ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?

ಕನಸು, ಕೂರಿಗೆಯ ಕಣ್ಣು

ಡಿ ಎಸ್ ರಾಮಸ್ವಾಮಿ

ಕೃತಿಯೆನ್ನುವುದು

ಕಲಾವಿದನ ಮನ-

ಸ್ಸಿನ ಕನ್ನಡಿ,

ಒಳಗೇ ಉಳಿದ ಉಮ್ಮಳಗಳಿಗೊಂದು ರೂಪ

ಕೊಡಲೆಂದೇ ಕವಿ ಬರೆದ ಕವಿತೆಯ ಸಾಲು,

ತನ್ನೊಳಗನ್ನೇ ತೆರೆತೆರೆದು ತೋರಿಸುವ ಗಾಯಕ.

ಶ್ರೋತೃವಿನ ಮನಸ್ಸಿನ ಆಳಕ್ಕೆ ಇಳಿದಂತೆ;

ನೂರೆಂಟು ಬಣ್ಣಗಳ ಲೋಕ ವ್ಯಾಪಾರದ ನಡುವೆ

ಚಿತ್ತಾಪಹಾರೀ ಕಾಣ್ಕೆಗೆ ತುಡಿಯುವುದು

ಇರುವುದು ಸತತ, ಕಂಗೆಟ್ಟ ಮನಸ್ಸು-

ಗಳ ಕಳವಳವಕ್ಕಷ್ಟು ಸಮಾಧಾನ, ಸೋತು

ಕೂತವರಿಗೆ ಕೊಂಚ ಸಾಂತ್ವನದ ಮಾತು.

ಲಲಿತ ಕಲೆಯೆಂದರೆ ಕ್ಷಣ ಭಂಗುರಕ್ಕೊಂದು ಅಲ್ಪ ವಿರಾಮ.

ಕಟ್ಟು ಹಾಕಿ ಬಂಧಿಸಿರುವ ಚಿತ್ರಗಳಲ್ಲಂತೂ

ನಿಷ್ಕರ್ಷಕ್ಕೆ ಸಿಲುಕುವ ಪಲುಕಗಳನ್ನಿತ್ತು

ಸೌಂದರ್ಯೋಪಾಸನೆಯ ಮಾತುಗಳನ್ನಾಡಬಹುದು

ಚಿತ್ತ ಭಿತ್ತಿಯ ಮೇಲೆ ಸಾಲು ಸಾಲು ಅಸ್ಪಷ್ಠ ಚಿತ್ರಗಳ-

ಮೆರವಣಿಗೆ, ಮಾಸಲು ಬಣ್ಣಗಳಭಿಷೇಕ

ಸ್ಪರ್ಶಕ್ಕಷ್ಟೇ ಸಿಲುಕುವ ಸೂಕ್ಷ್ಮಗಳನ್ನೇನು ಮಾಡಬೇಕು?

ಅನುಭೂತಿಯೆಂದರೆ ದೌರ್ಬಲ್ಯವೆನ್ನುವ ವಾದ-

ಕ್ಕೆ ಮನದ ಮೂಲೆ ಮೂಲೆಯ ಪರಿಮಳದ ಗಂಧ

ಮೂಗಿಗಡರುವುದಿಲ್ಲ, ಗಾಳಿತೊನೆದತ್ತಲೇ ಅದರ ನಿತ್ಯ ಪಯಣ.

ಧರೆಗಿಳಿಯುತ್ತಿದ್ದಭಿಸಾರಿಕೆಯ ಸಂಗಕ್ಕೆ ಮಧು-ಚಂದ್ರ

ದ ಬಣ್ಣವೇ ಬದಲಾಗಿರುವ ಸತ್ಯದ ಮುಂದೆ

ಆರು* ಕಟ್ಟುವ ಕನಸು ಮಣ್ಣು ಪಾಲು-

ಅಂತ ಗೊತ್ತಿದ್ದರೂ ಮತ್ತೆ ಮತ್ತೆ ತುಡಿಯುವಾತ್ಮಕ್ಕೆ

ಬಯಲ ಮೋಹವ ಬಿಡದ ಸುರತದಾಸೆ, ಶಾಶ್ವತ-

ದ ಸಾವಿರದ ಕನಸ ಕೂರಿಗೆ*ಯ ಸಣ್ಣ ಕಣ್ಣು!

 

ಆರು= ಭೂಮಿ ಹದ ಮಾಡುವ ಕ್ರಿಯೆ, ಅರಿಷಡ್ವರ್ಗ

ಕೂರಿಗೆ= ಬೀಜ ಬಿತ್ತುವ ಉಪಕರಣ

(ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕ 2012 ರಲ್ಲಿ ಪ್ರಕಟಿತ ಕವಿತೆ)

 

 

‍ಲೇಖಕರು G

27 November, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading