ನಿರಂತರತೆ ಎನ್ನುವ ಮಾಯಾಜಿಂಕೆ…

ಅವಸಾನವೇಕೆ ಅನಿವಾರ್ಯ?

download

ಎಸ್ ದಿವಾಕರ್

ಚಿರಯೌವನವೆನ್ನುವುದು ನಾವು ಸದಾ ಹಂಬಲಿಸುವ ಮುಗಿಲ ಮಲ್ಲಿಗೆ. ನಿರಿಗೆಯಿಲ್ಲದ ಮುಖ, ಸದೃಢ ದೇಹ, ನಿರಂತರ ಚೈತನ್ಯ, ನಿತ್ಯನೂತನ ವಸ್ತ್ರವಿಲಾಸ, ಆಕರ್ಷಕವಾಗಿರುವ ಮನೆ ಮಠ – ಹೀಗೆ ಅವಸಾನವಿಲ್ಲದ, ವಿನಾಶವನ್ನು ಸೋಕದ ಎಲ್ಲವೂ ನಮಗೆ ಬೇಕು. ಆದರೆ ವಯಸ್ಸಾದ, ಭಗ್ನವಾದ, ಸಾವಯವ ಸಂಬಂಧವಿಲ್ಲದ ವ್ಯಕ್ತಿಗಳು, ವಸ್ತುಗಳು? ಅವುಗಳನ್ನು ನಿರಾಕರಿಸುವುದೆಂದರೆ ಬದುಕನ್ನೇ ನಿರಾಕರಿಸಿದಂತೆ. ಉಳಿವಲ್ಲ, ಅಳಿವೇ ಜೀವನಧರ್ಮ. ಹಾಗೆ ನೋಡಿದರೆ, ಅವನತಿಯ ಗಡಿಯಾರವನ್ನು ನೋಡಿಯೇ ನಾವು ಎಷ್ಟು ದೂರ ಕ್ರಮಿಸಿದ್ದೇವೆಂದು ಹೇಳಬಹುದು.
ಒಂದು ಜೀವಮಾನದಲ್ಲಿ ನಾವು ಏನೇನೆಲ್ಲ ನೋಡಬಹುದು? ಬದಲಾವಣೆ, ಶೈಥಿಲ್ಯ, ವಿನಾಶ. ನಮಗೆ ಪ್ರತ್ಯಕ್ಷಾನುಭವವಾಗದಿದ್ದರೂ ಜಗತ್ತು ಸಾವನ್ನು ಉಸಿರಾಡುತ್ತದೆ: ಕಬ್ಬಿಣಕ್ಕೆ ತುಕ್ಕುಹಿಡಿಯುತ್ತದೆ, ಮಾಂಸ ಕೆಡುತ್ತದೆ, ಪರಿಸರ ಮಾಲಿನ್ಯದಿಂದ ಶಿಲ್ಪಗಳು ಹಾಳಾಗುತ್ತವೆ, ಮಳೆಕಾಡುಗಳು ಬೋಳಾಗುತ್ತವೆ, ಅರಣ್ಯಗಳು ಕೊಳೆತು ಕ್ಷೀಣಿಸುತ್ತವೆ, ಜೀವಸಂಕುಲಗಳು ಅಳಿಯುತ್ತವೆ, ಮತ್ತೆ ನಾವು ಪ್ರೀತಿಸಿದವರು ಸುಟ್ಟು ಬೂದಿಯಗದಿದ್ದರೆ ಮಣ್ಣಾಗಿ ಹುಳುಗಳ ಪಾಲಾಗುತ್ತಾರೆ. ಹುಳುಗಳೆಂದರೇನು? ಸೊಳ್ಳೆ, ನೊಣ, ಜೀರುಂಡೆಗಳಂಥ ಕೀಟಗಳು, ಇಲಿ ಹೆಗ್ಗಣಗಳು, ಇತರ ಹೊಟ್ಟೆಬಾಕ ಕ್ಷುದ್ರ ಜಂತುಗಳು.
‘ಮಾನವಕುಲ ಪ್ರಖರ ವಾಸ್ತವವನ್ನು ತಾಳಿಕೊಳ್ಳಲಾರದು’ ಎಂದ ಟಿ.ಎಸ್. ಎಲಿಯಟ್. ‘ಲೋಕವೆ ನಶ್ವರವಯ್ಯಾ, ಬರೆದಿಡುವೆನು ಹಾಗೆಂದೆ’ ಎಂದರು ಕವಿ ಕೆ.ಎಸ್.ನ. ದಟ್ಟ ದಾರಿದ್ರ್ಯದಲ್ಲೂ ಚೆಲುವನ್ನು ಕಂಡ ಕವಿ ಹಾಗೆ ಬರೆದಿಟ್ಟಾರೆ? ಇಲ್ಲ, ಹಾಗೆ ಬರೆದಿಟ್ಟವನು ನೆದರ್ಲ್ಯಾಂಡ್ಸ್ನ ಜೀವವಿಜ್ಞಾನಿ ಮಿದಾಸ್ ದೆಕ್ಕೆರ್ಸ್. ಅವನ ‘ದಿ ವೇ ಆಫ್ ಆಲ್ ಫ್ಲೆಶ್: ಎ ಸೆಲೆಬ್ರೇಶನ್ ಆಫ್ ಡೀಕೆ’ ಎಂಬ ಗ್ರಂಥ ಸಾವಿನ, ವಿನಾಶದ ಎದುರಿಗೆ ಯಾರೇನೂ ಮಾಡಲಾಗದೆಂದೂ ತಾತ್ಕಾಲಿಕ ಯೌವನಕ್ಕಾಗಿ ಹಂಬಲಿಸುವುದನ್ನು ಬಿಟ್ಟು ನಮಗೆ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಜೀವನಪರ್ಯಂತ ವಿಹಿತವಾಗಿ, ಶೋಭಾಯಮಾನವಾಗಿ ಬದುಕುವುದೊಳ್ಳೆಯದೆಂದೂ ಹೇಳುತ್ತದೆ.
ಪಕ್ವಗೊಂಡದ್ದೆಲ್ಲವೂ ಕೊಳೆಯಲೇಬೇಕು. ಹಾಗಾಗಿ ಶೈಥಿಲ್ಯವೆನ್ನುವುದೂ ಜೀವನದ ಸಹಜಧರ್ಮ. ಮನುಷ್ಯ ಸತ್ತ ಮೇಲೆ ನಾಲ್ಕರಿಂದ ಏಳು ಗಂಟೆಗಳೊಳಗೆ ಮೊದಲು ಅವನ ಮುಖದಲ್ಲಿ ದೇಹ ಪೆಡಸಾಗುವ ಸೂಚನೆ ಕಂಡುಬರುತ್ತದೆ. ಕೆಲವು ಗಂಟೆಗಳ ನಂತರ ಅವನ ದೇಹದ ಎಲ್ಲ ಮಾಂಸಖಂಡಗಳೂ ಸೆಟೆದುಕೊಳ್ಳುತ್ತವೆ. ಸುಮಾರು ಹನ್ನೆರಡು ಗಂಟೆಗಳ ನಂತರ ಈ ಸ್ಥಿತಿಯೇ ನಿಧಾನವಾಗಿ ಮಾಯವಾಗುತ್ತದೆ. ಮತ್ತೆ ಇಡೀ ದೇಹ ಸೆಟೆದುಕೊಳ್ಳಬೇಕಾದರೆ ಸುಮಾರು ಮೂವತ್ತಾರು ಗಂಟೆ ಬೇಕಂತೆ. ಈ ಮಾತು ಇತರ ಸಸ್ತನಿಗಳಿಗೂ ಅನ್ವಯಿಸುವಂಥದು. ಯಾಕೆಂದರೆ ಅವುಗಳಿಗೆ ಕೂಡ ನಮಗಿರುವಂತೆಯೇ ಮಾಂಸಖಂಡಗಳುಂಟು.
2
ಮಿದಾಸ್ ದೆಕ್ಕೆರ್ಸನ ಪ್ರಕಾರ ನಿಸರ್ಗದಲ್ಲಿ ಉಳಿಯುವ ಜೀವಿಗಳಿಗಿಂತ ಅಳಿಯುವ ಜೀವಿಗಳೇ ಹೆಚ್ಚು. ಕಾಡಿನಲ್ಲಿ ನಾವು ನಡೆದು ಹೋಗುವಾಗ ನಮ್ಮ ಮೇಲೆ ಸತ್ತ ಹಕ್ಕಿಗಳು ಮಳೆಯಂತೆ ಸುರಿಯದಿರುವುದೇ ಆಶ್ಚರ್ಯ. ಸತ್ತ ಕಪ್ಪೆ, ಪುಟ್ಟ ಹಕ್ಕಿಗಳಿಂದಾಗಿ ದಾರಿಗಳಲ್ಲಿ ಕಾಲಿಡುವುದೇ ಕಷ್ಟವಾಗಬೇಕು; ನಮ್ಮ ಬಾಯಿ, ಮೂಗು ಸತ್ತ ಕೀಟಗಳ ಪ್ರವಾಹದಿಂದ ಉಸಿರುಗಟ್ಟಬೇಕು…
ಕಲೆ ಮತ್ತು ಪಾಂಡಿತ್ಯ, ಕುಟುಂಬ ಮತ್ತು ದುಡಿಮೆ ನಮ್ಮ ಜೀವಾತ್ಮಗಳ ಅಂತಸ್ಸತ್ವವನ್ನು ತುಸುವಾದರೂ ಉಳಿಸುತ್ತವೆ. ಚಚರ್ುಗಳು ಹೇಗೆ ನಂಬಿಕೆಯನ್ನು ಪೋಷಿಸುತ್ತವೆಯೋ ಹಾಗೆ ಜೀವಶಾಸ್ತ್ರಜ್ಞರು ಸಂತಾನವೃದ್ಧಿಗೆ ಕಾರಣರಾಗುತ್ತಾರೆ. ಎಲ್ಲ ದೇಹಗಳೂ ಕಡೆಗೆ ಶಿಥಿಲಗೊಂಡು ಹುಳುಗಳಿಗೆ ಆಹುತಿಯಾಗುತ್ತವೆ. ಆದರೂ ಆ ದೇಹಗಳ ಚೈತನ್ಯವನ್ನು ಅವುಗಳ ನಕಲುಗಳಲ್ಲಿ, ಸಂತತಿಯಲ್ಲಿ ಅಥವಾ ವಿಚಾರಗಳಲ್ಲಿ ಉಳಿಸಿಡಬಹುದು.
ಕನ್ನಡಿ ಮುದುಕ ಮುದುಕಿಯರ ಇಳಿಬಿದ್ದ ಗಲ್ಲಗಳನ್ನು, ನಿರಿಗೆಗಟ್ಟಿದ ಮುಖವನ್ನು ಪ್ರತಿಬಿಂಬಿಸುವಾಗ ಅವರೊಳಗಿರುವ 18-20 ವರ್ಷಗಳ ಯುವಕನಿಗೋ ಯುವತಿಗೋ ಅತ್ಯಂತ ಅಚ್ಚರಿಯಾಗುವುದಲ್ಲವೆ? ಇದೆಲ್ಲ ಹೇಗಾಯಿತು? ಕಾಲ ಕಳೆದಂತೆ ಅಮರಿಕೊಂಡು ಬಂದ ವಿನಾಶದಿಂದ. ಅದು ಅನಿವಾರ್ಯ; ಕೊಳೆಯುವಿಕೆ ಸದಾ ಘಟಿಸುವಂಥದು; ಬದುಕುವುದೆಂದರೆ ಕೊನೆಗೆ ನಿಜಕ್ಕೂ ಸಾಯುವುದು; ಪ್ರಪಂಚ ಇರುವುದೇ ಹೀಗೆ. ಸಾವನ್ನು ಸೋಲಿಸಲಾಗದು. ಅದಕ್ಕೆ ವಿಘ್ನವುಂಟುಮಾಡುವ ಎಲ್ಲ ಪ್ರಯತ್ನದಿಂದಲೂ ಅಡ್ಡ ಪರಿಣಾಮಗಳೇ ಹೆಚ್ಚು. ಆದ್ದರಿಂದ ಶಾಶ್ವತವಾಗಿ ಬದುಕಿರಬೇಕೆಂಬ ಆಸೆಗೆ ಅರ್ಥವಿಲ್ಲ. ಪ್ಲಾಸ್ಟಿಕ್ ಸರ್ಜರಿ ವೈದ್ಯಕೀಯಕ್ಕೆ ತದ್ವಿರುದ್ಧವಾದದ್ದು; ಯಾಕೆಂದರೆ ಆರೋಗ್ಯವಂತರಾಗಿ ಒಳಗೆ ಹೋಗುವ ನಾವು ರೋಗಿಗಳಾಗಿ ಹೊರಬರುತ್ತೇವೆ. ಒಳ್ಳೆಯ ರೂಪಕ್ಕಾಗಿ ನಮ್ಮ ಅಂಗಾಂಗಗಳನ್ನು ಕತ್ತರಿಗೆ ಒಡ್ಡಿಕೊಳ್ಳುವ ನಾವು ಮೊದಲು ನೋಡಬೇಕಾದ್ದು ಮನೋವಿಜ್ಞಾನಿಗಳನ್ನು.
ಕೊಳೆಯುತ್ತಿರುವ ಪ್ರಕ್ರಿಯೆಯನ್ನು ಕಂಡದ್ದೇ ನಾವು ನಮ್ಮ ಗಮನವನ್ನು ಬೇರೆಡೆಗೆ ಹರಿಸುತ್ತೇವೆ. ವಸಂತ ಕಾಲದ ಹೊಸ ಚಿಗುರನ್ನು ಕಂಡು ಸಂತೋಷ ಸಂಭ್ರಮಗಳಿಂದ ಕುಣಿದಾಡುವ ನಾವು ಗ್ರೀಷ್ಮ ಋತು ಆಗಮಿಸಿದ್ದೇ ನಿಟ್ಟುಸಿರುಬಿಡುತ್ತೇವೆ. ಯಾಕೆಂದರೆ ಆಗ ನಾವು ಹಿಂದೆ ಕಂಡಿದ್ದ ಚಿಗುರು ಎಲೆಯಾಗಿ, ಹಣ್ಣಾಗಿ ನೆಲಕ್ಕೆ ಉದುರುತ್ತಿರುತ್ತದೆ. ನಿಸರ್ಗದಲ್ಲಿ ಏನು ಪರಿವರ್ತನೆಯಾದರೂ ನಮಗೆ ಸಮಾಧಾನವಿಲ್ಲ. ಕೆ.ಎಸ್.ನ. ಅವರ ಒಂದು ಕವನದ ಸಾಲುಗಳಿವು:
ಚಳಿಗಾಲ ಬಂದಾಗ ಎಷ್ಟು ಚಳಿ ಎಂದರು
ಬಂತಲ್ಲ ಬೇಸಿಗೆ, ಕೆಟ್ಟಬಿಸಿಲೆಂದರು
ಮಳೆಬಿತ್ತೊ, ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
ನಾವು ಕಟ್ಟುವ ಕಟ್ಟಡಗಳಿಗೂ ಉಳಿವಿಲ್ಲವಷ್ಟೆ. ಆದರೂ ವಿನಾಶಗೊಂಡ ಕಟ್ಟಡಗಳು ಸ್ವಲ್ಪಮಟ್ಟಿಗೆ ಆಕರ್ಷಕವೇ. ಈಗೀಗ ಕೆಲವರು ವಾಸ್ತುಶಿಲಿಗಳು ಹೊಸ ಹೊಸ ಕಟ್ಟಡಗಳನ್ನು ವಿನಾಶಗೊಂಡ ಕಟ್ಟಡಗಳ ಹಾಗೆ ವಿನ್ಯಾಸಗೊಳಿಸುವುದುಂಟು. ಮನುಷ್ಯರ ಕೈಗೆ ಪ್ರಾಚೀನ ಕಾಲದ ಕಟ್ಟಡಗಳು, ಸ್ಮಾರಕಗಳು, ವಸ್ತುಗಳು ಸಿಕ್ಕವೆಂದರೆ ಸಾಕು, ಅವರು ಅವುಗಳನ್ನು ದುರಸ್ತುಗೊಳಿಸುವ ನೆವದಲ್ಲಿ ಇನ್ನಷ್ಟು ಹಾಳುಮಾಡುತ್ತಾರೆನ್ನುತ್ತಾನೆ ದೆಕ್ಕೆರ್ಸ್.
ದುರಸ್ತು, ರಿಪೇರಿ ಮೊದಲಾದುವು ಮನುಷ್ಯಕಲ್ಪಿತ ಪ್ರಗತಿಯ ಸಂಕೇತಗಳು. ಹಳೆಯ ಕಟ್ಟಡಗಳನ್ನು ಕೆಳಗುರುಳಿಸಿ ಹೊಸದನ್ನು ಕಟ್ಟಲಾಗುತ್ತದೆ ಅಥವಾ ಅವುಗಳ ರಿಪೇರಿಯಾಗುತ್ತದೆ. ವಯಸ್ಸಾದವರು ಯುವಕರಾಗಿ ಕಾಣಲು ಹೆಣಗುತ್ತಾರೆ. ಅದಕ್ಕಾಗಿರುವ ಸೌಂದರ್ಯವರ್ಧಕ ಸಾಧನಗಳು ಲೆಕ್ಕವಿಲ್ಲದಷ್ಟು. ಯಾಕೆಂದರೆ ನಮ್ಮಲ್ಲಿ ಹೊಸತು, ಯೌವನ, ಸೌಂದರ್ಯ, ಇವು ಮೂರನ್ನೂ ಆಶಿಸುವುದು ತಪ್ಪೇನಲ್ಲ ಎಂಬ ಭಾವನೆಯಿದೆ. ಮಾನವಕುಲ ‘ಬದುಕೆನ್ನುವುದು ನಿಧಾನವಾಗಿ ಅವಸಾನಗೊಳ್ಳುವ ಒಂದು ಮಾರ್ಗ’ವೆಂಬುದನ್ನು ಎಂದಿಗೂ ಅರ್ಥಮಾಡಿಕೊಳ್ಳಬಯಸದು.
ಮನುಷ್ಯರು ಇತರ ಜೀವಿಗಳಂತೆ ತಮ್ಮ ದೇಹದ ಜರ್ಜರತೆಯನ್ನು, ಅಂತಿಮವಾಗಿ ಸಾವನ್ನು, ಸುಲಭವಾಗಿ ಒಪ್ಪಿಕೊಳ್ಳಲಾರರು. ಹಾಗಾಗಿಯೇ ಅವರು ತಾವು ಶಾಶ್ವತವೆಂದು ತಿಳಿದು, ಇನ್ನಷ್ಟು ಮತ್ತಷ್ಟು ಮುಂದೆ ಹೋಗಬೇಕು, ಸಾಧ್ಯವಾದಷ್ಟು ಮೇಲೆ ಮೇಲೆ ಹೋಗಿ ತುತ್ತತುದಿಯನ್ನು ಮುಟ್ಟಬೇಕು ಎಂದೆಲ್ಲ ಆಶಿಸುವವರು. ಡೆಕ್ಕೆರ್ಸ್ನ ಪ್ರಕಾರ ಅದು ಸಾಧ್ಯವಿಲ್ಲ. ಜೀವಶಾಸ್ತ್ರ ಅದಕ್ಕೆ ಪರವಾನಗಿ ಕೊಡದು; ರಸಾಯನಶಾಸ್ತ್ರವಾಗಲಿ, ಇಂಜಿನಿಯರಿಂಗ್ ಆಗಲೀ ನೆರವಿಗೆ ಬರದು. ಅಂತಿಮವಾಗಿ ಪ್ರತಿಯೊಂದಕ್ಕೂ ಅವಸಾನವಿದ್ದೇ ಇರುವುದರಿಂದ ನಾವು ಬಹು ದೀರ್ಘ ಕಾಲ ಬದುಕುವುದೊಂದು ಕನಸಷ್ಟೆ.
ಒಂದು ಶಿಶುವಿನ ಬದುಕಿನ ಒಂದೇ ಒಂದು ತಿಂಗಳ ಅವಧಿಯಲ್ಲಿ ಹಳೆಯ ಸೆಲ್ಲುಗಳ ಜಾಗದಲ್ಲಿ ಹೊಸ ಸೆಲ್ಲುಗಳನ್ನು ಬೆಳೆಯಿಸುವ ಸಾಮಥ್ರ್ಯವಿದೆಯಲ್ಲ, ಅದು ವೃದ್ಧರ ಬದುಕಿನ ಒಂದು ವರ್ಷದ ಅವಧಿಯಲ್ಲಿ ಬೆಳೆಯಿಸುವ ಸಾಮಥ್ರ್ಯಕ್ಕಿಂತ ಕುಗ್ಗುತ್ತಿರುತ್ತದೆ. ಅಂದರೆ ಶೈಥಿಲ್ಯವೆನ್ನುವುದು ಕ್ರಮೇಣ ನಡೆಯುವ ಒಂದು ವಿದ್ಯಮಾನ. ನಾವು ಎಲ್ಲಿಯವರೆಗೆ ವೃದ್ಧಾಪ್ಯವನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಶೈಥಿಲ್ಯವನ್ನು ಸಹಜವಾಗಿ ಬರಮಾಡಿಕೊಳ್ಳಲಾಗದು. ವೃದ್ಧರೊಳಗೆ ಅವರ ವೈಯಕ್ತಿಕ ಚರಿತ್ರೆಗಳೇ ಅಲ್ಲದೆ ಅವರ ಸಹಚರರ ಚರಿತ್ರೆಯೂ ಇರುತ್ತವೆ. ಹಾಗಾಗಿ ಅವರು ವರ್ತಮಾನದಲ್ಲಿ ಭೂತಕಾಲದ ಭವಿಷ್ಯವನ್ನು ನೋಡಲು ನಮಗೆ ನೆರವಾಗುತ್ತಾರೆ. ನಿಜಕ್ಕೂ ಹೇಳಬೇಕೆಂದರೆ ನಮ್ಮ ಅಸ್ತಿತ್ವದ ಪ್ರತಿಯೊಂದು ಸೆಕೆಂಡಿನಲ್ಲೂ ಭೂತ, ವರ್ತಮಾನ, ಭವಿಷ್ಯಗಳ ಸಂಯೋಗ ನಡೆಯುತ್ತಿರುತ್ತದೆ. ಕಡೆಗಿರುವ ಒಂದೇ ಒಂದು ತಾತ್ವಿಕ ಸಮಾಧಾನವೆಂದರೆ: ಸ್ಮಶಾನದತ್ತ ನಾವಿಡುವ ಒಂದೊಂದು ಹೆಜ್ಜೆಯಲ್ಲೂ ನಾವು ಇನ್ನೊಬ್ಬರಂತಲ್ಲದೆ ನಾವೇ ಆಗಿರುವುದು; ನಮ್ಮೊಳಗೆ ನಾವೇ ಒಂದಾಗಿಬಿಡುವುದು.
ವಸ್ತುಗಳು ಕೊಳೆಯುವುದೆಂದರೆ ಹೂದಾನಿಯಲ್ಲಿರುವ ಹೂಗಳು ಕ್ರಮೇಣ ಬಾಡುವಂತೆ. ಜನರು ಬಾಡುವುದೆಂದು ತಿಳಿದಿದ್ದರೂ ಗಿಡದಿಂದ ಹೂಗಳನ್ನು ಕೊಯ್ದು ಹೂದಾನಿಯಲ್ಲಿಡುವುದನ್ನು ಬಿಡುವುದಿಲ್ಲ. ಯಾಕೆ? ಸ್ವಲ್ಪ ಹೊತ್ತಾದರೂ ಆ ಹೂಗಳ ಸೌಂದರ್ಯವನ್ನು ಆಸ್ವಾದಿಸಬಹುದೆಂದಲ್ಲವೆ? ಆದರೆ ಆ ಸ್ವಲ್ಪ ಹೊತ್ತಿನಲ್ಲಿ ಬ್ಯಾಕ್ಟೀರಿಯಾಗಳು ಏನೆಲ್ಲ ಮಾಡಿಬಿಡುತ್ತವೆ! ಆಧುನಿಕರಾದ ನಮಗೆ ಮತ್ಸ್ಯಯುಗ, ಉರಗಯುಗ, ಸಸ್ತನಿಯುಗ ಎಂದೆಲ್ಲ ಗೊತ್ತು. ಆದರೆ 2000 ಮಿಲಿಯ ವರ್ಷಗಳಿಂದ ಇರುವ ಬ್ಯಾಕ್ಟೀರಿಯದ ಬಗ್ಗೆ ಏನೇನೂ ಗೊತ್ತಿಲ್ಲ. ನಮ್ಮ ದೇಹಗಳ ಮೇಲೆ ಬ್ಯಾಕ್ಟೀರಿಯಾಗಳಿಗಿರುವ ಪ್ರಾಬಲ್ಯವನ್ನು ಅರಿತುಕೊಳ್ಳುವುದೆಂದರೆ ಸಾವಿನ ನಂತರ ಮಣ್ಣೊಳಗೆ ಹೂತುಹೋದಾಗ ನಾವೇನಾಗುತ್ತೇವೆ ಎಂದು ಯೋಚಿಸಿದಷ್ಟೇ ಭಯಂಕರ.
ಟಾಲ್ಸ್ಟಾಯ್ ಬರೆದ ‘ಡೆತ್ ಆಫ್ ಇವಾನ್ ಇಲ್ಯಿಚ್’ ಎಂಬ ಕಿರು ಕಾದಂಬರಿಯನ್ನು ಓದುತ್ತಿರುವಾಗ ನಾವು ದೀರ್ಘಕಾಲದಿಂದ ಮೃತ್ಯುಶಯ್ಯೆಯಲ್ಲಿರುವ ಇವಾನ್ ಇಲ್ಯಿಚ್ಚನ ಜೊತೆಜೊತೆಯಲ್ಲೇ ಅವನ ಸಂಕಟ, ಆತಂಕಗಳನ್ನೂ ಅನುಭವಿಸುತ್ತೇವೆ. ಒಂದಲ್ಲ ಒಂದು ದಿನ ಎಲ್ಲ ಮನುಷ್ಯರೂ ಸಾಯುವವರೆಂದು ಅರಿವಾದದ್ದೇ ಇವಾನ್ ಇಲ್ಯಿಚ್ (ಅಂದರೆ ಓದುಗನಾದ ನಾನು) ಒಬ್ಬ ಮನುಷ್ಯ, ಆದ್ದರಿಂದ ಅವನು (ಅಂದರೆ ನಾನು) ಸಾಯಬೇಕಾದ್ದು ಅನಿವಾರ್ಯ ಎಂದು ಸ್ವತಃ ತಿಳಿಯುತ್ತೇವೆ. ಕಾದಂಬರಿಯ ಕೊನೆಗೆ ಇಲ್ಯಿಚ್ಚನ ಸಾವೇ ಒಂದು ರೂಪಕವಾಗುತ್ತದೆ. ಅದು ಅನಿವಾರ್ಯವಾದದ್ದನ್ನು ಹೇಗೆ ಎದುರಿಸಬೇಕೆಂದು ನಮಗೆ ಮನವರಿಕೆ ಮಾಡಿಕೊಡುವ ರೂಪಕ.

‍ಲೇಖಕರು G

September 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Palahalli Vishwanath

    “ಕನ್ನಡಿ ಮುದುಕ ಮುದುಕಿಯರ ಇಳಿಬಿದ್ದ ಗಲ್ಲಗಳನ್ನು, ನಿರಿಗೆಗಟ್ಟಿದ ಮುಖವನ್ನು ಪ್ರತಿಬಿಂಬಿಸುವಾಗ ಅವರೊಳಗಿರುವ 18-20 ವರ್ಷಗಳ ಯುವಕನಿಗೋ ಯುವತಿಗೋ ಅತ್ಯಂತ ಅಚ್ಚರಿಯಾಗುವುದಲ್ಲವೆ? ಇದೆಲ್ಲ ಹೇಗಾಯಿತು? ” – ಎಷ್ಟು ನಿಜ !

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: