-ಸೂರಿ
ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 2
ಪಾತ್ರ ಎರಡು. ಟೈಲರ್ ತುಕ್ಕೋಜಿ.
(ಪೂರ್ಣ ಓದಿಗೆ ಪೂರ್ಣಚಂದ್ರ ತೇಜಸ್ವಿಯವರ ಕಥೆ: ’ತುಕ್ಕೋಜಿ’.) ಮಗ ಕೃಷ್ಣೋಜಿ ಹುಟ್ಟಿದ ಮೇಲೆ ಗುರುಗಳ್ಳಿಯ ತನ್ನ ಟೈಲರಿಂಗ್ ವ್ಯಾಪಾರ ಅಧ್ವಾನ್ನವಾಗಿ, ನಂಬಿಕಸ್ಥ ಗಿರಾಕಿಗಳೂ ದೂರವಾಗಿ ಹೋದ ಮೇಲೆ ಬೇರೆ ದಾರಿ ಕಾಣದೇ ಒಂದು ಶುಭಮುಹೂರ್ತದಲ್ಲಿ ತುಕ್ಕೋಜಿ ಗುರುಗಳ್ಳಿಯನ್ನೇ ಬಿಟ್ಟು ಹೊರಟುಬಿಟ್ಟ.
ತುಕ್ಕೋಜಿಯ ದೊಡ್ಡಪ್ಪನ ಹಿರೀಮಗ ಶೀನೋಜಿ ದಾವಣಗೆರೆಯ ವಿನೋಬಾನಗರದಲ್ಲಿ ಟೈಲರ್ ಅಂಗಡಿಯಿಟ್ಟು ಜರ್ಬಾಗಿದ್ದ. ಒಂದು ಸಣ್ಣ ಸ್ವಂತದ ಮನೆ, ಒಂದು ಸುವೇಗಾ, ಕಾನ್ವೆಂಟ್ ಸ್ಕೂಲಿನಲ್ಲಿ ಓದುತ್ತಿರುವ ಮಗ, ಎಲ್ಲಕ್ಕೂ ಮುಖ್ಯವಾಗಿ ಹೇಳಿದ ಹಾಗೆ ಕೇಳುವ ಒಂದು ಹೆಂಡತಿ.
ತುಕ್ಕೋಜಿಯ ಕಣ್ಣಲ್ಲಿ ಶೀನೋಜಿ ಸದಾಸರ್ವದಾ ಸ್ವರ್ಗಕ್ಕೆ ಬೆಂಕಿ ಹಚ್ಚುತ್ತಿದ್ದ ಸಂಸಾರವಂದಿಗನಾಗಿದ್ದ. ಅವನ ಪ್ರಯತ್ನದಿಂದಲೇ ತುಕ್ಕೋಜಿಗೆ ಮಂಡೀಪೇಟೆಯ ಅಡ್ಡರಸ್ತೆಯಲ್ಲಿ ಒಂದು ಅಂಗಡಿ ದೊರೆತಿದ್ದು, ತುಕ್ಕೋಜಿ ದಾವಣಗೆರೆಯಲ್ಲಿ ತನ್ನ ವ್ಯಾಪಾರ ಶುರುಮಾಡಿದ್ದು. ಮಗ ಕಿಟ್ಟುಗೆ ಈಗ ಆರೋ ಏಳೋ ವರ್ಷ.
ಒದ್ದರೆ ಸದ್ದಿಲ್ಲದೇ, ಹೆಚ್ಚು ಅಳದೇ ಒದೆಸಿಕೊಳ್ಳುವ ವಯಸ್ಸು. ಅಲ್ಲದೇ ಆತನ ತರಲೆಗಳೂ ಮೊದಲಿನಂತಿಲ್ಲ. ಕಾನ್ವೆಂಟ್ ಸ್ಕೂಲ್ ಅಲ್ಲದಿದ್ದರೂ ಒಂದು ಸರ್ಕಾರೀ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದಾನೆ. ‘ಟೀಚರ್ಗೆ ಹೇಳ್ತೀನಿ ನೋಡೂ‘ ಅಂದ್ರೆ ಸಾಕು ಎಲ್ಲ ಹಟ ಬಿಟ್ಟು ಗಪ್ಪಾಗಿಬಿಡುತ್ತಾನೆ. ತುಕ್ಕೋಜೀಯ ವ್ಯಾಪಾರದಲ್ಲಿ ಕೂಡಾ ಯಾವ ಯಡವಟ್ಟೂ ಇಲ್ಲೀವರೆಗೆ ಸಂಭವಿಸಿಲ್ಲ. ಗುರುಗಳ್ಳಿಯ ಗ್ರಹಚಾರಗಳ ನಡುವೆ, ಸಂಸಾರ ತಾಪತ್ರಯಗಳ ನಡುವೆ ಹೊಲಿಗೆ ಕಲೆ ತನ್ನ ಕೈಬಿಟ್ಟಿತೇನೋ ಎಂದು ಹೆದರಿದ್ದ.
ಯಾವಾಗ ಕತ್ತರಿ ಕೈಗೆ ಹತ್ತಿತೋ, ಯಾವಾಗ ಕಾಲುಗಳು ಯಂತ್ರದ ಪೆಡಲ್ಲನ್ನು ಭರ್ರೆಂದು ತುಳಿಯತೊಡಗಿದವೋ ನೀರಿಗೆ ಬಿದ್ದ ಮೀನಿನಂತೆ ಹೊಲಿಗೆಯಲ್ಲಿ ಮುಳುಗಿದ. ಹೊಲಿಗೆಯ ತಂತ್ರಗಳು ತಾನೇ ತಾನಾಗಿ ಮರಳಿ ದಕ್ಕತೊಡಗಿದವು. ಅನುಭವೀ ಕೈಗಳು. ಕಣ್ಣಿನಲ್ಲೇ ಗಿರಾಕಿಗಳ ಮೈಕಟ್ಟನ್ನು ಅಂದಾಜು ಮಾಡುವ ಚಮತ್ಕಾರ. ಹೊಸ ಫ್ಯಾಶನ್ನಿಗೆ ದಿರಿಸುಗಳನ್ನು ತಯಾರಿಸುವ ನಾಜೂಕುತನ. ತುಕ್ಕೋಜಿಯ ವ್ಯಾಪಾರ ಕುದುರಲೂ ಜಾಸ್ತಿ ಸಮಯ ಹಿಡಿಯಲಿಲ್ಲ.
ದಾವಣಗೆರೆಯಲ್ಲಿ ತುಕ್ಕೋಜಿಯ ಬಾಳು ಒಂದು ಹದಕ್ಕೆ ಬಂತು. ಮುಂಚಿನಂತೆ ಕೆಲಸವನ್ನು ಗಂಡ-ಹೆಂಡತಿ ಹಂಚಿಕೊಳ್ಳತೊಡಗಿದರು. ಜೀವನ ಹಗುರಾಗಿತ್ತು. ಸರೋಜ ಕೂಡಾ ಒಂದು ಕೈ ಮುಂದಾಗಿಯೇ ಗಂಡನಿಗೆ ಸಹಾಯ ಮಾಡಲು ತಯಾರಾದಳು. ಬಟ್ಟೆ ಅಳತೆಗೆ ಕತ್ತರಿಸುವುದು, ಹೊಲೆಯುವುದು ಇವನ ಕೆಲಸ. ಹೊಲಿದ ಅಂಗಿ, ಪ್ಯಾಂಟುಗಳಿಗೆ ಕಾಜಾ ಹಾಕುವುದು, ಗುಂಡಿ ಹಾಕುವುದು ಅವಳ ಕೆಲಸ. ಮೊದಲಿನಂತೇ ಅಂಗಡಿಗೆ ಅಂಟಿಕೊಂಡೇ ಹಿಂಬದಿಯಲ್ಲಿ ಮನೆ.
ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಒಂದು ರೌಂಡು ಬಟ್ಟೆ ಕತ್ತರಿಸುವ, ಹೊಲೆಯುವ ಯಜ್ಞ ಮುಗಿಸಿ, ಊಟ ಮಾಡಿ, ಒಂದು ಸುತ್ತು ಹಗುರಾಗಿ ನಿದ್ದೆ ಮಾಡಿ, ಮತ್ತೆ ಕತ್ತರಿ ಹಿಡಿದು ಹೊಲಿಗೆ ಯಂತ್ರದ ಮುಂದೆ ಕೂತರೆ ರಾತ್ರಿ ಎಂಟರವರೆಗೂ ಹೊಲಿಗೆ ಯಜ್ಞ ಅವಿರತವಾಗಿ ಸಾಗುತ್ತಿತ್ತು. ಮಗನನ್ನು ಸ್ಕೂಲಿಗೆ ಅಟ್ಟಿ, ಮಧ್ಯಾಹ್ನದ ಅಡುಗೆ ಮಾಡಿ, ಮಗ ಸಂಜೆ ಮನೆಗೆ ಬರುವವರೆಗೂ ಹೊಲಿಗೆ ಯಜ್ಞದ ತನ್ನ ಪಾಲಿನ ಕರ್ತವ್ಯವನ್ನು ಸರೋಜ ನಿರ್ವಹಿಸುತ್ತಿದ್ದಳು. ಸಂಜೆ ಮಗ ಬಂದ ಮೇಲೆ ‘ಟೀಚರ್ಗೆ ಹೇಳ್ತೀನಿ ನೋಡು‘ ಅಂತ ಗದರಿಸಿ ಒಂದು ಸ್ಲೇಟನ್ನೂ, ಬಳಪವನ್ನೂ ಮಗನ ಎದುರು ಬಡಿದು, ಮತ್ತೆ ಗಂಡನಿಗೆ ಸಹಾಯಕ್ಕೆ ಮುಂದಾಗುತ್ತಿದ್ದಳು. ಹೀಗೆ ಸಾಗಿತ್ತು ತುಕ್ಕೋಜಿಯ ದಾವಣಗೆರೆಯ ಬದುಕು.
ಮುಂದುವರೆಯುವುದು……







0 Comments