ಸೌಮ್ಯ ದಯಾನಂದ
—–
ಜೋರು ಮಳೆ
ಅದೇನು ದುಃಖವೋ ಆ ಮುಗಿಲಿಗೆ
ಭೂಮಿ ಕರಗಿ ಮೋಡ ಸೊರಗಿ
ಕಡಲಿನ ಗಂಟಲುಬ್ಬಿದೆ
ನದಿಗಳು ಮೊರೆಯಿಟ್ಟಿವೆ
ಹನಿಗಳು ಬೆದರಿವೆ
ದಿಕ್ಕೆಟ್ಟು ಓಡಿವೆ
ಸಿಕ್ಕಲ್ಲಿ ತೂರಿವೆ
ಮಕ್ಕಳನ್ನು ಕಳೆದುಕೊಂಡ
ಮೋಡದ ಮನೆಯಲ್ಲಿ ಸೂತಕ
ಮತ್ತೆ ಬಾರದ ಲೋಕವದು
ಆವಿಯಾದ ಆತ್ಮಗಳಿಗಷ್ಟೇ ಜಾಗ
ಆಗಷ್ಟೇ ತದ್ರೂಪ ಜನನ
ಸಾವು ಬಂದಾಗ
ಕೆಳಗಿಳಿಯಲೇ ಬೇಕು
ಸತ್ತು ಸಾರ್ಥಕವಾಗಬೇಕು

ಅಳು ಮುಗಿಯಿತು
ಇನ್ನೇನಿದ್ದರೂ
ಮಾತು ಸತ್ತ ಮನೆ
ಕಪ್ಪು ಮೋಡ ಬಿಳುಪಾಗಿ
ಬಿಳಿಮಿಂಚು ಮಾಯವಾಗಿ
ಗುಡುಗಿನ ಸದ್ದಡಗಿದೆ
ಕಣ್ಣೀರು
ಮಳೆಯ ಕೈಹಿಡಿದಿದೆ
ಜಗಕೆ ತನ್ನಿರುವ ಮರೆಸಿದೆ
ಮಳೆಯಲಿ ಕೇಳಿದ
ನಗುದನಿಯೊಂದೇ ಆಸರೆ
ಜೀವಕೂ ಭಾವಕೂ






0 Comments