ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಕಾದಂಬರಿಯನ್ನು ಮತ್ತೊಬ್ಬ ಬರಹಗಾರ ನೂರುಲ್ಲಾ ತ್ಯಾಮಗೊಂಡ್ಲು ವಿಮರ್ಶಿಸಿದ್ದರು
ಅದು ಇಲ್ಲಿದೆ
ಇದಕ್ಕೆ ‘ಅನ್ವೇಷಣೆ’ ಸಾಹಿತ್ಯ ಪತ್ರಿಕೆಯ ಸಂಪಾದಕರಾದ ಆರ್ ಜಿ ಹಳ್ಳಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ
ನಿಮ್ಮ ಅಭಿಪ್ರಾಯಕ್ಕೂ ಸ್ವಾಗತ
[email protected]ಗೆ ನಿಮ್ಮ ಅನಿಸಿಕೆ ಕಳಿಸಿ
ಆರ್ ಜಿ ಹಳ್ಳಿ ನಾಗರಾಜ
ಪ್ರಿಯ ನೂರುಲ್ಲಾ ತ್ಯಾಮಗೊಂಡ್ಲು,
“ಅವಧಿ”ಯ ನಿಮ್ಮ ಮುಕ್ತ ಅಭಿಪ್ರಾಯದ ವಿಮರ್ಶೆ ಓದಿದೆ. ಇವತ್ತು ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ರಾಜಕೀಯ ಕ್ಷೇತ್ರದಲ್ಲೂ ಮುಕ್ತ ಅಭಿಪ್ರಾಯಕ್ಕೆ ಅವಕಾಶ ಇಲ್ಲದಂಥ ವಾತಾವರಣ ಇದೆ.
ನಿಮ್ಮ ಬರಹಕ್ಕೆ ನನ್ನ ಸಹಮತ ಇದೆ. ನವ್ಯದ ಸಂದರ್ಭ ಹಾಗೂ ಅದರ ಜತೆ ಗುರ್ತಿಸಿಕೊಂಡ ಬರಹಗಾರರಿಗೆ ಪಾಶ್ಚಾತ್ಯ ಸಾಹಿತ್ಯದ ಓದು ಇತ್ತು. ಯೂರೋಪಿನಲ್ಲಾದ ಬದಲಾವಣೆ ನಮ್ಮಲ್ಲೂ ಆಗಬೇಕೆಂದು ತವಕಿಸಿ ಸ್ಪಂದಿಸಿದವರು, ವಿದೇಶಕ್ಕೆ ಹೋಗಿ ಇಂಗ್ಲಿಷ್ ಶಿಕ್ಷಣ ಪಡೆದವರು ಇಲ್ಲಾ, ಇಲ್ಲೇ ಇದ್ದು ಇಂಗ್ಲಿಷ್ ಕಲಿತ ಮೇಷ್ಟ್ರುಗಳಿಗೆ ಅದರ ಗಾಳಿ ಸೋಂಕಿತ್ತು.
ಉದಾ: ಯು.ಆರ್. ಅನಂತಮೂರ್ತಿ ಓದಿದ್ದ ಇಂಗ್ಲಿಷ್ ಸಾಹಿತ್ಯದಿಂದ ಪ್ರಭಾವಿತರಾಗಿ ಕತೆ, ಕಾದಂಬರಿ ಬರೆದರೆ; ಸುಮತೀಂದ್ರ ನಾಡಿಗರು ಆ ಮೂಲ ಹುಡುಕುವ CID ಕೆಲಸ ಮಾಡಿ ನೇರವಾಗಿ ಕದ್ದ ವಿಚಾರ ಬರೆದು ಸಾಂಸ್ಕೃತಿಕ ಲೋಕ ಬೆಚ್ಚುವಂತೆ ಮಾಡಿದ್ದು ನಿಜ.
“ಹಾಣಾದಿ” ಕಾದಂಬರಿಯ ಚಿಕ್ಕ ವಯಸ್ಸಿನ ಹುಡುಗನನ್ನು ಅತಿಯಾಗಿ ಮೆರೆಸಿದ್ದು ನಿಜ. ಅದಕ್ಕೆ social media ಕಾರಣ. ಇದರ ಸಂಪರ್ಕದ ಆಕಡೆಯ ಹುಡುಗರೇ ಕಾದಂಬರಿಯನ್ನು ವಿಜೃಂಭಿಸಿದರು. ಈ ಹುಡುಗನನ್ನು ಕನ್ನಡದ “Star writer” ಎಂದರು. ನಾನು ಈ ಪದದ ಬಳಕೆ ಬಗ್ಗೆ ಆಕ್ಷೇಪಣೆ ಎತ್ತಿದ್ದೆ. ಈ ರೀತಿ ಅಟ್ಟಕ್ಕೇರಿಸುವ ಪದ ಬಳಕೆ ಮಾಡುವ ಮುನ್ನ ಎಚ್ಚರ ವಹಿಸಿ ಎಂದಿದ್ದೆ.
ಅದಕ್ಕೆ ಮತ್ತೊಬ್ಬ ಸಂವೇದನಾಶೀಲ ಬರಹಗಾರರು ಹೇಳಿದ್ದು: “ಯುವ ಬರಹಗಾರನಿಗೆ ಪ್ರೋತ್ಸಾಹದಾಯಕ ಮಾತು” ಎಂದಿದ್ದರು! ಎಲ್ಲಿಗೆ ಬಂತು ನೋಡಿ, ಒಬ್ಬ ಲೇಖಕನನ್ನು ಬೇಗ ಸಮಾಧಿ ಮಾಡುವವರ ಮಾತನ್ನು! ಆ ಯುವ ಲೇಖಕನನ್ನು ಬೆಂಗಳೂರಿಗೂ ಕರೆದು ಸಂವಾದ ಮಾಡಿದರು! ಇವರನ್ನು ಅಂಧಾನುಕರುಣೆ ಮಾಡೋ ದೊಡ್ಡ ಯುವಪಡೆಯೇ ಇದೆ. “ಪೆದ್ರೊ ಪರಮೊ” ಹಾಗೂ “ಹಾಣಾದಿ”ಗಳ ಸಾಮ್ಯತೆ ಸಂಬಂಧಗಳ ಅನುಕರಣೆ (ಪ್ರಭಾವ ಅಲ್ಲ) ಬರಹದಲ್ಲಿ ಸ್ಪಷ್ಟವಾಗಿ ಮೂಡಿದೆ. ನಮಗೆ ಅನ್ಯಭಾಷಾ ಕೃತಿಗಳ ಓದು ಕಡಿಮೆ ಆಗುತ್ತಿದೆಯಾ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕೋ ಸೀರುಂಡೆಯೇ ಸಂಪತ್ತು ಆಗಿದೆಯೋ ಕಾಣೆ.
ಮತ್ತಷ್ಟು ಬರೆಯುವೆ. ಸಧ್ಯ ಇಷ್ಟು ಸಾಕು.
0 ಪ್ರತಿಕ್ರಿಯೆಗಳು