ಹೀಗೊಂದು ಕವಿತೆಯಂತಹಾ ಕಥೆ

ನಿಷ್ಕಲ್ಮಶ

ಸಹನಾ ಪುಂಡಿಕಾಯಿ

1

ಅಲ್ಲೊಂದು ಮರ. ಮರದ ಅನತಿ ದೂರದಲ್ಲೊಂದು ಮನೆ. ಮನೆಯ ಹೊರಗೆ ಬಿರು ಬಿಸಿಲು. ಬಿಸಿಲಲ್ಲಿ ನಿತ್ಯವೂ ಮನೆಯಾತನ ಕೆಲಸಗಳು ಸಾಗುತ್ತಿತ್ತು. ನೆತ್ತಿಯ ಮೇಲೆ ಸುಡುವ ಸೂರ್ಯನ ತಾಪ,ತನ್ನ ಮುಂದೆ ನಿಗಿ ನಿಗಿ ಕೆಂಡ. ಹಾಗಂತ ಸುಮ್ಮನೆ ಕೂರಲಾದೀತೇ? ಹೊಟ್ಟೆಪಾಡು. ಮಡದಿ, ಮಕ್ಕಳನ್ನೆಲ್ಲಾ ಸಾಕಬೇಕು, ಬದುಕ ಸಾಗಿಸಬೇಕು.ನಿತ್ಯದ ಕಾಯಕ.

ಆ ‘ಮರ’ ಹಾಗೇ ನಿಧಾನವಾಗಿ ಬೆಳೆಯುತ್ತಾ, ತನ್ನ ರೆಂಬೆಕೊಂಬೆಗಳನ್ನೆಲ್ಲಾ ಹಸಿರು ಹೊದಿಕೆಯಿಂದ ಮುಚ್ಚಿಕೊಳ್ಳುತ್ತಾ, ವಿಶಾಲವಾಗಿ ಮನೆಯಾತನ ಶಿರವೂ ಸುಡದಂತೆ, ಮನೆಯೂ ತಂಪಿರುವಂತೆ ಮೈ ಚಾಚಿಕೊಂಡಿತು.ಆ ಮರಕ್ಕಾದರೋ ಈಗ ಆತನಿಗೆ ನೆರಳು ನೀಡಿದ ಸಂತೋಷ, ಆತನಿಗೂ ತುಂಬಾ ಖುಶಿ.ಬಂದವರ, ಹೋದವರ ಬಳಿಯಲ್ಲೆಲ್ಲಾ ಮರದ ಕುರಿತಾದ ಹೊಗಳಿಕೆಯ ಮಾತು,” ಈ ಮರದ ನೆರಳಿನಿಂದಾಗಿ ಮನೆಯೊಳಗೂ ತಂಪು, ನನಗೂ ಕೆಲಸ ಮಾಡಲು ಹಿತವಾಗಿದೆ, ಆಯಾಸವಾಗುವುದಿಲ್ಲ”.

ಆರಂಭದಲ್ಲಿ ಹಿತವೆನಿಸಿದ ಮರದ ನೆರಳು, ಇತ್ತೀಚೆಗೆ ಆತನಿಗೇಕೋ ಅಹಿತವೆನಿಸಲಾರಂಭಿಸಿತು. ಮರದ ಉದುರಿದ ಎಲೆಗಳೆಲ್ಲಾ ಕಸವೆಂದೆನಿಸಿ ಕಸಿವಿಸಿಗೊಳ್ಳಲಾರಂಭಿಸಿತು.ಬಿಸಿಲಲ್ಲಿಯೇ ದುಡಿಯುತ್ತಿದ್ದವನಿಗೆ ಸದಾಕಾಲ ನೆರಳಲ್ಲಿಯೇ ಇರುವುದು ಮಸುಕು ಮಸುಕಾದಂತೆ ಅನಿಸುತ್ತಿತ್ತು. ಸರಿ, ಮರದ ಒಂದೊಂದೇ ಗೆಲ್ಲುಗಳನ್ನು ಕಡಿಯಲಾರಂಭಿಸಿದ.ಮರ ಮತ್ತೆ ಚಿಗುರಿತು, ಮತ್ತೆ ಕಡಿದ, ಮತ್ತೆ ಚಿಗುರಿತು. ಮತ್ತೆ ಮತ್ತೆ ಚಿಗುರುವ ಮರಕ್ಕೆ ನೆರಳನ್ನೀಯುವುದಷ್ಟೇ ಗೊತ್ತು. ಕೊನೆಗೊಂದು ದಿನ ಆತ ನಿರ್ಧರಿಸಿಯೇ ಬಿಟ್ಟ. ಕೊಡಲಿಯನ್ನು ಮಸೆದು, ಅದನ್ನು ಝಳಪಿಸುತ್ತಾ ಬಲವಾದ ಹೊಡೆತವನ್ನು ಮರದ ಬುಡಕ್ಕೆ ಹಾಕಿಯೇ ಬಿಟ್ಟ. ಆ ಮರವಾದರೋ ನೋವಿನಿಂದಲೇ ನೆಲಕ್ಕೆ ಉರುಳಿಯೇ ಹೋಯಿತು. ತುಂಡಾಗಿ ಉರುಳಿದ ಮರವು ಒಂದೆರಡು ದಿನಗಳ ನಂತರ ಅದರ ಹಸಿರು ಎಲೆಗಳೆಲ್ಲಾ ಒಣಗಿ,ಉದುರಿ ಅವರಿವರ ಕಾಲಡಿಯಲ್ಲಿ ಸಿಲುಕಿ ಪುಡಿಪುಡಿಯಾಗಿ, ಮಣ್ಣಲ್ಲಿ ಮಣ್ಣಾಗಿ ಹೋದವು.

ಮರೆಯಲಾಗದ ಮರದ ಕಥೆ. ಆ ಮರದೊಳಗೊಂದು ಮನಸಿನ ವ್ಯಥೆ, ಮನಸಿಗೊಂದು ಮನಸು ಬೇಡವಾದ ಕಥೆ.

ಒಣಗಿದೆ ಮರವೀಗ…………

ಕೆಲದಿನಗಳ ನಂತರ……….

ಮನೆಯಾತನ ಮಡದಿ ದಡಬಡನೆ ಬಂದು, ಲಟಲಟನೆ ಒಣಗಿದ ಗೆಲ್ಲುಗಳನ್ನು ಮುರಿದು, ಆ ಗೆಲ್ಲುಗಳನ್ನು ತನ್ನ ಮನೆಯ ಒಲೆಯೊಳಗೆ ಧಗಧಗನೆ ಉರಿಸಿ ಸಿಹಿಸಿಹಿಯಾದ ಪಾಯಸವನ್ನು ಕೊತ ಕೊತನೆ ಕುದಿಸಿ,ತನ್ನ ಮಕ್ಕಳಿಗೆ ತಲೆ ನೇವರಿಸಿ ಉಣಬಡಿಸಿದಳು. ಆತನಾದರೋ, ಮತ್ತದೇ ಬಿರುಬಿಸಿಲಿನಲ್ಲಿ ಕೆಲಸದಲ್ಲಿ ತಲ್ಲೀನ. ಹಣೆಯಲ್ಲಿ ಬೆವರ ಹನಿಗಳ ಮುತ್ತುಗಳದ್ದೇ ಅಲಂಕಾರ.

ಅಲ್ಲೊಂದು………ಅನತಿ ದೂರದಲ್ಲಿ ಅದೇ ಮರದ ಬೀಜವೊಂದು ಮೊಳಕೆಯೊಡೆದು ಮತ್ತೆ ನೆರಳ ನೀಡುವೆ ಎಂಬಂತೆ ನಸು ನಗುತ್ತಿತ್ತು.

ಬೇಡವಾದ ಮನಸಿಗೆ, ಬೇಡವೆಂದ ಮನದೊಳಗೆ ನೆರಳಾಗುವ ಬಯಕೆಯ ಕಥೆ…

‍ಲೇಖಕರು G

September 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Venkatesha Bhat

    “They tried to bury us, but they didn’t know we are seeds…” idu ittheechege naanu nOdida yavudo WhatsApp Profile Status. ee kathe haagide…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: