ಇನ್ನು ಮುಂದೆ ಆಗಾಗ ಋಷ್ಯಶೃಂಗ
ನಮ್ಮೂರಲ್ಲೊಬ್ಬ ಟೈಲರ್ ಇದ್ದ. ಬೀರಣ್ಣ, ಬೀರಪ್ಪ ಅಂತೆಲ್ಲ ಅವನಿಗೆ ಅನೇಕ ಹೆಸರು. ಬೀರ ಅಂತ ಅಪ್ಪ ಇಟ್ಟ ಹೆಸರಿರಬೇಕು. ಯಾರ ಜೊತೆಗೂ ಮಾತಾಡುತ್ತಿರಲಿಲ್ಲ. ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಅಳತೆ ತೆಗೆದು, ಒಂದಿಷ್ಟೂ ಅಳತೆ ವ್ಯತ್ಯಾಸವಾಗದೆ ಬಟ್ಟೆ ಹೊಲಿಯುವುದರಲ್ಲಿ ಅವನು ಹೆಸರುಗಾರ.
ಶರ್ಟು, ಪ್ಯಾಂಟು, ಚೂಡಿದಾರ, ರವಕೆ, ಲಂಗ- ಎಲ್ಲವನ್ನೂ ಹೊಲಿದು ಕೊಡುತ್ತಿದ್ದನಾದರೂ ಕ್ರಮೇಣ ಪ್ರಸಿದ್ಧವಾದದ್ದು ಅವನು ಹೊಲಿದುಕೊಡುತ್ತಿದ್ದ ಚಡ್ಡಿ. ಕೊನೆಕೊನೆಗೆ ಚಡ್ಡಿ ಹೊಲಿಸಿಕೊಂಡರೆ ಬೀರಪ್ಪನ ಹತ್ತಿರವೇ ಹೊಲಿಸಿಕೊಳ್ಳಬೇಕು ಅಂತ ಜನ ಮಾತಾಡಿಕೊಳ್ಳತೊಡಗಿದರು.
ಚಡ್ಡಿ ಹೊಲಿದೂ ಹೊಲಿದೂ ಅಭ್ಯಾಸವಾಯಿತೋ, ಮನಸ್ಸಿಗೆ ಬರೀ ಚಡ್ಡಿಯನ್ನಷ್ಟೇ ಹೊಲೀಬೇಕು ಅನ್ನಿಸಿತೋ ಅಥವಾ ಚಡ್ಡಿ ಹೊಲಿಯುವುದೇ ಒಂದು ವ್ಯಸನವಾಯಿತೋ ಏನೋ. ಆಮೇಲಾಮೇಲೆ ಶರ್ಟು ಬಟ್ಟೆ, ರವಕೆ ಬಟ್ಟೆ, ಪ್ಯಾಂಟು ಪೀಸು ಒಯ್ದು ಕೊಟ್ಟರೂ ಬೀರಪ್ಪ ಅದರಲ್ಲಿ ಚಡ್ಡಿ ಹೊಲಿದುಕೊಡುತ್ತಿದ್ದ. ಜನ ಬೈದರು, ಬುದ್ಧಿ ಹೇಳಿದರು, ತಿದ್ದಲು ನೋಡಿದರು. ರೇಗಿದರು.
ಬೀರಪ್ಪ ಬದಲಾಗಲಿಲ್ಲ.
ಇತ್ತೀಚೆಗೆ ಚಡ್ಡಿ ಹೊಲಿಸಬೇಕಾದವರು ಮಾತ್ರ ಬೀರಪ್ಪನ ಬಳಿಗೆ ಬರುತ್ತಾರಂತೆ.
ಏನೇ ಆದ್ರೂ ಚಡ್ಡಿ ಮಾತ್ರ ಸಕತ್ತಾಗೇ ಹೊಲೀತಾನೆ ಬಿಡ್ರೀ ಅಂತ ನಮ್ಮೂರ ಜನ ಗುಂಪು ಸೇರಿದಲ್ಲೆಲ್ಲ, ಚಡ್ಡಿ ಮಾತು ಬಂದಾಗಲೆಲ್ಲ ಬೀರಪ್ಪನನ್ನು ಕೊಂಡಾಡುವುದಿದೆ.ಬೀರಪ್ಪನೂ ಅದರಿಂದಲೇ ಸಂತೋಷ ಹೊಂದಿದನವಂತೆ ಕೇವಲ ಚಡ್ಡಿ ಹೊಲಿಯುವುದಕ್ಕೇ ತನ್ನ ಪ್ರತಿಭೆಯನ್ನು ಸೀಮಿತಗೊಳಿಸಿಕೊಂಡು ಬಿಟ್ಟಿದ್ದಾನೆ.






ಚಡ್ಡಿ ಕಥೆ ಚೆನ್ನಾಗಿದೆ
>> “ಆಮೇಲಾಮೇಲೆ ಶರ್ಟು ಬಟ್ಟೆ, ರವಕೆ ಬಟ್ಟೆ, ಪ್ಯಾಂಟು ಪೀಸು ಒಯ್ದು ಕೊಟ್ಟರೂ ಬೀರಪ್ಪ ಅದರಲ್ಲಿ ಚಡ್ಡಿ ಹೊಲಿದುಕೊಡುತ್ತಿದ್ದ.”
ಭಯಾನಕ! 🙂
ಯಾವುದರಲ್ಲಿ ಮನಸ್ಸು ಜಾಸ್ತಿ ತೊಡಗಿಕೊಂಡಿರುತ್ತೋ ಅದರಲ್ಲೇ ಮಗ್ನವಾಗಿಬಿಡುತ್ತೆ ಅನ್ನೋದನ್ನ ಸರಳ-ಸುಂದರವಾಗಿ ಕಥೆಯಲ್ಲಿ ಬರೆದಿದ್ದೀರಿ…