ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಣತೆ ಹಚ್ಚೋಣ ನಾವೂ..

ಎನ್ ಸಂಧ್ಯಾರಾಣಿ 

ಜುಲೈ ೧, ೨೦೧೨. ಅಂದು ಬೆಂಗಳೂರಿನ ಗಾಂಧಿಭವನದಲ್ಲಿ ವಿಶಿಷ್ಟ ರೀತಿಯಲ್ಲಿ ಕರ್ನಾಟಕದ ಪತ್ರಿಕಾ ದಿನವನ್ನು ಆಚರಿಸಲಾಯಿತು.  ಅಂದು ಗಾಂಧಿಭವನದಲ್ಲಿ ಇಬ್ಬರು ಅಶಾಂತ ಸಂತರಿದ್ದರು, ಒಬ್ಬರು ಪಿ ಸಾಯಿನಾಥ್, ಇನ್ನೊಬ್ಬರು ದೇವನೂರು ಮಹಾದೇವ. ಇಬ್ಬರನ್ನು ಸೇರಿಸಿದ್ದು ಒಂದು ಬರ.

ಪಿ ಸಾಯಿನಾಥ್ ಅವರ Everybody loves a good drought ಅನ್ನು ಕನ್ನಡದ ಹಿರಿಯ ಪತ್ರಕರ್ತರಾದ ಜಿ ಎನ್ ಮೋಹನ್ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎಂದು ಕನ್ನಡಕ್ಕೆ ಅನುವಾದಿಸಿದ್ದರು. ಅಂದು ಆ ಪುಸ್ತಕದ ಬಿಡುಗಡೆ. ಅದು ಕನ್ನಡಿಗರಿಗೆಲ್ಲಾ ಇಷ್ಟವಾಗಿ ನಾಲ್ಕು ವರ್ಷಗಳಾಯಿತು.  ಈಗ ಭಾರತದ DSC_5843ಮಾಧ್ಯಮಕ್ಕೆ ಅಭಿವೃದ್ಧಿ ಪತ್ರಿಕೋದ್ಯಮದ ವ್ಯಾಕರಣ ಕಲಿಸಿದ ಪಾಲಗುಮ್ಮಿ ಸಾಯಿನಾಥ್ ಅವರ ಸಮ್ಮುಖದಲ್ಲಿ ಕರ್ನಾಟಕ ಸರಕಾರ ಜಿ ಎನ್ ಮೋಹನ್ ಅವರಿಗೆ ೨೦೧೪ನೆಯ ಸಾಲಿನ ’ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿಯನ್ನು ಕೊಟ್ಟಿದೆ. ಅದೇ ದಿನ, ಅದೇ ಪಿ ಸಾಯಿನಾಥ್ ಮತ್ತು ಅದೇ ಜಿ ಎನ್ ಮೋಹನ್.  ಇದೊಂದು ಸುಂದರ ಕಾಕತಾಳೀಯ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪಿ ಸಾಯಿನಾಥ್ ಅವರು ತಣ್ಣನೆಯ ದನಿಯಲ್ಲಿ ಅಂಕಿ ಅಂಶಗಳನ್ನು ಮಂಡಿಸುತ್ತಲೇ ನಮ್ಮಲ್ಲಿ ಮೂಡಿಸಿದ ತಲ್ಲಣ ಮತ್ತು ಗಿಲ್ಟ್ ಖಂಡಿತಾ ತಣ್ಣಗಿರಲಿಲ್ಲ.  ’ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇರುವುದು ಪತ್ರಕರ್ತರಿಗಲ್ಲ, ಪತ್ರಿಕೆಗಳ ಮಾಲೀಕರಾದ ಕಾರ್ಪೋರೇಟ್ ಕಂಪನಿಗಳಿಗೆ… ಪ್ರಜಾಪ್ರಭುತ್ವವನ್ನು ಪತ್ರಿಕೆಗಳು ಉಳಿಸಬೇಕು ನಿಜ, ಆದರೆ ಪತ್ರಿಕೋದ್ಯಮದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸುವವರು ಯಾರು?’ ಎಂದ ಸಾಯಿನಾಥ್ ಅವರ ದನಿಯಲ್ಲಿದ್ದದ್ದು ಗಾಢ ವಿಷಾದ.

