ಗಂಗಾಧರ ಮೂರ್ತಿ
ಮೊನ್ನೆ ಕಥೆಗಾರ, ನಿವೃತ್ತ ಕೆಎಎಸ್ ಅಧಿಕಾರಿ ಕೇಶವರೆಡ್ಡಿ ಹಂದ್ರಾಳರ ಇಪ್ಪತ್ತೈದು ಎಕರೆಯ ಧೀರ್ಘಾವಧಿ ಫಸಲಿನ ಸಾವಿರಾರು ಮರಗಳ ತೋಟ ಸಂಪೂರ್ಣ ಸುಟ್ಟು ಹೋದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತೀವ್ರ ಸಂಕಟವಾಯಿತು. ಹಂದ್ರಾಳರಿಗೆ ಈ ಬಗ್ಗೆ ನನ್ನ ತೀವ್ರ ವಿಶಾದಗಳು. ಕಾಡನ್ನು ಕೃಶಗೊಳಿಸಿದ ನಂತರ ಈಗೀಗ ಕಾಡ್ಗಿಚ್ಚಿನ ಪರಿಣಾಮವೇನೂ ಅಷ್ಟಾಗಿ ಕಾಡುತ್ತಿಲ್ಲವೇನೋ ಸರಿ, ಆದರೆ ಈ ಮನುಷ್ಯ ಮೃಗದ ಮನದಲಡಗಿರುವ ಆರದ ‘ದ್ವೇಶಾಸೂಯೆ’ಯ ಕಿಚ್ಚನ್ನು ಮಾತ್ರ ನಿವಾರಿಸಿಕೊಳ್ಳಲು ಸಾಧ್ಯವಾಗಿಲ್ಲ, ವಿದ್ಯೆ ಮತ್ತು ವಿವೇಕಗಳೆಂಬ ಕಿಚ್ಚು ಶಾಮಕ ಸಲಕರಣೆಗಳ ಹೊಂದಿಯೂ.
ಇನ್ನು ಆ ಕಿಚ್ಚಿಗೆ ಬಲಿಯಾಗುತ್ತಿರುವ ಪಾರಿಸರಿಕವಾಗಿ ಅತ್ಯಮೂಲ್ಯವಾದ ಮತ್ತು ಬೆಲೆಕಟ್ಟಲಾಗದ ಆಸ್ತಿ ಪಾಸ್ತಿಗಳ ಸಂರಕ್ಷಿಸಲೂ ಸಾಧ್ಯವಾಗುತ್ತಿಲ್ಲ. ಕೇಶವರೆಡ್ಡಿ ಹಂದ್ರಾಳರ ತೋಟ ಕಿಚ್ಚಿಗೆ ಬಲಿಯಾದ ಈ ಸಂಧರ್ಭದಲ್ಲಿ ಗ್ರಾಮ ಭಾರತದ ಒಕ್ಕಲಿನ ಎಂದೂ ಬಗೆಹರಿಯದ ಸಮಸ್ಯೆಗಳಾದ ಕೃಷಿತಾಕುಗಳಿಗೆ ಸಮರ್ಪಕವಾದ ಅದಿಕೃತ ದಾರಿಯ ಸಂಪರ್ಕಗಳಿಲ್ಲದಿರುವುದು, ಕೃಷಿಭೂಮಿಯ ಅತಿ ಸಣ್ಣ ಹಿಡುವಳಿಗಳು, ನೆರೆಹೊರೆಯ ರೈತರುಗಳೊಡನೆ ಪರಸ್ಪರ ಅನ್ಯೋನ್ಯತೆಯ ಕೊರತೆ, ಹತ್ತಾರು ಸರ್ವೆ ನಂಬರುಗಳಲ್ಲಿ ಕುಂಟೆಗಳ ಲೆಕ್ಕದಲ್ಲಿ ಹಂಚಿಹೋದ ತುಂಡು ಭೂಮಿಗಳನ್ನು ಒಂದಿಷ್ಟು ಕಳೆದುಕೊಂಡಾದರೂ ಒಗ್ಗೂಡಿಸದ ಕಠೋರ ಮನಸ್ಥಿತಿಗಳು, ತಮ್ಮ ಕೃಷಿ ಪದ್ದತಿಯಿಂದಾಗಿ ನೆರೆಹೊರೆಯ ಕೃಷಿಕರಿಗೆ ಆಗಬಹುದಾದ ತೊಂದರೆಗಳ ಅವಗಣನೆ ಇತ್ಯಾದಿಗಳು ನೆನಪಾದವು.
ಕೆಎಎಸ್ ಅಧಿಕಾರಿಯಾಗಿ ನಿವೃತ್ತರಾದ ಹಂದ್ರಾಳರಿಗೆ ತಮ್ಮ ವಿಶಾಲವಾದ ಕೃಷಿಭೂಮಿಗೆ ಅಧಿಕೃತ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಮಾಡಿಕೊಳ್ಳಲು ಈವರೆವಿಗೂ ಸಾಧ್ಯವಾಗಿಲ್ಲದಿರುವುದು ಅದರ ಬಗೆಗೆ ಅವರು ಅಧಿಕಾರಶಾಹಿಯಲ್ಲಿ ಪರಿಪರಿಯಾಗಿ ಬೇಡಿಕೊಂಡಿರುವ ಬಗೆಗೆ ಪ್ರಸ್ತಾಪಿಸಿದ್ದಾರೆ. ಇವರ ಪರಿಸ್ಥಿತಿಯೇ ಹೀಗಾದರೆ ಇನ್ನು ಸಾಮಾನ್ಯ ಅಸಹಾಯಕ ಬಡ ರೈತನ ಪರಿಸ್ಥಿತಿ ಹೇಗಿರಬೇಡ? ಕಂದಾಯ ಇಲಾಖೆಯ ಅಧಿಕಾರಶಾಹಿಗೆ ಎಂದೂ ರೈತರ ಸಮಸ್ಯೆ ಪರಿಹಾರವಾಗುವುದು ಬೇಕಿಲ್ಲ.
ಅವರ ನಿತ್ಯ ಅಮೇಧ್ಯದ ಮೂಲವೇ ರೈತರು. ಅವರು ಸಮಸ್ಯೆ ಬಗೆಹರಿಸುವುದಿರಲಿ, ಭೂ ದಾಖಲಾತಿ ವಿಷಯದಲ್ಲಿ ಅವರು ಸಮಸ್ಯೆಗಳನ್ನು ಸೃಷ್ಟಿಸದೇ ಇದ್ದರೂ ಬಹಳಷ್ಟು ರೈತರು ನೆಮ್ಮದಿಯಿಂದ ಬದುಕಿ ಬಿಡುತ್ತಾರೆ! ಇಷ್ಟೆಲ್ಲದರ ನಡುವೆಯೂ ಕೇಶವರೆಡ್ಡಿ ಹಂದ್ರಾಳರು ತಮ್ಮ ತೋಟದ ಒಣಗಿದ ಕಸಕಡ್ಡಿ ನಿರ್ವಹಣೆಯಲ್ಲಿ ಒಂದಿಷ್ಟು ಜಾಗೃತೆವಹಿಸಬೇಕಿತ್ತು.
ಬೇಸಗೆ ಶುರುವಾದ ಕೂಡಲೆ ಅಷ್ಟು ದೊಡ್ಡ ತಾಕಿನಲ್ಲಿ ಹತ್ತಾರು ಬೆಂಕಿ ತಡೆ ಪಟ್ಟಿಗಳನ್ನು ನಿರ್ಮಿಸಬೇಕಿತ್ತು. ಕಳೆಕೊಚ್ಚುವ ಯುಂತ್ರದಲ್ಲಿ ಮಳೆಗಾಲ ಮುಗಿಯುವ ಹಂತದಲ್ಲೇ ಬೆಳೆದು ನಿಂತಿದ್ದ ಕಳೆಯನ್ನು ಕತ್ತರಿಸಿದ್ದರೆ ಅದು ಮಣ್ಣಲ್ಲಿ ಸೇರಿ ಇಷ್ಟೊಂದು ಅನಾಹುತವಾಗುತ್ತಿರಲಿಲ್ಲವೇನೊ. ರೆಂಬೆ ಕೊಂಬೆ ಸುಟ್ಟುಹೋಗಿರುವ ಅವರ ಎಲ್ಲ ಮರಗಳೂ ಸ್ವಯಂ ಅಂತಃ ಚೈತನ್ಯದಿಂದ ಮರಳಿ ಚಿಗುರುತ್ತವೆ, ಸಂಶಯಬೇಡ. ಹೀಗೆ ಸಂಕಷ್ಟಕ್ಕೆ ಈಡಾದ ಮರಗಳು ಆನಂತರ ಉತ್ಕೃಷ್ಟ ಫಲ ನೀಡಿದ ಹಲವು ಉದಾಹರಣೆಗಳಿವೆ. ಅವರ ಸಧ್ಯದ ನೋವು ಶಮನಕ್ಕೆ ಮಳೆಯ ಮುಲಾಮು ಬೇಗನೆ ದೊರೆಯಲಿ ಎಂದು ಆಶಿಸುತ್ತಾ….
0 ಪ್ರತಿಕ್ರಿಯೆಗಳು