ಸುವರ್ಣ ಕಾಡನಕುಪ್ಪೆ
ಅಂದು, ಅಂದಿನ ದಿನಮಾನ
ಹೋರಾಟ ಒತ್ತಾಸೆ ಚಳುವಳಿ ಚಹರೆ ಚಿತ್ತಾರ ಎಂಬೆಲ್ಲ
ಮುನ್ನೆಲೆಯಲ್ಲಿ, ನಾ ಇದ್ದೆ ನಲ್ಲ,
ನಾನಿದ್ದೆನಲ್ಲ.
ನಲವತ್ತು ವರುಷಗಳ ಒಲವಿನ ಪಯಣ
ನಲಿದು, ನಲುಗಿ
ನಲಿದುದೆಷ್ಟೋ, ನರಳಿ ನಲುಗಿದ್ದೆಷ್ಟೋ.
ನಲುಗುತ್ತ ಮಾಗಿ ಬೀಗಿ
ಬದುಕಿನ ಮುಚ್ಚು ಮರೆ
ಒಳಗು ಹೊರಗು ಸರಿದು ಹೋಗಿದೆ.

ಇರುಳು ಬೆಳಗಿನ ಪರದೆ ಏರಿ ಇಳಿಯುತ್ತಿದೆ,
ಈಗ ಸುಳಿಗಳಿಲ್ಲದ ನಿರಾಳ, ಆಳ
ಆಳ ಇಳಿದಷ್ಟು ಇಳಿಯ ಬೇಕು ಗೆಳೆಯ
ನೀನಿರುವ ಜಾಡು ಸಿಗುವತನಕ
ಬಯಲಲ್ಲಿ ಬಯಲಾಗಲು ಶ್ರಮಿಸಬೇಕು,
ಕ್ರಮಿಸಬೇಕು ತಪಸಿನ ಕೌದಿ ಹೊದ್ದು
ಯಾನ ದೂರ ದೂರ,
ಹಿಂದೆ ಹಿಂದೆ ಸರಿದೋಡುತಿವೆ ಮೈಲಿ ಗಲ್ಲು
ಹೆಜ್ಜೆಗಳ ಎಣಿಸುವುದಿಲ್ಲ ಎಂದೆಂದಿಗೂ.






0 Comments