ಪ್ರಶಸ್ತಿ ಸ್ವೀಕರಿಸಿದ ಜಿ ಎನ್ ಮೋಹನ್ ಅವರು ಮಾತನಾಡಿ, ’ಪತ್ರಕರ್ತರ ಕರ್ತವ್ಯವೇ ಜನಗಳ ದನಿಯನ್ನು ಸರ್ಕಾರಕ್ಕೆ ತಲುಪಿಸುವುದು.  ಅವರು ಮಾಡಬೇಕಾದ ಕೆಲಸ ಮಾಡುವುದಕ್ಕೆ ಪ್ರಶಸ್ತಿ ಕೊಡಬೇಕಾಗಿದೆ ಎನ್ನುವುದೇ ನಾವು ಯೋಚಿಸಬೇಕಾದ ವಿಷಯ’ ಎಂದು ಮಾತು ಪ್ರಾರಂಭಿಸಿದರು.  ಪತ್ರಕರ್ತರಾಗಿರುವುದರ ಜೊತೆಜೊತೆಯಲ್ಲಿಯೇ ಕವಿಯೂ ಆಗಿರುವ ಜಿ ಎನ್ ಮೋಹನ್ ಜಿ ಎಸ್ ಎಸ್ ರವರ ’ಎದೆ ಎದೆಗಳ ನಡುವೆ ಇರುವ ಸೇತುವೆಗಳು ಕುಸಿದಿವೆ’ ಎಂದು ಹೇಳಿದ್ದು ಈ ಸಂದರ್ಭದಲ್ಲಿ ಮಾರ್ಮಿಕವಾಗಿತ್ತು.

ಪಿ ಸಾಯಿನಾಥ್ ಭಾರತವನ್ನು ನೋಡುವ ರೀತಿಯನ್ನು ಹೇಳುತ್ತಾ ಅವರು, ಭಾರತ ಎಂದರೆ ಒಂದು ಭಾರತವಲ್ಲ, ಎರಡು ಭಾರತ, ಒಂದು ಐಪಿಎಲ್ ಭಾರತ ಇನ್ನೊಂದು ಬಿಪಿಎಲ್ ಭಾರತ.  ಐಪಿಎಲ್ ಭಾರತ ಹರಾಜು ಕೂಗುತ್ತಾ, ತಾನೂ ಹರಾಜಾಗುತ್ತಾ, ಬಿಪಿಎಲ್ ಭಾರತಕ್ಕೆ ಸೇರಿದ ನೀರು, ಹಸಿರು, ವಿದ್ಯುತ್ ಗಳನ್ನು ಲೂಟಿ ಮಾಡುತ್ತಾ, ಸುಖ ಪಡುವ, ಜಾಹಿರಾತುಗಳಲಿಗೆ ದುಡ್ಡು ಸುರಿಯುವ, ಅದರಿಂದ ದುಡ್ಡು ಬಾಚುತ್ತಿರುವಾಗ ಬಿಪಿಎಲ್ ಭಾರತ ಇದೇನನ್ನೂ ಎಟುಕಿಸಿಕೊಳ್ಳಲಾರದೆ ಬಳಲುತ್ತಿದೆ.

ಇಂದು ಐಪಿಎಲ್ ಭಾರತ ಬಿಪಿಎಲ್ ಭಾರತದ ‘ಅನ್ನಭಾಗ್ಯ’ ಯೋಜನೆಯನ್ನು ಕುಹಕವಾಡುತ್ತದೆ.  ಹಾಗೆ ಯಾವ ಮಾಧ್ಯಮಗಳಾದರೂ ಅದನ್ನು ಲೇವಡಿ ಮಾಡಿದರೆ ಭಾರತದ ವಾಸ್ತವ ಸ್ಥಿತಿ ಅರಿಯದೆ ಐಪಿಎಲ್ ಭಾರತವನ್ನು ಅವು ಪ್ರತಿನಿಧಿಸುತ್ತಿವೆ ಎಂದು ಅರ್ಥ.

uchalya‘ಉಚಲ್ಯಾ’ ಆತ್ಮಕತೆಯನ್ನು ಉದಾಹರಿಸಿದ ಮೋಹನ್ ಹಸು ಎಮ್ಮೆ ಹಾಕುವ ಸಗಣಿಯಲ್ಲಿ ಜೀರ್ಣವಾಗದೆ ಉಳಿದ ಜೋಳದ ಕಾಳುಗಳನ್ನು ಆರಿಸಿ ರೊಟ್ಟಿ ತಟ್ಟುವ ಎಷ್ಟೋ ಕುಟುಂಬಗಳು ನಮ್ಮಲ್ಲಿವೆ.  ಅದನ್ನು ಅರಿಯದವರು ಮಾತ್ರ ’ಅನ್ನಭಾಗ್ಯ’ವನ್ನು ವಿರೋಧಿಸುತ್ತಾರೆ ಎಂದು ನೋವಿನಿಂದ ಹೇಳಿದರು.

ಅದೇ ವಿಷಯದಲ್ಲಿ ಮಾತು ಮುಂದುವರಿಸಿದ ಅವರು ಪರಪ್ಪನ ಅಗ್ರಹಾರದಲ್ಲಿರುವ ಕೈದಿಯ ಪಾಲಿಗೆ ಸಿಗುವಷ್ಟು ಅನ್ನ, ರಾಗಿ, ಜೋಳ ಸಹ ಒಂದು ರೈತ ಕುಟುಂಬಕ್ಕೆ ಸಿಗುತ್ತಿಲ್ಲ ಎನ್ನುವಾಗ ಅವರಿಗೆ ಸಿಗುವ ಅನ್ನ, ರಾಗಿ, ಹಾಲು ನೋಡಿ ಕುಹಕವಾಡದೆ ಅದನ್ನು ಅರ್ಥೈಸಿಕೊಳ್ಳುವ ಕಣ್ಣುಗಳು ನಮಗಿಂದು ಬೇಕಾಗಿವೆ ಎಂದರು.

