ಸಾವು ಬಂದು ಕಾದ ತಟ್ಟುತ್ತಿದೆ ಎನ್ನುವುದರ ಮುನ್ಸೂಚನೆ ಸಿಕ್ಕಿತೇನೋ ಎನ್ನುವಂತೆ ನಿನ್ನೆ ತಾನೇ ಕ್ಯೂಬನ್ನರಿಗೆ ಮತ್ತು ಜಗತ್ತಿನ ಎಲ್ಲರಿಗೂ ನಾನು ಇನ್ನು ಹೋಗಿ ಬರುತ್ತೇನೆ ಸಾವು ನನ್ನ ಹೊಸ್ತಿಲಲ್ಲಿ ಬಂದು ನಿಂತಿದೆ ಎಂದಿದ್ದರು.
ನಿಜವೇನೋ ಎನ್ನುವಂತೆ ಫಿಡೆಲ್ ಕೈ ಬೀಸಿ ಹೋಗಿಯೇ ಬಿಟ್ಟರು
ಫಿಡೆಲ್ ಎಂಬ ಮಾವಿನ ವಾಟೆ
ಫಿಡೆಲ್ ಕ್ಯಾಸ್ಟ್ರೋ ಕುರಿತ ಗುಜ್ಜಾರ್ ರೇಖಾ ಚಿತ್ರವನ್ನು ಮೆಚ್ಚಿ ಹಲವರು ಪತ್ರ ಬರೆದಿದ್ದಾರೆ. ಆಷ್ಟೇ ಅಲ್ಲದೆ ಕ್ಯಾಸ್ಟ್ರೋ ಕುರಿತು ಇನ್ನಷ್ಟು ಮಾಹಿತಿಯನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ ಎನ್ ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ದಿಂದ ಫಿಡೆಲ್ ಅವರ ಮನ ಮುಟ್ಟುವ ಮಾತುಗಳನ್ನು ನೀಡುತ್ತಿದ್ದೇವೆ. ಪುಸ್ತಕದ ಮುನ್ನುಡಿಯಲ್ಲಿ ಮೋಹನ್ ಬರೆದ ಸಾಲುಗಳೂ ಇಲ್ಲಿವೆ.
ಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ.
***
ಹಸಿದು ಸಾಯುವಂತೆ ಮಾಡಿದರು, ಹಂಚಿ ತಿನ್ನುವುದನ್ನು ಕಲಿತೆವು. ರೋಗಗಳಿಂದ ನರಳಿ ಸಾಯುವಂತೆ ಮಾಡಿದರು. ಹಸಿರು ಎಲೆಗಳಿಂದ ಜೀವ ಉಳಿಸಿಕೊಂಡೆವು. ನಮ್ಮ ದನಿಗಳನ್ನು ಕುಗ್ಗಿಸಲು ಯತ್ನಿಸಿದರು, ಅವು ಮರುಧ್ವನಿಗಳಾದವು ನಿಮ್ಮ ಎದೆಗಳಲ್ಲಿ.
***
ಪ್ರತಿಯೊಂದು ಗ್ರಾಮ್ ಹಾಲಿಗಾಗಿ, ಪ್ರತಿಯೊಂದು ಔಷಧಿಯ ಬಾಟಲಿಗಾಗಿ, ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಇಲ್ಲವಾಗುತ್ತಿರುವ ಕಾಪಿ ಪುಸ್ತಕಕ್ಕಾಗಿ, ದಿಗ್ಭಂಧನದ ವಿರುದ್ಧ ಘೋಷಣೆ ಮೊಳಗಿಸಿದ ಪ್ರತಿಯೊಂದು ದನಿಗಾಗಿ, ದೇಶದ ವಿರುದ್ಧ ನಡೆಯುತ್ತಿರುವ ಪ್ರತೀ ಅಪಪ್ರಚಾರಕ್ಕಾಗಿ, ನೀವು ಎತ್ತಿಹಿಡಿದಿರುವ ಈ ಕ್ಯೂಬಾ ಬಾವುಟಕ್ಕಾಗಿ ನಾವು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತೇವೆ.
***
ಇದು ಆರ್ಥಿಕ ದಿಗ್ಭಂಧನವಲ್ಲ. ಇದು ಯುದ್ಧ. ಇಡೀ ವಿಶ್ವದಲ್ಲಿ ನಮ್ಮೊಂದಿಗೆ ಮಾತ್ರ ನಡೆಯುತ್ತಿರುವ ಯುದ್ಧ. ಪ್ರತಿಯೊಬ್ಬರೂ ಈ ಯುದ್ಧದಲ್ಲಿ ಸೆಣಸುತ್ತಿದ್ದಾರೆ. ಪ್ರತಿ ಬಾರಿ ಮಕ್ಕಳನ್ನು ನೋಡಿದಾಗ ಅವರು ಮಹಾಯುದ್ಧದ ಮಧ್ಯದಲ್ಲಿ ನಿಂತಿದ್ದಾರೆ ಎನಿಸುತ್ತದೆ. ಹಾಲುಗಲ್ಲದ ಮಕ್ಕಳು ಯುದ್ಧದ ಮಧ್ಯೆ ಇರುವ ಯೋಧರಾಗಿ ಕಾಣುತ್ತಿದ್ದಾರೆ.
***
ಬಹುಮತವಿರುವ ಒಂದು ಅಭಿಪ್ರಾಯಕ್ಕೆ ರಾಜನ ಶಕ್ತಿಗಿಂತಲೂ ಹೆಚ್ಚಾದ ಬಲವಿದೆ. ಅನೇಕ ನೂಲುಗಳಿಂದ ಹೆಣೆಯಲಾದ ಹಗ್ಗವು ಒಂದು ಸಿಂಹವನ್ನು ಬೇಕಾದರೂ ಕಟ್ಟಿಹಾಕುತ್ತದೆ.
ಮಾವಿನ ವಾಟೆ
————————–
ಫಿಡೆಲ್ ಹಣ್ಣಾಗಿದ್ದಾರೆ.
ಹಾಡಿಗೂ ಮುಪ್ಪುಂಟೇ? ಜಗತ್ತಿಗೆ ಒಂದು ದೀಪ ಕೊಟ್ಟ, ಪ್ರತಿಯೊಬ್ಬರಿಗೂ ತಮಗೆ ಬೇಕಾಗಿದ್ದು ಗುನುಗಿಕೊಳ್ಳುವ ತಾಖತ್ತು ಕೊಟ್ಟ ಫಿಡೆಲ್ ಮತ್ತೆ ಚಿಗುರೊಡೆದು ಬರಲೆಂದೇ ಇರುವ ಮಾವಿನ ವಾಟೆ. ಸೂರ್ಯನ ಕಿರಣ ಎಲ್ಲಿದ್ದು ಏನು ಮಾಡಿತು ಎಂಬುದು ವಿಜ್ಞಾನದ ತೆಕ್ಕೆಗೂ ಹೇಗೆ ಸಿಗುವುದಿಲ್ಲವೋ ಹಾಗೆ ಫಿಡೆಲ್.
ಜಿ ಎನ್ ಮೋಹನ್
(“ನನ್ನೊಳಗಿನ ಹಾಡು ಕ್ಯೂಬಾ” ಪುಸ್ತಕದ ಮುನ್ನುಡಿಯಿಂದ)
ಕ್ಯೂಬಾ ದ ಜನರನ್ನು ಹತ್ತಿರದಿಂದ ನೋಡಿದ ನನಗೆ, ಅವರ ಬಡತನ, ನಿತ್ಯ ಜೀವನದ ಅಭದ್ರತೆ, ತಮ್ಮತನವನ್ನೇ ಅಮೇರಿಕಾದ ಡಾಲರ್ ಗೆ ಮಾರಿಕೊಂಡು ಬದುಕುವ ರೀತಿ ನೋಡಿದರೆ, ಕ್ಯಾಸ್ಟ್ರೊ ಬಗೆಗೆ ಕನಿಷ್ಠ ಗೌರವವು ಉಳಿದಿಲ್ಲ. ಕಮ್ಯುನಿಸ್ಟ್ ಸಿದ್ದಾಂತ ಉದ್ದಾರ ಮಾಡಿದ ಒಂದು ದೇಶವಾದ್ರೂ ಇದೆಯಾ ಅನಿಸುತ್ತದೆ ಈಗ.
ಸುಮ್ಮನೆ: ನಿಮ್ಮ “ನನ್ನೊಳಗಿನ ಹಾಡು” ಪೂರ್ತಿ ಹೊರಗೆ ಬಂದಿದೆಯಾ ಅಂತ ಅನುಮಾನ ?
ಕಮ್ಯುನಿಸ್ಟ್ ಸಿದ್ಧಾಂತವನ್ನು ದ್ವೇಷಿಸುವ ಮನಸ್ಸುಗಳಿಗೆ ಕ್ಯಾಸ್ಟ್ರೊ ರವರ ಅನನ್ಯ ವ್ಯಕ್ತಿತ್ವವಾಗಲಿ ಕ್ಯೂಬಾ ಜನತೆಯ ಹಾಡಾಗಲಿ ಅರ್ಥವಾಗಲು ಸಾಧ್ಯವೇ ಇಲ್ಲ.ಅವರಿಗೆ ಅವರದ್ದೇ ಆದ ಭ್ರಮಾಲೋಕವೊಂದಿರುತ್ತದೆಯಾದ್ದರಿಂದ ವಾಸ್ತವಿಕತೆಯೆಂಬುದು ಅವರಿಗೆ ಸದಾ ಅಪಥ್ಯ.