳೆ ರಂಜನೀಯವಾಗಿ) ಪ್ರಕಟಿಸುತ್ತವೆ. ನಾವು ಅವನ್ನು ಗಮನಿಸಿದಷ್ಟು ಒಳ್ಳೆಯ ಸುದ್ದಿಗಳನ್ನು ಗಮನಿಸುವುದಿಲ್ಲ. ಮನುಷ್ಯರು ಕೆಟ್ಟದನ್ನು ಗಮನಿಸಿದಷ್ಟು ಸುಲಭವಾಗಿ ಒಳ್ಳೆಯದನ್ನು ಗಮನಿಸುವುದಿಲ್ಲ, ಮಾನವರಲ್ಲಿ ಅದೊಂದು ಸಹಜ ಪ್ರವೃತ್ತಿ. ಮನೋವಿಜ್ಞಾನದಲ್ಲಿ ಅದನ್ನು ಅಪ್ರಯತ್ನಾತ್ಮಕ ಜಾಗೃತಿ (automatic vigilance) ಎನ್ನುತ್ತಾರೆ. ನಮ್ಮ ಸುದ್ದಿಮಾಧ್ಯಮಗಳು ಇಂಥ ಘಟನೆಗಳಿಗೆ ಪ್ರಾಮುಖ್ಯತೆ ಕೊಟ್ಟು ರಂಜನೀಯವಾಗಿ ಪ್ರಕಟಿಸುವುದಕ್ಕೆ ಅವರವೇ ಆದ ಕಾರಣಗಳಿವೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಇಂಥ ಸುದ್ದಿಗಳನ್ನು ಪ್ರಕಟಿಸುವಾಗ ಮಾಧ್ಯಮಗಳು ಕೊಂಚ ಸಂಯಮ ವಹಿಸುವುದು ಒಳ್ಳೆಯದು. ಸಮಾಜದಲ್ಲಿ ನಡೆಯುವ ದರೋಡೆ, ಕೊಲೆ, ಕಳ್ಳತನಗಳಂತೆ ಅತ್ಯಾಚಾರವೂ ಒಂದು ಅಪರಾಧ. ಅವುಗಳಿಗೆ ಶಿಕ್ಷೆಯಾದಂತೆ ಇದಕ್ಕೂ ತಕ್ಕ ಶಿಕ್ಷೆಯಾಗಬೇಕು. ಅಪರಾಧ ಘೋರವಾದುದಾದರೆ ಶಿಕ್ಷೆಯೂ ಘೋರವಾಗಿರಲಿ.   ವೈಜ್ಞಾನಿಕವಾಗಿ ನೋಡಿದರೆ, ಮಾನವನ ವಿಕಾಸ ಯಾವಾಗಲೂ ಪ್ರಗತಿಯ ಹಾದಿಯಲ್ಲಿಯೇ ನಡೆದು ಬಂದಿದೆ. ಮಾನವನ ಉಗಮದೊಂದಿಗೆ ವಿಕಾಸಪ್ರಕ್ರಿಯೆ ನಿಲ್ಲುವುದಿಲ್ಲ. ಇನ್ನು ಮುಂದೆಯೂ ವಿಕಾಸ ಪುರೋಗಾಮಿಯಾಗಿಯೇ ನಡೆಯುತ್ತದೆ. ಇಂದಿನ ಮಾನವ ಮುಂದೆ ಉತ್ತಮ ಮಾನವನಾಗುವ ಸಾಧ್ಯತೆಗಳೇ ಹೆಚ್ಚು. ಜಗತ್ತಿನಲ್ಲಿ ಕೆಟ್ಟದು ಅಳಿದು ಒಳ್ಳೆಯದು ಉಳಿಯುತ್ತದೆ. ಅದು ಪ್ರಕೃತಿ ನಿಯಮ. ಅದು ಜೀವನದ ಎಲ್ಲಾ ರಂಗಗಳಿಗೂ ಅನ್ವಯಿಸುತ್ತದೆ; ಸ್ತ್ರೀಯರ ಮೇಲಣ ಅನುಚಿತ ವರ್ತನೆಗೂ ಅದೇ ನಿಯಮ ಅನ್ವಯವಾಗುವುದರಲ್ಲಿ ಸಂದೇಹವಿಲ್ಲ.

‍ಲೇಖಕರು avadhi

14 June, 2014

1 Comment

  1. ಸತ್ಯನಾರಾಯಣ

    ವಿಶ್ಲೇಷಣಾತ್ಮಕ ಲೇಖನ. ಅಭಿನಂದನೆಗಳು.
    “ದಶಶಿರಂ ಪೊತ್ತೊಯ್ದುದು ಒರ್ಬನ ಸತಿಯನಲ್ತು; ‘ಸತಿತನ’ವನ್ ಉಯ್ದಿಹನ್!” ಎಂಬ ಸಾಲು ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿದೆ. ಇಂದು ಅತ್ಯಾಚಾರ ವ್ಯಯಕ್ತಿಕವಾಗಿ ಯಾವುದೊ ಒಂದು ಹೆಣ್ಣಿನ ಮೇಲೆ ನಡೆಯುತ್ತಿರುವುದಿಲ್ಲ. ಅದು ಇಡೀ ಹೆಣ್ಣುಕುಲದ ಮೇಲೆ, ಆ ಮೂಲಕ ಮನುಕುಲದ ಮೇಲೆ ನಡೆಯುತ್ತಿರುವ ಅತ್ಯಾಚಾರ! ಅದರ ಹೊಣೆಯನ್ನು ಇಡೀ ಮನುಕುಲವೇ ಹೊರಬೇಕಾಗಿದೆ. ‘ಪುರುಷನಿರಲಾಗದು ಈ ಧರೆಯ ಮೇಲೊರ್ವನುಂ ಪೊರೆಯದೆ ಅನ್ನೆಗಂ ಆ ಸತೀತ್ವಮಂ!’ ಎಂಬ ರಂಹನ ಮಾತುಗಳನ್ನು ಸ್ವಲ್ಪ ಬದಲಾಯಿಸಿ ಹೇಳುವುದಾದರೆ, ಈ ಅತ್ಯಾಚಾರದ ಅನಿಷ್ಠವನ್ನು ತಡೆಯಲಾಗದಿದ್ದರೆ, ಈ ಭೂಮಿಯ ಮೇಲೆ ವಾಸಿಸುವ ಹಕ್ಕನ್ನು ಮನುಷ್ಯ ಕಳೆದುಕೊಳ್ಳುತ್ತಾನೆ ಎಂದೇ ಅರ್ಥ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading