ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೌಮ್ಯ ದಯಾನಂದ ಹೊಸ ಕವಿತೆ- ಸರಳ ರೇಖೆ…

ಸೌಮ್ಯ ದಯಾನಂದ

ಹಳಿಯು ಒಂದೇ
ಕಂಬಿ ಎರಡು
ನಾನು ಮತ್ತು ನೀನು;
ಗಮ್ಯವೊಂದೇ
ಬದುಕು ಎರಡು
ನಂದು ಒಂದು ನಿಂದು!

ನೀನು ನನ್ನ
ನೋಡಬಹುದು
ನಾನು ಕೂಡಾ ನಿನ್ನ;
ಕಯ್ಯಿ
ಒರೆಸಲಾರದೆಂದೂ
ನಿನ್ನ ಕೆನ್ನೆ ನೀರಾ!

ಬಾಗಿದಲ್ಲಿ
ಬಾಗಿ ಬಳುಕಿ
ನೇರದಲ್ಲಿ ನೇರ;
ಕೈಯ ಹಿಡಿದು
ಸಾಗಬಹುದು
ಈ ಬಾಳ ಪೂರಾ!

ಜನರಕಥೆಗೆ
ನಾವು ಸಾಕ್ಷಿ
ನಮಗೆ ಇಲ್ಲ ಅಗ್ನಿಸಾಕ್ಷಿ;
ಸಾಗಬೇಕು
ಹೊತ್ತು ಅವರ
ನೆನಪ ರಾಶಿ ರಾಶಿ!

ನಾನಿಲ್ಲದೆ
ನೀನಿಲ್ಲ
ನೀನಿಲ್ಲದೆ ನಾನೂ;
ಇಂಚು
ಸನಿಹಬಂದರೂನು
ಯಾರೋ ನೀನು ನಾನು!

ಜೀವಗಳಿಗುಳಿವಿಲ್ಲ
ಸೇರಿದರೆ
ನಾವು;
ಆಸೆದೊರೆದು
ಬಾಳಿದರೆ
ಬೊಗಸೆ ತುಂಬಾ ಮಾವು!

ಇದ್ದರೂನೂ
ಪಕ್ಕದಲ್ಲೇ
ಎಂದಿಗೂ ಮಾತಿಲ್ಲ;
ಮುನಿದು
ದೂರ ಹೋಗಿ
ಬಿಟ್ಟು ಎಂದಿಗೂ ನಿಂತಿಲ್ಲ!

ಶೂನ್ಯದೆಡೆಯ
ದಾರಿಗುಂಟು
ಮೌನದ ಸಂಗಾತ;
ಪಯಣಕೆಂದೂ
ಕೊನೆಯೆ ಇಲ್ಲ
ಸೇರದೇ ದಿಗಂತ!

ಕಣ್ಣ ಕಣ್ಣ
ಮಥಿಸಿ ಹೆತ್ತ
ಸಾವಿರ ಕನಸುಂಟು;
ಮೈಗೆ ಮೈಯ
ತಾಕಿದಂದೇ
ಎತ್ತಬೇಕು ಗಂಟು!

ದೈವ ಎಳೆದ
ಸರಳ ರೇಖೆ
ನಾನು ಮತ್ತು ನೀನು;
ಕೂಡಿದಂತೆ
ಕಂಡುಬರುವ
ಭೂಮಿ ಮತ್ತು ಬಾನು!

‍ಲೇಖಕರು Admin

31 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading