ಜೀವನ್ ಪ್ರಕಾಶನ, ಕೋಲಾರ ಹಮ್ಮಿಕೊಂಡಿದ್ದ ದಸರಾ ಕವಿತೆ ಸ್ಪರ್ಧೆಯಲ್ಲಿ
ಮೆಚ್ಚುಗೆ ಪಡೆದ ಕವಿತೆ
ದೀಪ ಹಚ್ಚೋಣ ಬಾ

ರಮ್ಯ ಕೆ.ಜಿ.ಮೂರ್ನಾಡು
ಮಣ್ಣ ಹಣತೆಯ ಕಣ್ಗಳೊಳಗೆ
ಸುಮ್ಮನೇ ಇಳಿದುಬಿಡೋಣ…
ಒಡಲ ಕುಲುಮೆಯೊಳಗೆ ಬೇಯುವ
ಕಣಗಳು ಶೃತಿಗೊಳ್ಳಲಿ….
ಮನ್ವಂತರದ ಒಸಗೆಗಿಂದು
ದೀಪ ಹಚ್ಚೋಣ ಬಾ…

ಹೊಸತು ತಿರಿಯೊಂದು
ಸಿದ್ಧವಿರಲಿ…
ಬರಿದೇ ಹೊಗೆಯುಗುಳುವ
ಬತ್ತಿಗಳೆಲ್ಲಾ ಉರಿದು ಕರಕಲಾಗಲಿ…
ಬಡ ಕೂಸುಗಳ ಕಣ್ಗಳೊಳಗೆ
ಕಾಡಿಗೆಯಿಷ್ಟು ನಗು ಚೆಲ್ಲಲಿ…
ದೀಪ ಹಚ್ಚೋಣ ಬಾ…
ಕಲಬೆರಕೆಯ ನಂಜುಗಳನ್ನೆಲ್ಲಾ
ಗಾಣದೊಳಗೇ ಬಸಿದು
ತೈಲವೆರೆವ ಹೂ ಮನಸುಗಳಿವೆ…
ಕೈ ಯಾರದ್ದಾದರೇನು…?
ಕನಸಿನ ಬೆಳಕು ನಗುತ್ತಿರಬೇಕು
ದೀಪ ಹಚ್ಚೋಣ ಬಾ…
ಬುಡದ ಕತ್ತಲೆಗೂ ಸ್ವಾಭಿಮಾನವಿದೆ…
ಮುಬ್ಬು ಮಂಪರಿನಲಿ ಮಲಗಿಕೊಂಡ
ಇತಿಹಾಸವಿದು ಎಚ್ಚರಗೊಂಡು
ಸತ್ಯ-ಮಿಥ್ಯ ಪ್ರತಿಬಿಂಬಗಳೂ
ಪರಿಚಿತಗೊಳ್ಳಲಿ…
ದಿಟ್ಟತೆಯ ಕಿಡಿಗಳೆಂದೂ
ಕುಡಿಯೊಡೆಯುತ್ತಿರಲಿ…
ದೀಪ ಹಚ್ಚೋಣ ಬಾ…





0 Comments