ಸತೀಶ ಕುಲಕರ್ಣಿ
ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ. ಜಿ. ಎಸ್. ಅಮೂರ ಇನ್ನಿಲ್ಲವೆಂದು ಕೇಳಿ ನೋವಾಯಿತು. ೯೪ ವಯಸ್ಸಿನ ಅಮೂರ ಅವರು ಹಾವೇರಿ ನೆಲದ ಮಹಾ ಪ್ರತಿಭೆ. ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೦೮-೦೫-೧೯೨೫ ರಂದು ಜನಿಸಿದರು.
ಇಲ್ಲಿಯ ಮುನ್ಸಿಫಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿ ಓದಿದ ಅಮೂರ ಆ ಕಾಲದಲ್ಲಯೇ ಬಾಂಬೆ ಎಸ್.ಎಸ್.ಸಿ. ಬೋರ್ಡಿಗೆ ಪ್ರಥಮರಿಗರಾಗಿ ರ್ಯಾಂಕ್ ಪಡೆದ ಕೀರ್ತ ಅವರದು.
ಕರ್ನಾಟಕ ಕಾಲೇಜಿನ ಗುಜರಾತಿಗೆ ಹೋಗಿ ಅಧ್ಯಾಪನ ವೃತ್ತಿಯನ್ನು ಆರಂಭಿಸಿದರು. ಕನ್ನಡದ ಓದುಗರಿಗೆ ವಿಮರ್ಶಕರಾಗಿಯೇ ಹೆಚ್ಚು ಪರಿಚಿತರು
ನಿವೃತ್ತಿಯ ನಂತರ ಧಾರವಾಡಕ್ಕೆ ಬಂದು ನೆಲೆಸಿದಾಗ ಅವರ ಬರವಣಿಗೆಗೆ ಹೊಸ ದಿಕ್ಕು ದಿಶೆಗಳು ಲಭ್ಯವಾದವು.
ಮಿಲ್ಟನ್, ಬೇಂದ್ರೆ, ಅನಕೃ, ಶ್ರೀರಂಗ.. ಕನ್ನಡದ ಕಥೆ ಕಾದಂಬರಿಗಳ ಕುರಿತು ನಿರಂತರವಾಗಿ ಬರೆಯ ಹತ್ತಿದರು. ಬೇಂದ್ರೆ ಅವರ ಕುರಿತು ಬರೆದ ‘ಭುವನದ ಭಾಗ್ಯ’ ವಿಮರ್ಶಾ ಕೃತಿ ದೊಡ್ಡ ಹೆಸರನ್ನು ತಂದು ಕೊಟ್ಟಿತು.
ದಕ್ಷಿಣದಲ್ಲಿ ಜಿ.ಎಚ್. ನಾಯಕ್, ಉತ್ತರದಲ್ಲಿ ಜಿ.ಎಸ್. ಅಮೂರ ಕನ್ನಡ ಸಾಹಿತ್ಯದ ಒಕ್ಕಲು ಮಾಡಿ ಹಲವು ಫಸಲುಗಳನ್ನು ರಾಶಿ ಮಾಡಿದವರು. ಸಮಚಿತ್ತ ಸಮಭಾವದಿಂದ ಸಾಹಿತ್ಯದ ಯಾವ ಪ್ರಕಾರಕ್ಕೂ ಅಂಟಿಕೊಳ್ಳದೇ ಸಾಹಿತಿ ಮತ್ತು ಸಾಹಿತ್ಯವನ್ನು ಒಂದು ತರದ ದೂರದಲ್ಲಿದ್ದು ತಮ್ಮ ಓದು ಮತ್ತು ಅಧ್ಯಯನಗಳ ಮೂಲಕ ತೂಗಿ ನೋಡಿದವರು.
ವಿದ್ಯಾರ್ಥಿ ದಿಶೆಯಲ್ಲಿರುವಾಗ ಹಾವೇರಿಯ ರಾಜೇಂದ್ರ ನಗರದಲ್ಲಿರುವ ಕಾನಡೆ ಬಿಲ್ಡಿಂಗ್ ನಲ್ಲಿ ವಾಸವಾಗಿದ್ದರು. ಅವರ ಸಹೋದರಿ ಶ್ರೀಮತಿ ಸುನಂದಾ ಅಮೂರ ಇಲ್ಲಿಯ ಎಸ್,ಎಂ, ಎಸ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವವರು.
ಹಾವೇರಿಗೆ ಜಿ.ಎಸ್. ಅಮೂರರ ಒಡನಾಟ ತುಂಬ ಅಪರೂಪದ್ದು. ಇಲ್ಲಿಯ ಹಾವನೂರು ಪ್ರತಿಷ್ಠಾನ ಏರ್ಪಡಿಸುತ್ತಿದ್ದ ಕಾದಂಬರಿ ಪ್ರಶಸ್ತಿ ಪ್ರದಾನಕ್ಕೆ ೨೦೦೪ ರಲ್ಲಿ ಬಂದು ಹೋಗಿದ್ದರು . ೨೦೧೨ ರಲ್ಲಿ ನನ್ನ ‘ಸತೀಶ ಸಮಗ್ರ ಸಂಪುಟ’ವನ್ನು ಬಿಡುಗಡೆ ಮಾಡಿದ್ದರು. ವೇದಿಕೆಯಲ್ಲಿ ಖ್ಯಾತಕವಿ ಚನ್ನವೀರ ಕಣವಿ, ಖ್ಯಾತ ವಿಮರ್ಶಕ ಡಾ. ಚಂದ್ರಶೇಖರ ನಂಗಲಿ, ಡಾ ಸರ್ಜೂ ಕಾಟಕರ್, ಕ.ವಿ.ಪ್ರ.ನಿ ನೌಕರರ ಸಂಘದ ವಿಜಯಕುಮಾರ ಮುದಕಣ್ಣನವರ ಮುಂತಾದವರು ಪಾಲ್ಗೊಂಡಿದ್ದರು.
ಬಂಡಾಯ ಸಾಹಿತ್ಯ ಸಂಘಟನೆ ೧೯೯೮ ರಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬಂಡಾಯ ಪುಸ್ತಕ ಜಾಥಾವನ್ನು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಉದ್ಘಾಟಿಸಿದ್ದರು. ನಮ್ಮಂತಹ ಕಿರಿಯ ಲೇಖಕರಿಗೆ ಓದು ಮತ್ತು ನಿರಂತರ ಅಧ್ಯಯನದ ಮಹತಿಯನ್ನು ಸದಾ ಹೇಳುತ್ತಿದ್ದರು. ‘ಟೈಮ್ ನನಗೆ ಅಮೂಲ್ಯ. ಹೀಗಾಗಿ ಇರುವಷ್ಟು ದಿನ ತಪಸ್ಸಿನಂತೆ ಬರೆಯ ಬೇಕೆಂಬುದು ನನ್ನ ಧ್ಯೇಯ’ ಎನ್ನುತ್ತಿದ್ದರು.
0 ಪ್ರತಿಕ್ರಿಯೆಗಳು