ಗೌರಿ ದತ್ತು
ಅಭಿನಯ ತರಂಗ ಶಾಲೆ ಪ್ರಾರಂಭವಾಗಿ ಒಂದು ವರ್ಷದ ನಂತರ ರಂಗತಜ್ಞ, ನಿರ್ದೇಶಕ, ಶ್ರೀರಂಗರ ಬಗ್ಗೆ ಅಧ್ಯಯನ ಮಾಡಿದ್ದ ಶ್ರೀರಂಗರ ಅಭಿಮಾನಿ – ಎಚ್. ವಿ. ವೆಂಕಟಸುಬ್ಬಯ್ಯ ಶಾಲೆಯ ಪ್ರಾಂಶುಪಾಲರಾದರು. “ಒಂದು ವರ್ಷಕ್ಕೆ ಮಾತ್ರ ಪ್ರಿನ್ಸಿಪಾಲ್ ಹುದ್ದೆಯಲ್ಲಿರುವೆ“ ಎಂದಿದ್ದ ಅವರು ಒಂದು ವರ್ಷ ಶಿಸ್ತಿನಿಂದ ಪಾಠ ಮಾಡಿದ್ದಲ್ಲದೆ ಶ್ರೀರಂಗರ, ಲಂಕೇಶರ ನಾಟಕಗಳನ್ನು ತರಂಗಕ್ಕಾಗಿ ನಿರ್ದೇಶಿಸಿದ್ದರು.
ನಂತರವೂ ಶಾಲೆಯ ನಂಟು ಬಿಡದೆ ರಂಗವಿನ್ಯಾಸ, ಬೆಳಕು ವಿನ್ಯಾಸ, ವಸ್ತ್ರವಿನ್ಯಾಸ ದ ತರಗತಿಗಳನ್ನು ಆಗಾಗ್ಗೆ ತೆಗೆದುಕೊಳ್ಳುತ್ತಿದ್ದರು.
ತಾವು ಬರೆದ ಕವನ ಸಂಕಲನದ ಪುಸ್ತಕಗಳನ್ನು ಸ್ವತಃ ತಾವೇ ಬಂದು ಶಾಲೆಗೆ ಕೊಡುತ್ತಿದ್ದರು. ನಮ್ಮಪ್ಪ ಎ.ಎಸ್.ಮೂರ್ತಿ ಯವರ ಕೊನೆಗಾಲದಲ್ಲಿ, ನೋಡಲು ಬಂದು ಬಹಳ ಹೊತ್ತು ಹರಟಿದ್ದರು.
ಅಭಿನಯ ತರಂಗ -40 ರ ಸಂಭ್ರಮಕ್ಕಾಗಿ “ತರಂಗೋತ್ಸವ“ ಏರ್ಪಡಿಸಿದ್ದೆವು. ತರಂಗಕ್ಕಾಗಿ ದುಡಿದ ಹಿರಿಯ ರಂಗಕರ್ಮಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ವೆಂಕಟಸುಬ್ಬಯ್ಯ ಅವರನ್ನು ಸನ್ಮಾನಿಸುತ್ತಿದ್ದರಿಂದ ಅವರನ್ನು ಆಹ್ವಾನಿಸಲು ನಾನು, ವಿದ್ಯಾರ್ಥಿ ರಾಜ್ ಕೀರ್ತಿಯೊಂದಿಗೆ ಅವರ ಮನೆಗೆ ಹೋದೆ.
ಮೊದಲ ಮಹಡಿಯ ರೂಮ್ ನಲ್ಲಿ ಹಾಡುತ್ತಾ ಕುಳಿತಿದ್ದವರು ನಮ್ಮನ್ನು ಆತ್ಮೀಯತೆಯಿಂದ ಬರಮಾಡಿಕೊಂಡರು. ಅವರ ರೂಮ್ ನ ತುಂಬಾ ಎಲ್ಲೆಲ್ಲೂ ಪುಸ್ತಕಗಳು ಪೇಪರ್ ಕಟಿಂಗ್ ಗಳನ್ನು ನೀಟಾಗಿ ಫೈಲ್ ಮಾಡಿದ ದಾಖಲೆಗಳು. ಅದನ್ನೆಲ್ಲಾ ತೋರಿಸಿ ವಿವರಿಸಿದರು. ಅವರ ರೂಮ್ ನಲ್ಲಿದ್ದ ದೊಡ್ಡ ಪೇಂಟಿಂಗ್ ಬಗ್ಗೆ ನಾನು ಕೇಳಿದಾಗ, ಎದ್ದು ಪೇಂಟಿಂಗ್ ಬಳಿ ತೆರಳಿ ಉತ್ಸಾಹದಿಂದ ಅರ್ಧ ಘಂಟೆ ಅದರ ವಿವರಣೆ ಕೊಟ್ಟರು.
ರಾಜ್ ಕೀರ್ತಿಗೆ ಪುಸ್ತಕವೊಂದನ್ನು ಕೊಟ್ಟರು. ತಮಾಷೆ ಮಾಡುತ್ತಾ, ವಿಶಲ್ ನಲ್ಲಿ ಹಾಡುತ್ತಾ ಮೆಟ್ಟಿಲಿಳಿದು ನಮ್ಮನ್ನು ಬೀಳ್ಕೊಟ್ಟರು. ಅವರನ್ನು ಸನ್ಮಾನಕ್ಕೆ ಕರೆತರಲು ವಾಹನ ವ್ಯವಸ್ಥೆಯನ್ನೂ ಮಾಡಿದ್ದೆ. ಆದರೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾದ್ದರಿಂದ ಬರಲಾಗಲಿಲ್ಲ. ರಂಗ ಗೌರವ ಮಾಡಿದ ಪ್ರತಿಯೊಬ್ಬರಿಗೂ ಕಲಾವಿದ ಶ್ರೀನಿವಾಸ್ ಅವರು ಮಾಡಿದ ರೇಖಾ ಭಾವಚಿತ್ರ ವೊಂದನ್ನು ಕೊಡಲಾಗಿತ್ತು. ಎಚ್. ವಿ. ವೆಂಕಟಸುಬ್ಬಯ್ಯ ಅವರಿಗೆ ಇಷ್ಟುದಿನವಾದರೂ ತಲುಪಿಸಲಾಗಿರಲಿಲ್ಲ. (ಅದನ್ನು ವಾಪಸ್ ತರುವಾಗ, ಆಕಸ್ಮಿಕ ಅಚಾತುರ್ಯದಿಂದ ರೇಖಾಚಿತ್ರಕ್ಕಾಗಿ ಹಾಕಿಸಿದ್ದ ಗಾಜು ಒಡೆದು ಫ್ರೇಂ ಕಿತ್ತು ಬಂದಿತ್ತು. ಮತ್ತೆ ಫ್ರೇಂ ಹಾಕಿಸಿ) ಈ ವಾರದೊಳಗಾಗಿ ಹೋಗಿ ಕೊಡಬೇಕೆಂದು ನಾನು ನನ್ನ ವಿದ್ಯಾರ್ಥಿನಿ ವೈಷ್ಣವಿ ಹೋಗೋಣ ವೆಂದಿದ್ದೆವು. ಆದರೆ ಈ ದಿನ ಈ ದುಃಖಕರ ಸುದ್ದಿ ತಲುಪಿತು. ಈಗ ಅವರಿದ್ದಾಗಲೇ ಹೋಗಿ ಕೊಡಲಿಲ್ಲವೆಂಬ guilt ಸದಾ ನನ್ನಲ್ಲಿ ಇರುತ್ತದೆ.
0 ಪ್ರತಿಕ್ರಿಯೆಗಳು