ಸೂಳೆಕೆರೆ ಕಥೆ ಹೇಳಿದ ಜೆ ಎಚ್ ಪಟೇಲ್

ಒಬ್ಬ ಸೂಳೆಯನ್ನು ಅರ್ಥ ಮಾಡಿಕೊಳ್ಳದ ಸಮಾಜಕ್ಕೆ
ಮಹಾವ್ಯಕ್ತಿಗಳು ಅರ್ಥವಾಗಲು ಸಾಧ್ಯವೇ?

R T Vittal Murthy

ಆರ್.ಟಿ.ವಿಠ್ಠಲಮೂರ್ತಿ

ಕತ್ತಲು ಮುತ್ತುತ್ತಿದ್ದಂತೆಯೇ ತಂಗಾಳಿ ಆವರಿಸಿಕೊಳ್ಳುತ್ತಾ ಹೋಯಿತು.

ನಾನು ಎದುರಿಗಿದ್ದವರ ಮುಂದೆ ಕುಳಿತುಕೊಳ್ಳಲು ಚಡಪಡಿಸುತ್ತಾ, ಆಗಿಂದಾಗ ಮಗ್ಗಲು ಬದಲಿಸುತ್ತಾ, ಕುಳಿತ ಭಂಗಿಯಲ್ಲಿ ದುರಹಂಕಾರದ ಲವಲೇಶವೇನಾದರೂ ಕಾಣುತ್ತಾದಾ? ಅಂತ ಯೋಚಿಸುತ್ತಿದ್ದೆ. ನಾನು ಆ ಯೋಚನೆಯಲ್ಲಿದ್ದಾಗಲೇ ಅವರು ಮಾತನಾಡತೊಡಗಿದರು.ಅವರ ಹೆಸರು-
ಜೆ.ಹೆಚ್.ಪಟೇಲ್!

ಆಗವರು ಮುಖ್ಯಮಂತ್ರಿ. ಬದುಕಿನಲ್ಲಿ ನಾನು ಹಲವಾರು ದಿಗ್ಗಜ ನಾಯಕರನ್ನು ನೋಡಿದ್ದೇನೆ. ಮಾತನಾಡಿದ್ದೇನೆ. ಅವರ ಜತೆ ಕುಳಿತು ಊಟ ಮಾಡಿದ್ದೇನೆ. ಆದರೆ ನೋ ಡೌಟ್, ಎಲ್ಲ ನಾಯಕರಲ್ಲೂ ಒಂದಲ್ಲ, ಒಂದು ವಿಶೇಷ ಗುಣವನ್ನು ನೋಡಿದ್ದೇನೆ.
ಹೀಗಾಗಿ ಯಾವ ನಾಯಕರನ್ನೂ ನಾನು ಯಾರ ಜತೆಗೂ ಹೋಲಿಸುವುದಿಲ್ಲ. ಪಟೇಲರ ವಿಷಯದಲ್ಲೂ ಅಷ್ಟೇ. ಅವರಿಗೆ ಅವರೇ ಸಾಟಿ. ಮತ್ತೊಬ್ಬ ನಾಯಕರನ್ನು ಅವರ ಜತೆ ಹೋಲಿಸಬೇಕೆಂದರೂ ಊಹೂಂ, ನೋ ಚಾನ್ಸ್.

j-h-patelಇರಲಿ,ಅವತ್ತು ಮನೆಯೆದುರು ಪೇರಲೆ(ಸೀಬೆ ಕಾಯಿ)ಗಿಡಗಳಿಂದ ಆವೃತವಾದ ಹುಲ್ಲುಹಾಸಿನ ಮೇಲೆ ಖುರ್ಚಿ ಇಟ್ಟುಕೊಂಡು ಪಟೇಲರು ಲೋಕಾಭಿರಾಮವಾಗಿ ಮಾತನಾಡತೊಡಗಿದರು.

ಅಂದ ಹಾಗೆ,ನನಗೆ ಒಂದು ವಿಷಯ ಕೇಳಬೇಕು ಎಂಬ ತರಾತುರಿ ಇತ್ತು. ಯಾಕೆಂದರೆ ಅವತ್ತಷ್ಟೇ ಕನ್ನಡದ ಖ್ಯಾತ ಸಾಹಿತಿ, ಸಂಶೋಧಕರೊಬ್ಬರು, ಪಟೇಲರ ಕ್ಷೇತ್ರ ಚನ್ನಗಿರಿಯ ವ್ಯಾಪ್ತಿಯಲ್ಲಿರುವ ಕಾರಿಗನೂರಿನ ಬಳಿ ಇರುವ ಕೆರೆಯೊಂದರ ಹೆಸರನ್ನು ಬದಲಿಸಬೇಕು ಎಂದು ಪಟ್ಟು ಹಿಡಿದಿದ್ದರು. ಆ ಕೆರೆಯ ಹೆಸರು ಸೂಳೆ ಕೆರೆ. ಏಷ್ಯಾ ಖಂಡದಲ್ಲಿಯೇ ಎರಡನೇ(!) ಅತ್ಯಂತ ದೊಡ್ಡ ಕೆರೆಯಾದ ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಬೇಕು ಎಂಬುದು ಅವರ ಒತ್ತಾಯ.

ಆದರೆ ಜಪ್ಪಯ್ಯ ಅಂದರೂ ಪಟೇಲರು ಒಪ್ಪಲಿಲ್ಲ.ಅರೇ, ಇರಲಿ ಬಿಡ್ರಿ. ಸೂಳೆ ಕೆರೆ ಅನ್ನೋ ಹೆಸರು ಕೇಳಲೇ ಚೆಂದ. ಅದರ ಹೆಸರನ್ನು ಶಾಂತಿ ಸಾಗರ ಎಂದು ಬದಲಿಸಿ ಇತಿಹಾಸವನ್ನು ನಾವೇಕೆ ತಿರುಚಬೇಕು ಎಂದವರು ಉಲ್ಟಾ ಹೊಡೆದಿದ್ದರು.
ಅರೇ, ಹೌದಲ್ಲ? ಸೂಳೆ ಕೆರೆ ಎಂಬ ಹೆಸರನ್ನು ಬದಲಿಸಿ ಶಾಂತಿ ಸಾಗರ ಎಂದು ಹೆಸರಿಟ್ಟರೆ ತಪ್ಪೇನು? ಅನ್ನುವುದು ನನ್ನ ಅನಿಸಿಕೆಯೂ ಆಗಿತ್ತು. ಹೀಗಾಗಿ ಸಂಜೆ ಅವರ ಮಾಧ್ಯಮ ಸಲಹೆಗಾರ ಶಂಕರಲಿಂಗಪ್ಪ ಅವರನ್ನು ಕಾಡಿ ಟೈಮು ಫಿಕ್ಸು ಮಾಡಿಕೊಂಡಿದ್ದೆ.

ಅಯ್ಯೋ, ಇಲ್ಲಮ್ಮಾ, ನಿಮಗೆ ಗೊತ್ತಲ್ಲ? ಪಟೇಲರು ರಾತ್ರಿಯ ಹೊತ್ತು ಕುಳಿತು ಮಾತನಾಡುವುದಿಲ್ಲ. ಯಾಕೆಂದರೆ ಅವರಿಗೆ ಬೇರೆ ಎಂಗೇಜ್ ಮೆಂಟುಗಳಿರುತ್ತವೆ ( ಡ್ರಿಂಕ್ಸ್ ಪಾರ್ಟಿ) ಅಂತ. ಹೇಗೆ ಕೇಳುವುದಮ್ಮಾ ಎಂದರು ಶಂಕರಲಿಂಗಪ್ಪ, ಆದರೆ ನಾನು ಪಟ್ಟು ಬಿಡದೆ, ಸಾರ್, ನಾನೇನೂ ಗಂಟೆಗಟ್ಟಲೆ ಮಾತನಾಡುವುದಿಲ್ಲ. ಹತ್ತೋ,ಹದಿನೈದು ನಿಮಿಷ ಮಾತ್ರ ಎಂದು ಹೇಳಿ ಯೆಸ್ ಅನ್ನಿಸಿದ್ದೆ.

ಸರಿ, ಪಟೇಲರ ಕಿಕ್ಕಿಂಗ್ ಟೈಮಿನಲ್ಲಿ ನನ್ನ ಆಫ್ ದಿ ರೆಕಾರ್ಡ್ ಇಂಟರ್ ವ್ಯೂಗೆ ಅವಕಾಶ ಸಿಕ್ಕಿತು. ಹೋದೆ. ಪಟೇಲರು ಪೇರಲೆ ಗಿಡಗಳಿಂದ ಆವೃತವಾದ ಹುಲ್ಲುಹಾಸಿನ ಮೇಲೆ ಬಂದು ಕೂರಲು ಬಹಳ ಸಮಯ ತೆಗೆದುಕೊಳ್ಳಲಿಲ್ಲ. ಹೀಗಾಗಿ ನನ್ನ ಚಡಪಡಿಕೆಗಳೇನಿವೆ ಎಂಬುದರ ಬಗ್ಗೆ ಗಮನವೇ ಇಲ್ಲದವರಂತೆ ಮಾತನಾಡುತ್ತಾ ಹೋದರು.

ವಿಠ್ಢಲಮೂರ್ತಿ. ನೀವು ರಾಮಾಯಣ, ಮಹಾಭಾರತ ಓದಿರುತ್ತೀರಿ. ಆದರೆ ಬೈಬಲ್, ಕುರಾನ್ ಓದಿದ್ದೀರಾ? ಎಂದು ಕೇಳಿದರು. ನಾನು ಎಡಗೈಯಿಂದ ತಲೆಯ ಬಲಭಾಗವನ್ನು ಸವರಿಕೊಂಡು, ಇಲ್ಲ ಸಾರ್. ನಾನೇಕೆ ಬಂದೆ ಎಂದರೆ..ಅಂತ ಮೆಲ್ಲಗೆ ರಾಗ ಎಳೆದೆ.

ಅದಕ್ಕವರು, ನನಗೆ ಗೊತ್ತು. ನೀವು ಏನು ಕೇಳಲು ಬಂದಿದ್ದೀರಿ ಅಂತ. ಆದರೆ ನಾನು ಕೇಳುತ್ತಿರುವುದು ಸಿಂಪಲ್ ಕ್ವಶ್ಚನ್. ನೀವು ಬೈಬಲ್, ಕುರಾನ್ ಓದಿದ್ದೀರಾ? ಅಂತ ಯಾಕೆಂದರೆ ನಮ್ಮಲ್ಲಿ ತುಂಬ ಜನರಿಗೆ ಇತಿಹಾಸ ಗೊತ್ತಿರುವುದಿಲ್ಲ. ಹೀಗಾಗಿ ತಮಗೆ ತಿಳಿದಂತೆ ವರ್ತಮಾನವನ್ನು ಅರ್ಥೈಸಿಕೊಂಡು ಮಾತನಾಡುತ್ತಾ ಒಂದು ವಿಕ್ಷಿಪ್ತ ಇತಿಹಾಸವನ್ನು ಸೃಷ್ಟಿಸುತ್ತಾರೆ (ಅರ್ಥವಾಗುವಿಕೆ ಹಾಗೂ ಅರ್ಥವಾಗದೆ ಇರುವಿಕೆ ಎಂಬುದರ ಮಧ್ಯೆ ಇರುವ ಆಪಾರ್ಥವನ್ನು ಕಲ್ಪಿಸಿಕೊಳ್ಳುತ್ತಾರೆ) ಎಂದರು.

