ಉದಯ ಗಾಂವಕರ್
ನಾನಾಗ ಕುಂದಾಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ವಡೇರಹೋಬಳಿ ಶಾಲೆಯಲ್ಲಿದ್ದೆ. ಬಹಳ ಹಿಂದೆ- ಸ್ಮಾರ್ಟ್ ಫೋನ್ ಬಂದೇ ಇರಲಿಲ್ಲ ಆಗ. ಕೀ ಪ್ಯಾಡ್ ಫೋನ್ ಕೂಡಾ ಎಲ್ಲರ ಬಳಿ ಇರಲಿಲ್ಲ. ನಾನು ಎಂಟನೆಯ ತರಗತಿಯಲ್ಲಿ ಪಾಠ ಮಾಡುತ್ತಿರುವಾಗ ಒಂದು ಬೆಳಿಗ್ಗೆ ವಯಸ್ಸಾದವರೊಬ್ಬರು ಬಾಗಿಲಬಳಿ ಬಂದು “ನಾನು ಒಳಗೆ ಬರಬಹುದೇ?” ಎಂದು ಕೇಳಿದರು.
ನಾನವರನ್ನು ನಿರೀಕ್ಷಿಸಿಯೇ ಇರಲಿಲ್ಲ. ಅವರು ಶಿವಮೊಗ್ಗ ಸುಬ್ಬಣ್ಣ ಎಂದು ಗುರುತಿಸಲು ನನಗೆ ಹತ್ತಿಪ್ಪತ್ತು ಸೆಕೆಂಡುಗಳೇ ಹಿಡಿದಿತ್ತು. “ಸುಬ್ಬಣ್ಣ ಸರ್?” ಅಂದೆ. “ಹೌದು ನಾನೇ, ಮಕ್ಕಳ ಜೊತೆ ಮಾತಾಡಬಹುದಾ?” ಎಂದು ಕೇಳಿದರು. “ಇಲ್ಲಿಗೆ ಬರುವುದಿತ್ತು, ಶಾಲೆ ನೋಡಿದಾಗ ಮಕ್ಕಳ ಜೊತೆ ಮಾತಾಡಬೇಕೆನಿಸಿತು” ಎಂದರು. ಅವರು ಮಕ್ಕಳು ಹಾಡುವುದನ್ನು ಕೇಳಿಸಿಕೊಳ್ಳಲು ಬಯಸಿದರು. “ಸರ್, ಕಾಡು ಕುದುರೆ.. ಹಾಡ್ತೀರಾ?” ಎಂದು ವಿನಂತಿಸಿಕೊಂಡೆ. ಅವರು ಕಾಡು ಕುದುರೆ ಹಾಡಲಿಲ್ಲ. ಬೇರೆ ಹಾಡನ್ನು ಹಾಡಿದರು. ನನಗೀಗ ಹಾಡು ನೆನಪಿಲ್ಲ. ಆನಂತರ ಎಲ್ಲ ಕ್ಲಾಸಿಗೂ ಹೋಗಿ ಮಕ್ಕಳನ್ನು ಮಾತಾಡಿಸಿದರು. ಅಷ್ಟೊತ್ತಿಗೆ ಅವರು ಶಾಲೆಗೆ ಬಂದು ಒಂದುವರೆ ಗಂಟೆ ಕಳೆದಿತ್ತು.
ಅವರನ್ನು ಕಾರ್ಯಕ್ರಮಕ್ಕೆ ಕರೆಸಿದ್ದ ಫೋಟೋಗ್ರಾಫರ್ಸ್ ಅಸೋಶಿಯೇಷನ್ನಿನ ಅಧ್ಯಕ್ಷರಾದ ದಿನೇಶ್ ಗೋಡೆಯವರು ಸುಬ್ಬಣ್ಣನವರು ಕುಂದಾಪುರಕ್ಕೆ ಬಂದು ಎಲ್ಲೋ ಮಿಸ್ಸಾಗಿಬಿಟ್ರು ಎಂದು ಎಲ್ಲ ಕಡೆ ಹುಡುಕಿ “ಅಯ್ಯೋ ಇಲ್ಲೇನ್ಮಾಡ್ತಿದ್ದಿರಿ?” ಎನ್ನುತ್ತಾ ಬಂದರು. ಸುಬ್ಬಣ್ಣ ನಕ್ಕರು
0 ಪ್ರತಿಕ್ರಿಯೆಗಳು