ಹನೇಹಳ್ಳಿಯ ಬ್ರಹ್ಮ ಇನ್ನಿಲ್ಲ. ..
೪೦ ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಚಿತ್ತಾಲರು ಇನ್ನಿಲ್ಲ. ಅವರಿಗೆ ೮೬ ವರ್ಷ ವಯಸ್ಸಾಗಿತ್ತು. ’ಶಿಖಾರಿ’, ’ಛೇದ’, ’ಓಡಿಹೋದ ಮುಟ್ಟಿಬಂದ ಬರೆದ’, ನಮ್ಮೊಳಗೆ ಹನೇಹಳ್ಳಿಯನ್ನು ಕಟ್ಟಿಕೊಟ್ಟ ಚಿತ್ತಾಲರು ಹೋದದ್ದೆಲ್ಲಿಗೆ….
ಚಿತ್ತಾಲರನ್ನು ನೋಡಿ ಬಂದು ಬಿ ಎಂ ಬಶೀರರು ಬರೆದ ಕವನ ನಿಮಗಾಗಿ :
ಚಿತ್ತಾಲರ ಜೊತೆ ಸಂಜೆ…
….ಕೇಳಿದರು
ಎಲ್ಲಿಂದ ಬಂದೆ?
ನಿಮ್ಮೆದೆಯಿಂದ
ಎಂದೆ
ದಿನವಿಡೀ ದುಡಿದು
ಬಳಲಿದ ಶಹರದಂತೆ ಒರಗಿದರು
ಆ ಸೋಫಾದಲ್ಲಿ
ಕೇಳಿದೆ ಇಲ್ಲಿ
ಯಾವ ಒಳದಾರಿಯಲ್ಲಿ ನಡೆದರೆ
ಹನೇಹಳ್ಳಿ?
ಅಲ್ಲಲ್ಲಿ ಬಿತ್ತಿ
ಬೆಳೆಸಿದ ವೌನ-
ದ ಗಿಡದಲ್ಲಿ ಮಾತು
ಚಿಗುರುವ ಹೊತ್ತು
ಅಸಂಖ್ಯ ಬೋಗಿಗಳನ್ನು ಹೊತ್ತ
ಗಾಡಿಯೊಂದು
ದೀಪದ ಸನ್ನೆಗಾಗಿ ಕಾಯುತ್ತಿತ್ತು!
ತೆರೆದ ಬಾಲ್ಕನಿಯಾಚನೆ
ಶಹರವನ್ನು ಆಳುವ ಕಡಲು
ಬೀಸುವ ಗಾಳಿಗೆ
ಪಟಪಟನೆ ಬಡಿದುಕೊಳ್ಳುವ ಅದರ
ರಕ್ತವರ್ಣದ ಸೆರಗು
ತೆಕ್ಕೆಯಲ್ಲಿ ಅಧರಕ್ಕೆ ಅಧರ
ಒತ್ತೆ ಇಟ್ಟವರು!
ಇಬ್ಬರೆಂದರೆ ಬರೇ ಇಬ್ಬರು
ನಾನು ಮತ್ತು ಅವರು
ಹಾಯಿ ದೋಣಿಯಂತೆ ತೇಲುತ್ತಿರುವ
ಕತೆಯ ಸಾಲೊಂದನ್ನು
ಏರಿ ಕುಳಿತಿದ್ದೇವೆ…
ಮೊರೆವ ಎದೆಯೊಳಗೆ
ಭೋರ್ಗರೆವ ಅಕ್ಷರದ ಕಡಲು
ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ
ನನಗೇಕೆ ಮುಳುಗುವ ಚಿಂತೆ…?
voice is silent when need
……..ಕತೆಗಾರ ನನ್ನ ಪಕ್ಕದಲ್ಲೇ ಅಂಬಿಗನಂತೆ
ಹುಟ್ಟು ಹಾಕುತ್ತಿರುವಾಗ……..
ಯಶನೆ, ಹ್ರದಯವಂತನೆ, ಚಿತ್ತ ಆಲದಮರವೆ
ಹರಡುವುದು ಸಾರಸ್ವತದಾಕಾಶದಗಲ ಕತೆ ಕಥನ ಗೊಂಚಲು
ಏಕೆಂದರೆ, ನೀವು ಹೋಗಿರುವುದೀಗ ಅದರ ಆಳ ಬೇರಾಗಿ ಮತ್ತೆ ಬಿಳಲಾಗಿ