ನನಗೆ ದುಸುರಾ ಮಾತನಾಡಲು ಸಾಧ್ಯವೇ ಆಗಲಿಲ್ಲ.ಅವರೇ ವಿಷಾದದಿಂದೆಂಬಂತೆ ನಕ್ಕು ಹೇಳುತ್ತಾ ಹೋದರು. ವಿಠ್ಠಲಮೂರ್ತಿ. ಇದನ್ನೇಕೆ ನಿಮಗೆ ಹೇಳಿದೆ ಎಂದರೆ ನಮ್ಮಲ್ಲಿ ತುಂಬ ಜನರಿಗೆ ಪ್ರವಾದಿ ಮುಹಮ್ಮದರ ಬಗ್ಗೆ, ಅವರ ಹೆಸರನ್ನು ಉಲ್ಲೇಖಿಸುವಾಗ ಅಲ್ಲಾಹು ಅವರ ಮೇಲೆ ಶಾಂತಿ ಮತ್ತು ಅನುಗ್ರಹಗಳನ್ನು ದಯಪಾಲಿಸಲಿ ಎಂದು ಹೇಳಬೇಕು ಎಂಬುದು ಗೊತ್ತೇ ಇರುವುದಿಲ್ಲ.ಅವರೇಕೆ ಒಂದು ಕಾಲಘಟ್ಟದಲ್ಲಿ ದೇವರು ನಿರಾಕಾರ ಎಂದರು ಎಂಬುದನ್ನು ನಾವು ಅರ್ಥೈಸಿಕೊಳ್ಳುವ ಗೋಜಿಗೂ ಹೋಗುವುದಿಲ್ಲ.

ಅವರ ತಂದೆಯ ಹೆಸರು ಅಬ್ದುಲ್ ಅಂತ, ತಾಯಿಯ ಹೆಸರು ಅಮೀನಾ ಅಂತ, ನಮ್ಮಲ್ಲಿ ಕೃಷ್ಣನನ್ನು ಯಶೋಧೆ ಸಲಹಿದಂತೆ ಮುಹಮ್ಮದರನ್ನು ಸಲಹಿದ ತಾಯಿ ಹಲೀಮಾ ಸಾದಿಯಾ ಅಂತ ತುಂಬ ಜನರಿಗೆ ಗೊತ್ತೂ ಇರುವುದಿಲ್ಲ. ಆದರೆ ಚೆಕ್ ಮಾಡಿ ನೋಡಿ. ನಾವು ನಮಗೆ ಗೊತ್ತೇ ಇರದ ಸಂಗತಿಗಳ ಬಗ್ಗೆ ಅದ್ಭುತವಾಗಿ ಮಾತನಾಡುತ್ತೇವೆ. ಗೊತ್ತಿರುವ ಸಂಗತಿಗಳ ಕುರಿತು ಮಾತೇ ಆಡುವುದಿಲ್ಲ ಎಂದರು.

ಅವರ ಮಾತನ್ನು ನಾನು ಜೀರ್ಣ ಮಾಡಿಕೊಳ್ಳಲು ಯತ್ನಿಸತೊಡಗಿದೆ. ಹೀಗಾಗಿ ಮಾತೇ ಆಡಲಿಲ್ಲ. ಯಥಾ ಪ್ರಕಾರ ಅವರ ಮಾತು ಮುಂದುವರಿಯಿತು. ದೇವರು ನಿರಾಕಾರ ಎಂದು ಮುಹಮ್ಮದರು ಹೇಳಿದ್ದನ್ನೇ, ನಮ್ಮ ಶಂಕರಾಚಾರ್ಯರೂ ಹೇಳಿದ್ದರು. ಆದರೆ ಕಣ್ಣ ಮುಂದೆ ಏನೂ ಕಾಣದೆ ಇದ್ದರೆ ಏನನ್ನು ನಂಬುವುದು? ಅಂತ ಕಾಮನ್ ಮ್ಯಾನ್ ಗಲಿಬಿಲಿಗೊಳ್ಳುತ್ತಾನೆ ಎಂಬ ಕಾರಣಕ್ಕಾಗಿ ಶಾರದಾ ದೇವಿಯನ್ನು ಸೃಷ್ಟಿಸಿದರು.

ಯೆಸ್. ನಾನು ದೇವರು ಆಕಾರ, ನಿರಾಕಾರ ಎಂಬ ಕುರಿತು ಮಾತನಾಡುವುದಿಲ್ಲ. ಆದರೆ ಬದುಕಿನ ಪ್ರತಿಯೊಂದು ಸಂಗತಿಗಳ ಕುರಿತೂ ನಾವು ಗೌರವ ಭಾವನೆ ಇರಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಇದನ್ನು ಹೇಳಿದೆ. ನನಗೆ ಮುಸ್ಲಿಂ ಗೆಳೆಯರು ಹೆಚ್ಚು ಎಂಬ ಕಾರಣಕ್ಕಾಗಿ ನಾನು ಇದನ್ನೆಲ್ಲ ನಿಮಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಬೈಬಲ್ ನ ಹಳೇ ಒಡಂಬಡಿಕೆ, ಹೊಸ ಒಡಂಬಡಿಕೆಯ ಕುರಿತೂ ನಾನು ವಿವರವಾಗಿ ನಿಮಗೆ ಹೇಳಬಲ್ಲೆ. ಆದರೆ ಯಾವ್ಯಾವ ಕಾರಣಕ್ಕಾಗಿ ಮುಹಮ್ಮದರು, ಯೇಸು ಕ್ರಿಸ್ತರು ಹೋರಾಡಿದರು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವ ಬದಲು ಅವರನ್ನು ನಿರ್ದಿಷ್ಟ ಧರ್ಮಕ್ಕೆ ಸೀಮಿತಗೊಳಿಸಿ ಮಾತನಾಡುತ್ತೇವೆ. ಅವರು ನಿಂತ ನೆಲ ಯಾವುದು? ಯಾವ ಪರಿಸ್ಥಿತಿಯನ್ನು ಅವರು ಎದುರಿಸಿದ್ದರು ಎಂಬುದನ್ನು ಮರೆಯುತ್ತೇವೆ. ಅದೇನೇ ಇರಲಿ, ಒಂದಂತೂ ನಿಜ. ಅವರು ಈ ಪ್ರಕೃತಿ ಸೃಷ್ಟಿಸಿದ ಅಮೂಲ್ಯ ಮುತ್ತುಗಳು ಎಂಬುದನ್ನು ಒಪ್ಪಲೇಬೇಕು. ಸಮುದ್ರ (ಪ್ರಕೃತಿ) ಅಮೂಲ್ಯಮುತ್ತುಗಳನ್ನೂ ಸೃಷ್ಟಿಸುತ್ತದೆ. ಕಪ್ಪೆ ಚಿಪ್ಪುಗಳನ್ನೂ ಸೃಷ್ಟಿಸುತ್ತದೆ. ಹಾಗಂತ ನಾವು ಅದನ್ನು ಹೋಲಿಕೆ ಮಾಡಬಾರದು.

ಯಾಕೆಂದರೆ ಪ್ರಕೃತಿಯ ದೃಷ್ಟಿಯಲ್ಲಿ ಪ್ರತಿಯೊಂದೂ ಅಮೂಲ್ಯವೇ. ಈಗ ವಿಷಯಕ್ಕೆ ಬರುತ್ತೇನೆ. ಸೂಳೆಕೆರೆಯ ಹೆಸರನ್ನು ಶಾಂತಿಸಾಗರ ಅಂತ ಬದಲಿಸುವುದರಲ್ಲಿ ತಪ್ಪೇನು? ಅಂತ ತಾನೇ ನೀವು ಯೋಚಿಸುತ್ತಿರುವುದು? ಎಂದರು. ಅವರಾಡಿದ ಮಾತು ಕೇಳಿ ನಾನು ವಿಸ್ಮಿತನಾಗಿ,ಹೌದು ಸಾರ್ ಎಂದೆ.

ಅದಕ್ಕವರು,ವಿಠ್ಢಲಮೂರ್ತಿ. ಒಬ್ಬ ಹೆಣ್ಣು ಮಗಳನ್ನು ಸೂಳೆಯ ಪಟ್ಟಕ್ಕೇರಿಸುವುದು ಯಾರು? ಈ ಸಮಾಜದ ದುರುಳ ಗಂಡಸರು ಮತ್ತು ಬಾಯಿ ಚಪಲ ಅತಿಯಾಗಿರುವ ಹೆಂಗಸರಲ್ಲವೇ? ರೈಟ್.ಒಬ್ಬ ಹೆಣ್ಣಿಗೆ ಅದು ಅನಿವಾರ್ಯವಾಗುವಂತೆ ಮಾಡಿದವರು ಯಾರು? ಈ ಸಮಾಜ. ಆದರೆ ಈ ಸಮಾಜದ ಕಣ್ಣಲ್ಲಿ ಸೂಳೆ ಎನ್ನಿಸಿಕೊಂಡ ಆ ಹೆಣ್ಣು ಮಗಳು ಕೆರೆ ಕಟ್ಟಿಸುವ ಮೂಲಕ ಲಕ್ಷಾಂತರ ಜನ ನೆಮ್ಮದಿಯಾಗಿ ಅನ್ನ ಉಣ್ಣಲು ದಾರಿ ಮಾಡಿಕೊಟ್ಟಳಲ್ಲವೇ?ಎಂದರು.

15178961_395338057464800_5597215701456131374_nನಾನು ಮೂಕ ಬಸವಣ್ಣನ ತರ ತಲೆ ಅಲ್ಲಾಡಿಸಿದೆ. ಅದಕ್ಕವರು, ಲಕ್ಷಾಂತರ ಜನರಿಗೆ ಅನ್ನ ಉಣ್ಣಲು ದಾರಿ ಮಾಡಿಕೊಟ್ಟ ಒಬ್ಬ ಹೆಣ್ಣು ಮಗಳನ್ನು ಸೂಳೆ ಎನ್ನುವ ಸಮಾಜಕ್ಕೆ, ಅಂತಹ ಮಹತ್ವದ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದರೆ ಏನರ್ಥ?ಆಕೆಯ ಮಾನವೀಯತೆಯ ಲೆವೆಲ್ಲಿನಲ್ಲಿ ಈ ಸಮಾಜ ಇಲ್ಲ ಎಂದು ತಾನೇ? ಹೀಗಾಗಿ ಆಕೆಯನ್ನು ಸೂಳೆ ಎಂದು ಕರೆದ ಸಮಾಜದ ಮನಸ್ಸಿನಲ್ಲಿ ನಾಚಿಕೆ ಎಂಬುದು ಶಾಶ್ವತವಾಗಿ ಉಳಿಯಬೇಕು. ಸೂಳೆ ಎಂದು ಕರೆಸಿಕೊಂಡ ಆ ಹೆಣ್ಣಿನಲ್ಲಿ ಇರುವ ಒಬ್ಬ ತಾಯಿಯನ್ನು ನಾವು ಸದಾ ಕಾಲ ಗುರುತಿಸಬೇಕು ಎಂಬ ಕಾರಣಕ್ಕಾಗಿ ಅದೇ ಹೆಸರು ಇರಲಿ ಎಂದೆನೇ ಹೊರತು, ಬೇರೆ ಯಾವ ಉದ್ದೇಶಕ್ಕೂ ಅಲ್ಲ. ಇವತ್ತು ನಾವು ಆ ಕೆರೆಯ ಹೆಸರನ್ನು ಶಾಂತಿ ಸಾಗರ ಎಂದು ಕರೆದೆವು ಎಂದಿಟ್ಟುಕೊಳ್ಳಿ. ಮುಂದಿನ ಪೀಳಿಗೆಗೆ ಅದರ ಹಿನ್ನೆಲೆಯೇ ಅರ್ಥವಾಗುವುದಿಲ್ಲ.

ಹೀಗಾಗಿ ಅದು ತಲೆಮಾರುಗಳಿಂದ ತಲೆಮಾರುಗಳಿಗೆ ಅರ್ಥವಾಗುತ್ತಾ ಹೋಗಲಿ. ಒಬ್ಬ ಹೆಣ್ಣು ಮಗಳು ಸೂಳೆ ಅನ್ನಿಸಿಕೊಂಡರೆ ಅದಕ್ಕೆ ಕಾರಣ ಯಾರು? ಎಂಬುದು ಅರ್ಥವಾಗಲಿ ಎಂಬ ಕಾರಣಕ್ಕಾಗಿ ಅದೇ ಹೆಸರಿರಲಿ ಎಂದೆ. ತಪ್ಪೇನಾದರೂ ಇದೆ ಅನ್ನಿಸುತ್ತದೆಯಾ ವಿಠ್ಠಲಮೂರ್ತಿ? ಎಂದರು ಪಟೇಲ್.

ನಾನು ಉತ್ತರ ಕೊಡಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದ್ದೆ. ಅದಕ್ಕವರು ಮೇಲೇಳುತ್ತಾ ಹೇಳಿದರು. ಇದನ್ನೆಲ್ಲ ನಿಮಗೇಕೆ ಹೇಳಿದೆ ಎಂದರೆ ಈ ಸಮಾಜಕ್ಕೆ ಒಬ್ಬ ಹೆಣ್ಣು ಮಗಳು ಯಾಕೆ ಸೂಳೆಯಾದಳು? ಎಂಬ ಸಾಮಾನ್ಯ ವಿಷಯವೇ ಅರ್ಥವಾಗುವುದಿಲ್ಲ. ಹೀಗಿರುವಾಗ ರಾಮ, ಕೃಷ್ಣ, ಜೀಸಸ್, ಮುಹಮ್ಮದರಂತಹ ಮಹಾನುಭಾವರು ಅರ್ಥವಾಗಲು ಸಾಧ್ಯವೇ?ಎಂದರು.

ನಾನು ತಣ್ಣಗೆ ಮೇಲೆದ್ದೆ. ಅವರು ಬಲಗಡೆ ಇದ್ದ ಕಾವೇರಿ ಬಂಗಲೆಯ ಕಡೆ ತಿರುಗುತ್ತಾ ಹೇಳಿದರು. ನೀವು ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯನ್ನೇ ಮಾಡಲು ಯತ್ನಿಸಿ. ಆ ದಾರಿಯಲ್ಲಿ ನಡೆದಾಗ ನಿಮಗೆ ಇದೆಲ್ಲ ಸ್ವಲ್ಪವಾದರೂ ಅರಿವಾಗಬಹುದು ಎಂದರು.

ಇವತ್ತು ಬೆಂಗಳೂರು ವರದಿಗಾರರ ಕೂಟದ ಉಪಾಧ್ಯಕ್ಷನಾಗಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಗೆಳೆಯ ಕೆ.ಎಂ.ಶಿವರಾಜು, ಅನಿಲ್ ಗೆಜ್ಜಿ, ಅರವಿಂದ ಶೆಟ್ಟಿ ಅವರೊಂದಿಗೆ ವಿಧಾನಸೌಧಕ್ಕೆ ಹೋಗಿ ಮುಖ್ಯಮಂತ್ರಿಗಳ ಪತ್ರಿಕಾ ಕಾರ್ಯದರ್ಶಿ ಡಿ.ಪಿ.ಮುರುಳಿಧರ್ ಅವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಗಳು ವರದಿಗಾರರ ಕೂಟಕ್ಕೆ ಮಂಜೂರು ಮಾಡಿದ ನೆರವಿನ ಚೆಕ್ ಅನ್ನು ಪಡೆದು ಬರುವಾಗ ಈ ಎಲ್ಲ ಸಂಗತಿಗಳು ಮತ್ತೆ ನೆನಪಿಗೆ ಬಂದವು. (ಯಾಕೆಂದರೆ ಅವೆಲ್ಲ ಮಾನ್ಯ ಪಟೇಲರು ಓಡಾಡಿದ ಜಾಗ) ಅಷ್ಟೇ ಅಲ್ಲ, ಶಿವರಾಮ ಕಾರಂತರು ಹೇಳಿದಂತೆ, ಮನುಷ್ಯ ಸಾಗರದ ಮುಂದಿರುವ ಮರಳಿನ ಕಣದಷ್ಟು ಚಿಕ್ಕವನು ಎಂಬ ಮಾತು ಎಷ್ಟು ಸತ್ಯ?ಅನ್ನಿಸಿತು.

‍ಲೇಖಕರು Admin

November 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: