ಲಕ್ಷ್ಮಣ್
ಇವರ ಹೆಸರು ಪಾಲಗುಮ್ಮಿ ಸಾಯಿನಾಥ. ಮಾಧ್ಯಮ ಲೋಕದ ಅಶಾಂತ ಸಂತ, ಭಿನ್ನ ಪಯಣಿಗ. ಇವರ ಸಮಗ್ರ ಪರಿಚಯವಾಗಬೇಕೆಂದರೆ Everybody loves a good drought ಎನ್ನುವ ಪುಸ್ತಕ ಓದಬೇಕು. ನೀವು.ಕನ್ನಡದಲ್ಲಿ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಅಂತ ತುಂಬ ಚೆಂದವಾಗಿ ಅಚ್ಚುಕಟ್ಟಾಗಿ ಜಿ ಎನ್ ಮೋಹನ್ ಅನುವಾದಿಸಿದ್ದಾರೆ. ಈ ಪುಸ್ತಕ ಓದಿದಾಗಿನಿಂದ ನಾನು ಇವರ ಅಭಿಮಾನಿ. ಇವರನ್ನು ಮುಖತಃ ನೋಡುವ ಆಶೆ ಬಹಳ ದಿನಗಳದ್ದು.
ಇಂದು ವಿಧಾನಸೌಧದ ಕಿಕ್ಕಿರಿದು ತುಂಬಿದ್ದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾಯಿನಾಥ ಸರ್ ಮಾತನಾಡುತ್ತಿದ್ದರೆ ಸೂಜಿ ಮೊನೆ ಬಿದ್ದರೂ ಸದ್ದಾಗಬೇಕು.
ಪ್ರಸ್ತುತ ಮಾಧ್ಯಮಗಳು ಹೇಗೆ ಬಂಡವಾಳಶಾಹಿಯ ಕರಡಿ ಕುಣಿತಕ್ಕೆ ನಲಗುತಿವೆ, ಯಾಕೆ ಬರಿ ದೆಹಲಿ, ಮುಂಬಯಿ, ಕಲಕತ್ತಾ ಸುದ್ದಿಗಳು ಪ್ರೈಮ್ ಟೈಮ್ ನಲ್ಲಿ ಮಿಂಚುತ್ತವೆ, ಈಗಿನ ಮರಾಠಾ ವಾಡಾ, ವಿದರ್ಭ, ಲಾತೂರಿನಂತ ಪ್ರದೇಶಗಳು ಯಾಕೆ ಪದೇ ಪದೇ ಬರಕ್ಕೆ ಈಡಾಗುತ್ತವೆ ಎಂಬುದನ್ನು ಅಂಕಿ ಅಂಶ ಸಮೇತ ಮಂಡಿಸುವಾಗ ಮ್ಯಾಗ್ಸೆಸ್ಸೆ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದರಲ್ಲಿ ಆಶ್ಚರ್ಯವೇನೂ ಆಗಲಿಲ್ಲ.
ಪುಸ್ತಕದಲ್ಲಿ ಮೋಹನ್ ಅವರು ಹೇಳಿದಂತೆ ಸಾಯಿನಾಥರ ಲೋಕದಲ್ಲಿ ಆದಿವಾಸಿಗಳಿದ್ದಾರೆ, ದಲಿತರಿದ್ದಾರೆ, ಅಸಹಾಯಕ ವೃದ್ದರಿದ್ದಾರೆ, ತಿರುಗಿಬಿದ್ದ ಮಹಿಳೆಯರಿದ್ದಾರೆ, ಒಂದು ಹೊತ್ತಿನ ಊಟ ಸಿಗದೆ ಕಣ್ಣು ಮುಚ್ಚಿದ ಅಸಂಖ್ಯಾತ ಎಳೆಗೂಸುಗಳಿವೆ, ಸಾಯಲೆಂದೇ ಹುಟ್ಟಿದ ಒಂದು ಲೋಕವಿದೆ. ಹೀಗಿದೆ.. ಎಂದು ಯಾವ ತಜ್ಞರ ಸಮಿತಿಯಾಗಲಿ, ಸರ್ಕಾರದ ವರದಿಯಾಗಲಿ, ಸಂಸತ್ತಾಗಲಿ, ವಿಧಾನಸಭೆಯಾಗಲಿ ಬಿಚ್ಚಿಡಲಿಲ್ಲವಲ್ಲ ಆ ಕಾರಣಕ್ಕಾಗಿಯೇ ಸಾಯಿನಾಥ್ ಮುಖ್ಯರು.
ಇವರು ಭೇಟಿಕೊಟ್ಟ ಹಳ್ಳಿಗಳ ಕಡೆಗೆ ಪ್ರಧಾನಿಗಳು ದೌಡೆದ್ದು ಹೋದರು. ಮುಖ್ಯಮಂತ್ರಿಗಳು ಮೊದಲಬಾರಿಗೆ ಆ ನೆಲವನ್ನು ಸ್ಪರ್ಶಿಸಿದರು. ಕಾಲಹಂಡಿ, ನೌಪಾದ, ಸರ್ಗುಜಾಗಳೂ ಇವೆ ಎನ್ನುವುದು ನಮಗೂ ನಿಮಗೂ ಗೊತ್ತಾಯಿತು. ಭಾರತ ಎಂಬ ಪ್ರಹಸನವನ್ನು ಸಾಯಿನಾಥ್ ಕಣ್ಣಿಗೆ ಕಟ್ಟುವಂತೆ ಕೊಟ್ಟರು.
ವಾರಾಂತ್ಯದ ಪೀಕ್ ಅವರನಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ವಿಧಾನಸೌಧಕ್ಕೆ ಬರುವುದೆಂದರೆ ಖಂಡಾಂತರಗಳ ದಾಟಿ ಬಂದಂತೆ ಆದರೆ ಅಷ್ಟು ಕಷ್ಟ ಬಿದ್ದು ಬಂದಿದ್ದಕ್ಕೂ ದಿನ ಸಾರ್ಥಕವಾದ ಭಾವವಿದೆ
ಆದರೆ ಸಾಯಿನಾಥರು ಹೇಳಿದ ಸೋಬರ್ ಇಂಡಿಯಾ ಒಳಗೊಳಗೇ ಕೊರೆಯುತ್ತಿದೆ ಒಂದು ಗಾಢ ವಿಷಾದ….
0 ಪ್ರತಿಕ್ರಿಯೆಗಳು