ಒಂದು ಕ್ಷಣ ಹೆದರಿ, ಮೈಯಿಡೀ ಬೆವರಿ ಗಟ್ಟಿಯಾಗಿ ಕಣ್ಣು ಮುಚ್ಚಿದೆ. ಹೊಟ್ಟೆಯೊಳಗೆ ಗುಳು ಗುಳು ನೂರು ಹುಳು ಓಡಾಡಿತು. ನಿಧಾನವಾಗಿ ಕಣ್ಣು ಬಿಟ್ಟಾಗ ಮೇಲೆ ಆಗಸವೂ ಇಲ್ಲ, ಕೆಳಗೆ ನೆಲವೂ ಇಲ್ಲ. ಆ ಅನಂತ ಲೋಕದಲ್ಲಿ ನಾನು ತೇಲಾಡುತ್ತಾ ಇದ್ದೆ. ಭರ್ರನೆ ಮುಖಕ್ಕೆ ರಾಚುವ ಗಾಳಿ, ಆ ಗಾಳಿಯ ಆಟಕ್ಕೆ ತೂಗುಯ್ಯಾಲೆಯಾಡುತ್ತಿರುವ ನಾನು. ಮತ್ತೆ ಮೆಲ್ಲನೆ ಕಣ್ಣು ಬಿಟ್ಟಾಗ ಕೆಳಗೆ ಅರಬ್ಬೀ ಸಮುದ್ರ ಬಾಯ್ತೆರೆದು ಕುಳಿತಿತ್ತು. ಎಲ್ಲಿ ನೋಡಿದರೂ ನೀರು. ಈ ಜಗತ್ತಿನಲ್ಲಿ ನೆಲವೂ ಇದೆ ಎನ್ನುವುದನ್ನು ಮರೆಸಿಬಿಡುವಂತೆ ಎಲ್ಲೆಡೆ ನೀರು, ನೀರು, ನೀರು. ಆ ಕ್ಷಣಕ್ಕೆ ನನ್ನ ಉಸಿರೇ ನಿಂತು ಹೋಯಿತು. ‘ಹೆದರ್ಕೋಬೇಡಿ’ ಅಂದಿದ್ದು ನವೀನ್ ರೋಡ್ರಿಗಸ್. ಒಂದು ಬೈಕಿನ ಎಂಜಿನ್, ಪೆಟ್ರೋಲ್ ತುಂಬಿಕೊಂಡಿದ್ದ ಒಂದು ಟ್ಯಾಂಕ್, ಎರಡು ರೆಕ್ಕೆ, ಊರಲು ಒಂದಿಷ್ಟು ಜಾಗ ಮಾಡಿಕೊಂಡಿದ್ದ ನವೀನ್ ಆಕಾಶದಲ್ಲಿ ನನ್ನನ್ನು ತೇಲಿಸುತ್ತಾ ಮಂಗಳೂರಿನ ಪರಿಚಯ ಮಾಡಿಕೊಡುತ್ತಿದ್ದರು.
ಮಂಗಳೂರು ಏರ್ ಪೋರ್ಟ್ ನ ರನ್ ವೇಯಲ್ಲಿ ನವೀನ್ ರೋಡ್ರಿಗಸ್ ತಂದಿಳಿಸಿದ ಪವರ್ ಗ್ಲೈಡರ್ ನಲ್ಲಿ ನಾನು ಕುಳಿತದ್ದೇ ತಡ ನಮ್ಮ ಗಾಳಿ ಹಕ್ಕಿ ಒಂದಷ್ಟು ದೂರ ಓಡಿತು. ಇನ್ನರ್ಧ ಕ್ಷಣಕ್ಕೆ ಅದಕ್ಕೆ ಓಡುವ ಪ್ರಮೇಯವೇ ಇರಲಿಲ್ಲ. ನೆಲ ಎನ್ನುವುದು ಮುಗಿದು ಹೋಗಿತ್ತು. ಈಗ ನಾವೂ ಸಹಾ ಪಕ್ಕದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದ ಹಕ್ಕಿಗಳಂತೆಯೇ ಇದ್ದೆವು. ದಟ್ಟ ಪಶ್ಚಿಮ ಘಟ್ಟ, ಅದನ್ನು ದಾಟಿದ ತಕ್ಷಣ ಕಾಣಿಸುವ ವಿಶಾಲ ಸಮುದ್ರ, ಒಂದಿಷ್ಟು ಹೊರಳಿದರೆ ಮನುಷ್ಯರೋ ಇಲ್ಲಾ ಇರುವೆಗಳೋ ಎಂದು ಅನ್ನಿಸಿಬಿಡುವ ಮಂಗಳೂರು ನಗರಿ. ಮತ್ತೆ ಬಂದು ಮುಟ್ಟಿದ್ದು ಅದೇ ಮಂಗಳೂರು ವಿಮಾನ ನಿಲ್ದಾಣಕ್ಕೆ. ಹಾರಿದ ಅಷ್ಟೂ ಹೊತ್ತು ನನ್ನೊಳಗೆ ಸಾವು ಹೆಡೆಯಾಡಿಸುತ್ತಲೇ ಇತ್ತು
ಪೂರ್ಣ ಓದಿಗೆ: ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು