ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾಯ್ ಸುಗಂಧಿ..!

ಪರಿಮಳ ಬೀರುವ ಸುಗಂಧಿ

ananda hunashyala

ಆನಂದ ಹುಣಶ್ಯಾಳ 

ಸುಗಂಧಿ. ಹೆಸರಿಗೆ ತಕ್ಕಂತೆ ಹಿತವಾಗಿ ಸುಗಂಧ ಬೀರುತ್ತಾಳೆ. ಕೈಯಲ್ಲಿ ಸುಗಂಧಿಯನ್ನು ಹಿಡಿದರೆ ಮನಸ್ಸು ಮುದಗೊಳ್ಳುತ್ತದೆ. ಸುಗಂಧಿ ಎಂದರೆ ಹೂ ಅಂತಾ ತಿಳಿಬೇಡಿ ಇದು ಒಂದು ‘ಕನ್ನಡ ಮಾಣಿಕ್ಯ’ ಮಾಸಪತ್ರಿಕೆಯ ವಿಶೇಷಾಂಕ. ಪ್ರಥಮವಾಗಿ ಸುಗಂಧಿಯ ಮೈಮಾಟ ಓದುಗರ ಕಣ್ಮಣ ಸೆಳೆಯುತ್ತದೆ. ರಜನೀಶ ಅವರು ಅಚ್ಚುಕಟ್ಟಾಗಿ ಸುಗಂಧಿಯನ್ನು ವಿನ್ಯಾಸಗೊಳಿಸಿದ್ದಾರೆ.

ಇಂದಿನ ದಿನಮಾನಗಳಲ್ಲಿ ಕನ್ನಡ ಪತ್ರಿಕೆಗಳು ಮಾರುಕಟ್ಟೆಯ ಹಿಂದೆ ಬಿದ್ದು ಪಾಲಿಟಿಕ್ಸ್, ಸೆಕ್ಸ್, ಕ್ರೈಮ್, ಎಕನಾಮಿಕ್ಸ್ ಸುದ್ದಿಗಳ ಹಿಂದೆ ಬಿದ್ದಿರುವ ಇಂದಿನ ಎಲ್ಲಾ ಪತ್ರಿಕೆಗಳ ಮಧ್ಯೆ ಸುಗಂಧಿ ತನ್ನದೇ ಆದ ವಿಶಿಷ್ಠ ರೀತಿಯಲ್ಲಿ ತಲೆ ಎತ್ತಿ ನಿಂತಿದ್ದಾಳೆ. ರಾಜಕಾರಣಿಗಳನ್ನು ಓಲೈಸುವ, ಜಾತಿ-ಧರ್ಮಗಳಿಗೆ ವಾಲಿಕೊಂಡು ಅದರ ಅಂಡಿನಡಿಯಲ್ಲಿ ಕಾರ್ಯ ನಿರ್ವಹಿಸುವ ಪತ್ರಿಕೆಗಳಿರುವ ಈ ದಿನಗಳಲ್ಲೂ ‘ಸುಗಂಧಿ’ಯಂತ ಅವರೂಪದ, ಮಾಸಪತ್ರಿಕೆ ವಿಶೇಷಾಂಕ ಜನ್ಮತಾಳಿದೆ, ಚೆಂದವಾಗೇ ಮುನ್ನಡೆಯುತ್ತಿದೆ ಎಂದರೆ ಅದು ಕನ್ನಡ ನಾಡು ನುಡಿಯ ಮೇಲಿನ ಪ್ರೀತಿ ಹಾಗೂ ಕಾಳಜಿ ಎಂದರೆ ತಪ್ಪಾಗಲಿಕ್ಕಿಲ್ಲ.

veerakaputra sreenivas2ರಾಜಕೀಯ, ಉಪದೇಶ, ಪಂಥ, ಜಾತಿ-ಧರ್ಮಗಳ ಉದ್ದೇಶಗಳನ್ನು ಹೊಂದಿರದೆ ಮನರಂಜನೆ, ಚಿಂತನೆ, ನಾಟಕ ಹಾಗೂ ಮಕ್ಕಳ ಕಥಾಹಂದರಗಳನ್ನೊಳಗೊಂಡ ಒಂದು ಭಿನ್ನ ಹೊತ್ತಿಗೆಯಿದು. ಸಾಹಿತ್ಯ, ಸಂಗೀತ, ಚಿತ್ರಕಲೆ, ಸಿನಿಮಾ, ಹನಿಗವನ, ಮಕ್ಕಳ ಕಥೆಗಳನ್ನು ಒಳಗೊಂಡಿರುವ ಒಂದು ಸಾಹಿತ್ಯ ಬಂಢಾರವಿದು.

‘ಇಂದಿನ ಮೊಬೈಲೂ ; ನಾಳಿನ ಪ್ರಜೆಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಮಕ್ಕಳ ಜೊತೆ ಚರ್ಚೆಯನ್ನು ಮಾಡಿ, ಮೊಬೈಲ್ ಬಳಕೆ ಹಾಗೂ ಅದರ ಲಾಭ ನಷ್ಟಗಳನ್ನು ಓದುಗರಿಗೆ ಬರಹದ ಮೂಲಕ ಕೃತಿಯಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿರುವ ಬರಹ ಓದುಗರನ್ನು ನಯವಾಗಿ ಸೆಳೆಯುತ್ತದೆ, ಹಿತವಾಗೇ ಕಿವಿಹಿಂಡುವ ಜೊತೆಗೆ ಅಕ್ಷರ ಲೋಕದೊಳಗೆ ಎಳೆದುಕೊಂಡು ಓದಿನ ಖುಷಿಯನ್ನೂ ನೀಡುತ್ತದೆ. ಮಕ್ಕಳ ತಲೆಯಲ್ಲಿ ಯಾವ ರೀತಿಯ ವಿಚಾರಧಾರೆಗಳಿರುತ್ತವೆ ಎಂಬುದನ್ನು ಕೃತಿ ಬಿಚ್ಚಿಡುವ ಪ್ರಯತ್ನವನ್ನು ಮಾಡಿದೆ. ಈ ಕೃತಿ ಇಷ್ಟವಾಗೋದು, ಕೊಂಚ ಭಿನ್ನ ಅನ್ನಿಸೋದು ಇಂಥ ವಿಚಾರಗಳಿಗಾಗಿಯೇ.

‘ಮನಸು ಬದಲಿಸುವ ಮುಖಾಮುಖಿ’ ಎಂಬ ವಸುದೇಂದ್ರ ಅವರು ಬರೆದಿರುವ ಬರಹ ನಮ್ಮ ಬಾಲ್ಯದ ದಿನಗಳೊಮ್ಮೆ ಕಣ್ಣಮುಂದೆ ಅಡ್ಡಾಡುವಂತೆ ಮಾಡುತ್ತದೆ. ನಮ್ಮೂರಿನ ಬಿರಿಬಿಸಿಲು, ಬೇಸಿಗೆಯಲ್ಲಿ ಅಮ್ಮ ಕೂಡಿಟ್ಟ ಹಪ್ಪಳ ಸಂಡಿಗೆಯ ಸವಿಯನ್ನೂ ಬರಹ ನೆನಪಿಸುತ್ತದೆ ಬರಹ.

ಕನ್ನಡದ ಮಟ್ಟಿಗೆ ಬ್ಲಾಗ್ ಆರಂಭದ ದಿನಗಳು ಹಾಗೂ ಬ್ಲಾಗ್ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಅವರ ಕನಸುಗಳನ್ನು ಕೃತಿಯಲ್ಲಿ ಅದ್ಭುತವಾಗಿ ಹೆಣೆದಿಡಲಾಗಿದೆ. ‘ಸುಶ್ರುತ ದೊಡ್ಡೇರಿ’ ಅವರು ತಮ್ಮ ಬ್ಲಾಗ್ ಅನುಭವವನ್ನು, ಅವರ ಕನಸನ್ನು ಹಂಚಿಕೊಂಡಿದ್ದಾರೆ. ಬರಹಗಾರರ ಮಟ್ಟಿಗೆ ಬ್ಲಾಗ್ ಒಂದು ದೊಡ್ಡ ಕೊಡುಗೆ. ಯುವ ಬರಹಗಾರರಿಗೆ, ಅಪೂರ್ವ ಬರಹಗಳಿಗೆ ಬ್ಲಾಗ್ ಗಳು ಒಂದು ವೇದಿಕೆಯನ್ನು ಒದಗಿಸಿಕೊಟ್ಟಿವೆ ಎನ್ನುವ ‘ಸುಶ್ರುತ ದೊಡ್ಡೇರಿ’ ಅವರ ಸಾಲುಗಳು ಇಲ್ಲಿ ಉಲ್ಲೇಖನೀಯ.

ಸುಗಂಧಿಯನ್ನು ಓದುತ್ತಾ ಹೋದರೆ ತನ್ನನ್ನು ತಾನಾಗಿಯೇ ಓದಿಸಿಕೊಂಡು ಹೋಗುತ್ತಾಳೆ. ಆ ಶಕ್ತಿ ಸುಗಂಧಿಯಲ್ಲಿದೆ. ಓದುತ್ತಾ ಕುಳಿತರೆ ಎಲ್ಲಿಯೂ ಓದು ಸಾಕು ಎಂದೆನಿಸುವುದಿಲ್ಲ. ಸುಗಂಧಿಯಲ್ಲಿ ಬರಹಗಳಿಗೆ ತಕ್ಕ ಹಾಗೇ ರೂಪ ತಳೆದಿರುವ ಚಿತ್ರಗಳು ಕೂಡಾ ಸುಗಂಧಿಯ ಅಂಧವನ್ನು ಹೆಚ್ಚಿಸುತ್ತಾ ಹೋಗಿವೆ. ಸುಗಂಧಿಯಲ್ಲಿನ ಚಿತ್ರಗಳು ಓದುಗರಿಗೆ ನಯವಾಗಿ ನಾಟುವಂತಿವೆ.

ಪ್ರಮುಖವಾಗಿ ಮಕ್ಕಳಿಗಾಗಿ ಹಲವಾರು ಮಕ್ಕಳ ಕಥೆ, ಕವನಗಳನ್ನು ಸುಗಂಧಿ ಹೊತ್ತುಕೊಂಡಿದ್ದಾಳೆ. ಮಕ್ಕಳ ಬರಹಗಳೆಂದರೆ, ಓದೋಕೆ ಕುಳಿತ ದೊಡ್ಡೋರ ಕಣ್ಣ ಪರದೆ ಮುಂದೆ ಒಂದೊಂದಾಗಿ ಬಾಲ್ಯದ ಸವಿ ನೆನಪುಗಳೆಲ್ಲ ಕೆನ್ನೆ ಪೂಸಿ ಹೋಗುವಂತೆ ಅನ್ನಿಸುವ ಮಕ್ಕಳ ಬರಹಗಳಿವು.

sugandhiಒಟ್ಟಿನಲ್ಲಿ ಹೇಳಬೇಕಾದರೆ ಸುಗಂಧಿ, ಹಿತವಾದ ಸಾಹಿತ್ಯ ಗಂಧವನ್ನು ಒಳಗೊಂಡಿದ್ದಾಳೆ. ಸಾಹಿತ್ಯಕ್ಕೆ ತಾಕಿ ಕುಳಿತುಕೊಳ್ಳುವ ಚಿತ್ರಕಲೆ, ನಾಟಕ, ಹನಿಗವನ, ಸಂಭಾಷಣೆ, ಸಿನಿಮಾ, ದೃಶ್ಯಕಲೆಗಳನ್ನು ತನ್ನೊಳಗೆ ಕೂಡಿಟ್ಟುಕೊಂಡಿದ್ದಾಳೆ. ಓದುಗರಿಗೆ ಓದಿದಷ್ಟು ಹಿತಭಾವ ಮೂಡುವಂತ ಅಕ್ಷರ ಕುಸುರಿಯನ್ನು ಹೊಂದಿದ್ದಾಳೆ.

ಮುಖ್ಯವಾಗಿ ಸುಗಂಧಿಯ ಸಂಪಾದಕರು ಕನ್ನಡದ ಖ್ಯಾತ ದಿಗ್ಗಜ ಬರಹಗಾರರ ಬರಹಗಳನ್ನು ಒಂದೇ ಹೊತ್ತಿಗೆಯಲ್ಲಿ ಓದುಲು ಅನುಕೂಲ ಮಾಡಿಕೊಟ್ಟಿದ್ದಾರೆ. ಕೆ ವಿ ತಿರುಮಲೇಶ್, ಜಯಶ್ರೀ ಕಾಸರವಳ್ಳಿ, ಗಿರೀಶ್ ಕಾಸರವಳ್ಳಿ, ಸಂಚಾರಿ ವಿಜಯ್, ವಸುದೇಂದ್ರ, ನಂದಕುಮಾರಿ ಮೊದಲಾದವರ ಬರಹಗಳು ಸುಗಂಧಿಯಲ್ಲಿ ಸ್ವಾದ ಹೆಚ್ಚಿಸಿವೆ.

ಪ್ರಕಾಶಕರು ಹಾಗೂ ಗೌರವ ಸಂಪಾದಕರಾದ ವೀರಕಪುತ್ರ ಶ್ರೀನಿವಾಸ ಸಂಪಾದಕರಾದ ಕರ್ಕಿ ಕೃಷ್ಟಮೂರ್ತಿ, ಬಾಲಚಂದ್ರ ಬಿ.ಎನ್’ಅವರು ಸುಗಂಧಿ ಅಚ್ಚುಕಟ್ಟಾಗಿ ಮೂಡುವಂತೆ ಎಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾರೆ.

‍ಲೇಖಕರು Admin

16 August, 2016

2 Comments

  1. Sangeeta Kalmane

    ಸುಗಂಧಿಯ ಪರಿಮಳ ಜಗವೆಲ್ಲ ಸುತ್ತಿ ಬರಲಿ. Congrats Sir

  2. Anonymous

    ಸುಗಂಧಿ ಮಾಸಪತ್ರಿಕೆಯಲ್ಲಿ ಸಾಹಿತ್ಯ,ಕಲೆ, ಸಂಸ್ಕೃತಿ ಬರಹಗಳ ಮೂಲಕ ಕನ್ನಡ ಓದುಗರಿಗೆ ಸುವಾಸನೆ ಬೀರಲಿ ಎಂಬ ನನ್ನ ಸದಾಶಯ.. congrts sir..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading