ಶ್ಯಾಮಲಾ ಮಾಧವ
ಮುಂಬೈ ಕನ್ನಡ ಲೇಖಕಿಯರ ಬಳಗ ‘ಸೃಜನಾ’ ಗೆಳತಿಯರಿಗೆ ಇದೊಂದು ಸಂತೋಷಕೂಟ.
ಬೆಂಗಳೂರಿಂದ ಲೇಖಕಿ, ಅಂಕಣಕಾರ್ತಿ, ವರ್ಲ್ಡ್ ಸಿನೆಮಾದ ಅತ್ಯುತ್ತಮ ವಿಮರ್ಶಕಿ ಸಂಧ್ಯಾರಾಣಿ ಇತ್ತ ಭೇಟಿ, ಸಂವಾದಕ್ಕೂ ಎಡೆಯಿತ್ತ ಸದವಕಾಶ.
ಮೈಸೂರ್ ಅಸೋಸಿಯೇಶನ್ ಅಂಗಣದಲ್ಲಿ ಪ್ರತ್ಯಕ್ಷರಾದ ಸಂಧ್ಯಾರಾಣಿಗೆ ಜೊತೆ ನೀಡಿದವರು, ನಮ್ಮ ರಂಗಕರ್ಮಿ, ಅವಿನಾಶ್ ಕಾಮತ್.
ತೆಲುಗು, ತಮಿಳು, ಉರ್ದು, ಹಿಂದಿ, ಕನ್ನಡ, ಇಂಗ್ಲಿಷ್ ಹೀಗೆ ಬಹುಭಾಷಾ ಪರಿಣತರಾದ ಸಂಧ್ಯಾರ ಬರಹದ ಆಯ್ದ ಮುತ್ತುಗಳನ್ನು ಆವರ ಅಂಕಣ ಬರಹಗಳ ಸಂಕಲನ, ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಕೃತಿಯಿಂದ ಸಂಧ್ಯಾರ ವಾಚನದಲ್ಲೇ ಕೇಳುವ ಅವಕಾಶ!
ಅವರ ಬಾಲ್ಯ, ಸಾಹಿತ್ಯ ಲೋಕದ ಪ್ರವೇಶ, ‘ಅವಧಿ’ ಅಂತರ್ಜಾಲ ಪತ್ರಿಕೆಯ ಉಪಸಂಪಾದಕಿಯಾಗಿ ಅವರ ಅನುಭವ, ‘ಮಾಮಿ’ ಫೆಸ್ಟಿವಲ್ ನಲ್ಲಿ ಪ್ರದರ್ಶಿತವಾದ ಅವರ ಕಥೆ, ಸಂಭಾಷಣೆಯುಳ್ಳ “ನಾತಿಚರಾಮಿ” ಚಲಚಿತ್ರದ ಬಗ್ಗೆ ಅವರ ಮಾತುಗಳು ಎಲ್ಲವೂ ‘ಸೃಜನಾ’ ಪಾಲಿಗೆ ಒದಗಿ ಬಂದ ಅಪೂರ್ವ ಅವಕಾಶ.
ಆರಂಭದಲ್ಲಿ ಸೃಜನಾ ಕೋಶಾಧಿಕಾರಿ ದಾಕ್ಷಾಯಿಣಿ ಎಡಹಳ್ಳಿ ಜಾನಪದ ಗೀತೆಯೊಂದನ್ನು ಹಾಡಿದರು.. ಶ್ಯಾಮಲಾ ಮಾಧವ, ಸಂಧ್ಯಾರ ಕಿರು ಪರಿಚಯಗೈದರು. ಸೃಜನಾ ಸಂಚಾಲಕಿ ಮೀನಾ ಕಾಳಾವರ , ಸೃಜನಾ ಸಂಸ್ಥಾಪಕಿ ಡಾ. ಸುನೀತಾ ಶೆಟ್ಟಿ, .ಪುಷ್ಪ ಹಾಗೂ ಪುಸ್ತಕ ಗೌರವದಿಂದ ಸಮ್ಮಾನಿಸಿದರು. ಕಾರ್ಯದರ್ಶಿ ಶಾರದಾ ಅಂಬೇಸಂಗೆ ಧನ್ಯವಾದ ಸಲಿಸಿದರು. ಅಪರೂಪದ ಬಂಧುವಾಗಿ ರಂಗಕರ್ಮಿ ಅವಿನಾಶ್ ಕಾಮತ್ ಬಂದಿದ್ದರು.
ಸಶಕ್ತ ಮಹಿಳಾ ದನಿಯಾದ ಸಂಧ್ಯಾರಾಣಿಯ ಕಥೆ, ಸಂಭಾಷಣೆಯ ಸಿನೆಮಾ, ‘ನಾತಿಚರಾಮಿ’ ಫೀಮೇಲ್ ಸೆಕ್ಷುಆಲಿಟಿ ಬಗೆಗಿನ ವಿಶಿಷ್ಟ ಕಥಾನಕವನ್ನು ಹೊಂದಿದ್ದು, ಮನ್ಸೋರೆ ನಿರ್ದೇಶನ ಹಾಗೂ ಶ್ರುತಿ ಹರಿಹರನ್ ಹಾಗೂ ಸಂಚಾರಿ ವಿಜಯ್ ಅಭಿನಯದ ಚಿತ್ರವನ್ನು ಸಂಧ್ಯಾರೊಡನೆ ಮರುದಿನ ಅಂಧೇರಿಯ ಸಿಟಿಮಾಲ್ ಮಲ್ಟಿಪ್ಲೆಕ್ಸ್ ನಲ್ಲಿ ನೋಡುವ ಕುತೂಹಲದೊಂದಿಗೆ ಸೃಜನಾ, ಸಂಧ್ಯಾರಾಣಿ ಅವರನ್ನು ಬೇಳ್ಕೊಟ್ಟಿತು.
ಶ್ಲಾಘನಾರ್ಹ ನಿರ್ದೇಶನ, ಕಥೆ, ಸಂಭಾಷಣೆ, , ದೃಶ್ಯ ಚಿತ್ರಣ, ನಟನಾ ಕೌಶಲದ ‘ನಾತಿಚರಾಮಿ’ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿ ಉಳಿಯಿತು ಎಂದು ಮನತುಂಬಿ ಹೇಳಲೇ ಬೇಕಾಗಿದೆ.
0 ಪ್ರತಿಕ್ರಿಯೆಗಳು