ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳ್ಳಿ ಹೈದನೂ ಬೇಕು ಟಿ ಆರ್ ಪಿ ಗಾಗಿ

ಬಡತನ, ಅಸಹಾಯಕತೆ, ದೌರ್ಬಲ್ಯ …ಎಲ್ಲವೂ ಟಿಆರ್ ಪಿಗಾಗಿ!

ಚಿತ್ರಾ ಸಂತೋಷ್

ಬಡತನ, ಅಸಹಾಯಕತೆ, ಮನುಷ್ಯನ ದೌರ್ಬಲ್ಯ….ಎಲ್ಲವುಗಳನ್ನೂ ಟಿಆರ್ ಪಿಗಾಗಿ ಬಳಸಿಕೊಳ್ಳುತ್ತಾರಲ್ಲಾ…..

ಹೀಗೆಂದು ಅನಿಸಿದ್ದು ನಿನ್ನೆ ಖಾಸಗಿ ಚಾನೆಲ್ ವೊಂದರಲ್ಲಿ ಪ್ರಸಾರವಾಗುತ್ತಿರುವ “ಬಿಗ್ ಬಾಸ್” ರಿಯಾಲಿಟಿ ಶೋ ಗೆ “ಹಳ್ಳಿಹೈದ” ರಿಯಾಲಿಟಿ ಶೋದಲ್ಲಿ ಗೆದ್ದ ಹುಡುಗ ರಾಜೇಶ್ ಎಂಟ್ರಿ ಕೊಟ್ಟಾಗ… ರಾಜೇಶ್ ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಿದ್ದು, ಬಳಿಕ ಸಿನಿಮಾದಲ್ಲಿ ನಟಿಸಿದ್ದು, ಅದು ಬಿಡುಗಡೆಯಾಗದೆ ಬಾಕಿ ಉಳಿದಾಗ ಕಾದು ಕಾದು ಸುಸ್ತಾಗಿ ಆತ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದು… ಈ ಕುರಿತು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದು…. ಗೊತ್ತಿರುವ ವಿಚಾರವೇ. ಅದೇ ಮುಗ್ಧ ಹುಡುಗ ಈಗ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾನೆ…. ಆತ ಅಲ್ಲಿಗೆ ಎಂಟ್ರಿ ಕೊಟ್ಟ ಸಂದರ್ಭ ಹೀಗಿತ್ತು… ಅಲ್ಲಿರುವ ಸ್ಪರ್ಧಿಗಳಿಗೆ ಆಲ್ ರೆಡಿ ಒಂದು ಟಾಸ್ಕ್ ನೀಡಲಾಗಿತ್ತು… ಅದು “ಹುಚ್ಚರು ಮತ್ತು ಡಾಕ್ಟರ್ ”ಗಳು. ಹಾಗಾಗಿ, ಸ್ಪರ್ಧಿಗಳು ತಮ್ಮ ಟಾಸ್ಕ್ ಗಾಗಿ ಆಡುತ್ತಿದ್ದರು… ಅದೇ ಸಮಯದಲ್ಲಿ ಪಂಚೆ ಉಟ್ಟುಕೊಂಡು ರಾಜೇಶ್ ಕಾರ್ಯಕ್ರಮದ ಮನೆಗೆ ಬಂದ… ಕೆಲವರು ಥೇಟ್ ಹುಚ್ಚರಂತೆ ಆಡುತ್ತಿದ್ದರು…. ಅವನು ನೆಟ್ಟನೋಟದಿಂದ ನೋಡುತ್ತಲೇ ಇದ್ದ…. ಬಳಿಕ “ಹುಚ್ಚರಲ್ಲ, ಅದು ಟಾಸ್ಕ್ ” ಎಂದು ವಿವರಿಸಿದ್ರು….!!

ಇಲ್ಲೊಂದು ಸಂಗತಿಯನ್ನು ನೆನಪಿಸಬೇಕು…

ಕೆಲ ತಿಂಗಳ ಹಿಂದೆ ರಾಜೇಶ ಮಾನಸಿಕ ಅಸ್ತಸ್ಥನಾಗಿ ಆಸ್ಪತ್ರೆಗೆ ಸೇರಿದ್ದ. ಬಳಿಕ ಅವನು ಸುಧಾರಿಸಿಕೊಂಡು ವಾಪಸ್ ಮನೆಗೆ ಬಂದಾಗ ಕೆಲ ಖಾಸಗಿ ಚಾನೆಲ್ ಗಳು ಅವನನ್ನು ಸಂದರ್ಶನ ಮಾಡಿದ್ದವು. ಆವಾಗ ಅವನ ವೈದ್ಯರು ಒಂದು ಮಾತು ಹೇಳಿದ್ದರು. ಅದೇನೆಂದರೆ,”ರಾಜೇಶ್ ಆರೋಗ್ಯವಂತನಾಗಿ ಕಾಣಬಹುದು. ಆದರೆ, ಅವನು ಸುಧಾರಿಸಲು ಸಾಕಷ್ಟು ಸಮಯ ಬೇಕು. ಹಾಗಾಗಿ, ಯಾರೂ ಅವನಿಗೆ ತೊಂದರೆ ಕೊಡಬಾರದು” ಎಂದು. ಆದರೆ, ಕೆಲ ವಾಹಿನಿಗಳಿಗೆ ವೈದ್ಯರ ಮಾತು ಅರ್ಥವಾಗಲೇ ಇಲ್ಲ….!!

ಹಾಗಂತ ಆ ಪ್ರೋಗ್ರಾಂ…ಕೆಟ್ಟದ್ದು ಎಂದು ನಾನು ಹೇಳುತ್ತಿಲ್ಲ. ಬದಲಾಗಿ ಆ ಮುಗ್ಧ ಹುಡುಗನ ಬಡತನ, ಅಸಹಾಯಕತೆ, ದೌರ್ಬಲ್ಯ, ಅನಾರೋಗ್ಯ, ಮಾನಸಿಕ ಸ್ಥಿತಿ…ಎಲ್ಲವನ್ನೂ ಹರಾಜು ಮಾಡುತ್ತಿದ್ದರಲ್ಲಾ ಎನಿಸುತ್ತೆ. ನಿನ್ನೆ ಕೆಲ ಸ್ಪರ್ಧಿಗಳು ಅವನ ಮನೆ, ಹಿನ್ನೆಲೆ…ಕೇಳುತ್ತಿದ್ದರು… ಆತ ಹೇಳುತ್ತಿದ್ದ, “ನಮ್ಮನೆಗೆ ಕರೆಂಟು ಇಲ್ಲ. ಟೀವಿ ಇಲ್ಲ. ಜೇನು ತೆಗೆದು ಬದುಕು ಸಾಗಿಸ್ತೀವಿ…..”ಹೀಗೆ ಇಡೀ ಹಾಡಿ ಬದುಕು, ಅವನೂರಿನ ಮಾಟ-ಮಂತ್ರ ಎಲ್ಲವುಗಳ ಬಗ್ಗೆ ಅತ್ಯಂತ ಮುಗ್ಧವಾಗಿ ಹೇಳುತ್ತಿದ್ದ. ಅವನ ಮಾತಿನ ಧಾಟಿ ನೋಡಿದರೆ…ಅವನಿನ್ನೂ ಸಂಪೂರ್ಣವಾಗಿ ಗುಣಮುಖವಾಗಿದ್ದಾನೆಂದು ನಂಬುವಂತಿಲ್ಲ. ಈ ಕಾರ್ಯಕ್ರಮ ಎಷ್ಟು ನಾಟಕೀಯ ಎನ್ನುವುದಕ್ಕೆ ಒಂದು ಉದಾಹರಣೆ. ರಾಜೇಶನಿಗೆ ಅಲ್ಲಿರುವ ಕ್ಯಾಮರಾಗಳ ಬಗ್ಗೆ ಅರಿವಿರಲಿಲ್ಲ. ಅಲ್ಲಿರುವ ಅಷ್ಟು ಕ್ಯಾಮೆರಗಳನ್ನು ನೋಡಿ “ಇವು ಕ್ಯಾಮರಗಳಾ?’ ಅಂಥ ರಾಜೇಶ ಕೇಳ್ತಾನೆ. ನಂಗೊಂದು ಡೌಟು…ಈ ಹಿಂದೆ ‘ಹಳ್ಳಿಹೈದ” ರಿಯಾಲಿಟಿ ಶೋದಲ್ಲಿ ಸಕತ್ ಪಳಗಿದ್ದ ರಾಜೇಶಂಗೆ ಕ್ಯಾಮರಾದ ಅರಿವು ಇರಲ್ವೇ? ಅಥವಾ ಸ್ಕ್ರಿಪ್ಟ್ ಕೊಟ್ಟು ಆ ಹುಡುಗನ ಬಾಯಲ್ಲಿ ಇದೆಲ್ಲಾ ಹೇಳಿಸಿ ಅವನನ್ನು ಇನ್ನಷ್ಟು ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದರಾ ಗೊತ್ತಾಗ್ತಿಲ್ಲ.

ಈ ವಿಷ್ಯದ ಕುರಿತು ಚರ್ಚಿಸುವಾಗ ಕೆಲವರು “ಭಾಗವಹಿಸುವುದು ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು. ರಾಜೇಶ ಒಪ್ಪಿಕೊಂಡೇ ಅವಕಾಶ ಕೊಟ್ಟಿರಬಹುದು. ಹೀಗಿರುವಾಗ ನೀವು ಅದನ್ನು ವಿರೋಧಿಸುವುದು ಸರಿಯಲ್ಲ” ಎಂದು ವಾದಿಸಿದ್ದರು. “ಖಂಡಿತವಾಗಿಯೂ ಅವರವರ ಭಾವಕ್ಕೆ ಬಿಟ್ಟಿದ್ದು” ….ಆದರೆ, ಮನುಷ್ಯನ ದೌರ್ಬಲ್ಯಗಳು ಹರಾಜಾಗುತ್ತಿರುವುದನ್ನು ನೋಡಿ ನನ್ನ ಮನಸ್ಸು ನೋವಿನಿಂದ ಅಳುತ್ತಿದೆ. ಮನುಷ್ಯನ ಜ್ಞಾನವನ್ನು ಹೆಚ್ಚಿಸುವ, ಮನುಷ್ಯನ ಬೆಳವಣಿಗೆಗೆ, ಅಭಿವೃದ್ಧಿಗೆ ಪೂರಕವಾಗುವ ಒಳ್ಳೆಯ ಕಾರ್ಯಕ್ರಮಗಳು ಬರಲಿ…ಅದರ ಬದಲಾಗಿ “ದಾರಿ ತಪ್ಪಿಸುವ, ಅಸ್ವಸ್ಥರನ್ನು ಇನ್ನಷ್ಟು ಅಸ್ವಸ್ಥರನ್ನಾಗಿಸುವ, ಅತ್ಯಂತ ಚೀಪ್ ಎಂಟೈನ್ ಮೆಂಟ್ ನೀಡುವ ಇಂಥ ಕಾರ್ಯಕ್ರಮಗಳ ಅಗತ್ಯವಿತ್ತೇ? ಹಾಡಿಯಲ್ಲಿ ಮತ್ತೆ ಬದುಕ ಕಟ್ಟಲು ಹೋದ ಆ ಹುಡುಗನ ಮುಗ್ಧತೆ, ಅಸಹಾಯಕತೆಯನ್ನು ತೆರೆ ಮೇಲೆ ತೋರಿಸಿ ಟಿಆರ್ ಪಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆಯೇ? ಅವನಿಗೆ ಒಂದು “ಅವಕಾಶ” ನೀಡಲಾಗಿದೆ ಎನ್ನುವುದಾದರೆ…ಅವನ ಆರೋಗ್ಯ ಸುಧಾರಣೆಗೆ ಸಹಾಯ ಮಾಡಲಿ…ಆಗ ಒಂದು ಬೆಳೆಯುವ ಹುಡುಗನ “ಭವಿಷ್ಯ” ಗಟ್ಟಿಯಾದಂಗೆ ಆಗುತ್ತೆ. ಮುಂದೆ ಅವನ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗಬಹುದು.

‍ಲೇಖಕರು avadhi

28 April, 2013

1 Comment

  1. Pramod

    ನೀವು ಹೇಳಿದ್ದು ಸತ್ಯ. ಎಲ್ಲವೂ ಮಾರಾಟಕ್ಕಿಟ್ಟಿದ್ದಾರೆ.
    ಕನ್ನಡ ಏಕೈಕ ಶುದ್ಧ, ಜಾಸ್ತಿ ರಿಯಾಲಿಟಿ ಶೋ ಇಲ್ಲದ ಕುಟು೦ಬದೆಲ್ಲರೂ ನೋಡುವ೦ತಹ ಈ ಟೀವಿಗೆ ಸುವರ್ಣದಿ೦ದ ಗುಳೇ ಬ೦ದವರು ಈ ಟೀವಿಯ ಹೆಸರು ಕೆಡಿಸಿಬಿಟ್ಟರು. ಬಿಗ್ ಬಾಸ್ ಬೇಕಾಗಿಯೇ ಇರಲಿಲ್ಲ. ಈ ಟೀವಿಗೆ ಒ೦ದು ನಿಮಿಷದ ಮೌನಾಚರಣೆ. ಬೌದ್ಧಿಕ ಅನಾರೋಗ್ಯದಿ೦ದ ಬಳಲುತ್ತಿರುವ ಪ್ರೋಗ್ರಾಮ್ ಹೆಡ್ ಗಳು ಆದಷ್ಟು ಬೇಗ ರಿಕವರ್ ಆಗಲಿ. ಹಾಗೆಯೇ ಸುದೀಪ್ ಸ್ವಲ್ಪ “and” ಹೇಳುವುದು ಕಮ್ಮಿ ಆಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading