ಸೌಮ್ಯಶ್ರೀ ಎ.ಎಸ್. / ಮೈಸೂರು
ಗಂಗೆಗೆ ಕೊಟ್ಟ ಮಾತಿಗಾಗಿ
ಶಂತನು ಮಹಾರಾಜ ಅದೆಷ್ಟು ಸಹಿಸಿದರೂ
ಅವನೆದೆಯಲ್ಲೂ ಕೋಪ ಉಕ್ಕಿ
ಮಾತು ಮುರಿದ ತಪ್ಪಿಗೆ
ಒಂದಿಷ್ಟು ಕನಿಕರಿಸದೆ ಗಂಗೆ
ತೊರೆದು ಹೋದ ಮೇಲೆ ಪರಿತಪಿಸಿದನಂತೆ!
ಅಂದು ಸುರಿದ ಕೋಪಕೆ
ಅದೆಷ್ಟು ಸಾಂತ್ವನದ ಮಳೆ ಸುರಿಸಿದರೂ
ಹೊತ್ತಿದ ಬೆಂಕಿ ತಣ್ಣಗಾಗಲೇ ಇಲ್ಲ
ತಲ್ಲಣಗಳು ದೂರವಾಗಲೇ ಇಲ್ಲ
ಬೇಸರದ ಗಾಳಿ ಬೀಸಿ
ಕೆಂಡ ಕೆಂಪೇರಿ ಕಿಡಿಕಾರುತ್ತಲೇ ಇತ್ತು!

ಸದಾ ಬೆಳದಿಂಗಳು ಸೂಸುವ
ಚಂದ್ರನು ಉಕ್ಕುವ ಕೋಪ
ತಣಿಸಲಾಗದೆ ಒಂದಷ್ಟು ಕಾಲ
ಕತ್ತಲಲ್ಲಿ ಕರಗಿ ಹೋಗುತ್ತಾನೆ!
ಸೌಮ್ಯವಾಗಿರುತ್ತಿದ್ದ ನನ್ನ ಮನದ
ಕಡಲಲ್ಲೂ ಅದೇಕೋ ಅಂದು
ನಿನ್ನ ಮಾತಿನ ಗಾಳಿ ಬೀಸಿ
ನನ್ನಲ್ಲೂ ಕೋಪದ ಅಲೆ ಉಕ್ಕಿ
ಮುಗಿಲು ಮುಟ್ಟುವ ತವಕದಲ್ಲಿತ್ತು!
ಮನದಲಿ ಮಿಂಚಿ ಮರೆಯಾದ
ಕೋಪಕ್ಕೆ ಮುಚ್ಚಿ ಹೋದ
ಮನದ ಬಾಗಿಲು!
ಮುಗಿಲು ಗುಡುಗಿನ ಅನುರಣನ
ಕರ್ಣಗಳ ಸುತ್ತಿ ಸುಳಿದು
ಒಮ್ಮೆ ಬಿರಿದ ಬೆಸುಗೆ
ಕೂಡಲೇ ಇಲ್ಲ!
ಮನಸು ಬೆಸೆಯಲೇ ಇಲ್ಲ!






0 Comments