ಹೈದ್ರಾಬಾದ್ ವಿವಿಯಲ್ಲಿ ನಮ್ಮನ್ನು ಹಸಿವಿಗೆ ದೂಡಲಾಗಿದೆ. ಆದರೂ ನಾವು ಹೋರಾಡುತ್ತಿದ್ದೇವೆ. . .
ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿ
ಕನ್ನಡಕ್ಕೆ : ಕಿರಣ್ ಗಾಜನೂರು
ಸಾಮಾಜಿಕ ನ್ಯಾಯಕ್ಕಾಗಿ ಜಂಟಿ ಹೋರಾಟ ಸಮಿತಿಯು ಹೈದಾರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅದೇಶದ ಮೇಲೆ ಕೆಂದ್ರೀಯ ಮೀಸಲು ಪಡೆ, ಕ್ಷಿಪ್ರ ಕಾರ್ಯಪಡೆ ಮತ್ತು ರಕ್ಷಣಾ ಸಿಬ್ಬಂದಿ ಸೇರಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ಮಾರ್ಚ್ 22 ರಂದು ನಡೆಸಿದ ದೈಹಿಕ ಮತ್ತು ಲೈಂಗಿಕ ಹಿಂಸೆಯನ್ನು (ದಾಳಿಯನ್ನು) ಅತಿ ಕಟು ಶಬ್ದಗಳಲ್ಲಿ ಖಂಡಿಸುತ್ತದೆ.
ಇಲ್ಲಿ ಪುರುಷ ಸಿಬ್ಬಂದಿ ಮಹಿಳಾ ವಿದ್ಯಾರ್ಥಿನಿಯರನ್ನು ಥಳಿಸುತ್ತಿದ್ದಾರೆ. ಪುರುಷ ವಿದ್ಯಾರ್ಥಿ ಮತ್ತು ಅಧ್ಯಾಪಕರನ್ನು ತುಚ್ಛ ಪದಗಳಲ್ಲಿ ನಿಂದಿಸಲಾಗಿದೆ. ಲಾಠಿ ಚಾರ್ಜ್ ಸಂದರ್ಭದಲ್ಲಿ ಸಿ.ಆರ್.ಪಿ.ಎಫ್. ಮತ್ತು ಆರ್.ಎ. ಎಫ್. ಸಿಬ್ಬಂದಿ ನೂರಾರು ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಅವರನ್ನು ದೇಶದ್ರೋಹಿಗಳು ಎಂದು ನಿಂದಿಸಿ ಅವರುಗಳ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ.
ತಮ್ಮ ವಿಭಾಗಗಳ ಹೊರಗೆ ನಿಂತಿದ್ದ ವಿದ್ಯಾರ್ಥಿಗಳನ್ನು ಸುಮ್ಮನೆ ತರಗತಿಗೆ ಹೋಗಿ ಓದಿಕೊಳ್ಳಿ ಎನ್ನುವ ಮೂಲಕ ಸುಖಾಸುಮ್ಮನೆ ಥಳಿಸಲಾಗಿದೆ. ಮಹಿಳಾ ವಿದ್ಯಾರ್ಥಿನಿಯರನ್ನು ಪುರುಷ ಅಧಿಕಾರಿಗಳು ಥಳಿಸಿ ಎಳೆದಾಡಿದ್ದಾರೆ. ವಿಶ್ವವಿದ್ಯಾನಿಲಯದ ಹೊರಕ್ಕೆ ಬಲವಂತವಾಗಿ ಅಟ್ಟಿದ ನಂತರ ಸುಮಾರು ಎರಡು ಕಿಲೋಮೀಟರ್ ನಷ್ಟು ದೂರ ವಿದ್ಯಾರ್ಥಿಗಳನ್ನು ಅಟ್ಟಿಸಿಕೊಂಡು ಹೋಗಿ ಅವರನ್ನು ಸೆರಹಿಡಿದು ಬಂಧಿಸಲಾಗಿದೆ. ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ನಡೆದ ಪೈಶಾಚಿಕ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಕಾರಣಕ್ಕೆ ನೂರಾರು ಮೊಬೈಲ್ ಗಳನ್ನು ಕಸಿದುಕೊಂಡು ಧ್ವಂಸಮಾಡಲಾಗಿದೆ. ಲಾಠಿ ಚಾರ್ಜ್ ಸಂದರ್ಭದಲ್ಲಿ ಗುಂಪು ಚದುರಿದ ನಂತರವೂ ಪೋಲಿಸರ ಸೂಚನೆಯ ಮೇರೆಗೆ ವಿದ್ಯಾರ್ಥಿಗಳನ್ನು ಅಮಾನವೀಯವಾಗಿ ಹೊಡೆಯಲಾಗಿದೆ. ಬಂಧಿಸಬೇಕಾದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಪಟ್ಟಿಯೊಂದನ್ನು ಪೋಲಿಸರು ಮೊದಲೇ ಹೊಂದಿದ್ದಂತೆ ವಿದ್ಯಾರ್ಥಿ ನಿಲಯಗಳನ್ನು ಶೋಧಿಸಿ ವಿದ್ಯಾರ್ಥಿಗಳನ್ನು ಹುಡುಕಿ ಹುಡುಕಿ ಬಂಧಿಸಲಾಗಿದೆ. ಮಾಧ್ಯಮಗಳ ವರದಿಯಂತೆ ಈ ಪಟ್ಟಿ ನೇರವಾಗಿ ಕುಲಪತಿ ಪೋಡಿಲೆ ಅಪ್ಪಾರಾವ್ ಅವರಿಂದಲೇ ಸರಬರಾಜಾಗಿದೆ ಎನ್ನಲಾಗಿದೆ.
ಮೂವರು ಪ್ರೊಫೆಸರ್ ಗಳು ಸೇರಿದಂತೆ ಮೂವತ್ತಾರು ವಿದ್ಯಾರ್ಥಿಗಳನ್ನು ನಿನ್ನೆ ಸಂಜೆ ಐದು ಗಂಟೆಗೆ ವಶಕ್ಕೆ ಪಡಿಯಲಾಗಿದೆ. ಪೋಲಿಸ್ ವಾಹನದಲ್ಲಿಯೇ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ ಮತ್ತು ಅವರನ್ನು ರಾತ್ರಿಪೂರ್ತಿ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ. ನಮಗಿರುವ ಅವರುಗಳನ್ನು ಮಿಯಾಪುರ್ ಮತ್ತು ನರಸಿಂಗ್ ಪೋಲಿಸ್ ಠಾಣೆಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಇದ್ದರೂ ಮಿಯಾಪುರ್ ಮತ್ತು ನರಸಿಂಗ್ ಠಾಣೆಗಳಿಗೆ ತೆರಳಿದ ಜನರಿಗೆ ಇಲ್ಲಿ ಯಾರನ್ನೂ ಇರಿಸಲಾಗಿಲ್ಲ ಎಂದು ಸುಳ್ಳು ಹೇಳಲಾಗುತ್ತಿದೆ.
ತುರ್ತು ಪರಿಸ್ಥಿತಿ ಮಾದರಿಯನ್ನು ವಿ.ವಿ. ಆವರಣದಲ್ಲಿ ಹೇರಲಾಗಿದೆ.
ಪೋಡಿಲೆ ಅಪ್ಪಾರಾವ್ ಕ್ಯಾಂಪಸ್ ಅನ್ನು ಪ್ರವೇಶಿಸಿದ ನಂತರ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಲ್ಲಿದ್ದ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ನಂತರ ಭೋಜನಾಲಯ, ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ನಿಲ್ಲಿಸಲಾಗಿದೆ. ಅಪ್ಪಾರಾವ್ ನಂತಹ ಕುಲಪತಿಗಳು ತಮ್ಮ ಕಚೇರಿಯಲ್ಲಿ ಉಳಿಯಲು ವಿದ್ಯಾರ್ಥಿಗಳ ಆಹಾರ ನೀರು ಮತ್ತು ಶೌಚಾಲಯ ವ್ಯವಸ್ಥೆಯನ್ನು ನಿಷೇಧಿಸವುದು ಪೂರ್ವನಿರ್ಧರಿತವಾಗಿದೆ.
ಅವರು ಬಂದ ದಿನ ನಮ್ಮ ಮೇಲೆ ನಡೆದ ಲಾಠಿ ಚಾರ್ಜ್, ದೈಹಿಕ ಮತ್ತು ಲೈಂಗಿಕ ಹಲ್ಲೆಗಳ ಹೊರತಾಗಿ ನಾವು ಆಹಾರ ಮತ್ತು ನೀರಿನ ಹೊರತಾಗಿ ಮಲಗಿದ್ದೇವೆ. ಇಂದು ನಾವು ಸಾಮೂಹಿಕವಾಗಿ ನಮಗೆ ಬೇಕಾದ ಆಹಾರವನ್ನು ತಯಾರಿಸಿಕೊಳ್ಳುತ್ತಿದ್ದೇವೆ. ಅಪ್ಪರಾವ್ ಅವರು ಸೋಮವಾರದವರೆಗೆ ಎಲ್ಲ ತರಗತಿಗಳು ನಡೆಯದಂತೆ ಅಮಾನತ್ತುಗೊಳಿಸಿದ್ದಾರೆ.
ಅಪ್ಪಾರಾವ್ ಏಕೆ 22ರಂದೇ ಕ್ಯಾಂಪಸ್ ಗೆ ಮರಳಿದರು?
ವಿಪಿನ್ ಶ್ರೀವಾಸ್ತವ್ ರಜೆಯ ಮೇಲೆ ತೆರಳಿದ ನಂತರ ಪ್ರೊ ಪ್ರಿಯಾಸ್ವಾಮಿ ಅವರು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ವಿಶ್ವವಿದ್ಯಾನಿಲಯದ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿದ್ದವು. 23ರಂದು ನಡೆಯಲಿದ್ದ ಅಕಾಡಮಿಕ್ ಕೌನ್ಸಿಲ್ ಸಭೆಯಲ್ಲಿ ಹಂಗಾಮಿ ಕುಲಪತಿಗಳಾಗಿರುವ ಪ್ರೊ. ಪ್ರಿಯಾಸ್ವಾಮಿ ಅವರು ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಮೂರು ಮುಖ್ಯವಾದ/ಅಗತ್ಯವಾದ ಪ್ರಸ್ತಾವನೆಗಳನ್ನು ಸಲ್ಲಿಸಲಿದ್ದರು. ಅವುಗಳು
1. ತಾರತಮ್ಯ ತಡೆ ಘಟಕವನ್ನು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸುವುದು.
2.ವಿಶ್ವವಿದ್ಯಾನಿಲಯದ ಸಮಿತಿಗಳು ಎಸ್.ಸಿ./ಎಸ್.ಟಿ. ಮತ್ತು ಮಹಿಳಾ ಪದಾಧಿಕಾರಿಗಳನ್ನು ಹೊಂದುವುದು ಕಡ್ಡಾಯಗೊಳಿಸುವುದು.
3. ನಾನ್ ನೆಟ್ ಶಿಷ್ಯ ವೇತನವನ್ನು ಮಾಸಿಕ 8 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾವಗಳನ್ನು ಒಳಗೊಂಡಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದರು.
ಆದರೆ ಅಪ್ಪಾರಾವ್ ಅವರು ಬೋಧಕ ಮತ್ತು ಹಂಗಾಮಿ ಕುಲಪತಿಗಳ ಗಮನಕ್ಕೆ ತರದೇ ಅಧಿಕಾರ ವಹಿಸಿಕೊಂಡು ಅಕಾಡಮಿಕ್ ಕೌನ್ಸಿಲ್ ಸಭೆಯನ್ನು ಹೋಳಿ ಹಬ್ಬದ ಮುನ್ನಾದಿನಕ್ಕೆ ಮುಂದೂಡಿದ್ದಾರೆ. ತಮ್ಮ ಹಿಂದಿರುಗುವಿಕೆಯಿಂದ ಕ್ಯಾಂಪಸ್ ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂಬ ಅರಿವಿದ್ದೇ ಈ ತೀರ್ಮಾನವನ್ನು ಅವರು ಯಾವುದೇ ಬೋಧಕ ಮತ್ತು ವಿದ್ಯಾರ್ಥಿ ಸಮಿತಿಗಳ ಗಮನಕ್ಕೆ ತರದೇ ಕೈಗೊಂಡಿರುತ್ತಾರೆ.
ಇದಕ್ಕೆ ಪೂರಕವೆಂಬಂತೆ ಕುಲಪತಿಗಳು ಬೋಧಕೇತರ ಸಿಬ್ಬಂದಿ ಮತ್ತು ಬೋಧಕ ಸಿಬ್ಬಂದಿಗಳಿಗೆ ವಿದ್ಯಾರ್ಥಿ ಗಳನ್ನು ಸಂಘಟಿಸಿ ತಮಗೆ ತಮ್ಮ ನಿವಾಸದಲ್ಲಿಯೇ ಶುಭಕೋರಿ ಎಂದು ಸೂಚಿಸಿದ್ದಾರೆ. ಇದರ ಹಿಂದೆ ಕುಲಪತಿಗಳಿಗೆ ಇಲ್ಲಿ ನಡೆಯಬಹುದಾದ ಘಟನಗಳ ಬಗ್ಗೆ ಅರಿವು ಇತ್ತು ಮತ್ತು ಇದೊಂದು ಯೋಜಿತ ಕೃತ್ಯ ಎಂಬುದು ಸಾಬೀತಾಗುತ್ತದೆ. ಮೇಲಾಗಿ ನಮಗೆ ಶುಭ ಕೋರುವಂತೆ ವಿದ್ಯಾರ್ಥಿಗಳು ಮತ್ತು ಬೋಧಕರ ಮೇಲೆ ಒತ್ತಡ ಹೇರಿದ್ದು ಕುಲಪತಿಗಳ ಅಧಿಕಾರ ದುರುಪಯೋಗಕ್ಕೆ ಉದಾಹರಣೆಯಾಗಿದೆ.
ಒಂದು ಪತ್ರ ಈ ಕೃತ್ಯದ ಹಿಂದೆ ಅಪ್ಪಾರಾವ್ ಕೆಲವು ಬೋಧಕ ಸಿಬ್ಬಂದಿ , ಬೋಧಕೇತರ ಸಿಬ್ಬಂದಿ ಮತ್ತು ಎ.ಬಿ.ವಿ.ಪಿ. ವಿದ್ಯಾರ್ಥಿ ಸಂಘಟನೆಯ ನಡುವಿನ ಸಂಯೋಜನೆಯನ್ನು ಬಯಲು ಮಾಡಿದೆ. ಈ ಪತ್ರಗಳು ಅಪ್ಪಾರಾವ್ ಅವರು ಕ್ಯಾಂಪಸ್ ಗೆ ಬಂದು ತಮ್ಮ ನಿವಾಸದಿಂದಲೇ ಕರ್ತವ್ಯ ನಿರ್ವಹಿಸುವಂತೆ ವಾತಾವರಣ ಸೃಷ್ಟಿಸಲು ಕೆಲವರಿಗೆ ಜವಾಬ್ದಾರಿಗಳನ್ನು ವಹಿಸಿದ್ದಕ್ಕೆ ಸಾಕ್ಷಿಗಳಾಗಿವೆ. ಆದರೆ ವಾಸ್ತವದಲ್ಲಿ ಅವರು ಯಾವುದೇ ಸೂಕ್ತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಒಂದು ಗುಂಪಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಿಯಮ ಬಾಹಿರವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಅಂಶ ಅವರ ನಡುವಳಿಕೆಯ ಬಗ್ಗೆ ಸಂಶಯವನ್ನು ಹುಟ್ಟುಹಾಕಿದೆ.
ನಾವು ಏಕೆ ಪೋಡಿಲೆ ಅಪ್ಪಾರಾವ್ ವಿರುದ್ಧ ಪ್ರತಿಭಟಿಸುತ್ತಿದ್ದೇವೆ?
ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆಯನ್ನು ಖಂಡಿಸಿ ದೇಶದಾದ್ಯಂತ ಅಪ್ಪಾರಾವ್ ಅವರ ರಾಜೀನಾಮೆ ಮತ್ತು ಅವರನ್ನು ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಅಡಿ ಅವರನ್ನು ಬಂಧಿಸಬೇಕೆಂಬ ಹೋರಾಟಕ್ಕೆ ಮಣಿದು ಅವರನ್ನು ದೀರ್ಘ ರಜೆಯ ಮೇಲೆ ಕಳುಹಿಸಲಾಗಿತ್ತು. ಇವರ ಮೇಲೆ ಎಫ್.ಐ.ಆರ್. ದಾಖಲಾಗಿದ್ದು ಇವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅಪ್ಪಾರಾವ್ ದೀರ್ಘರಜೆಯ ಮೇಲೆ ತೆರಳಿದ ನಂತರ ವಿಶ್ವವಿದ್ಯಾನಿಲಯ ಸಮುದಾಯವು ಕಾರ್ಯನಿರ್ವಹಿಸುತ್ತಲೇ ರೋಹಿತ್ ವೇಮುಲಾ ಸಾವಿಗೆ ನ್ಯಾಯವನ್ನು ಕೇಳುವ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿತ್ತು. ಜೊತೆಗೆ ನ್ಯಾಯಿಕ ಸಮಿತಿಯೊಂದು ರೋಹಿತ್ ವೇಮುಲಾ ಸಾಂಸ್ಥಿಕ ಹತ್ಯೆಯನ್ನು ಕುರಿತು ತನಿಖೆ ನಡೆಸುತ್ತಿದೆ.
ಆದರೆ ಕಳೆದ ಎರಡು ತಿಂಗಳಿಂದ ರೋಹಿತ್ ವೇಮುಲಾ ಪ್ರಕರಣದಲ್ಲಿ ಮಾನವ ಸಂಪನ್ಮೂಲ ಇಲಾಖೆಯ ಸಚಿವರು, ಇತರೆ ಬಿ.ಜೆ.ಪಿ. ಕೆಲವು ಸಚಿವರು, ಪೋಲಿಸ್ ಮತ್ತು ರಾಜ್ಯದ ಆಡಳಿತಾಂಗ ವಾಸ್ತವಗಳನ್ನು ತಿರುಚಲು ಸಾಕ್ಷಿಗಳನ್ನು ಮುಚ್ಚಿಡಲು, ರೋಹಿತ್ ಜಾತಿಯ ವಿಷಯದಲ್ಲಿ ದ್ವಂದವನ್ನು ಸೃಷ್ಟಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
ಪಿ. ಅಪ್ಪಾರಾವ್ ರೋಹಿತ್ ಸಾವಿನ ಪ್ರಮುಖ ಆರೋಪಿಯಾಗಿದ್ದು ಒಂದು ನಿರ್ಧಿಷ್ಟ ಹಿತಾಸಕ್ತಿಯನ್ನು ಪೋಷಿಸುತ್ತಿದ್ದಾರೆ. ಇವರು ಈಗಾಗಲೇ ಪೋಲಿಸ್ ಕಮೀಷನರ್ ಸಿ. ವಿ. ಆನಂದ್ ರವರ ಪ್ರಮಾಣಪತ್ರ ಮತ್ತು ಇನ್ನಿತರೆ ದಾಖಲೆಗಳನ್ನು ನಾಶಪಡಿಸಿದ ಪ್ರಕರಣದಲ್ಲಿ ದೋಷಿಯಾಗಿದ್ದಾರೆ. ಈ ರೀತಿಯ ವ್ಯಕ್ತಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಹೇಗೆ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯ? ಇವರು ಮರಳಿ ಬಂದಿರುವುದು ನಡೆಯುತ್ತಿರುವ ನ್ಯಾಯಿಕ ತನಿಖೆಯ ಮೇಲೆ ಪ್ರಭಾವ ಬೀರಲು , ವಿದ್ಯಾರ್ಥಿಗಳನ್ನು , ಬೋಧಕರನ್ನು ಮತ್ತು ಸಾಕ್ಷಿಗಳನ್ನು ಗುರಿಯಾಗಿಸಿ ಬೆದರಿಕೆ ಒಡ್ಡಲು.
ಪ್ರತಿದಿನ ನಡೆಯುತ್ತಿರುವ ಅಧಿಕಾರದ ದಬ್ಬಾಳಿಕೆ ರಾಜ್ಯ ಮತ್ತು ರಾಜಕೀಯ ಪಕ್ಷದ ನೈಜ ಮುಖವಾಡವನ್ನು ಬಯಲು ಮಾಡುತ್ತಿದೆ. ಅವರು ನಮ್ಮ ಹೋರಾಟ ಮತ್ತು ಧ್ವನಿಯನ್ನು ಅಡಗಿಸಲು ಲಾಠಿಯನ್ನು ಬಳಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಾದ ನಾವು ಭಯವನ್ನು ಅನುಭವಿಸಿದರೂ ಮುಂದಿನ ಹಲವು ಹೋರಾಟಗಳನ್ನು ಎದುರಿಸುವ ನಮ್ಮ ಐಕ್ಯತೆಯನ್ನು ಉಳಿಸಿಕೊಂಡಿದ್ದೇವೆ.
ನಾವು ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ನಾವು ರೋಹಿತ್ ಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿನ ನಮ್ಮ ಹೋರಾಟ ,ಪ್ರಜಾಪ್ರಭುತ್ವ ಮತ್ತು ಸಮಾನತೆ ಚಿರಾಯುವಾಗಲಿ.
0 ಪ್ರತಿಕ್ರಿಯೆಗಳು