ಸತೀಶ ಕುಲಕರ್ಣಿ
ನಾಡಿನ ಸಹೃದಯಿ ಹಿರಿಯ ಲೇಖಕ ಡಾ. ವಸಂತ ಕುಷ್ಟಗಿ ಮರೆಯಾಗಿದ್ದಾರೆ. ಎಂಟೂವರೆ ದಶಕಗಳ ಜೀವಯಾನಕ್ಕೆ ಕೊನೆ ಹೇಳಿದ್ದಾರೆ.
ತುಂಬ ಹೃದಯವಂತಿಕೆಯ ಕುಷ್ಟಗಿ ಸರ್ ಅವರ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಓದದವನಾದರೂ, ಅದೇನೊ ಒಂದು ತಣ್ಣನೆ ಪ್ರೀತಿ ನನ್ನನ್ನು ಕಾಡಿತು. ಕೇವಲ ಎರಡು ಮೂರು ಭೇಟಿಗಳು, ಒಂದೆರಡು ಮೊಬೈಲ್ ಕರೆಗಳು ನಮ್ಮ ನಡುವಿನ ಸಂಬಂಧವಾಗಿತ್ತು. ಹಿರಿತನದ ಪ್ರೀತಿಯ ಮಾತುಗಳು, ಅಗಾಧವಾದ ನೆನಪು ಹಾಗೂ ಸಾಹಿತ್ಯ – ಸಂಸ್ಕೃತಿ ಕುರಿತಾದ ಅವರ ಗುಣಗಳು ನನ್ನನ್ನು ಸೆಳೆದಿದ್ದವು.
ಹಾವೇರಿಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾದ ನಂತರ ಅದರ ಅಧಿಕೃತ ಪೂರ್ಣ ಪ್ರಮಾಣದ ಆಡಳಿತಾಧಿಕಾರಿಯಾಗಿ ಡಾ. ಟಿ.ಎಂ ಭಾಸ್ಕರ ಅಧಿಕಾರವನ್ನು ಸ್ವೀಕರಿಸಿದರು. ೨೦೦೮ ಸಪ್ಟಂಬರ ೫ ರಂದು ಹಾಜರಾದರು. ಅವರ ಪರಮ ಗುರು ಡಾ. ವಸಂತ ಕುಷ್ಟಗಿ ಮತ್ತು ನನ್ನ ಸಮ್ಮುಖದಲ್ಲಿ ಡ್ಯೂಟಿ ರಿಪೋರ್ಟ ಮಾಡಿದ್ದರು. ನಾನು ಗುಲಾಬಿ ಹೂ ಗುಚ್ಚ ನೀಡಿ ಸ್ವಾಗತಿಸಿದ್ದೆ. ಇದೆಲ್ಲ ಇಲ್ಲಿಯ ಜಿ.ಎಚ್. ಕಾಲೇಜಿನಲ್ಲಿ ನಡೆದದ್ದು. ಆರಂಭದಲ್ಲಿ ಕನ್ನಡ ವಿಭಾಗ ಮಾತ್ರವಿತ್ತು. ಕೆಲವು ದಿನಗಳ ಕಾಲ ನಾನೂ ೮–೧೦ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆಯಲ್ಲಿ ಆಧುನಿಕ ಸಾಹಿತ್ಯದ ಪಾಠ ತೆಗೆದುಕೊಳ್ಳುತ್ತಿದ್ದೆ.
ಅದೇ ದಿನ ನನ್ನ ಮನೆಗೆ ಡಾ. ಕುಷ್ಟಗಿ ಮತ್ತು ಡಾ. ಭಾಸ್ಕರ ಅವರನ್ನು ಕರೆದಿದ್ದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತು ಸಂಶೋಧನೆ ಮಾಡುತ್ತಿದ್ದ ಡಾ. ಸವಿತಾ ಶಿರಗೋಜಿ, ಡಾ. ನಿಂಗಪ್ಪ ಮುದೇನೂರ ಕೂಡ ಇದ್ದರು. ನನ್ನ ಮಗಳಿಗೆ ಅದೇನೊ ಮನಸ್ಸಿನಲ್ಲಿ ಬಂತೊ ಕಾಣೆ ಅಜ್ಜಾನ (ಕುಷ್ಟಗಿ ಸರ್) ಜೊತಿ ನಂದೂ ಒಂದು ಪೋಟೊ ತಗಿ ಅಂದಿದ್ದಳು.
ಮತ್ತೊಮ್ಮೆ ಪಿ.ಜಿ. ಸೆಂಟರ್ ಸ್ವತಂತ್ರ ಕಟ್ಟಡ ಹೊಂದಿ ಸಾವಿರಾರು ಗಿಡಗಳ ಸುಂದರ ತಾಣವಾಗಿಸಿದ ಡಾ. ಟಿ.ಎಂ.ಬಾಸ್ಕರ್, ತಮ್ಮ ಗುರುಗಳಾದ ಕುಷ್ಟಗಿ ಸರ್ ಅವರನ್ನು ಸೆಮಿನಾರೊಂದಕ್ಕೆ ಕರೆದಿದ್ದರು. ‘ಖಂಡ ಕಾವ್ಯಗಳಲ್ಲಿ ನಿಸರ್ಗ’ ಎಂಬ ವಿಷಯವದು. ಬೇರೆ ಬೇರೆ ಲೇಖಕರು ಬಂದಿದ್ದರು ಡಾ. ಕುಷ್ಟಗಿ ಅವರೆ ಉದ್ಘಾಟಿಸಿದ್ದರು. ನಾನು ಗೋಕಾಕರ ಕಾವ್ಯದಲ್ಲಿ ನಿಸರ್ಗ ಎಂಬು ವಿಷಯ ಕುರಿತು ಮಾತನಾಡಿದ್ದೆ.
ಹೋದ ವರ್ಷ (೨೦೨೦) ಕೋವಿಡ್ ಆರಂಭವಾದಾಗ ನಾಡಿನ ೫೦೦ ಕವಿಗಳ ಒಂದು ಕಾವ್ಯ ಸಂಪುಟ ತರುವುದಾಗಿ ಮಾತಾಡಿದ್ದರು.
ಈ ಭಾಗದ ಹತ್ತಾರು ಕವಿಗಳ ಕವಿತೆಗಳ ಅವರಿಗೆ ಕಳಿಸಿದ್ದೆ. ಗುಲುಬರ್ಗಾ ಸಿದ್ಧೇಶ್ವರ ಪ್ರಕಾಶನ ಅದನ್ನು ಹೊರ ತರಲು ನಿರ್ಧರಿಸಿತ್ತು. ಆ ಸಂದರ್ಭದಲ್ಲಿ ಎರಡು ಮೂರು ಸಲ ದೂರವಾಣಿಯಲ್ಲಿ ವಸಂತ ಕುಷ್ಟಗಿ ಮಾತನಾಡಿದ್ದರು.
ಪ್ರೀತಿ, ವಿಶ್ವಾಸ, ಹಿರಿತನದಲ್ಲಿ ನನ್ನನ್ನು ಕಂಡ ಕುಷ್ಟಗಿ ಅವರ ಬಗ್ಗೆ ನಾಲ್ಕು ಮಾತುಗಳನ್ನು ಬರೆಯದಿದ್ದರೆ ಕೃತಘ್ನ ಆಗಬಹುದೇನೋ…
0 ಪ್ರತಿಕ್ರಿಯೆಗಳು