
ಮಲ್ಲಿಕಾರ್ಜುನ ಗೌಡ
೬-೭ ವರುಶಗಳ ಹಿಂದೆ ನಾನು ಮದ್ದೂರಿಗೆ ಹೋಗಿದ್ದಾಗ ಯಾರೋ ಒಬ್ಬರು ಹತ್ತಿರ ಬಂದು, ” ಸರ್ಕಲ್ ಹತ್ರ ಯಾರೋ ಚಿಕ್ಕ ಮಗು ಬಿಟ್ಟೋಗಿದ್ರು ಸಾರ್.. ನಿಮ್ಮ ಜಾಗದಲ್ಲಿ ಹೋಟೆಲ್ ಮಾಡ್ಕಂಡವ್ರಲ್ಲಾ ಅವ್ರು ಸಾಕತಾರಂತೆ.. ಕರ್ಕೊಂಡು ಹೋಗವ್ರೇ ಮಗೂನ ” ಅಂತಂದ್ರು..
ಕುತೂಹಲದಿಂದಲೇ ಹೋಗಿ ನೋಡಿಕೊಂಡು ಬಂದಿದ್ದ ನೆನಪು..
ಹೆಣ್ಣು ಮಗು.. ಹೊಸ ಜನರನ್ನು ಅಚ್ಚರಿಯಿಂದ ನೋಡುತ್ತ ಕೈಗೂಸು ಆಟವಾಡುತ್ತಿತು. ಬಡತನವಿದ್ದರೂ ಸಹ ಸಾಕುವ ಆಸೆ ಆ ತಂದೆ ತಾಯಿಗೆ.. ಚೆನ್ನಾಗಿ ನೋಡ್ಕೊಳ್ಳಿ ಎಂದು ಹೇಳಿ ಬಂದಿದ್ದೆ.
ಇದಾದ ಮೇಲೆ ಆ ಮಗುವನ್ನು ನೋಡಿಯೇ ಇರಲಿಲ್ಲ. ಸುಮಾರು ಸಲ ಆ ಹೋಟೆಲ್ ಗೆ ಹೋಗಿದ್ದರೂ ಸಹ ಆ ಮಗುವನ್ನು ನೋಡಿರಲಿಲ್ಲ.
ಇತ್ತೀಚೆಗೆ ಆ ಹೋಟೆಲ್ಗೆ ಮಧ್ಯಾಹ್ನದ ಊಟಕ್ಕೆ ಹೋಗಿದ್ದೆ. ಚಿಕ್ಕ ಹುಡುಗಿಯೊಬ್ಬಳು ಬಂದ ಗ್ರಾಹಕರಿಗೆ ಹಪ್ಪಳ ಬಡಿಸುತ್ತಿದ್ದಳು. ಹಳೆಯ ನೆನಪು ಮರುಕಳಿಸಿ, ಮತ್ತೊಂದು ಕಡೆ ಊಟ ಬಡಿಸುತ್ತಿದ್ದ ಹೋಟೆಲ್ ಒಡತಿಯ ಮಗನನ್ನು ಹತ್ತಿರ ಕರೆದು ಕೇಳಿದೆ, ಇವಳೇನಾ ನೀವು ಸಾಕಿಕೊಂಡಿರೋದು?
ಕಣ್ಣ ಸನ್ನೆಯಲ್ಲಿ ಒಪ್ಪಿಗೆ ಸೂಚಿಸಿದ. ಎಷ್ಟ್ ವರ್ಷವಾಯಿತಲ್ವಾ ಈ ಮಗೂನ ನೋಡಿ ಎಂದು ಅಂದುಕೊಳ್ಳುತ್ತಿರುವಾಗ, ೭ ವರ್ಷ ಅಣ್ಣ ಅವಳಿಗೆ.. ೨ನೇ ಕ್ಲಾಸು, ಇವತ್ತು ರಜವಂತೆ, ಅದಕ್ಕೆ ಇಲ್ಲೇ ಅವ್ಳೇ ಎಂದು ಅವಳ ಅಣ್ಣ ಹೇಳಿದ..
ನಂತರ ಅವಳನ್ನು ಕರೆದು ಸ್ವಲ್ಪ ಹೊತ್ತು ಮಾತಾಡಿಸಿದೆ, ತನ್ನ ಓದಿನ ಬಗ್ಗೆ ಇದ್ದ ಯಾವೂದೋ ಡೌಟ್ ಕೇಳಿದಳು, ಹೇಳಿಕೊಟ್ಟೆ..
ಕೆಟ್ಟವರ ಕೈಗೆ ಸಿಗದೇ ಒಳ್ಳೆಯ ಕಡೆ ಬೆಳೆತಿದ್ದಾಳೆ ಎಂದು ನೋಡಿ ಕುಶಿಯಾಯಿತು..
ಮಾನವೀಯ ಮೌಲ್ಯಗಳು ಕಡಿಮೆಯಾಗಿ ಜಾತಿ ಧರ್ಮ ಎಂದು ಕಿತ್ತಾಡುತ್ತ ನಿಂತಿರುವ ಈ ಪ್ರಪಂಚದಲ್ಲಿ ಇವಳನ್ನು ಮತ್ತು ಈಕೆಯ ಸಾಕು ತಂದೆ ತಾಯಿಯನ್ನು ನೋಡಿ ಮಾನವೀಯತೆಯು ಅಲ್ಲಲ್ಲಿ ಚಿಗುರೊಡೆದು ಬೆಳೆಯುತ್ತಿದೆ ಎಂದು ಸಮಾಧಾನವಾಯಿತು.
ಹಾ.. ಹೇಳೋದೆ ಮರೆತೆ, ಅವಳಿಗೆ ಅವರು ಇಟ್ಟಿರುವ ಹೆಸರು ”ಐಶ್ವರ್ಯ.”





0 Comments