ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಷೀರ್ ಕವಿತೆ: ಕ್ಷಮೆಗೆ ಕ್ಷಮೆಯಿಲ್ಲ

ಬಿ ಎಂ ಬಷೀರ್

ದಾರಿ ತಪ್ಪಿದ ಅನಾಥ ಮಕ್ಕಳಂತೆ

ತಿಳಿದೋ ತಿಳಿಯದೆಯೋ ಮಾಡಿದ ಸಾವಿರ ತಪ್ಪುಗಳು!

 

ಕ್ಷಮೆಯೋ…

ಎದೆಯೊಳಗೆ ಕುದಿ ಕುದಿವ ಹಾಲಿಟ್ಟು

ಕಳೆದುಹೋದ ಮಕ್ಕಳಿಗೆ ತುಡಿವ

ತಾಯಿಯಂತೆ!

 

ರಕ್ತದ ಕಲೆಗಳ ಕುರುಹುಗಳೇ ಇಲ್ಲ

ಆದರೂ ಗಾಯಗೊಂಡು ಬಿದ್ದಿದ್ದಾರೆ ಇವರೆಲ್ಲ

 

ದಯೆಯ ಒರೆಯೊಳಗೆ

ಹೊಂಚಿ ಕೂತ ಕ್ಷಮೆಯೆಂಬ ನಿರ್ದಯಿ ಖಡ್ಗವೇ

ನಿನಗೆ ಸಾಟಿಯಿಲ್ಲ….

 

ಗಾಂಧಿ…ಜೀಸಸ್…ಬುದ್ಧ…

 

ನಿಮ್ಮ ತುಟಿಯಂಚಿನ ನಗುವಿನಲ್ಲಿ

ಹೊಳೆಯುತ್ತಿರುವ ಖಡ್ಗದ ಅಲಗು

ನಿಷ್ಪಾಪಿ ಪಾಪಿಗಳ ಹೃದಯವನ್ನೇ ಇರಿದಿದೆ

 

ನಿಮ್ಮ ಕ್ಷಮೆಗೆ ಕ್ಷಮೆಯಿಲ್ಲ!

 

ಅವನು ಮಾಡಿದ

ಸಾವಿರ ತಪ್ಪುಗಳ

ಒಂದು ಕ್ಷಮೆಯಿಂದ

ನಾನು ಸರಿ

ದೂಗಿಸಿಕೊಂಡೆ

 

ನಾನು

ಅವನ ದ್ವೇಷಿಸಿದೆ

ಅವನೋ ನನ್ನನ್ನು ಕ್ಷಮಿಸಿದ!

 

ಹೇಳು ದೇವರೆ…

ಯಾರು ಹೆಚ್ಚು ನೊಂದವರು?

ನಾನೋ…ಅವನೋ…?

 

ನನ್ನದೋ ತಿಳಿಯದೇ ಮಾಡಿದ ತಪ್ಪುಗಳು

ನೀನೋ ತಿಳಿದು

ತಿಳಿದೂ ನನ್ನನ್ನು ಕ್ಷಮಿಸಿದೆ

ಹೇಳು…

ಯಾರು ಯಾರಿಗಿಂತ ಹೆಚ್ಚು ದುಷ್ಟರು?

 

ಕ್ಷಮೆಯ ಹಂಗಿನ ಅರಮನೆಗಿಂತ

ನನ್ನ ದ್ವೇಷದ ಅರಗಿನ ಮನೆಯೇ

ಲೇಸು ಎಂದು

ನೆಮ್ಮದಿಯಿಂದ ಸುಟ್ಟು ಹೋದೆ!

 

 

 

‍ಲೇಖಕರು G

22 March, 2011

1 Comment

  1. Sachin

    Olleya kavite..Bhaavada grahike swalpa kashta

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading