ಮಹಾಮೌನ!
ನಳಿನ ಡಿ
ಕ್ಷಣದಗಣನೆ ಹೇಗೆ ಕಳೆದು, ನೀವು ದೂರವಾದಿರಿ ಹೀಗೆ?
ತಾಯಿಯಂತೆ ಕರುಳ ತಬ್ಬಿ,
ಮೊಲ್ಲೆಬಳ್ಳಿಯಂತೆ ಹಬ್ಬಿ,
ಎದೆಯಲಿ ಕಾವ್ಯಕುಸುಮವ ನೆಟ್ಟು ನಡೆಸಿದಿರಿ,
‘ಬಿರುದು’ ‘ಬರಿದು’ ಎಂದು ನೀವು ನಡೆದೇ ಬಂದಿಲ್ಲಿ ಸೇರಿದಿರಿ,
ನಾನು ನೀವು ಅದೆಂತು ಸೇರಿ ಕಟ್ಟಿದೆವು ಕಾವ್ಯ ಹೊಸತು,
ಬೆಟ್ಟದಷ್ಟು ಅನುಭವ ಹೊತ್ತ ಅನುಭವಿಯ ಹೊರತು,
ಎಲ್ಲೋ ಹೊಟ್ಟೆಗಾಗಿ ಅಲೆವ ಗುಬ್ಬಿಯು,
ಕಷ್ಟ-ಇಷ್ಟವಷ್ಟೇ ಬರೆದು ನಿಟ್ಟುಸಿರಾದುದು,
‘ಎಲ್ಲೆ ಎಲ್ಲಿ’ ಬದುಕುವೆಡೆಯಲ್ಲಿ,
ಯಾರು ಇಹರು, ಸದಾ ಒಂಟಿಯಾಗೇ ನಡೆದ ಸಲಗದ ಅನುಭಾವವೂ,
ಬಹುತೇಕ ಮರೆತಿರೆಂದೇ ನಾ ತಿಳಿಯೇ,
ಆಗಾಗ್ಗೆ ನೆನಪಾಗದೆ ಮಾತಾಗಿ, ನಗುವಾಗಿ, ಸೊಗಸಾದ ಪದ್ಯಗಳ ಗ್ರಹಣವಾಗಿ, ಬರುವ ಭೇಟಿಗೆ ಆಮಂತ್ರಣವಾಗಿ, ಶುಭವನ್ನೇ ಕೋರುತ್ತಾ
ಮರೆಯಾದಿರೆಲ್ಲಿ ಹೀಗೆ?
ಬದುಕ ಸಾರವರಿತು,
ತನ್ನಷ್ಟಕ್ಕೆ ತಾನಾಗಿ ಬಲಿತು,
ನೋವಿಗಿಷ್ಟು ಕಾವ್ಯದ ಮುಲಾಮು ಬಳಿದು,
ಹೋದಿರೆಲ್ಲಿ ಹೇಳದೇ?
ಹೇಳಬಯಸಿದ ಅದೆಷ್ಟು ಪದ್ಯಗಳಿದ್ದವು,
ಪದಗಳಲಿ ಉಸುರದ ದುಃಖಗಳ ಎಳೆಗಳಿದ್ದವು,
ತಾಯಿ ಮಗುವ ಕಂಡಾಗ ಎಲ್ಲದರ ಬಟಾವಡೆಯಾಗುವುದಿತ್ತು,
ದೇವನಿಗೆ ಇದೆಲ್ಲಾ ಏಕೆನಿಸಿತ್ತೋ ಏನೋ?
ಕಾವ್ಯದ ಹಕ್ಕಿ ಜಗಕೆ ವಿಮುಖವಾಗಿ ಹಾರಿತು….
ಜೋಗದ ಜೋಗುಳ ಹಾಡಿ,
ಕನ್ನಡಮ್ಮನ ನಿತ್ಯೋತ್ಸವ ಅನವರತ ಗೈದು ಪುಣ್ಯದಿ,
ಸರ್ವಧರ್ಮವ ಆರಾಧಿಸಿ,
ಸಕಲರಿಗೂ ಲೇಸನ್ನೇ ಬಯಸಿ,
ಹಿರಿ ಕಿರಿಯರೆನದೇ ಮಾತೃಪ್ರೀತಿ ಧಾರೆಯೆರೆದು,
ಶುದ್ದ ಮನಸಿನ ತಾಯಿಗೂ ವಯೋಮಾನ,
ಕಾಲನೆದುರಾದಾಗ ಮಹಾಮೌನ!
ಎನ್ನೆದೆಯ ಕಾವ್ಯ ದೈವವು ಶಾಂತಿಯಲಿ ಲೀನವಾಗಲಿ
ಚಿನ್ನಾಗಿದೆ