ಎಲ್ಲವೂ ಬ್ರಾಂಡ್ ಗಳಾಗಬೇಕಾಗಿರುವ ಈ ಕಾಲಮಾನದಲ್ಲಿ ಹಾಗೆ ಬ್ರಾಂಡ್ ಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ಇರುವವರು ಇಂದು ಎಲ್ಲರ ಕಣ್ಣಿಗೂ ಬೀಳುತ್ತಿರುವುದು ಜಾಗತೀಕರಣದ ದುರಂತ.  ಒಂದು ಕೋಣೆಯಲ್ಲಿ ಪೂರ್ತಿ ಕತ್ತಲಾಗಿದೆ.  ಎಲ್ಲರೂ ಅಯ್ಯೋ ಕತ್ತಲಾಗಿದೆ ಎಂದು ಕೊರಗುವಾಗ ಒಂದು ಪುಟ್ಟ ಹಣತೆ ’ಯೋಚನೆ ಮಾಡಬೇಡಿ, ನಾನಿದ್ದೇನೆ’ ಎಂದಿತಂತೆ.

ಆ ರೀತಿಯಲ್ಲಿ ನಾವು ಮಾಧ್ಯಮದಲ್ಲಿರುವವರು ನಮ್ಮ ನಮ್ಮ ಪಾಲಿಗೆ ನಾವು ಒಂದೊಂದು ಪುಟ್ಟ ದೀಪ ಹಚ್ಚಿದರೆ ಬೆಳಕನ್ನು ಕಾಣಬಹುದು ಎಂದು ಕವಿ ರವೀಂದ್ರನಾಥ ಟಾಗೂರ್ ಅವರ ಕವಿತೆಯ ಉದಾಹರಣೆ ಕೊಡುವ ಮೂಲಕ  ಅವರು ತಮ್ಮ ಮಾತುಗಳನ್ನು ಮುಗಿಸಿದರು.  ಹೌದು ವ್ಯವಸ್ಥೆಯೇ ಕೆಟ್ಟಿರುವಾಗ ನಮ್ಮೊಬ್ಬರಿಂದ ಏನಾದೀತು ಎಂದು ಕೈಕಟ್ಟಿ ಕೂರುವ ಬದಲು ಆ ಮಿಣಿಮಿಣಿ ಹಣತೆಯ ಆತ್ಮವಿಶ್ವಾಸ ಮತ್ತು ಆತ್ಮಬಲ ನಮ್ಮದಾಗಿರಲಿ.

‍ಲೇಖಕರು Admin

2 July, 2016

7 Comments

  1. ನಾಗರಾಜ್ ಹರಪನಹಳ್ಳಿ

    ಪತ್ರಿಕಾ ದಿನಾಚರಣೆಯ ದಿನ ಮತ್ತೊಮ್ಮೆ ಓದಿದೆ. ಪತ್ರಿಕೋದ್ಯಮದ ಇಂದಿನ ದುರಂತ ಕಣ್ಮುಂದೆ ಬಂತು. ಹಾಗೆ ಅದನೆಲ್ಲಾ ಮರೆತು ದೀಪ ಹಚ್ಚುವ ಕೆಲಸ ಮಾಡ್ತಾ ಇರಬೇಕು ಅನ್ನಿಸಿತು

  2. Shyamala Madhav

    ಜಿ. ಎನ್ . ಮೋಹನ್ ಅವರಿಗೆ ಅಭಿನಂದನೆ. ಊರಿಗೋ, ಬೆಂಗಳೂರಿಗೋ ಬಂದಾಗ ಪುಸ್ತಕ ಕೊಳ್ಳುವೆ.
    – ಶ್ಯಾಮಲಾ

  3. Sangeeta Kalmane

    ಹೌದು ಸರ್. ನಿಮ್ಮ ಮಾತು ನಿಜ.

  4. Narasimha Murthy.R

    Hearty congratulations!

  5. Sudha chidanand Gowd

    Uchalya..I read it when I was in degree…
    This marati autobiography had created sensation when it appeared in kannada ……which desturbs every heart. ..One more congrats for mentioning uchalya, gnm sir

  6. RAJU B R

    a thought for true

  7. H S Eswara

    My dear Mohan,

    Better late than never. Congratulations on winning the 2014 award for Development Journalism. You had very kindly sent me a copy of your book, ‘Bara Endare Ellarigu Istha,’ some two or three years back. It hugely helped me to enhance my understanding of the field. I wish you many more laurels in the coming times. With best wishes,
    Affectionately,
    HS Eswara.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading