ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಗಲುಗುರುಡ!

ಅಕ್ಕನ ಬಳೆಗಳೆದುರು…

-ಮಂಜುನಾಥ್ ಲತಾ

ಯಾರಿಗೂ ತಾಕಲಾರದ ಕವಿಯಾದ ನಾನು
ಸೋರುಗಿವಿ ಕಾಯಿಲೆಯಿಂದ ಸೊರಗಿರುವೆ.
ನನ್ನ ಕವಿತೆಯ ಸಾಲುಗಳು
ಪಾಯಖಾನೆಯೊಳಗಿನ ಬೆಣ್ಣೆಗುಳ್ಳೆಗಳಂತೆ ಚರಂಡಿಯೊಳಗೆ ಜಾರುತ್ತಿರುವುದನ್ನು
ಮಂಜುಗಣ್ಣುಗಳಿಂದ ಧ್ಯಾನಿಸುತ್ತಿರುವೆ.

ನನ್ನೀ ಅರೆ ಅರಿವನ್ನು ನನ್ನಕ್ಕ ಆಗಾಗ್ಗೆ ಎಚ್ಚರಿಸುತ್ತಾಳೆ;
ಮೂಗಿಗೂ ಕೊಳಕು ಅಕ್ಷರ ಸೋಂಕು ತಗುಲೀತೆಂಬಂತೆ ತಿವಿಯುತ್ತಾಳೆ.
ನಾಸಿಕಾಗ್ರದಿಂದ ಇದ‌ ಗ್ರಹಿಸಲಾರದ ನಾನು
ನಾತಪ್ರೀತಿಗೆ ಬಿದ್ದು ಒರಲುತ್ತೇನೆ:
‘ನನ್ನಕ್ಕನಿಗೆ ಕಾವ್ಯದ ಬುದ್ಧಿ ಬರಲಿ’

ಅವಳಿಗೆ ನನ್ನ ಪ್ರಾರ್ಥನೆ ಕೇಳಿಸುವುದಿಲ್ಲ…
ಅವಳು ತನ್ನೊಳಗಿನ ಗೂಡನ್ನಷ್ಟೇ ಹಚ್ಚಿಕೊಂಡ ಹುಚ್ಚಿ.
ಅವಳ ಬದುಕು ಹಳೆಯ ಕಸಬರಿಕೆ
ಊರವರ ಹೇಲು ಬಳಿವ ಉಸಾಬರಿ ಅದಕೆ.

ಅಕ್ಕನದ್ದೊಂದು ಹೊಸ ಆಸೆ:
ಮತ್ತೆ ಬಳೆ ತೊಟ್ಟುಕೊಳ್ಳಬೇಕು.
ಬಳೆ ತಂದಳು ಮತ್ತೆ ನನ್ನಿದಿರು
ಅಲ್ಲಾಡಿಸಿದಳು ಕಿವಿ ಎದುರು
ನೊಂದು ಹಂಗಿಸಿದಳು: ‘ಕಿವಿ ಕೇಳಿಸದ ನೀನ್ಯಾವ ಕವಿ!’

ಅಕ್ಕನೆದುರು ನಾನೀಗ
ಕವಿಗಿವುಡ
ರೆಕ್ಕೆ ಸಾಲುಗಳ ಕತ್ತರಿಸಿಕೊಂಡ ಗರುಡ.
ನಾನೀಗ ನನ್ನಕ್ಷರಗಳ
ಹುಲುಹುಳುಗಳ ನಡುವೆ
ಅಕ್ಕನ ಬಳೆಗಳ ಹೊಳಪು ಕಾಣಲಾರದ
ಹಗಲುಗುರುಡ!

‍ಲೇಖಕರು Admin

28 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading