ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನುಪಮಾ ಪ್ರಸಾದ್ ಹೇಳುತ್ತಾರೆ: ಶಿಕ್ಷಕ ವೃತ್ತಿಗೆ ರಾಧಾಕೃಷ್ಣನ್ ಆದರ್ಶರಲ್ಲ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಪ್ರಕಟವಾಗಿತ್ತು.

ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ

ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ 

ಸಂವರ್ಥ ಸಾಹಿಲ್ ಕಟ್ಟಿಕೊಟ್ಟ ನೋಟ ಇಲ್ಲಿದೆ   

ಇದೀಗ ಕಂಠೀರವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ- ಅದು ಇಲ್ಲಿದೆ 

ಪಂಡಿತಾರಾಧ್ಯರು ಪಂಡಿತ ಪುಟದಲ್ಲಿ ಪ್ರೊ. ಜಿ.ಎಚ್. ನಾಯಕರು ರಾಧಾಕೃಷ್ಣನ್ ಅವರ ಬಗ್ಗೆ ಬರೆದ ಬರಹವನ್ನು ಬಹಳ ಹಿಂದೆಯೇ ಅವಧಿ ಪ್ರಕಟಿಸಿತ್ತು. ಆ ಲಿಂಕ್ ಇಲ್ಲಿದೆ http://wp002.global.temp.domains/~avadhion/avadhimag?p=218853. 

ಆಗ ಆ ಬರಹಕ್ಕೆ ಸಾಹಿತಿ ಅನುಪಮಾ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದರು. ಅದನ್ನು ಅವಧಿ ಪುನರ್ ಪ್ರಕಟಿಸುತ್ತದೆ.

 

ಅನುಪಮಾ ಪ್ರಸಾದ್, ಕಾಸರಗೋಡು

 

ಪ್ರೊ. ಜಿ.ಎಚ್. ನಾಯಕರು ತಮ್ಮ ಲೇಖನದಲ್ಲಿ (ಶಿಕ್ಷಕರ ದಿನಕ್ಕೆ ಅರ್ಥ ಇದೆಯೆ? ನಾವು ಕಾಣದ ರಾಧಾಕೃಷ್ಣನ್ ಮುಖ)  ಡಾ.ಸರ್ವೇಪಲ್ಲಿ ಗೋಪಾಲ್ ಬರೆದಿರುವ ಪುಸ್ತಕದಿಂದ ಕೆಲವು ಸಾಲುಗಳನ್ನು ಉದ್ದರಿಸುವುದರ ಮೂಲಕ ಸ್ಥಾಪಿತ ವಿಚಾರದಾಚಿಗಿನ ಸತ್ಯವನ್ನು ಬಿಚ್ಚಿಟ್ಟು ಮೂಲಕೃತಿ ಓದಲಾಗದವರ ಪಾಲಿಗೆ ಮುಸುಕಿನೊಳಗೇ ಉಳಿದು ಬಿಡಬಹುದಾಗಿದ್ದ ರಾಧಾಕೃಷ್ಣನ್ ಅವರ ಇನ್ನೊಂದು ಮುಖವನ್ನು ತೋರಿಸಿ ಸತ್ಯಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ.

ಪ್ರೊ. ಜಿ.ಎಚ್. ನಾಯಕರು

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದು ದಿನವನ್ನು ರಾಷ್ಟ್ರೀಯವಾಗಿ ಅದೂ ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದೇವೆಂದರೆ ಆ ವ್ಯಕ್ತಿ ಅಂತಹ ಮೇರು ವ್ಯಕ್ತಿತ್ವವನ್ನು ಹೊಂದಿರಬೇಕು. ಆದರೆ, ಗೋಪಾಲ್ ಅವರ ಕೃತಿಯಲ್ಲಿರುವ ಎರಡು ಮುಖ್ಯ ವಿಷಯಗಳನ್ನು ಓದಿದಾಗ ರಾಧಾಕೃಷ್ಣನ್ನರಿಗೆ ಯಾವ ಕಾರಣಕ್ಕೂ ಅಂತಹ ಉನ್ನತ ವ್ಯಕ್ತಿತ್ವನ್ನು ಆರೋಪಿಸಲು ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಗೋಪಾಲ್ ಪುಸ್ತಕದಲ್ಲಿರುವ ಸಾಲುಗಳನ್ನು ಉದ್ಧರಿಸುತ್ತ ಪ್ರೊ.ನಾಯಕರು ವ್ಯಕ್ತಪಡಿಸಿದ ವಿಚಾರಗಳು, ಎತ್ತಿದ ಪ್ರಶ್ನೆಗಳು ಬಹಳ ಮಹತ್ವಪೂರ್ಣವಾದವು.

ಪ್ರೊ.ನಾಯಕರು ಗೋಪಾಲ್ ಬರಹಗಳನ್ನು ಉದ್ದರಿಸುವಾಗ ಕೇವಲ ಋಣಾತ್ಮಕ ಅಂಶಗಳನ್ನೇ ಎತ್ತಿಕೊಂಡಿರುವುದರಿಂದ ಮೂಲ ಕೃತಿಯ ಪರಿಚಯವೇ ಇಲ್ಲದ ಓದುಗರಿಗೆ ಗೋಪಾಲ್ ಅವರು ತಮ್ಮ ಪುಸ್ತಕದಲ್ಲಿ ತಂದೆಯ ಬಗ್ಗೆ ಋಣಾತ್ಮಕ ಅಂಶಗಳನ್ನೇ ಬರೆದಿದ್ದಾರೇನೋ ಅನಿಸಬಹುದಾದರೂ, ಪುಸ್ತಕ ಪರಿಚಯ ಮಾಡುವುದು ಲೇಖನದ ಉದ್ದೇಶ ಅಲ್ಲವಾದ್ದರಿಂದ ಅದು ಲೇಖನದ ಕೊರತೆ ಅನಿಸುವುದಿಲ್ಲ. ಅದೂ ಅಲ್ಲದೆ ರಾಧಾಕೃಷ್ಣನ್ನರ  ವೃತ್ತಿ ಬದುಕಿನ ಸಾಧನೆ, ಶಿಕ್ಷಕರಾಗಿ ಅವರು ಗಳಿಸಿದ ಖ್ಯಾತಿ  ಎಲ್ಲರಿಗೂ ಗೊತ್ತಿರುವಂಥದ್ದೇ.

ಮುಖ್ಯವಾಗಿ ರಾಧಾಕೃಷ್ಣನ್ನರ ಜನ್ಮದಿನವೂ ಅಲ್ಲದ ಅಥವಾ ಆದರ್ಶದ ತುತ್ತ ತುದಿ ಎನ್ನಬಹುದಾದ (ಉನ್ನತ ವ್ಯಕ್ತಿತ್ವನ್ನು ಹೊಂದಿರುವ ಶಿಕ್ಷಕರು ಈಗಲೂ ನಮ್ಮಲ್ಲಿರುವಾಗ) ವ್ಯಕ್ತಿತ್ವವನ್ನೂ ಹೊಂದಿರದ ರಾಧಾಕೃಷ್ಣನ್ನರ ಹೆಸರಿನಲ್ಲಿ ಆಚರಿಸಲ್ಪಡುತ್ತಿರುವ ಶಿಕ್ಷಕರ ದಿನಾಚರಣೆಯ ಬಗ್ಗೆ ಪ್ರೊ. ನಾಯಕರು ಎತ್ತಿದ ಪ್ರಶ್ನೆ ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅತ್ಯಂತ ಸಮಂಜಸವಾಗಿದೆ.

ಅದೇ ರೀತಿ ರಾಧಾಕೃಷ್ಣನ್ನರು ತಮ್ಮ ಹೆಣ್ಣು ಮಕ್ಕಳ ವಿಚಾರದಲ್ಲಿ ನಡೆದುಕೊಂಡ ರೀತಿ ಹಾಗು ಸ್ತ್ರೀಯರ ಬಗ್ಗೆ ಅವರಿಗಿದ್ದ ಹೇಯ ಭಾವ ಒಬ್ಬ ಸಾಮಾನ್ಯ ಶಿಕ್ಷಕನಲ್ಲಿದ್ದರೂ ಸಹಿಸುವಂಥದ್ದಲ್ಲ. ರಾಷ್ಟ್ರ ವ್ಯಾಪಿಯಾಗಿ ಚರ್ಚಿಸಬೇಕಾದ ವಿಚಾರಗಳನ್ನು ಪ್ರೊ.ನಾಯಕರು ಪ್ರಸ್ತಾಪಿಸಿದ್ದಾರೆ. ಯಶಸ್ವೀ ಬೋಧಕನಾಗಿ ಹಾಗೂ ತನ್ನ ಪ್ರತಿಭೆ, ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವೃತ್ತಿಯಲ್ಲಿ ಹೇಗೆ ಉನ್ನತಿಯನ್ನು ಪಡೆಯಬೇಕೆಂಬುದಕ್ಕೆ ರಾಧಾಕೃಷ್ಣನ್ ಆದರ್ಶವಾಗಬಹುದೇ ಹೊರತು ನಿಜದ ಶಿಕ್ಷಕತನಕ್ಕಲ್ಲ.

‍ಲೇಖಕರು avadhi

18 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading