ಸತೀಶ ಕುಲಕರ್ಣಿ
ಲೈಂಗಿಕ ರಾಜಕಾರಣ ಕುರಿತು ಬರೆದ ಅಮೇರಿಕನ್ ಲೇಏಕಿ ಕೇಟ್ ಮಿಲೆಟ್ ಅವರ ಅನುವಾದಿತ ಕೃತಿ ಅಧಿಕಾರ ಮತ್ತು ಅಧೀನತೆ ಕುರಿತು ಹಾವೇರಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಸಾಂಕೇತಿಕ ಬಿಡುಗಡೆ ಮತ್ತು ಅರ್ಥಪೂರ್ಣ ಚರ್ಚೆ ನಡೆಯಿತು.
ಖ್ಯಾತ ಲೇಖಕಿ ಡಾ. ಶ್ರೀಮತಿ ಎಚ್.ಎಸ್. ಅವರು ಅನುವಾದಿಸಿದ ಕೃತಿಯು ಪುರುಷಾಧಿಕಾರದೊಂದಿಗೆ ಪ್ರಾಪ್ತವಾಗುವ ಎಲ್ಲ ಅಧೀನತೆಗಳ ಕುರಿತು ಚೆರ್ಚೆಯಾಗುವ ಅರ್ಥಪೂರ್ಣ ಕೃತಿ ಎಂದು ಅಭಿಪ್ರಾಯ ವ್ಯಕ್ತವಾಯಿತು. ಹಂಚುವ, ಶೋಷಿಸುವ ಹಾಗೂ ದುರ್ಬಳಿಕೆ ಮಾಡುವ ಅಧಿಕಾರ ಎಂಬುದೇ ಒಂದು ಶಕ್ತಿ ಕೇಂದ್ರ.
ಕೃತಿಯ ಕುರಿತು ಒಟ್ಟು ವಿಚಾರಗಳನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರುಣ ಜೋಳದ ಕೂಡ್ಲಿಗಿ ಮಂಡಿಸಿ ‘ಡಾ. ಎಚ್.ಎಸ್. ಶ್ರೀಮತಿ ಅವರು ಅಮೇರಿಕನ್ ಸ್ತ್ರೀವಾದಿ ಲೇಖಕಿ ಕೆಟ್ ಮಿಲೆಟ್ ರ ವಿಚಾರ ಧಾರೆಗಳನ್ನು ಅಪ್ಪಟ ಕನ್ನಡ ಸಂವೇದಗಳಿಗನುಗುಣವಾಗಿ ಅನುವಾದವಾಗಿಸಿದ್ದಾರೆ. ಪ್ರಚಲಿತವಿರುವ ಸ್ತ್ರೀ ವಾದಿ ಚಿಂತನೆಗಳಿಗೆ ಹೊಸ ಸೂಕ್ಷö್ಮಗಳನ್ನು ಕೊಡುವ ಶಕ್ತಿಯವು’ ಎಂದರು.
ಲೈ೦ಗಿಕ ರಾಜಕಾರಣದ ವಸ್ತುಸ್ಥಿತಿ, ಈ ಹಿಂದೆ ಬಂದಿರುವ ಎಲ್ಲ ಚಳವಳಿಗಳು ಹಾಗೂ ಪುರುಷ ಕೇಂದ್ರಿತ ಸ್ತ್ರೀವಾದವನ್ನು ಸಮರ್ಥವಾಗಿ ಅಧಿಕಾರ ಮತ್ತು ಅಧೀನತೆ – ಕೃತಿ ಚೆರ್ಚಿಸಿದೆ. ಅರಿವಿಲ್ಲದೆ ಗಂಡು ಹೆಣ್ಣು ಹಾಕಿಕೊಂಡಿರುವ ಸಾಮಾಜಿಕ ಅಧೀನತೆಯ ಅಚ್ಚನ್ನು ಮುರಿದಾಗಲೆ ನಿಜವಾದ ಸ್ತ್ರೀವಾದ ಚಾಲ್ತಿಗೆ ಬರುವುದು. ಸ್ತ್ರೀವಾದವೆಂದರೆ ಪುರುಷ ದ್ವೇಷದ ವಾದ – ವಿಚಾರವಲ್ಲ ಎಂದೂ ಮಿಲೆಟ್ ಅವರು ಪ್ರತಿಪಾದಿಸಿದ್ದಾರೆ.
ಮಾತೃ ಪ್ರಧಾನ ಕುಟುಂಬದ ಕಲ್ಪನೆಯ ಹುಟ್ಟು, ಕ್ರಮೇಣ ಪುರುಷ ಸ್ವಾಮ್ಯದ ಬಗೆ, ಅದಕ್ಕೆ ಹುಟ್ಟಿಕೊಂಡ ಕ್ರಾಂತಿ ಮತ್ತು ಪ್ರತಿಕಾಂತಿಯ ಬೆಳವಣ ಗೆಗಳನ್ನು ಅಧಿಕಾರ ಮತ್ತು ಅಧೀನತೆ ಕೃತಿ ಎತ್ತಿ ತೋರಿಸಿದೆ. ಹೆಣ್ಣು ಕೇವಲ ಅಧಿಕಾರದ ಕಾವಲಗಾರಳು ಎಂಬು ಹುಸಿ ನಂಬಿಕೆ ಒಡೆದು ಸಣ್ಣ ಚಲನೆಗಳು ಸಮಾನತೆಯತ್ತ ಸಾಗಬೇಕೆಂಬುದೇ ಕೃತಿಯ ಆಶಯ ಎಂದು ಡಾ. ಅರುಣ ಜೋಳದಕೂಡ್ಲಗಿ ಪ್ರತಿಪಾದಿಸಿದರು.
ನಂತರ ಸುಮಾರ ಒಂದು ಗಂಟೆ ಕಾಲ ನಡೆದ ಗಂಭೀರ ಚೆರ್ಚೆಯಲ್ಲಿ ಡಾ. ಚಂದ್ರಪ್ಪ ಸೊಬಟಿ, ಸುಭಾಸ್ ರಾಜಮಾನೆ, ಡಾ. ಮಹಾದೇವಿ ಕಣವಿ, ಕವಯತ್ತಿ ದೀಪಾ ಗೋನಾಳ, ಪ್ರೊ. ಗಂಗಾ ನಾಯ್ಕ, ಶ್ರೀಮತಿ ರಾಜೇಶ್ವರಿ ಸಾರಂಗಮಠ, ಡಾ. ಆನಂದ ಇಂದೂರ ಮುಂತಾದವರು ಚೆರ್ಚೆಯಲ್ಲಿ ಭಾಗಿಯಾಗಿದ್ದರು.
ವಿಜ್ಞಾನವು ಗಂಡಿನ ಹಿಡಿತದಲ್ಲಿದೆ, ಆತ ಉತ್ಪಾದಕ , ಈಕೆ ಬಳಕೆದಾರಳು. ಆಯ್ಕೆ ಸ್ವಾತಂತ್ರ್ಯವಿಲ್ಲದ ಹೆಣ್ಣಿಗೆ ಕೇಟ್ ಮಿಲೆಟ್ ವಿಚಾರಧಾರೆಗಳು ಭಾರತೀಯ ಮನಸ್ಸಿಗೆ ಒಪ್ಪಬಹುದೇ ? ಹೀಗೆಲ್ಲ ಚರ್ಚೆಗಳು ಕೊನೆಯಲ್ಲಿ ನಡೆದವು.
ಅಧ್ಯಕ್ಷತೆ ವಹಿಸಿದ್ದ ಕಲಾವಿದ ಕರಿಯಪ್ಪ ಹಂಚಿನಮನಿ ಒಂದು ಕಲಾಕೃತಿ ಯಾವುದೇ ತಲೆಬರಹವಿಲ್ಲದೆ ಅದರೊಳಗಿನ ಸೂಕ್ಷ್ಮಗಳನ್ನು ತೋರ್ಪಡಿಸುವಂತೆ, ಸ್ತ್ರೀವಾದದ ಒಟ್ಟು ಆಳದೊಳಗಿರುವ ಸೂಕ್ಷ್ಮಗಳನ್ನು ಮುಕ್ತವಾಗಿ ಚೆರ್ಚೆಯಾಗ ಬೇಕೆಂದರು.
ಆಕಾರ ಪ್ರಕಾಶನದ ಮೊದಲ ಕೃತಿ ಇದಾಗಿದ್ದು, ಸಾಕಷ್ಟು ಚರ್ಚೆಯಾಗ ಬೇಕೆಂಬ ಉದ್ದೇಶದಿಂದ ರಾಜ್ಯದ ಬೇರೆ ಬೇರೆ ಭಾಗದಲ್ಲಿ ಚಿಕ್ಕ ಚಿಕ್ಕ ಆಪ್ತ ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಡಾ. ಸುಭಾಸ್ ರಾಜಮಾನೆ ಆರಂಭದಲ್ಲಿ ಹೇಳಿದರು.
0 ಪ್ರತಿಕ್ರಿಯೆಗಳು